ರಾಜ್ಯ ಬಿಜೆಪಿಯಲ್ಲಿ ಪರ್ಯಾಯ ಶಕ್ತಿಕೇಂದ್ರ ಎಂದು ಕರೆಯೋದಾದ್ರೆ ಅದು ಬಿ.ಎಸ್ ಯಡಿಯೂರಪ್ಪ ಮಾತ್ರ. ಇವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಸಚಿವ ಸಂಪುಟ ರಚನೆಯಲ್ಲಿ ಮಹತ್ವದ ಪಾತ್ರವಹಿಸಲಿದ್ದಾರೆ ಎಂಬುದರಲ್ಲಿ ಎರಡನೇ ಮಾತಿಲ್ಲ. ಈ ಬಾರಿ ಸಚಿವ ಸಂಪುಟದಲ್ಲಿ ಇವರ ಆಪ್ತರಿಗೆ ಅತೀ ಹೆಚ್ಚು ಮಂತ್ರಿ ಸ್ಥಾನಗಳು ಸಿಗಲಿವೆ ಎಂದು ಹೇಳಲಾಗುತ್ತಿದೆ. ಹೀಗಿರುವಾಗ ಬಿ.ಎಸ್ ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗದಿಂದ ಯಾರಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂಬ ಕುತೂಹಲ ಶುರುವಾಗಿದೆ. ಇದು ಹೈಕಮಾಂಡ್ ಬಿಸಿ ತುಪ್ಪವಾಗಿದ್ದು, ಯಾರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ಚಿಂತೆಗೀಡಾಗಿದೆ.
ಇನ್ನು, ಶಿವಮೊಗ್ಗದಿಂದ ಯಾರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಹೆಸರು ಸೂಚಿಸಲು ಯಡಿಯೂರಪ್ಪ ತಲೆಕೆಡಿಸಿಕೊಂಡಿದ್ದಾರೆ. ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪ, ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ, ಕುಮಾರ್ ಬಂಗಾರಪ್ಪ, ರುದ್ರೇಗೌಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಕೆ.ಎಸ್ ಈಶ್ವರಪ್ಪ ಮೇಲೆ ಯಾವುದೇ ರೀತಿಯ ಒಲವು ಇಲ್ಲದೇ ಹೋದರೂ ಮೇಲಿನ ನಾಲ್ವರಲ್ಲಿ ಯಾರಾದರೂ ಒಬ್ಬರ ಹೆಸರನ್ನು ಸೂಚಿಸಲೇಬೇಕಾದ ಅನಿವಾರ್ಯತೆ ಯಡಿಯೂರಪ್ಪಗೆ ಎದುರಾಗಿದೆ.
ಶಾಸಕ ಆರಗ ಜ್ಞಾನೇಂದ್ರ ನಾಲ್ಕು ಬಾರಿ ಬಿಜೆಪಿಯಿಂದ ಗೆದ್ದಿದ್ದಾರೆ. ಹೀಗಿದ್ದರೂ ಒಮ್ಮೆಯೂ ಸಚಿವರಾಗುವ ಅವಕಾಶ ಸಿಗಲೇ ಇಲ್ಲ. 2008ರ ಬಿಜೆಪಿ ಸರ್ಕಾರದಲ್ಲಿ ಸಚಿವರು ಆಗುವ ಅವಕಾಶ ಇದ್ದರೂ ಚುನಾವಣೆಯಲ್ಲಿ ಸೋತಿದ್ದ ಕಾರಣ ಮಂತ್ರಿ ಭಾಗ್ಯ ಸಿಕ್ಕಿರಲಿಲ್ಲ. ಈಗ 2018ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಆರಗ ಜ್ಞಾನೇಂದ್ರ ಪಕ್ಷ ನಿಷ್ಠರು. ಎಂದೂ ಬಿಜೆಪಿ ವಿರುದ್ಧ ಧ್ವನಿ ಎತ್ತದೇ ಕೆಲಸ ಮಾಡಿದವರು.
ಇನ್ನೊಂದೆಡೆ ಹರತಾಳು ಹಾಲಪ್ಪ ಬಿಜೆಪಿ ಹಿರಿಯ ಶಾಸಕ. ಮೂರು ಬಾರಿ ಬಿಜೆಪಿಯಿಂದ ಕ್ಷೇತ್ರ ಬದಲಿಸಿ ಗೆದ್ದ ಇವರು ಯಡಿಯೂರಪ್ಪಗೆ ಆಪ್ತರು. ಹೇಗಾದರೂ ಸರಿಯೇ ಈ ಬಾರಿ ಮಂತ್ರಿಯಾಗಲೇಬೇಕು ಎಂದು ಪಟ್ಟು ಹಿಡಿದು ಕೂತಿದ್ದಾರೆ.
ಸೊರಬ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದವರು. ಬಿಜೆಪಿಯಲ್ಲಿ ಭಾರೀ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಇಂದಿಗೂ ಯಡಿಯೂರಪ್ಪ ಹವಾ ಶಿವಮೊಗ್ಗದಲ್ಲಿದ್ದರೆ ಅದರ ಶೇ.30ರಷ್ಟು ಪಾಲು ಕುಮಾರ್ ಬಂಗಾರಪ್ಪನಿಗೆ ಸಲ್ಲುತ್ತದೆ. ಸದ್ಯ ತಾನು ಕೂಡ ಈಗ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, ಮಂತ್ರಿ ಮಂಡಲದಲ್ಲಿ ಅವಕಾಶ ಮಾಡಿಕೊಡಿ ಎಂದು ಯಡಿಯೂರಪ್ಪ ಮೇಲೆ ಒತ್ತಡ ಹಾಕಿದ್ದಾರೆ.
ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದ ರುದ್ರೇಗೌಡರು ಈಗ ಪರಿಷತ್ ಸದಸ್ಯರು. ಬಿಜೆಪಿಪರ ಮೊದಲಿನಿಂದಲೂ ನಿಷ್ಠೆ ತೋರಿಸಿಕೊಂಡು ಬಂದ ಇವರು ಸಚಿವ ಸ್ಥಾನದ ಆಕಾಂಕ್ಷಿ. 75 ವರ್ಷ ಗಡಿ ದಾಟಿದ ರುದ್ರೇಗೌಡರು ಈ ಬಾರಿ ಹೇಗಾದರೂ ನನಗೆ ಮಂತ್ರಿ ಸ್ಥಾನ ಕೊಡಿಸಿ ಎಂದು ಬಿಎಸ್ವೈ ಬೆನ್ನಿಗೆ ಬಿದ್ದಿದ್ದಾರೆ.
ಇಷ್ಟು ಜನರ ಪೈಕಿ ಯಾರನ್ನಾದರೂ ಇಬ್ಬರನ್ನು ಮಂತ್ರಿ ಮಾಡಲೇಬೇಕು. ಈಗಾಗಲೇ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರಗೆ ಮಂತ್ರಿ ಸ್ಥಾನ ಪಕ್ಕಾ ಆಗಿದೆ. ಶಿವಮೊಗ್ಗದಿಂದ ಮತ್ತೊಬ್ಬರಿಗೆ ಅವಕಾಶ ನೀಡುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ, ಯಾರ ಹೆಸರನ್ನು ಸೂಚಿಸುವುದು ಎನ್ನುವುದೇ ಯಡಿಯೂರಪ್ಪಗೆ ದೊಡ್ಡ ಸವಾಲಾಗಿದೆ.
ಇನ್ನು, ನಾಲ್ವರಲ್ಲಿ ಒಬ್ಬರ ಹೆಸರನ್ನು ಅಳೆದು ತೂಗಿ ಯಡಿಯೂರಪ್ಪ ಹೈಕಮಾಂಡ್ಗೆ ಸೂಚಿಸಿದ್ದಾರೆ ಎಂಬ ಮಾಹಿತಿಯೂ ಇದೆ. ಒಂದು ವೇಳೆ ಈ ಹೆಸರು ಕೆ.ಎಸ್ ಈಶ್ವರಪ್ಪ ಆದರೆ, ಉಳಿದ ಮೂವರಿಗೆ ಮಂತ್ರಿ ಸ್ಥಾನ ಸಿಗೋದು ಡೌಟ್. ಕೆ.ಎಸ್ ಈಶ್ವರಪ್ಪ ಹೆಸರು ಸೂಚಿಸಿದ್ದಾರೆ ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಹೀಗಾಗಿ ಯಾರಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂಬ ಕೂತೂಹಲ ರಾಜಕೀಯ ವಲಯದಲ್ಲಿದೆ.