ಕೋವಿಡ್ ಎರಡನೇ ಅಲೆಯೂ ಇಡೀ ದೇಶವನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಸೂಕ್ತ ಚಿಕಿತ್ಸೆ ಸಿಗದೆ ಬದುಕುವ ಜೀವಗಳು ಪ್ರಾಣಬಿಟ್ಟಿವೆ. ಕರೋನಾ ನಿಯಂತ್ರಣದಲ್ಲಿ ಸರ್ಕಾರ ಎಡವಿರುವುದೇ ಈ ದುರಂತಕ್ಕೆ ಕಾರಣ ಎಂದು ಪ್ರಜ್ಞಾವಂತ ಸಮುದಾಯ ಕಿಡಿಕಾರಿದೆ. ಮೊದಲ ಅಲೆಯ ಅಂತ್ಯದ ವೇಳೆಗೆ ಆಡಳಿತ ನಡೆಸುವವರು ಕೋರಾನಾ ನಿಯಂತ್ರಣ ಕಡೆಗಣಿಸಿ, ಕೋವಿಡ್ ನಿಯಮವನ್ನು ಉಲ್ಲಂಘಿಸಿ ಸಾವಿರಾರು ಜನರನ್ನು ಒಗ್ಗೂಡಿಸಿ ಪಂಚ ರಾಜ್ಯ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಎರಡನೇ ಅಲೆಯಿಂದ ಸಾಕಷ್ಟು ಸಾವುನೋವುಗಳಾಗುತ್ತದೆಂದು ತಜ್ಞರು 2020 ಜನವರಿಯಲ್ಲಿಯೇ ಎಚ್ಚರಿಸಿದ್ದರು ಕೂಡ ಆಡಳಿತ ನಡೆಸುವವರು ಕ್ಯಾರೆ ಅಂದಿರಲಿಲ್ಲ, ಸೂಕ್ತ ವೈದ್ಯಕೀಯ ವ್ಯವಸ್ಥೆ ಮಾಡದೆ ಅದೆಷ್ಟೋ ಬದುಕುಳಿಯುವ ಜೀವಗಳು ಸೋಂಕಿಗೆ ಬಲಿಯಾಗಿ ಬಿಟ್ಟಿವೆ. ದೇಶದ ಜನ ಜೀವ, ಜೀವನ ಉಳಿಸಿಕೊಳ್ಳಲು ಹೋರಾಡುತ್ತಿರುವ ಹೊತ್ತಲ್ಲಿ, ಕುಸಿಯುತ್ತಿರುವ ಆಡಳಿತ ವ್ಯವಸ್ಥೆಯನ್ನು ಬಡಿದೆಚ್ಚರಿಸಿದ್ದು, ಭಾರತದ ಸರ್ವೋಚ್ಚ ನ್ಯಾಯಾಲಯ. ಈ ಸಂಕಷ್ಟ ಪರಿಸ್ಥಿತಿಯಲ್ಲಿ ಕೋರ್ಟ್ ನೀಡಿದ ತೀರ್ಪನ್ನು ಪ್ರಶಂಶಿಸಿ ಕೇರಳದ 5 ವರ್ಷದ ಬಾಲಕಿ ಮುಖ್ಯ ಸಿಜಿಐ ಎನ್ ವಿ ರಮಣ ಅವರಿಗೆ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಲಸಿಕೆ, ಆಕ್ಸಿಜನ್ ಕೊರತೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ
ಎರಡನೇ ಅಲೆಯ ಆರಂಭದಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಸಿಕೆ, ಆಕ್ಸಿಜನ್ ಪೂರೈಕೆಯಲ್ಲಿ ಕೊರತೆ ಉಂಟಾಗಿತ್ತು. ಈ ಸಂಬಂಧ ರಾಜ್ಯದ ಆಡಳಿತ, ವಿರೋಧ ಪಕ್ಷದವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದರು ಸಮಯಕ್ಕೆ ಸರಿಯಾಗಿ ಸ್ಪಂದನೆ ಸಿಕ್ಕಿರಲಿಲ್ಲ, ಇತ್ತ ಸೋಂಕಿತರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ವೇಳೆ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದ ನ್ಯಾಯಮೂರ್ತಿಗಳ ಕಾರ್ಯವನ್ನು ಶ್ಲಾಘಿಸಿ ಕೇರಳದ ತ್ರಿಶೂರ್ ನ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿ ಲಿಡ್ವಿನಾ ಜೋಸೆಫ್ ಎಂಬ 5ನೇ ತರಗತಿ ವಿದ್ಯಾರ್ಥಿ ಬರೆದ ಪತ್ರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಬಾಲಕಿ ಬರೆದ ಪತ್ರದಲ್ಲೇನಿದೆ..?
ಲಸಿಕೆ ಆಕ್ಸಿಜನ್ ಸೇರಿದಂತೆ ಇತರೆ ವೈದ್ಯಕೀಯ ಮೂಲ ಸೌಕರ್ಯವಿಲ್ಲದೆ ಪರದಾಡುತ್ತಿದ್ದ, ಲಕ್ಷಾಂತರ ಸೋಂಕಿತರ ಪ್ರಾಣವನ್ನು ಸುಪ್ರೀಂ ಕೋರ್ಟ್ ಉಳಿಸಿದೆ. ನನಗೆ ನ್ಯಾಯಾಲಯದ ಮೇಲೆ ಅಪಾರ ನಂಬಿಕೆ, ಗೌರವವಿದೆ. ಕೋವಿಡ್ ಸಂದರ್ಭದಲ್ಲಿ ನ್ಯಾಯಾಲಯ ನೀಡಿದ ಜನಪರ ತೀರ್ಪುಗಳಿಂದ ನಾನು ಸಂತೋಷಳಾಗಿದ್ದೇನೆ.
ದೇಶದಲ್ಲಿ ಕೋವಿಡ್ 2ನೇ ಅಲೆ ನಿಯಂತ್ರಣ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ತರವಾಗಿದ್ದು, ಅದನ್ನು ನಾನು ಅರ್ಥಮಾಡಿ ಕೊಂಡಿದ್ದೇನೆಂದು ಮೆಚ್ಚುಗೆ ವ್ಯಕ್ತಪಡಿಸಿದ ಬಾಲಕಿ ನಾನು ನ್ಯಾಯಧೀಶರಿಗೆ ಧನ್ಯವಾದ ತಿಳಿಸುತ್ತೇನೆಂದು ಪತ್ರದಲ್ಲಿ ತಿಳಿಸಿದ್ದಾಳೆ. ಅದೇ ಪತ್ರದಲ್ಲಿ ಸಿಜೆಐ ಎನ್ ವಿ ರಮಣ ಅವರ ಚಿತ್ರವೊಂದನ್ನೂ ರಚಿಸಿದ್ದಾಳೆ.
ನ್ಯಾಯಧೀಶರ ಪ್ರತಿಕ್ರಿಯೆ
“ನನ್ನ ಪ್ರೀತಿಯ ಲಿಡ್ವಿನಾ , ನೀವು ಬರೆದ ಸುಂದರ ಚಿತ್ರದೊಂದಿಗಿನ ಪತ್ರವನ್ನು ಸ್ವೀಕರಿಸಿದ್ದೇನೆ. ನೀವು ದೇಶದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ನಿಗಾ ಇಟ್ಟಿರುವ ರೀತಿ ಮತ್ತು ಜನರ ಯೋಗಕ್ಷೇಮಕ್ಕಾಗಿ ನೀವು ತೋರಿರುವ ಕಾಳಜಿಯಿಂದ ನಾನು ಪ್ರಭಾವಿತನಾಗಿದ್ದೇನೆ. ನೀವು ತುಂಬಾ ಜಾಗರೂಕರಾಗಿ, ತಿಳುವಳಿಕೆಯಿಂದ ಜವಾಬ್ದಾರಿತ ಪ್ರಜೆಯಾಗಿ ಬೆಳೆಯುವಿರಿ ಹಾಗೂ ರಾಷ್ಟ್ರ ನೀರ್ಮಾಣಕ್ಕೆ ಕೊಡುಗೆ ನೀಡುವಿರಿ ಎಂಬ ಖಾತರಿ ನನಗಿದೆ. ನಿಮ್ಮ ಸರ್ವತೋಮುಖ ಯಶಸ್ಸಿಗೆ ನನ್ನ ಶುಭಾಶಯಗಳು” ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಪ್ರತಿಕ್ರಿಯೆ ನೀಡಿದ್ದಾರೆ. ಮೆಚ್ಚುಗೆಗೆ ಪಾತ್ರವಾದ ಬಾಲಕಿಗೆ ಪತ್ರದ ಜೊತೆಗೆ ಭಾರತೀಯ ಸಂವಿಧಾನದ ಪ್ರತಿಯೊಂದನ್ನು ಹಸ್ತಾಕ್ಷರ ಸಹಿತ ಬಾಲಕಿಗೆ ಕಳಿಹಿಸಲಾಗಿದೆ ಎಂದು ತಿಳಿದು ಬಂದಿದೆ.