ಮೊದಲನೆ ವಾಕ್ಯದಲ್ಲೇ ಹೇಳಿ ಬಿಡುತ್ತೇವೆ: ಇದು ಸಂಘ ಪರಿವಾರದ ಹುನ್ನಾರ.
ವಿಷಯಕ್ಕೆ ಬರೋಣ. ಮೊನ್ನೆ ಲಿಂಗಾಯತ ಧರ್ಮ ಮಹಾಸಭಾ ಎಂಬ ಅಷ್ಟೇನೂ ಪರಿಚಿತವಲ್ಲದ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಚನ್ನಬಸವಾನಂದ ಸ್ವಾಮಿ ನೇತೃತ್ವದ ನಿಯೋಗವೊಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದಲ್ಲಿ ಮೊಟ್ಟೆ ಕೊಡುವ ಆದೇಶ ಹಿಂಪಡೆಯಲು ಮನವಿ ಸಲ್ಲಿಸಿತ್ತು.
ನಂತರ ಹೇಳಿಕೆ ನೀಡಿದ್ದ ಚನ್ನಬಸವಾನಂದ ಸ್ವಾಮಿ, ʼಮೊಟ್ಟೆ ಕೊಟ್ರೆ ಹುಷಾರ್ʼ ಎಂದೆಲ್ಲ ಗುಡುಗಿದ್ದರು. ಆದರೆ ನಿಗದಿಯಂತೆ ನಿನ್ನೆಯಿಂದ (ಡಿಸೆಂಬರ್ 1) ಹೈದರಾಬಾದ್ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆ ನೀಡಲಾಗಿದೆ. ಬೇಡ ಎಂದ ಕೆಲವೇ ಕೆಲವರಿಗೆ ಬಾಳೆಹಣ್ಣು ನೀಡಲಾಗಿದೆ. ʻಇನ್ನು ನೀವು ಬೇಕಾದ್ರ ಉತ್ತತ್ತಿ ತಿನ್ರಿ, ನಾವ್ ತತ್ತಿ ತಿಂತಿವಿʼ ಎಂದು ಹೈದರಾಬಾದ್ ಕರ್ನಾಟಕದ ಮಕ್ಕಳು ಸ್ವಾಮಿಗೆ ಪಾಠ ಹೇಳುತ್ತಿದ್ದಾರೆ.
ಸದ್ಯಕ್ಕೆ ʼಮೊಟ್ಟೆ ಕೊಟ್ರೆ ಹುಷಾರ್ʼ ಎಂದಿದ್ದ ಬೀದರಿನ ಸ್ವಾಮಿ ತೆಪ್ಪಗೆ ಇದ್ದಾರೆ. ಆದರೆ, ಒಮ್ಮೇಲೆ ಲೈಮ್ಲೈಟ್ಗೆ ಬಂದ ಈ ಸ್ವಾಮಿಯ ಹಿಂದೆ ಸಂಘ ಪರಿವಾರ ಇರುವುದು ಸ್ಪಷ್ಟ. ತಮ್ಮದೇ ಸರ್ಕಾರ ಇರುವುದರಿಂದ ನೇರವಾಗಿ ಕಣಕ್ಕೆ ಇಳಿಯದ ಅವರು, ಸಣ್ಣಪುಟ್ಟ ಲಿಂಗಾಯತ ಸ್ವಾಮಿಗಳನ್ನು ಹೀಗೆ ಬಳಸಿಕೊಳ್ಳುತ್ತಿದ್ದಾರೆ. ಈಗ ಸದ್ಯಕ್ಕೆ ಮೊಟ್ಟೆ ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿಯಾಗಿಲ್ಲ, ಆದರೆ ಮುಂದೆ ಮತ್ತೆ ಇಂತಹವರು ಗಲಾಟೆ ಮಾಡಬಹುದು. ಹೀಗಾಗಿ, ಮೊಟ್ಟೆ ಕುರಿತಂತೆ ಜನಜಾಗೃತಿ ಮೂಡಿಸುವುದು ಮತ್ತು ಈ ಕಾರ್ಯಕ್ರಮವನ್ನು ಎಲ್ಲ ಜಿಲ್ಲೆಗಳ ಶಾಲಾ ಮಕ್ಕಳಿಗೆ ವಿಸ್ತರಿಸಿ ಎಂದು ಸರ್ಕಾರವನ್ನು ಒತ್ತಾಯಿಸುವುದು ಪ್ರಜ್ಞಾವಂತರ ಕರ್ತವ್ಯವಾಗಿದೆ.
ಈ ಕುರಿತು ʼಪ್ರತಿಧ್ವನಿʼ ಹಲವರೊಂದಿಗೆ ಮಾತನಾಡಿದೆ.
ಹೈದರಾಬಾದ್ ಕರ್ನಾಟಕದ ಶಹಾಪುರದ ವಿಶ್ವರಾಧ್ಯ ಸತ್ಯಂಪೇಟ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು ಮತ್ತು ವಚನ ಪರಂಪರೆ ಬಗ್ಗೆ ಅಪಾರ ಅಧ್ಯಯನ ಮಾಡಿದವರು. ʼಸದ್ಯಕ್ಕೆ ಮೊಟ್ಟೆ ನೀಡುವುದು ಸುಗಮವಾಗಿ ಆರಂಭವಾಗಿದೆ. ಆದರೆ ಮುಂದೆ ಇದು ಮೊಟ್ಟೆ ಕನಿಷ್ಠ, ಬಾಳೆಹಣ್ಣು ಶ್ರೇಷ್ಠ ಎಂಬ ತಾರತಮ್ಯ ಉಂಟಾಗದಂತೆ ನಾವೆಲ್ಲ ನೋಡಿಕೊಳ್ಳಬೇಕು. ಶರಣ ಪರಂಪರೆ ಎಂದು ಹೇಳಿಕೊಳ್ಳುವ ಲಿಂಗಾಯತ ಸ್ವಾಮಿಯೊಬ್ಬರು ಮೊಟ್ಟೆ ಬೇಡ ಎಂದು ಮನವಿ ಸಲ್ಲಿಸಿದ್ದು ವಿಚಿತ್ರವಾಗಿದೆ. ಬಸವಣ್ಣ ಸೇರಿದಂತೆ ಯಾವ ಶರಣರೂ ಆಹಾರದ ಬಗ್ಗೆ ತಾರತಮ್ಯ ಮಾಡಿಲ್ಲ, ಅವರವರ ಆಯ್ಕೆ ಎಂದೇ ಹೇಳಿದ್ದಾರೆ. ಅಂಬಿಗರ ಚೌಡಯ್ಯ ಆ ಕಾಲದಲ್ಲೇ ಗೋ ಮಾಂಸ ತಿನ್ನುವುದನ್ನು ಬೆಂಬಲಿಸಿ ಬರೆದಿದ್ದಾನೆ:
ʼಕುರಿ ಕೋಳಿ ಕಿರು ಮೀನ ತಿಂಬುವವರ
ಊರೊಳಗೆ ಇರು ಎಂಬರು..
ಅಮೃತಾನ್ನವ ಕರೆವ ಗೋವನ್ನ ತಿಂದವರ ಊರಿಂದ ಹೊರಗಿರು ಎಂಬುವರು….ʼ
ಹೀಗೆ ಸಾಗುವ ವಚನದಲ್ಲಿ ಚೌಡಯ್ಯ ಎಲ್ಲ ಬಗೆಯ ಆಹಾರಕ್ಕೂ ಅದರದೇ ಆದ ಘನತೆಯಿದೆ ಎಂದು ಹೇಳುತ್ತಾನೆʼ ಎಂದು ವಿಶ್ವರಾಧ್ಯ ವಿವರಿಸಿದರು.
ಕಲಬುರಗಿಯ ಸಾಮಾಜಿಕ ಹೋರಾಟಗಾರ್ತಿ ಕೆ. ನೀಲಾ ʼಪ್ರತಿಧ್ವನಿʼಯೊಂದಿಗೆ ಮಾತನಾಡಿ, ಸಂಘ ಪರಿವಾರ ಇಂತಹ ಸ್ವಾಮಿಗಳನ್ನು ಬಳಸಿಕೊಂಡು, ಧರ್ಮಕ್ಕೂ ಆಹಾರಕ್ಕೂ ಸಂಬಂಧ ಕಲ್ಪಿಸಲು ನೋಡುತ್ತಿದೆ. ಕೆಲವು ಲಿಂಗಾಯತ ಸ್ವಾಮಿಗಳಿಗೆ ಶರಣ ಪರಂಪರೆ ಮತ್ತು ವಚನ ಚಳವಳಿಯ ಬಗ್ಗೆ ಅರಿವಿಲ್ಲ. ಹಾಗೆ ನೋಡಿದರೆ, ಕರಾವಳಿ ಭಾಗದಲ್ಲಿ ಮೀನು ಕೊಟ್ಟರೂ ಒಳ್ಳೆಯದೇʼ ಎಂದರು.
ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮಿ, ʼಇಲ್ಲಿ ಯಾರೂ ಬಲವಂತವಾಗಿ ಮೊಟ್ಟೆ ತಿನ್ನಿ ಎನ್ನುತ್ತಿಲ್ಲ. ಅದಕ್ಕೆ ಪರ್ಯಾಯವಾಗಿ ಬಾಳೆಹಣ್ಣು ಇದೆ. ಅಪೌಷ್ಟಿಕತೆ ನಿವಾರಿಸಲು ಮೊಟ್ಟೆ ಅಗತ್ಯ…. ಆಹಾರ ಪದ್ಧತಿ ವೈಯಕ್ತಿಕ ಆಯ್ಕೆಯಾಗಿದ್ದು, ಇತರರು ಇದರಲ್ಲಿ ಹಸ್ತಕ್ಷೇಪ ಮಾಡಬಾರದುʼ ಎಂದಿದ್ದಾರೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್, “ಸರಕಾರವು ಮಧ್ಯಾಹ್ನದ ಊಟದಲ್ಲಿ ಕೇವಲ ಮೊಟ್ಟೆ ಮಾತ್ರವಲ್ಲದೆ ಮಾಂಸವನ್ನೂ ಸೇರಿಸಬೇಕು. ಹೆಚ್ಚಿನ ಮಕ್ಕಳು ವಿಟಮಿನ್ ಬಿ 12 ಕೊರತೆಯಿಂದ ಉಂಟಾಗುವ ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಇದನ್ನು ಮಾಂಸ ಸೇವನೆಯಿಂದ ಸರಿಪಡಿಸಬಹುದು. ಕೆಲವು ಜನರು ಇಷ್ಟಪಡುವುದಿಲ್ಲ ಎಂಬ ಕಾರಣಕ್ಕಾಗಿ ಸರ್ಕಾರವು ಬಹುಪಾಲು ಮಕ್ಕಳ ತಮ್ಮ ಆಯ್ಕೆಯ ಪೌಷ್ಠಿಕಾಂಶದ ಆಹಾರವನ್ನು ಪಡೆಯುವ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ, ” ಎಂದು ಅಭಿಪ್ರಾಯ ಪಡುತ್ತಾರೆ.
ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಎಸ್.ಎಂ.ಜಾಮದಾರ್, ಶಾಲಾ ಮಕ್ಕಳಿಗೆ ಪರ್ಯಾಯ ಸಸ್ಯಾಹಾರವನ್ನು ನೀಡುವವರೆಗೆ ನಮ್ಮ ಸಂಘಟನೆಗೆ ಯಾವುದೇ ತೊಂದರೆ ಇಲ್ಲ ಎನ್ನುತ್ತಾರೆ. “ಲಿಂಗಾಯತರು, ಜೈನರು ಮತ್ತು ಬ್ರಾಹ್ಮಣರಂತಹ ಸಸ್ಯಾಹಾರಿ ಸಮುದಾಯದ ಮಕ್ಕಳನ್ನು ಮೊಟ್ಟೆ ತಿನ್ನುವಂತೆ ಒತ್ತಾಯಿಸುವುದು ತಪ್ಪು. ಸರ್ಕಾರವು ಮೊಟ್ಟೆಗೆ ಸಸ್ಯಾಹಾರಿ ಪರ್ಯಾಯವನ್ನು (ಬಾಳೆಹಣ್ಣು) ನೀಡಿರುವುದರಿಂದ, ಅದು ಸಂಪೂರ್ಣವಾಗಿ ಸರಿ. ಇದು ಮಕ್ಕಳಿಗೆ ಆಯ್ಕೆಯ ಅವಕಾಶವನ್ನು ಒದಗಿಸುತ್ತದೆ. ನಾವು ಮೊಟ್ಟೆ ನೀಡುವ ಸರ್ಕಾರದ ನಿರ್ಧಾರವನ್ನು ವಿರೋಧಿಸಲು ಹೋಗುವುದಿಲ್ಲʼ ಎಂದು ಜಾಮದಾರ್ ಹೇಳಿದ್ದಾರೆ.
ಬೀದರ್ನಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್ಪಿಐ), ದಲಿತ ವಿದ್ಯಾರ್ಥಿ ಪರಿಷತ್, ರಮಾಭಾಯಿ ಭಜನಾ ತಂಡ, ಜನವಾದಿ ಮಹಿಳಾ ಸಂಘಟನೆ ಮತ್ತು ಗೊಂಡ ವಿದ್ಯಾರ್ಥಿ ಸಂಘಟನೆ ಸೇರಿದಂತೆ ಕೆಲವು ಸಂಘಟನೆಗಳು ಬೀದರ್ ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿ ಸರ್ಕಾರವು . ಶಾಲಾ ಮಕ್ಕಳಿಗೆ ಮೊಟ್ಟೆ ಪೂರೈಕೆ ನಿರ್ಧಾರವನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕದಲ್ಲಿ ಮಕ್ಕಳಲ್ಲಿನ ಅಪೌಷ್ಟಿಕತೆಯ ವಿರುದ್ಧ ಹೋರಾಡಲು ತಜ್ಞರ ತಂಡವು ಶಿಫಾರಸು ಮಾಡಿದ ನಂತರ ಮಧ್ಯಾಹ್ನದ ಊಟದಲ್ಲಿ ಮೊಟ್ಟೆಯನ್ನು ಸೇರಿಸುವ ನಿರ್ಧಾರಕ್ಕೆ ಸರ್ಕಾರ ಬಂದಿತು.
ಈ ಕಾರ್ಯಕ್ರಮವನ್ನು ರಾಜ್ಯಾದಂತ ವಿಸ್ತರಿಸಬೇಕು ಎಂದು ಶಿಕ್ಷಣ ತಜ್ಞ ಪ್ರೊ. ನಿರಂಜನಾರಾಧ್ಯ ಸರ್ಕಾರವನ್ನುಒತ್ತಾಯಿಸಿದರು.
ಸದ್ಯಕ್ಕೆ ಬೊಮ್ಮಾಯಿ ಸರ್ಕಾರ ಮೊಟ್ಟೆ ನೀಡುವ ಕಾರ್ಯಕ್ರಮ ಆರಂಭಿಸಿದ್ದು ಸ್ವಾಗತಾರ್ಹ.
ಅವರವರ ಆಹಾರ ಅವರ ಹಕ್ಕು….