ಜರ್ಮನಿಯ ಸರ್ವನಾಶಕ್ಕೆ ಮೊದಲು ಅಲ್ಲಿ ನಾಜಿಗಳು ಹುಟ್ಟುಹಾಕಿದ ಬಲಪಂಥೀಯ ಭಯೋತ್ಪಾದಕ ಸಂಘಟನೆಯ ಕುರಿತು ನಮಗೆ ತಿಳಿದಿದೆ. ಅದೇ ಮಾದರಿಯಲ್ಲಿ ಭಾರತದಲ್ಲಿ ಮಹಾರಾಷ್ಟ್ರದ ಸಾಂಪ್ರದಾಯವಾದಿ ಚಿತ್ಪಾವನ ಬ್ರಾಹ್ಮಣರು ಹುಟ್ಟುಹಾಕಿರುವ ಆರ್ಎಸ್ಎಸ್ ಮತ್ತು ಅದರ ಅನುಮಾನಾಸ್ಪದ ಚಟುವಟಿಕೆಗಳ ಕುರಿತು ಅನೇಕ ಸುದ್ದಿಗಳಿವೆ. ೨೦೧೮ˌ ಜುಲೈ ೨೦ ರ ‘ಜನತಾ ಕಾ ರಿಪೋರ್ಟರ್’ ಹೆಸರಿನ ವೆಬ್ ಜರ್ನಲ್ಲಿನಲ್ಲಿ ಅಂಕಣಕಾರ ರವಿ ನಾಯರ್ ಅವರು ಆರ್ಎಸ್ಎಸ್ ನ ಅಕ್ರಮ ಅಸ್ತಿತ್ವದ ಕುರಿತು ಸುದೀರ್ಘ ಲೇಖನ ಬರೆದಿದ್ದಾರೆ. ಆ ಅಂಕಣವನ್ನು ಆಧಾರವಾಗಿಟ್ಟುಕೊಂಡು ನಾನು ಆರ್ಎಸ್ಎಸ್ ಕುರಿತು ಅನೇಕ ಸಂಗತಿಗಳನ್ನು ಇಲ್ಲಿ ಚರ್ಚಿಸಿದ್ದೇನೆ.
ಇಡೀ ಅಂಕಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಒಂದು ನೋಂದಾಯಿತ ಸಂಸ್ಥೆಯೆ ಎನ್ನುವ ಸಾಮಾನ್ಯ ಜನರ ಮನದಲ್ಲಿನ ಪ್ರಶ್ನೆಯನ್ನು ಆಧಾರವಾಗಿಟ್ಟುಕೊಂಡು ರವಿ ನಾಯರ್ ಅವರು ಚರ್ಚೆಯೊಂದನ್ನು ಹುಟ್ಟುಹಾಕಿದ್ದಾರೆ. ಆದರೆ ಜನರ ಪ್ರಶ್ನೆಗಳಿಗೆ ಸೂಕ್ತ ಹಾಗು ತೃಪ್ತಿಕರ ಉತ್ತರವನ್ನು ಆರ್ಎಸ್ಎಸ್ ಎಂದಿಗೂ ಕೊಟ್ಟಿಲ್ಲ. ೨೩ ಜುಲೈ ೨೦೧೬ ರಂದು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಗೋವಾದಲ್ಲಿ ಪತ್ರಕರ್ತರಿಗೆ, “ನೋಂದಣಿಯಾಗದ ಸಂಘಟನೆಯನ್ನು ನಿಷೇಧಿಸುವ ಪ್ರಶ್ನೆಯೇ ಇಲ್ಲ. ಆರ್ಎಸ್ಎಸ್ ಅನ್ನು ನಿಷೇಧಿಸುವ ಕುರಿತು ನೀವು ಎಷ್ಟು ಬಾರಿ ಕೇಳುತ್ತೀರಿ, ಆರ್ಎಸ್ಎಸ್ ನೋಂದಾಯಿತ ಸಂಸ್ಥೆ ಅಲ್ಲ ಎಂದು ನಿಮಗೆ ತಿಳಿದಿದೆಯಲ್ಲ ಎಂದು ಪ್ರತಿಕ್ರೀಯಿಸಿದ ಸಂಗತಿಯನ್ನು ರವಿ ನಾಯರ್ ಅವರು ಉಲ್ಲೇಖಿಸಿದ್ದಾರೆ.
ರವಿ ನಾಯರ್ ಅವರು ಓದುಗರ ಮುಂದೆ ಆರ್ಎಸ್ಎಸ್ ಕುರಿತು ಒಂದಷ್ಟು ಮಹತ್ವದ ಪ್ರಶ್ನೆಗಳನ್ನಿಟ್ಟಿದ್ದಾರೆ. ಇಂದಿನ ರಾಜಕೀಯ ವಾತಾವರಣದಲ್ಲಿ ನಿಜವಾಗಿಯೂ ಇಂತಹ ಮಹತ್ವದ ಟೀಕೆಗಳಿಗೆ ಆರ್ಎಸ್ಎಸ್ ಅಥವಾ ಅದರ ರಾಜಕೀಯ ವೇದಿಕೆಯಾಗಿರುವ ಬಿಜೆಪಿ ಏತಕ್ಕೆ ಎಂದಿಗೂ ಪ್ರತಿಕ್ರಿಯಿಸುದಿಲ್ಲ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆದರೆ ನಾಯರ್ ಅವರು ಈಗ ಅಂತಿಮವಾಗಿ ಪ್ರಶ್ನೆ ಕೇಳುವ ಸಮಯ ಬಂದಿದೆ ಎಂದು ನಿರ್ಧಾರಯುತ ನಿಲುವು ತಾಳುತ್ತಾರೆ. ನಾಯರ್ ಅವರ ಮುಖ್ಯ ಪ್ರಶ್ನೆಗಳೆಂದರೆ:
೧. ಆರ್ಎಸ್ಎಸ್ ಒಂದು ನೋಂದಾಯಿತ ಸಂಸ್ಥೆಯೇ?
೨. ಇಲ್ಲದಿದ್ದರೆ, ಆ ಸಂಸ್ಥೆಯ ಹಣಕಾಸಿನ ಮೂಲ ಮತ್ತು ಹಣ ಸಂಗ್ರಹದ ಮಾರ್ಗ ಯಾವುದು?
೩. ನೋಂದಣಿಯಾಗದ ಸಂಸ್ಥೆಯು ತನ್ನ ಅರೆಸೇನಾ ತರಬೇತಿ ಶಾಖೆಗಳನ್ನು ದೇಶದ ಉದ್ದಗಲಕ್ಕೂ ನಡೆಸಿಕೊಂಡು ತನ್ನನ್ನು ತಾನು ಸಾಂಸ್ಕೃತಿಕ ಸಂಸ್ಥೆ ಎಂದು ಕರೆದುಕೊಳ್ಳುವುದರ ಕಾನೂನುಬದ್ಧತೆ ಏನು?
ರವಿ ನಾಯರ್ ಅವರು ತಾವು ಹಾಕಿರುವ ಒಂದೊಂದೆ ಪ್ರಶ್ನೆಗಳ ಸುತ್ತ ತಮ್ಮ ಚರ್ಚೆಯನ್ನು ಮುಂದುವರೆಸುತ್ತಾರೆ. ಮೊದಲ ಪ್ರಶ್ನೆ ಆರ್ಎಸ್ಎಸ್ ಒಂದು ನೋಂದಾಯಿತ ಸಂಸ್ಥೆಯಾಗಿದ್ದರೆ ಅದು ಯಾವಾಗ, ಎಲ್ಲಿ ಮತ್ತು ದೇಶದ ಯಾವ ಕಾನೂನಿನ ಅಡಿಯಲ್ಲಿ ನೊಂದಾವಣಿಯಾಗಿದೆ ಎಂದು ಮರು ಪ್ರಶ್ನೆಯನ್ನು ಹಾಕುತ್ತಾರೆ. ಆರ್ಎಸ್ಎಸ್ ಈಗಾಗಲೇ ನೋಂದಾವಣಿಯಾಗಿದ್ದು ಅದರ ನೋಂದಣಿ ಸಂಖ್ಯೆ ೦೮-D ೦೦೧೮೩೯೪ ಆಗಿದ್ದು ನೋಂದಣಿಯ ಅಂಕಿ ಕೋಡ್ ೯೪೯೧೦ ಇದ್ದು ನೋಂದಣಿಯನ್ನು ಭಾರತೀಯ ಸರ್ಕಾರ ಮತ್ತು ಸೊಸೈಟಿ ನೋಂದಣಿ ಕಾನೂನು ೧೯೫೦ ರ ಸೆಕ್ಷನ್ ೧೮೬೦ ರ ಅಡಿಯಲ್ಲಿ ನೀಡಲಾಗಿದೆ ಎಂಬ ವಾಟ್ಸಪ್ ಸಂದೇಶವು ಇತ್ತೀಚೆಗೆ ಬಲಪಂಥೀಯರ ಸಾಮಾಜಿಕ ಜಾತತಾಣ ಗುಂಪುಗಳಲ್ಲಿ ವೈರಲ್ ಆಗಿದೆಯಂತೆ. ನಂತರ ಟ್ವಿಟರ್ಗೂ ಇದು ಹೋಗಿದ್ದು ಈ ಸಂದೇಶವು ಜನರನ್ನು ತಪ್ಪುದಾರಿಗೆಳೆವಂತದ್ದೆ ಎನ್ನುವ ಕುರಿತು ನಾಯರ್ ಅವರು ಪರಿಶೀಲಿಸುತ್ತಾರೆ.
ಆ ಕುರಿತು ನಾಯರ್ ಅವರು ಜನಾರ್ದನ್ ಮೂನ್ ಎಂಬ ನಿವೃತ್ತ ಶಾಲಾ ಶಿಕ್ಷಕˌ ಸಾಮಾಜಿಕ ಕಾರ್ಯಕರ್ತ ಮತ್ತು ಆರ್ಎಸ್ಎಸ್ ಪ್ರಧಾನ ಕಚೇರಿ ಇರುವ ನಾಗಪುರದ ಮಾಜಿ ಕಾರ್ಪೊರೇಟ್ ಒಬ್ಬರು ರ್ಎಸ್ಎಸ್ ಕುರಿತು ಎತ್ತಿರುವ ತಕರಾರನ್ನು ಇಲ್ಲಿ ಉಲ್ಲೇಖಿಸಿದ್ದಾರೆ. ೨೦೧೭ ಎಪ್ರಿಲ್ನಲ್ಲಿ, ಮೂನ್ ಅವರು ತಮ್ಮ ಪ್ರಕಟಣೆಯ ಮೂಲಕ ಕೆಲವು ಪ್ರಶ್ನೆಗಳನ್ನು ಎತ್ತಿದ್ದರಂತೆ. ಮೂನ್ ಅವರು ನಾಗರಿಕ್ ಹಕ್ ಸಂರಕ್ಷಣ್ ಸಂಸ್ಥೆಗೆ ಸೇರಿದವರಾಗಿದ್ದು ಅದು ಸ್ಥೂಲವಾಗಿ ಪೀಪಲ್ಸ್ ರೈಟ್ಸ್ / ನಾಗರಿಕ ಹಕ್ಕುಗಳ ರಕ್ಷಣೆಯ ಕಾರ್ಯವನ್ನು ಮಾಡುತ್ತದೆಂದು ತಿಳಿಸಿದ್ದಾರೆ. ಹೀಗೆ ಮೂನ್ ಅವರು ಎತ್ತಿರುವ ಮೂಲಭೂತ ಪ್ರಶ್ನೆಗಳನ್ನು ಆರ್ಎಸ್ಎಸ್ ಮತ್ತು ಅಂದಿನ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ಗೆ ಕಳುಹಿಸಿˌ ಸಂಘವು ತಪ್ಪಿತಸ್ಥವೆಂದು ಕಂಡುಬಂದರೆ ಅದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ ಪ್ರಕರಣದ ಮೇಲೆ ನಾಯರ್ ಅವರು ಬೆಳಕು ಚೆಲ್ಲಿದ್ದಾರೆ.
ಜನಾರ್ದನ ಮೂನ್ ಅವರು ಎತ್ತಿರುವ ಏಳು ಮಹತ್ವದ ಪ್ರಶ್ನೆಗಳೆಂದರೆ:
೧. ಆರ್ಎಸ್ಎಸ್ ಗೆ ಯಾವುದೇ ನೋಂದಣಿ ಅಗತ್ಯವಿಲ್ಲವೇ?
೨. ಆರ್ಎಸ್ಎಸ್ ಒಂದು ಸಂಸ್ಥೆಯೆ, ವ್ಯಕ್ತಿಯೆ, ಕಂಪನಿಯೆ ಅಥವಾ ಇನ್ನೇನು ಆಗಿದೆ?
೩. ಆರ್ಎಸ್ಎಸ್ ನ ೫೬,೦೦೦ ಶಾಖೆಗಳಿಗೆ ಹಣಕಾಸಿನ ಮೂಲ ಯಾವುದು?
೪. ಅದರ ವಾರ್ಷಿಕ ಕಾರ್ಯಕ್ರಮ/ಉತ್ಸವಗಳು ಮತ್ತು ಇತರ ಚಟುವಟಿಕೆಗಳಿಗೆ ಹರಿದು ಬರುವ ಹಣದ ಮೂಲ ಯಾವುದು?
೫. ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಭದ್ರತೆಗೆ ದೇಶದ ಬಡ ತೆರಿಗೆದಾರರಿಂದ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿದ್ದು ಹೇಗೆ?
೬. ಆರ್ಎಸ್ಎಸ್ನ ಮಹಲ್ ಮೂಲದ ಆಸ್ತಿ ಶ್ರೀ ಎಂ ಡಿ ದೇವರಸ್ಗೆ ಸೇರಿದೆ. ಸಿಐಎಫ್ಎಸ್ (CIFS) ಅದನ್ನು ಏಕೆ ರಕ್ಷಿಸುತ್ತಿದೆ?
೭. ಭಾರತ ಸರಕಾರವು ಇತ್ತೀಚೆಗೆ ಸಂಘ ಸಂಸ್ಥೆಗಳನ್ನು ಗುರುತಿಸುವ ಮಾನದಂಡಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಯಾವ ವರ್ಗಗಳಲ್ಲಿ ಆರ್ಎಸ್ಎಸ್ ಹೊಂದಿಕೊಳ್ಳುತ್ತದೆ?
ಇವು ಜನಾರ್ದನ್ ಮೂನ್ ಅವರು ಎತ್ತಿರುವ ಪ್ರಮುಖ ಪ್ರಶ್ನೆಗಳು. ಅಂದಿನ ಮಹಾರಾಷ್ಟ್ರದ ಮುಖ್ಯಮಂತ್ರಿ ಫಡ್ನವಿಸ್ ಕಚೇರಿಯು ಈ ಪ್ರಶ್ನೆಗಳನ್ನು ನಾಗಪುರ ಜಂಟಿ ಚಾರಿಟಿ ಕಮಿಷನರ್ ಅವರ ಕಚೇರಿಗೆ ರವಾನಿಸಿˌ ವಿಶೇಷವಾಗಿ ಆರ್ಎಸ್ಎಸ್ ನೋಂದಣಿ ಕುರಿತ ಆರೋಪಗಳನ್ನು ಪರಿಶೀಲಿಸಲು ಆದೇಶಿಸಿತ್ತಂತೆ. ನಾಗಪುರದ ಜಂಟಿ ಚಾರಿಟಿ ಕಮಿಷನರ್ ಕಚೇರಿಯು ಜನಾರ್ದನ್ ಮೂನ್ ಅವರಿಗೆ ಈ ಕೆಳಗಿನಂತೆ ಉತ್ತರಿಸಿದೆಯಂತೆ: ಅರ್ಜಿದಾರರ ಪತ್ರಗಳಲ್ಲಿ ಉಲ್ಲೇಖಿಸಿದ ಪ್ರಶ್ನೆಗಳಿಗೆ ಉತ್ತರವಾಗಿ ನಮ್ಮ ಕಚೇರಿಯ ಅಧಿಕೃತ ದಾಖಲೆಗಳ ಪ್ರಕಾರ, ಆರ್ಎಸ್ಎಸ್ ಹೆಸರಿನ ಸಂಘಟನೆಯು ನಾಗಪುರ ಚಾರಿಟಿ ಕಮಿಷನರ್ ಕಚೇರಿಯಲ್ಲಿ ನೋಂದಾಯಿಸಲ್ಪಟ್ಟಿಲ್ಲ. ಆದ್ದರಿಂದ ದಿನಾಂಕ ೨೪-೦೫-೨೦೧೭ ರ ಅರ್ಜಿಯಂತೆ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲವೆಂದು ಹೇಳಿರುವ ಬಗ್ಗೆ ರವಿ ನಾಯರ್ ಅವರು ವಿವರವಾಗಿ ಉಲ್ಲೇಖಿಸಿದ್ದಾರೆ.
ಜನಾರ್ದನ್ ಮೂನ್ ಮತ್ತು ಅವರ ಸಂಗಡಿಗರು ೨೮ ಆಗಸ್ಟ್ ೨೦೧೭ ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಸರಿನಲ್ಲಿ ಸೋಸೈಟಿ ನೋಂದಣಿ ಕಾಯ್ದೆ ೧೮೬೦ˌ ಸೆಕ್ಷನ್ ೨೦ ರ ಅಡಿಯಲ್ಲಿ ಹೊಸ ಸಾರ್ವಜನಿಕ ಚಾರಿಟಬಲ್ ಸೊಸೈಟಿಯನ್ನು ಸ್ಥಾಪಿಸಸಲು ಅದೇ ಕಚೇರಿಯಲ್ಲಿ ಆನ್ಲೈನ್ ಅರ್ಜಿಯನ್ನು ಸಲ್ಲಿಸುತ್ತಾರೆ ಮತ್ತು ಬೇರೆ ಯಾವುದೇ ಸಂಸ್ಥೆ ಆ ಹೆಸರಿನಲ್ಲಿ ನೋಂದಣಿಯಾಗಿಲ್ಲದ ಕಾರಣ ಅವರ ಅರ್ಜಿಯನ್ನು ನೋಂದಣಿ ಸಂಸ್ಥೆ ಸ್ವೀಕರಿಸುತ್ತದೆ. ಮೂನ್ ಅವರ ಸೇವಾ ವಿನಂತಿ ಸಂಖ್ಯೆ (SRN) NGP/೨೦೬೦೬/೧೮೬೦/೧೭ ಆಗಿತ್ತು ಎಂದು ನಾಯರ್ ಅವರು ವಿವರ ನೀಡಿದ್ದಾರೆ. ಆರ್ಎಸ್ಎಸ್ ಪರವಾಗಿ ಎಂದು ಹೇಳಲಾದ ವಕೀಲ ರಾಜೇಂದ್ರ ಗುಂಡಾಳ್ವಾರ್ ಎಂಬ ವ್ಯಕ್ತಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಸರನ್ನು ಮೂನ್ ಗುಂಪಿಗೆ ನೀಡುವುದಕ್ಕೆ ತರಕಾರು ಅರ್ಜಿ ಸಲ್ಲಿಸಿದ ವಿಷಯ ಈ ಪ್ರಕರಣವು ಸಾಕಷ್ಟು ಆಸಕ್ತಿದಾಯಕ ತಿರುವನ್ನು ಪಡೆದುಕೊಳ್ಳಲು ಕಾರಣವಾಯಿತು. ಏಕೆಂದರೆ ಅಂತಹ ಹೆಸರಿನ ಸಂಸ್ಥೆಯನ್ನು
ಈಗಾಗಲೇ ಚಂದ್ರಾಪುರದಲ್ಲಿ ಭಾರತ ಸರ್ಕಾರದ ಸೊಸೈಟಿ ನೋಂದಣಿ ಕಾನೂನು ೧೯೫೦ˌ ಸೆಕ್ಷನ್ ೧೮೬೦ ರ ಅನ್ವಯ ‘ಧಾರ್ಮಿಕ ಸಂಘಟನೆ’ ಯ ಅಡಿಯಲ್ಲಿ ನೋಂದಾಯಿಸಲಾಗಿದ್ದು ಅದರ ನೋಂದಣಿ ಸಂಖ್ಯೆ ೦೮-D ೦೦೧೮೩೯೪ ಯ ವಿವರ ಕೂಡ ಆ ಗುಂಡ್ವಾಳರ್ ನೀಡಿದ್ದರ ಬಗ್ಗೆ ನಾಯರ್ ವಿವರಿಸಿದ್ದಾರೆ.
ಅಂದು ಟೈಮ್ಸ್ ಆಫ್ ಇಂಡಿಯಾ ನಾಗಪುರ್ ಆವೃತ್ತಿಯಲ್ಲಿ ಪ್ರಕಟಗೊಂಡ ವರದಿಯಂತೆ ಆರ್ಎಸ್ಎಸ್ ಆ ಸಂಸ್ಥೆಯ ನೋಂದಣಿಯ ಅಂಕಿ ಕೋಡ್ ೯೪೯೧೦ ಆಗಿತ್ತು. ಆರ್ಎಸ್ಎಸ್ ನೋಂದಾಯಿತ ಸಂಸ್ಥೆಯಾಗಿರುವುದರಿಂದ ಅದರ ಹಣಕಾಸು ವ್ಯವಹಾರಗಳ ಕುರಿತು ಲೆಕ್ಕಪರಿಶೋಧಕರ ವರದಿ ಏಕೆ ಸಲ್ಲಿಸುತ್ತಿಲ್ಲ ಎಂದು ಪ್ರಶ್ನಿಸಿದಾಗ, ಗುಂಡಾಳ್ವಾರ್ ಧಾರ್ಮಿಕ ಸಂಸ್ಥೆಗಳಿಗೆ ಅದರಿಂದ ವಿನಾಯಿತಿ ನೀಡಲಾಗಿದೆ ಎಂದು ಸಮಜಾಯಿಷಿ ನೀಡಿದ ಕುರಿತು ಕೂಡ ಪತ್ರಿಕೆಯಲ್ಲಿ ವರದಿಯಾಗಿತ್ತಂತೆ. ಇಲ್ಲಿ ಅತ್ಯಂತ ಕುತೂಹಲಕಾರಿ ಸಂಗತಿ ಏನೆಂದರೆ ದತ್ತಿ ಆಯುಕ್ತರ ಕಚೇರಿಯು ಅರ್ಜಿದಾರ ಜನಾರ್ದನ್ ಮೂನಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಸರಿನ ಸಂಘಟನೆಯು ನೋಂದಾಯಿಸಿಲ್ಲ ಮತ್ತು ಆ ಹೆಸರು ನೋಂದಣಿಗೆ ಲಭ್ಯವಿದೆ ಎಂದು ತಿಳಿಸಿತ್ತು. ಆದರೆ, ಆರೆಸ್ಸೆಸ್ ಪ್ರತಿನಿಧಿಯು ಈ ಸಮರ್ಥನೆಯನ್ನು ವಿರೋಧಿಸಿದರು. ಸ್ಥಳೀಯ ಸುದ್ದಿ ವೆಬ್ಸೈಟ್ ನಾಗಪೂರ ಟುಡೇ ಮೂನ್ ಗುಂಪು ಸಲ್ಲಿಸಿದ ಪತ್ರದ ಜೊತೆಗೆ ಗುಂಡಾಲ್ವಾರ್ ಅವರ ವಿರೋಧವನ್ನು ವಿವರವಾಗಿ ಪ್ರಕಟಿಸಿತ್ತು ಎಂದು ನಾಯರ್ ಅವರು ಬರೆದಿದ್ದಾರೆ.
ಈ ಘಟನಾವಳಿಯ ವಿಚಿತ್ರ ತಿರುವು ಏನೆಂದರೆ ಈ ಮೊದಲು ಆ ಹೆಸರಿನ ಸಂಸ್ಥೆ ನೋಂದಣಿಗೆ ಲಭ್ಯವಿದೆ ಎಂದು ಮೂನ್ ಗುಂಪಿನ ಅರ್ಜಿ ಸ್ವೀಕರಿಸಿದ್ದ ಚಾರಿಟಿ ಆಯುಕ್ತರ ಕಚೇರಿ ನಾಟಕೀಯವಾಗಿ ಗುಂಡಾಲ್ವಾರ್ ಅವರ ತಕರಾರು ಅರ್ಜಿಯನ್ನು ಉಲ್ಲೇಖಿಸಿ ಮೂನ್ ಗುಂಪಿನ ಅರ್ಜಿಯನ್ನು ತಿರಸ್ಕರಿಸಿತು. ಮೂನ್ ಮತ್ತು ಇತರ ನಾಲ್ವರು ಆಯುಕ್ತರ ಈ ನಿರ್ಧಾರವನ್ನು ವಿರೋಧಿಸಿದರು, ಅಂತಹ ಹೆಸರಿನ ಸಂಸ್ಥೆ ಈಗಾಗಲೇ ನೋಂದಾಯಿಸಿದ್ದರೆ, ನೋಂದಾಯಿತ ಪಟ್ಟಿಯಲ್ಲಿ ಆ ಸಂಸ್ಥೆಯ ಹೆಸರನ್ನು ಏಕೆ ಉಲ್ಲೇಖಿಸಿಲ್ಲ ಮತ್ತು ಆರ್ಎಸ್ಎಸ್ ಹೆಸರಿನಲ್ಲಿ ಸಂಸ್ಥೆಯನ್ನು ನೋಂದಾಯಿಸಲು ತಮ್ಮ ಆನ್ಲೈನ್ ಅರ್ಜಿಯನ್ನು ಮೊದಲ ಸ್ಥಾನದಲ್ಲಿ ಹೇಗೆ ಸ್ವೀಕರಿಸಲಾಯಿತು ಎಂದು ಪ್ರಶ್ನಿಸಿದ್ದರ ಕುರಿತು ನಾಯರ್ ಅವರು ಉಲ್ಲೇಖಿಸಿದ್ದಾರೆ.
ಜಂಟಿ ಚಾರಿಟಿ ಕಮಿಷನರ್ ಶ್ರೀಮತಿ ಕರುಣಾ ಎಂ ಪತ್ರೆಲ್ ಅವರ ಈ ನಿರ್ಧಾರವನ್ನು ಜನಾರ್ದನ್ ಮೂನ್ ಮತ್ತು ಅವರ ಗುಂಪು ಅಕ್ಟೋಬರ್ ೨೦೧೭ ರಲ್ಲಿ ಮುಂಬೈ ಹೈಕೋರ್ಟ್ನ ನಾಗಪೂರ ಪೀಠದಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿತು. ನ್ಯಾಯಾಲಯವು ಕಕ್ಷಿದಾರರಿಗೆ ನೋಟಿಸ್ಗಳನ್ನು ಕಳುಹಿಸಿದ್ದರೂ ಕೂಡ ಸಂಬಂಧಿಸಿದ ಕಕ್ಷಿದಾರರಿಂದ ಇಲ್ಲಿಯವರೆಗೆ ಯಾವುದೇ ಉತ್ತರ ನೀಡಲಾಗಿಲ್ಲ ಎಂದು ಮೂನ್ ಗುಂಪು ಅಪಾದಿಸಿದೆ. ಸುಮಾರು ಒಂಬತ್ತು ತಿಂಗಳಿನಿಂದ ಈ ಪ್ರಕರಣದ ವಿಚಾರಣೆಯನ್ನು ಏಕೆ ಮುಂದುವರಿಸಿಲ್ಲ ಎಂದು ಕೇಳಿದಾಗ, ಗುಂಡಾಲ್ವಾರ್ ಅವರು ಇತರ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ ಮತ್ತು ತಮ್ಮದೇ ಆದ ಆರ್ಎಸ್ಎಸ್ ನ ಮೊದಲ ವಾರ್ಷಿಕೋತ್ಸವ ಆಚರಣೆಯಲ್ಲಿ ನಿರತರಾಗಿದ್ದು ಮುಂದಿನ ದಿನಗಳಲ್ಲಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಾಲಯ ತಿಳಿಸಿರುವ ಬಗ್ಗೆ ಮೂನ್ ಅವರ ಗುಂಪು ಹೇಳಿರುವುದಾಗಿ ನಾಯರ್ ಅವರು ಬರೆದಿದ್ದಾರೆ.
ಆರ್ಎಸ್ಎಸ್ ಒಂದು ನೋಂದಾಯಿತ ಸಂಸ್ಥೆಯೇ ಎಂದು ಮಾಹಿತಿ ಕೇಳಿದ್ದ ಮೂನ್ ಗುಂಪಿನ ಅರ್ಜಿಯನ್ನು ಸ್ವೀಕರಿಸಲಾಗಿದ್ದು ಜಂಟಿ ದತ್ತಿ ಆಯುಕ್ತರ ಕಚೇರಿ ಮಹಾರಾಷ್ಟ್ರ ಸಿಎಂ ಕಚೇರಿಯ ಪರವಾಗಿ ಲಿಖಿತವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ಆರ್ಎಸ್ಎಸ್ ನೋಂದಣಿಯಾಗದ ಸಂಘಟನೆಯಾಗಿದ್ದು ಅದರ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಮಾಹಿತಿ ನೀಡಿರುವುದರಿಂದ ಜನಾರ್ದನ್ ಮೂನ್ ಅವರ ಗುಂಪು ಆರ್ಎಸ್ಎಸ್ ಹೆಸರನ್ನು ಬಹಿರಂಗವಾಗಿ ಬಳಸಲಾರಂಭಿಸಿತು. ಆರ್ಎಸ್ಎಸ್ ಹೆಸರಿನ ಮೇಲೆ ವಿಸಿಟಿಂಗ್ ಕಾರ್ಡ್ಗಳು ಮತ್ತು ಲೆಟರ್ಹೆಡ್ಗಳಲ್ಲಿ ಬಹಿರಂಗವಾಗಿ ಬಳಸಲಾರಂಭಾಸಿತು. ಆರ್ಎಸ್ಎಸ್ ಹೆಸರಿನ ಲೆಟರ್ಹೆಡ್ನಲ್ಲಿ ಮೂನ್ ಗುಂಪು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ರಾಷ್ಟ್ರಪತಿಗಳಿಗೆ ಪತ್ರವನ್ನು ಬರೆದು ನಾಗಪೂರದ ಆರ್ಎಸ್ಎಸ್ ಪ್ರಧಾನ ಕಛೇರಿಯು ಯಾವುದೇ ನೋಂದಣಿ ಮತ್ತು ಹೊಣೆಗಾರಿಕೆಯಿಲ್ಲದೆ “ಕಾನೂನುಬಾಹಿರವಾಗಿ” ಕಾರ್ಯನಿರ್ವಹಿಸುತ್ತಿದೆ ಮತ್ತು ಆದ್ದರಿಂದ ತಮ್ಮ ಗುಂಪು ಅದೇ ಹೆಸರಿನಲ್ಲಿ ಸಂಸ್ಥೆಯನ್ನು ನೋಂದಾಯಿಸಲು ಮನವಿ ಸಲ್ಲಿಸಿದೆ ಎಂದು ಹೇಳಿರುವುದಾಗಿ ನಾಯರ್ ಅವರು ಬರೆದಿದ್ದಾರೆ.
ಮೂನ್ ಗುಂಪು ಪ್ರಧಾನಿ ಮೋದಿಗೆ ಬರೆದಿರುವ ಪತ್ರದಲ್ಲಿ ಪ್ರಸ್ತುತ ಮೋಹನ್ ಭಾಗವತ್ ನೇತೃತ್ವದ ಆರ್ಎಸ್ಎಸ್ ಎಂಬ ನೋಂದಾಯಿತವಲ್ಲದ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರಂತೆ. ಆದರೆ ಪ್ರಧಾನಿ ಕಚೇರಿಯಾಗಲಿ ಅಥವಾ ರಾಷ್ಟ್ರಪತಿ ಕಚೇರಿಯಾಗಲಿ ಮೂನ್ ಗುಂಪಿನ ಪತ್ರಗಳಿಗೆ ಇಲ್ಲಿಯವರೆಗೆ ಉತ್ತರಿಸಿಲ್ಲ ಎಂದು ಮೂನ್ ಅವರು ‘ಜನತಾ ಕಾ ರಿಪೋರ್ಟನ್’ ನ ವರದಿಗಾರರಿಗೆ ತಿಳಿಸಿದ್ದಾರಂತೆ. ಆರ್ಎಸ್ಎಸ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ನಿರ್ಧಾರದ ಬಗ್ಗೆ ಅಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಈ ಮೂನ್ ಗುಂಪು ಎಚ್ಚರಿಕೆಯನ್ನು ನೀಡಿ ಅಕ್ರಮ ಸಂಘಟನೆಯ ಕಾರ್ಯಚಟುವಟಿಕೆಗಳಲ್ಲಿ ಹಾಜರಾಗುವ ಮೂಲಕ ಅದಕ್ಕೆ ಅನಗತ್ಯ ಮಾನ್ಯತೆ ನೀಡಬೇಡಿ ಎಂದು ಕೇಳಿಕೊಂಡಿದ್ದರ ಬಗ್ಗೆ ನಾಯರ್ ಅವರು ಸವಿವರವಾಗಿ ಬರೆದಿದ್ದಾರೆ. ಚಾರಿಟಿ ಕಮಿಷನರ್ ಕಚೇರಿಯು ಪಟ್ಟಿಮಾಡಿದ ಫೋನ್ ಸಂಖ್ಯೆಗಳಿಗೆ (೦೭೧೨ ೨೫೬೫೩೫೦ / ೨೫೪೪೯೯೧) ಜನತಾ ಕಾ ರಿಪೋರ್ಟರ್ ನ ವರದಿಗಾರ ಮೇಲಿಂದಮೇಲೆ ಕರೆಗಳು ಮಾಡಿದರೂ ಉತ್ತರಿಸಲಿಲ್ಲ ಹಾಗು ರಾಜೇಂದ್ರ ಗುಂಡಾಲ್ವಾರ್ ಅವರ ಮೊಬೈಲ್ ಸಂಖ್ಯೆಯು ನಿರಂತರವಾಗಿ ಸ್ವಿಚ್ ಆಫ್ ಆಗಿರುತ್ತದೆ ಅಥವಾ ಲಭ್ಯವಿಲ್ಲ ಎನ್ನುವ ಉತ್ತರಿಸುತ್ತಿರುವುದರ ಬಗ್ಗೆ ನಾಯರ್ ಅವರು ಬರೆದಿದ್ದಾರೆ.
ಏತನ್ಮಧ್ಯೆ, ಎನ್ ಜಿ ಓ ಡೈರೆಕ್ಟರಿ ಮತ್ತು ಡೇಟಾ ಪಟ್ಟಿಯನ್ನು ಸರಳವಾದ ಪರಿಶೀಲನೆ ಮಾಡಿದಾಗ ಮಹಾರಾಷ್ಟ್ರದಲ್ಲಿ ನೋಂದಾಯಿತ ಮತ್ತು ಪ್ರಸ್ತುತ ಸಕ್ರಿಯವಾಗಿರುವ ೬೩೮೧ ಎನ್ಜಿಒಗಳು / ಚಾರಿಟಬಲ್ ಟ್ರಸ್ಟ್ಗಳು / ಚಾರಿಟಬಲ್ ಸೊಸೈಟಿಗಳಿದ್ದು ಅವುಗಳಲ್ಲಿ ೧೩ ಸಂಸ್ಥೆಗಳ ಹೆಸರು ರಾಷ್ಟ್ರೀಯ ಎಂಬ ಶಬ್ದದಿಂದ ಆರಂಭವಾಗುತ್ತಿದ್ದರೂ ರಾಷ್ಟ್ರೀಯ ಸ್ವಯಂಸೇವಕ ಸಂಘ ಎನ್ನುವ ಹೆಸರಿನ ಯಾವುದೇ ನೋಂದಾಯಿತ ಸಂಸ್ಥೆ ಕಾಣಸಿಗುವುದಿಲ್ಲ. ಅಲ್ಲದೆ, ರಾಜೇಂದ್ರ ಗುಂಡಾಲ್ವಾರ್ ಅವರು ಸಮರ್ಥಿಸಿಕೊಂಡಿರುವಂತೆ ಧಾರ್ಮಿಕ ಎನ್ಜಿಒಗಳ ಹಣಕಾಸಿನ ವ್ಯವಹಾರಗಳುˌ ಆದಾಯˌ ಖರ್ಚುಗಳ ಕುರಿತು ಲೆಕ್ಕಪರಿಶೋಧನೆಗೆ ವಿನಾಯಿತಿ ನೀಡಲಾಗಿದೆ ಎಂಬ ವಾದದಲ್ಲಿ ಯಾವುದೇ ಅರ್ಥವಿಲ್ಲವೆಂದು ಹೇಳಬಹುದಾಗಿದೆ. ಈ ಕುರಿತು ಆರೆಸ್ಸೆಸ್ ಮತ್ತು ಬಿಜೆಪಿಯ ಮೌನ ಈ ಪ್ರಕರಣದ ಅಕ್ರಮ ಸಂಗತಿಯನ್ನು ಹೇಳುತ್ತಿದೆ ಎಂದು ನಾಯರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ಆರ್ಎಸ್ಎಸ್ ಇಷ್ಟು ವರ್ಷಗಳಿಂದ ಕಾನೂನುಬಾಹಿರವಾಗಿ ಮತ್ತು ಯಾವುದೇ ಹೊಣೆಗಾರಿಕೆಯಿಲ್ಲದೆ ನಿರ್ಲಜ್ಜವಾಗಿ ಕಾರ್ಯನಿರ್ವಹಿಸುತ್ತಿರುವ ಸಾಧ್ಯತೆಯನ್ನು ಇದು ಸೂಚಿಸುತ್ತದೆ. ನಾಗಪೂರದ ಜಂಟಿ ಚಾರಿಟಿ ಕಮಿಷನರ್ ಕಚೇರಿಯ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಕಚೇರಿಯು ನೀಡಿದ ಉತ್ತರವು ಇನ್ನೂ ಹೆಚ್ಚು ಕುತೂಹಲಕಾರಿ ಪ್ರಶ್ನೆಯೊಂದನ್ನು ಹುಟ್ಟುಹಾಕುತ್ತದೆ. ಒಂದು ಗುಂಪಿನ ಜನರು ನೋಂದಾಯಿಸದ ಸಂಘಟನೆಯೊಂದರ ಹೆಸರಿನಲ್ಲಿ ಧಾರ್ಮಿಕ ಮತ್ತು ದತ್ತಿ ಕಾರ್ಯಗಳ ನೆಪದಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ, ಈಗ ಅಸ್ತಿತ್ವದಲ್ಲಿರುವ ನಮ್ಮ ಕಾನೂನುಗಳು ಅಂತಹ ಸಂಸ್ಥೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲವೇ? ಈ ಬೆಳವಣಿಗೆಯು ದೇಶದ ಸೌಹಾರ್ದತೆ, ಸಮಗ್ರತೆಗೆ ತುಂಬಾ ಅಪಾಯಕಾರಿ ಮತ್ತು ಭಯಾನಕವಾಗಿದೆ. ಆಶ್ಚರ್ಯದ ಸಂಗತಿ ಎಂದರೆ ಸ್ವಾತಂತ್ರ್ಯ ನಂತರ ೭೦ ವರ್ಷಗಳು ಕಳೆದಿದ್ದರೂ ನೋಂದಣಿ ಮತ್ತು ಕನಿಷ್ಠ ಹೊಣೆಗಾರಿಕೆಯಿಲ್ಲದೆ ಆರ್ಎಸ್ಎಸ್ ಕಾರ್ಯನಿರ್ವಹಿಸುತ್ತಿರುವುದು ಎನ್ನುತ್ತಾರೆ ರವಿ ನಾಯರ್ ಅವರು.
ಜನಾರ್ಧನ್ ಮೂನ್ ಅವರ ಗುಂಪು ಆರ್ಎಸ್ಎಸ್ ಎಂಬ ಅಪಾಯಕಾರಿ ಸಂಸ್ಥೆಯ ಬೆನ್ನಹಿಂದೆ ಬಿದ್ದು ಇಷ್ಟೊಂದು ರಚನಾತ್ಮಕ ಕೆಲಸ ಮಾಡಿದರೂ ಕೂಡ ಮೋದಿ ಆಡಳಿತದಲ್ಲಿ ಕಾರ್ಯಾಂಗ ಮತ್ತು ನ್ಯಾಯಾಂಗಗಳು ಒಂದು ಕಾನೂನು ಬಾಹಿರ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದೆ ಮೌನವಾಗಿರುವುದು ನೋಡಿದರೆ ರವಿ ನಾಯರ್ ಅವರು ಪ್ರಸ್ತಾಪಿಸಿರುವ ಆರ್ಎಸ್ಎಸ್ ಕುರಿತ ಎಲ್ಲಾ ಸಂಗತಿಗಳು ಸತ್ಯವೆಂದು ನಂಬಬಹುದಾಗಿದೆ.