ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪೆನ್, ಪುಸ್ತಕ ಕೊಡುವ ಬದಲು ರೈಫಲ್ ಟ್ರೈನಿಂಗ್ ಮಾಡಲಾಗಿದೆ. ಶಾಸಕರೇ ಮುಂದೆ ನಿಂತು ಮಾಡಿರೋದು ಸರ್ಕಾರದ ತಾಲಿಬಾನ್ ಸಂಸ್ಕೃತಿ ತೋರಿಸ್ತಿದೆ. ಸರ್ಕಾರ ಗೂಂಡಾಗಿರಿ ಮಾಡಲು ಹೊರಗುತ್ತಿಗೆ ಕೊಟ್ಟಂತಿದೆ ಎಂದು ಮಂಗಳೂರಿನಲ್ಲಿ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಮಾನ್ಯತೆಯಿರುವ NCCಯಲ್ಲೂ ರೈಫಲ್ ತರಬೇತಿ ಕೊಡಲಾಗುತ್ತದೆ. ಅದರಲ್ಲಿ ದೇಶಪ್ರೇಮದ ಉದ್ದೇಶವಿದೆ. ಯಾರಿಗೆ ಬೇಕಾದರೂ ರೈಫಲ್ ತರಬೇತಿ ಕೊಡಬಹುದೇ?. ಈ ತರಬೇತಿಗೆ ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆಯ ಅನುಮತಿ ಇದೆಯೇ?. ಈ ಬಗ್ಗೆ ಗೃಹ ಸಚಿವರು ಹಾಗೂ ಶಿಕ್ಷಣ ಸಚಿವರು ರಾಜ್ಯದ ಜನತೆಗೆ ಉತ್ತರಿಸಬೇಕು ಎಂದು ಒತ್ತಾಯಿಸಿದರು.