ಕೇಂದ್ರ ಸರ್ಕಾರ ಜಾರಿಗೊಳಿಸಿದ ಕೃಷಿ ಕಾಯ್ದೆಯನ್ನು ವಿರೋಧಿಸಿ ದೆಹಲಿ ಗಡಿ ಭಾಗದಲ್ಲಿ ಮಾಡುತ್ತಿರುವ ಪ್ರತಿಭಟನೆಗೆ ಏಳು ತಿಂಗಳು ತುಂಬಿದ್ದು, ಇಂದು ರೈತರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಮ್ಮೆ ಪ್ರತಿಭಟನಾ ಚಳುವಳಿ ಹಮ್ಮಿಕೊಂಡಿದ್ದರು.

ರಾಜ್ಯಪಾಲರ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಬೇಕು ಎಂದು ಸಂಯುಕ್ತ್ ಕಿಸಾನ್ ಮೋರ್ಚ ಎಲ್ಲಾ ರಾಜ್ಯಗಳ ರೈತ ಮುಖಂಡರಿಗೆ ಕರೆ ನೀಡಿತ್ತು. ಕೃಷಿಯನ್ನು ರಕ್ಷಿಸಿ – ಪ್ರಜಾಪ್ರಭುತ್ವವನ್ನು ರಕ್ಷಿಸಿ ಎಂಬ ಘೋಷಾವಾಕ್ಯದೊಂದಿಗೆ ಪ್ರತಿಭಟನಾ ಚಳಿವಳಿಯನ್ನು ಹಮ್ಮಿಕೊಳ್ಳಲಾಗಿತ್ತು.
ರೈತರ ಮೆರವಣಿಗೆ ದೆಹಲಿ ಮೆಟ್ರೋ ಸೇವೆಯ ಮೇಲೆ ಪರಿಣಾಮ ಬೀರಿದ್ದು ಮೂರು ಮೆಟ್ರೋ ರೈಲ್ವೆ ಸ್ಟೇಶನ್ ಸೇವೆ ಸ್ಥಗಿತಗೊಳಿಸಲಾಗಿತ್ತು.
“ವಿಶ್ವವಿದ್ಯಾಲಯ, ಸಿವಿಲ್ ಲೈನ್ಸ್ ಮತ್ತು ವಿಧಾನಸಭಾ ಎಂಬ ಮೂರು ಮೆಟ್ರೋ ಸ್ಟೇಶನ್ ಗಳನ್ನು ದೆಹಲಿ ಪೊಲೀಸರ ನಿರ್ದೇಶನದಂತೆ ಸಾರ್ವಜನಿಕ ರಕ್ಷಣೆಯ ಹಿತದೃಷ್ಟಿಯಿಂದ ಶನಿವಾರ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ” ಎಂದು ದೆಹಲಿ ಮೆಟ್ರೋ ರೈಲ್ವೆ ಕಾರ್ಪೊರೇಷನ್ (DMRC) ತಿಳಿಸಿದೆ.

ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆಗಳು ಇದುವರೆಗೆ 11 ಸುತ್ತಿನ ಮಾತುಕತೆಗಳನ್ನು ನಡೆಸಿದ್ದು ಯಾವುದೇ ಮಾತುಕತೆಗಳು ಫಲಪ್ರದವಾಗಿಲ್ಲ. 3 ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವವರೆಗೆ ಹೋರಾಟವನ್ನು ಕೈಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದರೆ, ಕೇಂದ್ರ ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸಲು ಸಿದ್ಧವಿಲ್ಲ. ಕೇಂದ್ರ ಸರ್ಕಾರ ಎಲ್ಲಿಯವರೆಗೆ ತನ್ನ ಸರ್ವಾಧಿಕಾರಿ ಧೋರಣೆಯನ್ನು ಕೈಬಿಡುವುದಿಲ್ಲವೋ ಅಲ್ಲಿಯವರೆಗೆ ರೈತ ಹೋರಾಟವನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ರೈತರು ಇಂದಿನ ಚಳುವಳಿಯ ಮೂಲಕ ಮತ್ತೊಮ್ಮೆ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ, ಪಂಜಾಬ್, ಹರಿಯಾಣ ಸೇರಿದಂತೆ ನಾನಾಕಡೆಯಲ್ಲಿ ದೇಶದಾದ್ಯಂತ ರೈತರು ಪ್ರತಿಭಟನಾ ಚಳುವಳಿಯನ್ನು ಹಮ್ಮಿಕೊಂಡಿದ್ದರು.





