ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನೋ (PM Narendra Modi), ಅವರ ನೇತೃತ್ವದ ಕೇಂದ್ರ ಸರ್ಕಾರವನ್ನೋ ಟೀಕಿಸಿದರೆ ಅಂತಹವರ ವಿರುದ್ಧ ಬಿಜೆಪಿ ಐಟಿ ಸೆಲ್ (BJP IT Cell) ಟ್ರಾಲ್ ಪಡೆ ಸಾಮಾಜಿಕ ಮಾಧ್ಯಮದಲ್ಲಿ ಮುಗಿಬೀಳುವುದು ಸಾಮಾನ್ಯ. ಸಾಮಾಜಿಕ ಮಾಧ್ಯಮದಲ್ಲಿ ನಿಂದನಕಾರಿ ಕಾಮೆಂಟ್ಗಳು, ಧ್ವೇಷಪೂರಿತ ದಾಳಿಗಳು, ಬೆದರಿಕೆಗಳು ಸಹಜವೆನ್ನಿಸುವಷ್ಟರ ಮಟ್ಟಿಗೆ ದೇಶದ ವಾತಾವರಣ ಕಲುಷಿತಗೊಂಡಿದೆ.
ಇದೀಗ, ಉಕ್ರೇನ್ ಯುದ್ಧದಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥೀಗಳ ರಕ್ಷಣೆ ಕುರಿತಂತೆ ಭಾರತ ಸರ್ಕಾರದ ಬಂಡವಾಳ ಬಯಲು ಮಾಡಿದ್ದ ರೊಮೇನಿಯಾದ ಸ್ನಾಗೋವ್ ನಗರದ ಮೇಯರ್ ಮಿಹಾಯ್ ಆ್ಯಂಗೆಲ್ ಮೇಲೆ ಭಾರತದ ಪೇಯ್ಡ್ ಟ್ರಾಲ್ ಪಡೆಗಳು ಬೆದರಿಕೆ, ನಿಂದನೆಗಳಿಂದ ದಾಳಿ ಮಾಡುತ್ತಿದೆ. ಇದನ್ನು ಸ್ವತಃ ಮೇಯರ್ ಆ್ಯಂಗೆಲ್ ಅವರೇ ದಿ.ಕ್ವಿಂಟ್ ಜೊತೆಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸದ್ದಾರೆ.
ಭಾರತದ ವಿದ್ಯಾರ್ಥಿಗಳ ಪರವಹಿಸಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರನ್ನು ಪ್ರಶ್ನಿಸಿದ ಮೇಲೆ ತನಗೆ ಭಾರತದ ಸಾಮಾಜಿಕ ಜಾಲತಾಣ ಖಾತೆಗಳಿಂದ ಬೆದರಿಕೆಗಳು ಬರುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ. ತನಗೆ ಸಿಂಧಿಯಾ ಭಾರತದ ಸಚಿವರೆಂದು ಗೊತ್ತಿರಲಿಲ್ಲ. ಗೊತ್ತಿದ್ದರೂ ನಾನು ಹಾಗೆಯೇ ವರ್ತಿಸುತ್ತಿದ್ದೆ ಎಂದು ಆ್ಯಂಗೆಲ್ ಸ್ಪಷ್ಟಪಡಿಸಿದ್ದಾರೆ.
ಪೇಯ್ಡ್ ಟ್ರೋಲ್ಗಳಿಂದ ಹಾಗೂ ದ್ವೇಷ ಸಂದೇಶಗಳಿಂದ ನನ್ನ ಅಧಿಕೃತ ಪೇಜ್ ತುಂಬಿಹೋಗಿದೆ. ರಾಜಕಾರಣಿ ಆಗಿರುವುದರಿಂದ ನಾನಿದನ್ನು ನಿಭಾಯಿಸಬಲ್ಲೆ. ಆದರೆ ಇದೇ ಮೊದಲ ಬಾರಿಗೆ ವಿದೇಶಿಯರಿಂದ ದ್ವೇಷ ಸಂದೇಶಗಳನ್ನು ಸ್ವೀಕರಿಸುತ್ತಿದ್ದೇನೆ. ವಿದ್ಯಾರ್ಥಿಗಳಿಗೆ ಕಾಳಜಿ ತೋರಿಸಿದ ಕಾರಣಕ್ಕಾಗಿ ಇಂತಹ ಬೆದರಿಕೆಗಳು ಬರಬಹುದೆಂದು ತಾನು ನಿರೀಕ್ಷಿಸಿರಲಿಲ್ಲ ಎಂದು ಆ್ಯಂಗೆಲ್ ಹೇಳಿದ್ದಾರೆ.
ದಿ.ಕ್ವಿಂಟ್ ಸುದ್ದಿ ವೆಬ್ಸೈಟ್ ಜೊತೆಗೆ ಸಂದರ್ಶನದಲ್ಲಿ ಭಾಗಿಯಾದ ಮೇಯರ್ ಆ್ಯಂಗೆಲ್ ಸಿಂಧಿಯಾ ಜೊತೆ ನಡೆದ ವಾಗ್ಯುದ್ಧದ ಕುರಿತು ಮಾತನಾಡುತ್ತಾ ʼತಾನು ರಾಜಕೀಯ ಪ್ರಹಸನ ಸೃಷ್ಟಿಸಲು ಬಯಸಿರಲಿಲ್ಲ. ತಾವು ಯಾವಾಗ ತಮ್ಮ ಮನೆಗಳಿಗೆ ಮರಳುತ್ತೇವೆ ಎನ್ನುವುದನ್ನಷ್ಟೇ ತಿಳಿಯಲು ಕಾಯುತ್ತಿದ್ದ ಭಾರತೀಯ ವಿದ್ಯಾರ್ಥಿಗಳ ಪರವಾಗಿ ನಿಂತೆ. ರೊಮೇನಿಯಾದ ತಂಡವು 157 ಭಾರತೀಯ ವಿದ್ಯಾರ್ಥಿಗಳನ್ನು ಬರಮಾಡಿಕೊಂಡಿತ್ತು. ಸ್ನಾಗೊವ್ನ ಜನರು ಅವರಿಗೆ ಆಹಾರ ಮತ್ತು ಇತರ ಅಗತ್ಯಗಳನ್ನು ಒದಗಿಸಿದರು.ʼ ಎಂದು ತಿಳಿಸಿದ್ದಾರೆ.
![](https://pratidhvani.com/wp-content/uploads/2022/03/image-28.png)
ಆದರೆ, ಅಷ್ಟಾಗುವಾಗ ಕ್ಯಾಮೆರಾಗಳೊಂದಿಗೆ ಸಜ್ಜಾಗಿ ಬಂದಿದ್ದ ಸಿಂದಿಯಾ ಪಿಆರ್ ಪ್ರಚಾರಕ್ಕೆ ತಯಾರಾಗಿ ಬಂದಂತೆ ಬಂದಿದ್ದರು. ತಾವು ಯಾವಾಗ ಮನೆಗೆ ತಲುಪಲಿದ್ದೇವೆ ಎಂದು ಯುದ್ಧರಂಗದಿಂದ ತಪ್ಪಿಸಿಕೊಂಡು ಬಂದು ಆತಂಕದಲ್ಲಿದ್ದ ವಿದ್ಯಾರ್ಥಿಗಳಿಗೆ ಸಾಂತ್ವನ ಹೇಳುವುದು ಬಿಟ್ಟು ಪ್ರಚಾರದ ಭಾಷಣ ಮಾಡಲು ತೊಡಗಿದರು. ಇದು ನನ್ನನ್ನು ಕೆರಳಿಸಿತು ಎಂದು ಮೇಯರ್ ತಿಳಿಸಿದ್ದಾರೆ.
‘ಈ ವಿದ್ಯಾರ್ಥೀಗಳನ್ನು ಗಡಿಯಲ್ಲಿ ಘನತೆಯಿಂದ ನಡೆಸಿಕೊಂಡಿರಲಿಲ್ಲ, ಸಿಂದಿಯಾರ ಭಾಷಣ ಅದಕ್ಕೆ ಹೆಚ್ಚುವರಿಯಾಗಿತ್ತು. ಅದು ನಿಜಕ್ಕೂ ತನ್ನನ್ನು ಕ್ರೋಧಗೊಳಿಸಿತು. ವಿದ್ಯಾರ್ಥಿಗಳಿಗೆ ಯಾವುದೇ ಅಗತ್ಯಗಳನ್ನು ಒದಗಿಸದ ಅವರು ಇಲ್ಲಿ ಬಂದು ತಮ್ಮ ಸರ್ಕಾರ ಎಲ್ಲಾ ಮಾಡಿದೆ ಎಂದು ಭಾಷಣ ಮಾಡಲು ಆರಂಭಿಸಿದ್ದರು. ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳುವ ವಿಮಾನದ ಕುರಿತು ತಾನು ಪ್ರಶ್ನಿಸಿದಾಗ ತನ್ನೊಂದಿಗೆ ಅಗೌರವದಿಂದ ನಡೆದುಕೊಂಡಿದ್ದರು ಎಂದು ಮೇಯರ್ ಆರೋಪಿಸಿದ್ದಾರೆ.
ಭಾರತೀಯ ವಿದ್ಯಾರ್ಥಿಗಳು ಫೆ.27ರಂದು ಸೈರಟ್ ಗಡಿಯನ್ನು ದಾಟಿದ್ದರು, ಅವರಿಗೆ ಸ್ನಾಗೊವ್ ನಗರದ ಎರ್ಮಾನೆಸ್ಟಿ ಗ್ರಾಮದ ಶಾಲೆಯ ಜಿಮ್ನಾಶಿಯಂನಲ್ಲಿ ಅವರಿಗೆ ಆಶ್ರಯವನ್ನು ಒದಗಿಸಲಾಗಿತ್ತು. ನಮ್ಮ ತಂಡವು 157 ಭಾರತೀಯ ವಿದ್ಯಾರ್ಥಿಗಳನ್ನು ಸ್ವೀಕರಿಸಿದೆ. ನಾವು ಇಲ್ಲಿನ ರಾಯಭಾರ ಕಚೇರಿಯಿಂದ ಸ್ವಲ್ಪ ಸಹಾಯವನ್ನು ಪಡೆದಿದ್ದೇವೆ. ಆದರೆ, ಎಲ್ಲಾ ಆಹಾರ ಮತ್ತು ಇತರ ಅಗತ್ಯಗಳನ್ನು ನಮ್ಮಿಂದ ಒದಗಿಸಲಾಗಿದೆ. ಸ್ನಾಗೊವ್ ಪ್ರದೇಶದ ನಾಗರಿಕರು ಎಲ್ಲವನ್ನೂ ಒದಗಿಸಿದರು ಎಂದು ಮೇಯರ್ ತಿಳಿಸಿದ್ದಾರೆ.
‘ಮರುದಿನ ಬಸ್ಸುಗಳು ಬರಲಿವೆ ಎಂಬ ಮಾಹಿತಿಯನ್ನು ಸ್ಥಳೀಯ ಭಾರತೀಯ ಅಧಿಕಾರಿಗಳು ನಮಗೆ ನೀಡಿದ್ದರು. ಸಿಂದಿಯಾರ ಭೇಟಿಯೊಂದಿಗೆ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ಲಭಿಸುತ್ತದೆ ಎಂದು ನಾನು ಅಂದುಕೊಂಡಿದ್ದೆ. ವಿದ್ಯಾರ್ಥಿಗಳು ಆಗಷ್ಟೇ ಕಠಿಣ ಪ್ರಯಾಣವನ್ನು ಮುಗಿಸಿ ಹೈರಾಣಾಗಿದ್ದರು. ಕೆಲವು ಆತಂಕಗಳು, ಚಿಂತೆಗಳಿದ್ದವು ನಿಜ. ಅಂತಹ ಸಂಧರ್ಭದಲ್ಲಿ ಅವರ ಪ್ರಚಾರ ಭಾಷಣಕ್ಕೆ ಮುಂದಾದರು.
ಎಲ್ಲರೂರು ಭಾವಿಸಿರುವಂತೆ ನಾನು ಸಿಟ್ಟಾಗಿರಲಿಲ್ಲ. ಆ ವಿದ್ಯಾರ್ಥಿಗಳನ್ನು ನೋಡಿ ನನಗೆ ನೋವಾಗಿತ್ತು, ಅದು ನನ್ನ ಸಹನೆಯನ್ನು ಕಳೆದುಕೊಂಡಿತ್ತು. ಅವರು ಗಡಿಯಲ್ಲಿ ಏನೇನು ಕಷ್ಟಗಳನ್ನು ಅನುಭವಿಸಿದ್ದರು ಎನ್ನುವುದು ನನಗೆ ತಿಳಿದಿತ್ತು. ಪ್ರಚಾರದ ಭಾಷಣ ಕೇಳಲು ಅವರನ್ನು ಬಳಸಿಕೊಳ್ಳಬೇಕಿರಲಿಲ್ಲ. ಸಿಂದಿಯಾ ವಾಯುಯಾನ ಸಚಿವರು ಎನ್ನುವುದು ನನಗೆ ಗೊತ್ತಿರಲಿಲ್ಲ, ಗೊತ್ತಿದ್ದರೂ ನಾನು ಅದನ್ನೇ ಮಾಡುತ್ತಿದ್ದೆ. ಅವರ ನಡವಳಿಕೆಯನ್ನು ಖಂಡಿಸುವುದು ನನಗೆ ಅನಿವಾರ್ಯವಾಗಿತ್ತು ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳಲ್ಲಿ ಯಾರೋ ನಾನು ನಗರದ ಮೇಯರ್ ಎಂದು ಸಿಂದಿಯಾಗೆ ತಿಳಿಸಿದ್ದರು. ನಮ್ಮನ್ನು ಅಗೌರವಿಸಿದ್ದಕ್ಕಾಗಿ ಅವರು ಕ್ಷಮೆಯನ್ನು ಯಾಚಿಸಿರಲಿಲ್ಲ. ಸಮಯವು ಎಲ್ಲರಿಗೂ, ಭಾರತೀಯ ತೆರವು ಕಾರ್ಯಾಚರಣೆಯ ತಂಡಗಳಿಗೂ ಕಷ್ಟದ್ದಾಗಿತ್ತು ಎನ್ನುವುದು ನನಗೆ ಅರ್ಥವಾಗಿತ್ತು. ಕೊನೆಯಲ್ಲಿ ನಾವು ಪರಸ್ಪರ ಹಸ್ತಲಾಘವ ಮಾಡಿದಾಗ ಅವರಲ್ಲಿ ಯಾವುದೇ ಭಾವನೆಗಳಿರಲಿಲ್ಲ. ಅದೊಂದು ಅತ್ಯಂತ ಅಹಿತಕರ ಬೀಳ್ಕೊಡುಗೆಯಾಗಿತ್ತು ಎಂದು ಆ್ಯಂಗೆಲ್ ಸಿಂಧಿಯಾ ಅವರ ಉಢಾಫೆಯ ವರ್ತನೆಯನ್ನು ವಿವರಿಸಿದ್ದಾರೆ.
ಇನ್ನೊಂದೆಡೆ ಸ್ನಾಗೊವ್ನಲ್ಲಿ ಆಶ್ರಯ ಪಡೆದಿದ್ದ ವಿದ್ಯಾರ್ಥಿಗಳು ತಮ್ಮ ಕಷ್ಟಕಾಲದಲ್ಲಿ ನೆರವಾಗಿದ್ದಕ್ಕಾಗಿ ಆ್ಯಂಗೆಲ್ ಗೆ ಕೃತಜ್ಞತೆಯ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳ ಪೋಷಕರೂ ಕೂಡಾ ಕೃತಜ್ಞತೆಯ ಸಂದೇಶ ಹಂಚಿಕೊಂಡಿದ್ದಾರೆ ಎಂದು ಆ್ಯಂಗೆಲ್ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಯುದ್ಧಗ್ರಸ್ಥ ಉಕ್ರೇನ್ ನೆರೆಹೊರೆಯ ದೇಶಗಳಿಗೆ ಕಾಲ್ನಡಿಗೆ ಹಾಗೂ ಇತರೆ ಸಾರಿಗೆ ಬಳಸಿ ತಲುಪಿರುವ ಭಾರತೀಯ ವಿದ್ಯಾರ್ಥಿಗಳನ್ನು ಕರೆ ತರುವ ಆಪರೇಶನ್ ಗಂಗಾ ಯೋಜನೆ ಮೇಲ್ವಿಚಾರಣೆಗೆ ನರೇಂದ್ರ ಮೋದಿ ಸಂಪುಟದ ನಾಲ್ವರು ಸಚಿವರನ್ನು ಉಕ್ರೇನ್ ಜೊತೆ ಗಡಿ ಹಂಚಿಕೊಂಡಿರುವ ದೇಶಗಳಿಗೆ ಕಳುಹಿಸಲಾಗಿತ್ತು. ಅದರಂತೆ, ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ರೊಮೇನಿಯಾ ದೇಶ ತಲುಪಿದ್ದರು.
ಉಕ್ರೇನ್ ಸಂಘರ್ಷದ ಸಂತ್ರಸ್ತ ಭಾರತೀಯರಿಗೆ ಭಾರತ ಸರ್ಕಾರ ಎಲ್ಲಾ ನೆರವು ನೀಡುತ್ತದೆ ಎಂದು ಅಗ್ಗದ ಪ್ರಚಾರ ಪಡೆಯಲು ಹೋದ ಸಿಂಧಿಯಾಗೆ ರೊಮೇನಿಯಾ ಮೇಯರ್ ಆ್ಯಂಗೆಲ್ ತರಾಟೆಗೆ ತೆಗೆದಿದ್ದರು. ಈ ವಿಡಿಯೋವನ್ನು ಅಲ್ಲಿದ್ದ ವಿದ್ಯಾರ್ಥಿಗಳು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದರು. ಇದು ವ್ಯಾಪಕ ವೈರಲ್ ಆಗಿತ್ತು.
ವಿಡಿಯೋದಲ್ಲಿ, ರೊಮೇನಿಯಾದ ಮೇಯರ್ ಸಚಿವ ಸಿಂಧಿಯಾ ಅವರು ಮಾತನಾಡುವಾಗ ಅಡ್ಡಿಪಡಿಸಿದ್ದು,“ನಾವು ಈ ಭಾರತೀಯ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿಗಾಗಿ ವ್ಯವಸ್ಥೆ ಮಾಡಿದ್ದೇವೆ, ನಿಮ್ಮ ಸರ್ಕಾರವಲ್ಲ” ಎಂದು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲಿರುವ ವಿದ್ಯಾರ್ಥಿಗಳು ಮೇಯರ್ ಮಾತಿಗೆ ಚಪ್ಪಾಳೆ ತಟ್ಟುವ ಮೂಲಕ ಬೆಂಬಲ ನೀಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಇದು ಕೇಂದ್ರ ಸಚಿವರ ಇರಿಸು-ಮುರಿಸುಗೆ ಕಾರಣವಾಗಿತ್ತು.