ಜಿಲ್ಲಾಧಿಕಾರಿ ಅಗಿದ್ದ ರೋಹಿಣಿ ಸಿಂಧೂರಿ ಅವರ ವಿರುದ್ದ ಭೂಮಾಫಿಯಾ ತಿರುಗಿ
ಬಿದ್ದದ್ದು ಈಗ ಜಗಜ್ಜಾಹೀರೇ ಆಗಿದೆ. ಅದರೆ ಜನತೆಗೆ ಗೊತ್ತಿಲ್ಲದ ಸಂಗತಿ ಎಂದರೆ ಯಾವ
ಯಾವ ಭೂ ಒತ್ತುವರಿ ವಿರುದ್ದ ಇವರು ಕ್ರಮ ಕೈಗೊಳ್ಳಲು ಹೊರಟಿದ್ದರು ಎನ್ನುವ ವಿಷಯ.
ತಾವು ಹೊರಜಿಲ್ಲೆಗೆ ವರ್ಗಾವಣೆಗೊಂಡ ನಂತರ ರೋಹಿಣಿ ಸಿಂಧೂರಿ ಅವರು ಮಾಧ್ಯಮವೊಂದಕ್ಕೆ
ನೀಡಿರುವ ಸಂದರ್ಶನವೊಂದರಲ್ಲಿ ಈ ಕುರಿತು ವಿವರವಾಗಿ ಮಾತನಾಡಿದ್ದಾರೆ.
ಅವರ ಪ್ರಕಾರ ಜಯಪುರ ಹೋಬಳಿಯಲ್ಲಿ ಇರುವ 61 ಎಕರೆ ವಿಸ್ತಾರದ ಕೇರ್ಗಳ್ಳಿ ಕೆರೆ
ಹಾಗೂ ದಟ್ಟಗಳ್ಳಿ ಬಳಿ ಇರುವ ಅಯ್ಯಾಜಯ್ಯನಹುಂಡಿ ಕೆರೆಗೆ ಪುನಶ್ಚೇತನ ನೀಡಬೇಕೆಂದು
ತೀರ್ಮಾನಿಸಿದ್ದೆವು. ಆ ಕಾರಣಕ್ಕಾಗಿಯೇ ಈ ಕೆರೆಗಳ ಪಕ್ಕದಲ್ಲಿನ ಜಮೀನಿನಲ್ಲಿ ವಸತಿ
ಮಂಡಳಿ ವತಿಯಿಂದ ಮನೆಗಳನ್ನು ನಿರ್ಮಿಸಬೇಕೆಂದು ಕೋರಿ ಸರ್ಕಾರಕ್ಕೆ ಕಳುಹಿಸಲಾಗಿದ್ದ ಪ್ರಸ್ತಾವನೆಯೊಂದನ್ನು ನಾನು ರದ್ದುಗೊಳಿಸಬೇಕಾಗಿ ಬಂತು. ಕೈಗಾರಿಕಾ ತ್ಯಾಜ್ಯವೂ
ಸೇರಿದಂತೆ ನಾನಾ ಕಡೆಯಿಂದ ತಂದ ಕಸ-ಕಡ್ಡಿಯನ್ನು ಇಂತಹ ಕೆರೆಗಳಿಗೆ
ಸುರಿಯುತ್ತಿದ್ದರು. ಈ ಮೂಲಕ ಕೆರೆಯನ್ನು ಸಮತಟ್ಟು ಮಾಡಿ ಬಳಿಕ ಅದೇ ಜಾಗದಲ್ಲಿ
ಬಡಾವಣೆ ನಿರ್ಮಾಣ ಮಾಡಬೇಕೆಂಬುದು ಇವರುಗಳ ಉದ್ದೇಶವಾಗಿದೆ ಎಂಬುದು ನನಗೆ
ಮನವರಿಕೆಯಾಗಿತ್ತು. ಲಿಂಗಾಂಬುಧಿ ಕೆರೆಯಲ್ಲೂ ಇದೇ ರೀತಿ ಮಾಡಿ ಕೆರೆಗೆ ಸೇರಿದ
ಭೂಮಿಯನ್ನು ಕೆಲವರು ಈಗಾಗಲೇ ಒತ್ತುವರಿ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ
ಕೇರ್ಗಳ್ಳಿ ಕೆರೆ ಹಾಗೂ ಅಯ್ಯಾಜಯ್ಯನಹುಂಡಿ ಕೆರೆಗಳಿಗೂ ಇದೇ ಗತಿ ಕಾದಿತ್ತು. ಮುಂದಿನ
ಎರಡು ತಿಂಗಳಲ್ಲಿ ಈ ಎರಡೂ ಕೆರೆಗಳಿಗೆ ಬೇಲಿ ಹಾಕಿ ಹೂಳೆತ್ತುವುದೂ ಸೇರಿದಂತೆ ಎಲ್ಲ
ರೀತಿಯ ಪುನಶ್ಚೇತನ ಕಾರ್ಯ ಆರಂಭಿಸಬೇಕೆಂದು ತೀರ್ಮಾನಿಸಿ, ಮೈಸೂರು ನಗರಾಭಿವೃದ್ಧಿ
ಪ್ರಾಧಿಕಾರ (ಮುಡಾ) ಮತ್ತು ಮೈಸೂರು ಮಹಾನಗರ ಪಾಲಿಕೆಗೆ (ಎಂಸಿಸಿ) ಆ
ಜವಾಬ್ದಾರಿಯನ್ನು ವಹಿಸಲಾಯಿತು.
ಒಂದಿಬ್ಬರು ಸ್ಥಳೀಯ ಶಾಸಕರು ಈ ಕೆರೆಗಳ ಪುನಶ್ಚೇತನ ಕಾರ್ಯ ಕೈಗೊಳ್ಳುವುದು ಬೇಡ ಎಂದು
ಹೇಳಿದಾಗ ನಾನು ಅವರಿಗೆ ಈ ಕುರಿತು ಮನವರಿಕೆ ಮಾಡಲು ಪ್ರಯತ್ನಿಸಿದ್ದೆ. ಮೈಸೂರು ನಗರ
ದಿನೇ ದಿನೆ ಬೆಳೆಯುತ್ತಲೇ ಇದೆ. ನಗರಕ್ಕೆ ಸಂಬಂಧಿಸಿದ್ದ ಯಾವುದೇ ಅಭಿವೃದ್ಧಿ
ಯೋಜನೆಯನ್ನು ಕೈಗೊಂಡರೂ ಕೆರೆಕಟ್ಟೆಗಳ ಬಗ್ಗೆ ನಿರ್ಲಕ್ಷ್ಯ ತೋರು ವುದು ಸರಿಯಲ್ಲ.
ಇದೇ ಕಾರಣಕ್ಕಾಗಿಯೇ ಮೈಸೂರು ವಿಶ್ವವಿದ್ಯಾಲ ಯದ ಸುಪರ್ದಿನಲ್ಲಿರುವ ಕುಕ್ಕರಹಳ್ಳಿ
ಕೆರೆಯ ನಿರ್ವಹಣೆಯ ಜವಾಬ್ದಾರಿಯನ್ನು ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ
ಇಲ್ಲವೇ ಅರಣ್ಯ ಇಲಾಖೆಗೆ ನೀಡಬೇಕೆಂಬುದು ನನ್ನ ಅಪೇಕ್ಷೆಯಾಗಿತ್ತು.
ಮೈಸೂರು ಕಸಬಾ ಹೋಬಳಿಗೆ ಸೇರಿದ ದಟ್ಟಗಳ್ಳಿ ಗ್ರಾಮದ ಸಮೀಪವಿರುವ ಸರ್ವೇ ನಂ.
123ರಲ್ಲಿರುವ ಗೋಮಾಳವನ್ನು ಅತಿಕ್ರಮಣ ಮಾಡಿರುವ ಬಗ್ಗೆ ದೂರುಗಳು ಬಂದಿದ್ದವು.
ಮೈಸೂರು ಜಿಲ್ಲೆ ಯಲ್ಲಿ ಒಟ್ಟು 2,991 ಕೆರೆಗಳಿವೆ. ಅವೆಲ್ಲವನ್ನೂ ಸಂರಕ್ಷಿಸುವುದು
ನನ್ನ ಉದ್ದೇಶವಾಗಿತ್ತು. ಈಗಾಗಲೇ ಲಿಂಗಾಂಬುಧಿ ಕೆರೆ ಸುತ್ತಮುತ್ತ ಸಾಕಷ್ಟು
ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಈಗ ಕೈಕಟ್ಟಿ ಕುಳಿತರೆ ಮುಂದೊಂದು ದಿನ
ಕೇರ್ಗಳ್ಳಿ ಕೆರೆ ಹಾಗೂ ಅಯ್ಯಾಜಯ್ಯನಹುಂಡಿ ಕೆರೆಗಳೂ ಕೂಡ ಕಣ್ಮರೆಯಾಗಿ ಹೋಗಲಿವೆ
ಎಂದೆನಿಸುತ್ತದೆ.
ನಾನು ಮೈಸೂರಿಗೆ ಬರುವ ಹೊತ್ತಿಗಾಗಲೇ ಸರ್ಕಾರದ ತೀರ್ಮಾನಕ್ಕೆ ವಿರುದ್ಧವಾಗಿ
ಹೈಕೋರ್ಟ್ ಆದೇಶ ನೀಡಿ ಯಾಗಿತ್ತು. ಲಲಿತ ಮಹಲ್ ಅರಮನೆಯೂ ಸೇರಿದಂತೆ ಚಾಮುಂಡಿಬೆಟ್ಟದ
ತಪ್ಪಲಿನಲ್ಲಿರುವ 1,560 ಎಕರೆ ಭೂಮಿ ಖಾಸಗಿಯವರಿಗೆ ಸೇರಿದ್ದು ಎಂದು ನ್ಯಾಯಾಲಯ
ತೀರ್ಪು ನೀಡಿತ್ತು. ನ್ಯಾಯಾಲಯದ ಈ ತೀರ್ಪನ್ನು ನಾವು ಪ್ರಶ್ನಿಸಲೇಬೇಕಾಯಿತು.
ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವ ಮುನ್ನ ಕೆಲ ಕಾರ್ಯವಿಧಾನಗಳನ್ನು ನಾವು
ಅನುಸರಿಸಬೇಕಾಗಿ ಬಂತು. ಮೊದಲನೆಯದಾಗಿ ಮೇಲ್ಮನವಿ ಸಲ್ಲಿಸುವುದಕ್ಕೂ ಮುನ್ನ
ಸರ್ಕಾರದಿಂದ ಅನುಮತಿ ಪಡೆಯಬೇಕಾಗಿತ್ತು. ಅದರಲ್ಲಿ ಸ್ವಲ್ಪ ವಿಳಂಬವಾಯಿತು. ಆ
ಹೊತ್ತಿಗಾಗಲೇ ಕೆಲ ಖಾಸಗಿ ವ್ಯಕ್ತಿಗಳು ನ್ಯಾಯಾಂಗ ನಿಂದನೆ (ಕಂಟೆಂಪ್ಟ್) ಅರ್ಜಿ
ಸಲ್ಲಿಸಿದ್ದರು. ಇದೇ ವಿಷಯವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆ) ಗಳ ಮುಂದೆ
ಎರಡು ಬಾರಿ ಪರಿಶೀಲನೆಗೆಂದು ಪ್ರಸ್ತಾಪಿಸಲಾಯಿತು. ತಾವರೆಕಟ್ಟೆ ಕೆರೆಯೂ ಸೇರಿದಂತೆ
ಇನ್ನೂ ಅನೇಕ ಕೆರೆಗಳು ಇದೇ ವ್ಯಾಪ್ತಿಯಲ್ಲಿ ಬರುತ್ತವೆ ಎಂದು ನಾನು ಸಿಜೆ ಅವರಿಗೆ
ಮಾಹಿತಿ ನೀಡಿದ್ದೆ.
ಮೇಲ್ಮನವಿ ಸಲ್ಲಿಕೆ ತಡವಾಗಿದ್ದರಿಂದ ನಾನು ನ್ಯಾಯಾಂಗ ನಿಂದನೆಗೆ ಗುರಿಯಾಗುವ ಅಪಾಯವೂ
ಇತ್ತು. ಅಂದು, ನನಗಿನ್ನೂ ನೆನಪಿದೆ, 2021ರ ಮಾರ್ಚ್ 8 ಅಂತಾರಾಷ್ಟ್ರೀಯ ಮಹಿಳಾ
ದಿನಾಚರಣೆ, ಹೈಕೋರ್ಟ್ನಲ್ಲಿ ನಾನು ಖುದ್ದು ಹಾಜರಾಗಲು ಕರೆ ಬಂದಿತ್ತು. ನನ್ನನ್ನು
ಜೈಲಿಗೆ ಅಟ್ಟುವ ಸಾಧ್ಯತೆಯೂ ಇದೆ ಎಂದು ನಮ್ಮ ವಕೀಲರು ನನಗೆ ತಿಳಿಸಿಯೂ ಇದ್ದರು.
ಸರ್ಕಾರಿ ಭೂಮಿಯನ್ನು ರಕ್ಷಿಸಲು ಮುಂದಾದ ಕಾರಣಕ್ಕಾಗಿ ಅಂತಾ ರಾಷ್ಟ್ರೀಯ ಮಹಿಳಾ
ದಿನಾಚರಣೆಯಂದೇ ನ್ಯಾಯಾಲಯ ನನಗೆ ಜೈಲುಶಿಕ್ಷೆ ವಿಧಿಸಿದಲ್ಲಿ ಅದಕ್ಕೂ ನಾನು
ಸಿದ್ಧಳಿದ್ದೇನೆ ಎಂದು ನಾನು ಅವರಿಗೆ ಪ್ರತಿಕ್ರಿಯಿಸಿದ್ದೆ. 90 ದಿನಗಳ ಒಳಗಾಗಿ ನಾವು
ಮೇಲ್ಮನವಿ ಸಲ್ಲಿಸಬೇಕಿತ್ತು. ಇದಾದ ನಂತರ ಪ್ರಸಿದ್ಧ ನ್ಯಾಯವಾದಿ ಹರೀಶ್ ಸಾಳ್ವೆ
ಅವರನ್ನು ನಮ್ಮ ಪರವಾಗಿ ವಾದಿಸಲು ನೇಮಿಸಿಕೊಂಡೆವು. ಇದಕ್ಕೂ ಸಾಕಷ್ಟು ಶ್ರಮಪಡಬೇಕಾಗಿ
ಬಂತು.
ಹರೀಶ್ ಸಾಳ್ವೆ ಅವರನ್ನು ಒಪ್ಪಿಸಿ ವಕೀಲರನ್ನಾಗಿ ನೇಮಿಸಿಕೊಳ್ಳುವುದೇ ಬಲು ಕಷ್ಟದ
ಕೆಲಸ. ಜೊತೆಗೆ ದುಬಾರಿ ಬೇರೆ. ವಕೀಲರ ಶುಲ್ಕವನ್ನು ಯಾರು ಪಾವತಿಸಲಿದ್ದಾರೆ ಎಂದು
ರಾಜ್ಯ ಸರ್ಕಾರ ನನ್ನನ್ನು ಕೇಳಿದಾಗ ‘ಭೂಮಿಯ ಮೌಲ್ಯವೇ ಸಾವಿರಾರು
ಕೋಟಿಗಳಷ್ಟಾಗುತ್ತದೆ, ಮುಡಾ ಕೂಡ ಈ ವಿಷಯದಲ್ಲಿ ಪಾಲುದಾರಿಕೆ ಹೊಂದಿರುವುದರಿಂದ
ವಕೀಲರ ಶುಲ್ಕವನ್ನು ನೀಡಲು ಕಷ್ಟವೇನೂ ಆಗದು’ ಎಂದು ನಾನು ಸರ್ಕಾರಕ್ಕೆ
ಸ್ಪಷ್ಟಪಡಿಸಿದ್ದೆ. ಈ ಪ್ರಕರಣ ಸುಪ್ರೀಂಕೋರ್ಟ್ನಲ್ಲಿ ಈಗಾಗಲೇ ಎರಡು ಬಾರಿ
ವಿಚಾರಣೆಗೆ ಬಂದಾಗಿದೆ. ಈಗ ಸುಪ್ರೀಂಕೋರ್ಟ್ಗೆ ರಜೆಯಿದೆ. ಸದ್ಯದಲ್ಲಿಯೇ ಅಂತಿಮ
ವಿಚಾರಣೆ ನಡೆಯಲಿದೆ.
ಇಲ್ಲಿನ ಭೂ ಮಾಫಿಯಾ ಎಷ್ಟು ಪ್ರಬಲವಾಗಿದೆಯೆಂದರೆ ಹಾಸನದ ಬಿಜೆಪಿ ಮುಖಂಡರೂ ಮಾಜಿ
ಸಚಿವರೊಬ್ಬರು ರೋಹಿಣಿ ವಿರುದ್ದ ಅವಹೇಳನಕಾರಿಯಾಗಿ ಟೀಕಿಸುತ್ತಾರೆ. ರಿಯಲ್
ಎಸ್ಟೇಟ್ ಉದ್ಯಮಿ ಮತ್ತು ಕೆ ಆರ್ ನಗರದ ಜನಪ್ರತಿನಿಧಿಯೊಬ್ಬರು ಇವರ ವಿರುದ್ದ
ಸತತವಾಗಿ ದನಿ ಎತ್ತುತಿದ್ದಾರೆ. ಒಟ್ಟಿನಲ್ಲಿ ದಕ್ಷ ಅಧಿಕಾರಿಗಳು ಇಲ್ಲದಿದ್ದರೆ ದನಿ
ಎತ್ತದಿದ್ದರೆ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಸರ್ಕಾರಿ ಭೂಮಿ ಮುಂದಿನ ಕೆಲವೇ
ವರ್ಷಗಳಲ್ಲಿ ಖಾಸಗಿಯವರ ಪಾಲಾಗಲಿದೆ.