ಬೆಂಗಳೂರು:ಏ.11: ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ಗಾಗಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ನಡುವೆ ಸಮರವೇ ಏರ್ಪಟ್ಟಿದೆ. ಭವಾನಿ ರೇವಣ್ಣ ಸ್ಪರ್ಧೆ ಮಾಡಬೇಕು ಅನ್ನೋದು ರೇವಣ್ಣ ಕುಟುಂಬದ ಆಗ್ರಹ. ಇಲ್ಲ ಸಾಮಾನ್ಯ ಕಾರ್ಯಕರ್ತ ಸ್ವರೂಪ್ ಪ್ರಕಾಶ್ ಜೆಡಿಎಸ್ ಅಭ್ಯರ್ಥಿ ಆಗಲಿ ಎನ್ನುವುದು ಮಾಜಿ ಸಿಎಂ ಕುಮಾರಸ್ವಾಮಿ ನಿಲುವು. ಈ ವಿಚಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ ಎನ್ನುವುದು ವಿರೋಧ ಪಕ್ಷಗಳ ಮಾತು. ಆದರೆ ನಾವು ಎಂದಿಗೂ ಕಿತ್ತಾಡುವುದಿಲ್ಲ, ನೀವು ಖುಷಿ ಪಡುವ ಅವಶ್ಯಕತೆ ಇಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ರೇವಣ್ಣ ಪದೇ ಪದೇ ಹೇಳುತ್ತಲೇ ಇದ್ದಾರೆ. ಈ ನಡುವೆ ಸೋಮವಾರ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದ ರೇವಣ್ಣ, ಭವಾನಿಗೆ ಟಿಕೆಟ್ ಕೊಡದಿದ್ದರೆ ಪರವಾಗಿಲ್ಲ, ಹೊಳೆನರಸೀಪುರ ಹಾಗು ಹಾಸನ ಎರಡೂ ಕ್ಷೇತ್ರದಲ್ಲೂ ನಾನೇ ಸ್ಪರ್ಧೆ ಮಾಡ್ತೇನೆ ಎಂದು ಗೌಡರಿಗೆ ಹೇಳಿ ಬಂದಿದ್ದಾರೆ ಎನ್ನಲಾಗಿದೆ.
ಎರಡೂ ಕ್ಷೇತ್ರದಲ್ಲೂ ನಾನೇ ಸ್ಪರ್ಧೆ ಮಾಡ್ತೇನೆ..!

ಬೆಂಗಳೂರಿನ ಪದ್ಮನಾಭನಗರದ ದೇವೆಗೌಡರ ನಿವಾಸಕ್ಕೆ ಆಗಮಿಸಿದ್ದ ರೇವಣ್ಣ ಕೆಲವು ಸಮಯ ಗೌಡರ ಜೊತೆಗೆ ಚರ್ಚೆ ನಡೆಸಿದ್ರು. ಎರಡನೇ ಪಟ್ಟಿ ಘೋಷಣೆಗೂ ಮುನ್ನ ಹಾಸನ ಟಿಕೆಟ್ ವಿಚಾರದಲ್ಲಿ ಎದುರಾಗಿರುವ ಗೊಂದಲ ಪರಿಹಾರಕ್ಕಾಗಿ ದೇವೆಗೌಡರ ಭೇಟಿ ಮಾಡಿದ್ದರು. ಹಾಸನ ಟಿಕೆಟ್ ಭವಾನಿಗೆ ಕೊಡದೇ ಇದ್ದರೂ ಪರವಾಗಿಲ್ಲ. ಹಾಸನ ಹಾಗು ಹೊಳೆನರಸೀಪುರ ಎರಡೂ ಕಡೆ ನನಗೇ ಟಿಕೆಟ್ ಕೊಡಿ. ಕಳೆದ ಬಾರಿ ರಾಮನಗರ ಹಾಗು ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಕೂಡ ಎರಡು ಕಡೆ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು. ಇದೀಗ ನಾನು ಕೂಡ ಎರಡೂ ಕ್ಷೇತ್ರದಲ್ಲಿ ಜಯಗಳಿಸುತ್ತೇನೆ. ಆ ಬಳಿಕ ಒಂದು ಕ್ಷೇತ್ರ ಉಳಿಸಿಕೊಂಡು ಇನ್ನೊಂದು ಕ್ಷೇತ್ರಕ್ಕೆ ರಾಜೀನಾಮೆ ಕೊಡ್ತೇನೆ ಎನ್ನುವ ಮಾತನ್ನು ಹೇಳಿದ್ದಾರೆ ಎನ್ನಲಾಗಿದೆ. ದೇವೇಗೌಡರ ಭೇಟಿ ಬಳಿಕ ಖುಷಿ ಖುಷಿಯಿಂದ ಹೊರ ಬಂದ ರೇವಣ್ಣ. ಹಾಸನ ಕ್ಷೇತ್ರದ ದೇವೇಗೌಡರ ನಿರ್ಣಯವೇ ಅಂತಿಮ. 60 ವರ್ಷದಿಂದ ದೇವೇಗೌಡರಿಗೆ ಕ್ಷೇತ್ರದ ಬಗ್ಗೆ ಗೊತ್ತಿದೆ. ಅವರು ಏನು ನಿರ್ಣಯ ಕೈಗೊಳ್ತಾರೊ ಅದೇ ಫೈನಲ್ ಎಂದಿದ್ದಾರೆ. ಇನ್ನು ಕುಮಾರಸ್ವಾಮಿ – ರೇವಣ್ಣ ಹೊಡೆದಾಡಿಕೊಳ್ತಾರೆ ಅನ್ನೋದು ಭ್ರಮೆ ಎಂದಿರುವ ಅವರು, ನಮ್ಮ ಕುಟುಂಬಕ್ಕೆ ಶಕುನಿಗಳ ಕಾಟವಿದೆ ಎಂದಿದ್ದ ಕುಮಾರಸ್ವಾಮಿ ಹೇಳಿಕೆಗೆ, ಆ ಬಗ್ಗೆ ನನಗೇನು ಗೊತ್ತಿಲ್ಲ ಎನ್ನುವ ಮೂಲಕ ಬೆಣ್ಣೆ ಮೇಲೆ ಕೂದಲು ತೆಗೆದಂತೆ ಮಾತನಾಡಿದ್ದಾರೆ. ಎರಡೂ ಕಡೆ ಸ್ಪರ್ಧೆ ಮಾಡ್ತೀರಾ ಅನ್ನೊ ಪ್ರಶ್ನೆಗೆ ದೇವೇಗೌಡರು ನಿರ್ಣಯ ಮಾಡ್ತಾರೆ ಅಂತಾ ನಗು ಮುಖದಲ್ಲಿ ಹೇಳಿದ್ದಾರೆ. ಇನ್ನು ರೇವಣ್ಣರನ್ನು ಸಮಾಧಾನ ಮಾಡುವ ಶಕ್ತಿ ದೇವೇಗೌಡರಿಗೆ ಇಲ್ಲ ಎಂದಿದ್ದ ಕುಮಾರಸ್ವಾಮಿ ಮಾತಿಗೂ ತಿರುಗೇಟು ನೀಡದ ರೇವಣ್ಣ, ಆ ಬಗ್ಗೆ ನನಗೆ ಗೊತ್ತಿಲ್ಲ, ನಮಗೆ ದೇವೇಗೌಡರ ಆರೋಗ್ಯ ನಮಗೆ ಮುಖ್ಯ, ರಾಜಕೀಯ ಬೇಕಿಲ್ಲ. ಭವಾನಿ ರೇವಣ್ಣ ಸಹ ದೇವೇಗೌಡರ ತೀರ್ಮಾನಕ್ಕೆ ಬದ್ದ ಎಂದಿದ್ದಾರೆ. ನಮಗೆ ದೇವೇಗೌಡ್ರೇ ಫೈನಲ್ ಎಂದಿದ್ದಾರೆ.
ಸ್ವರೂಪ್ ಪ್ರಕಾಶ್ ವಿರುದ್ಧ ರೇವಣ್ಣಗೆ ಯಾಕೆ ಸಿಟ್ಟು..?

ಕುಮಾರಸ್ವಾಮಿ ಆಯ್ಕೆ ಮಾಡಿರುವ ಮಾಜಿ ಶಾಸಕ ಹೆಚ್.ಎಸ್ ಪ್ರಕಾಶ್ ಪುತ್ರ ಸ್ವರೂಪ್ ಅವರ ಮೇಲೆ ರೇವಣ್ಣ ಯಾಕಿಷ್ಟು ಕೆಂಡ ಕಾರುತ್ತಿದ್ದಾರೆ ಎನ್ನುವುದು ಸಾಕಷ್ಟು ಕಡೆಗಳಲ್ಲಿ ಕೇಳಿ ಬರುತ್ತಿರುವ ಮಾತು. ಆದರೆ ರೇವಣ್ಣ ಆತ್ಮೀಯ ವಲಯ ಹೇಳುತ್ತಿರುವ ಮಾತು ಏನಂದ್ರೆ, ಈ ಹಿಂದೆ ಪ್ರೀತಂಗೌಡ ಹಾಸನಕ್ಕೆ ರೇವಣ್ಣನೇ ಬಂದು ನಿಂತರೂ ನಾನು 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದಿದ್ದರು. 50 ಸಾವಿರಕ್ಕಿಂತ ಒಂದೇ ಒಂದು ವೋಟ್ ಕಡಿಮೆ ಆದರೂ ನಾನು ರಾಜೀನಾಮೆ ಕೊಟ್ಟು ಮತ್ತೊಮ್ಮೆ ಚುನಾವಣೆ ಹೋಗ್ತೇನೆ ಎಂದು ಪ್ರೀತಂಗೌಡ ಸವಾಲು ಹಾಕಿದ್ರು. ಇದೊಂದೇ ಮಾತಿಗಾಗಿ ರೇವಣ್ಣ ಪ್ರೀತಂಗೌಡ ವಿರುದ್ಧ ಸ್ಪರ್ಧೆ ಮಾಡಲು ರೇವಣ್ಣ ಹಠಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ನಾನೇ ಸ್ಪರ್ಧೆ ಮಾಡಿ, ಪ್ರೀತಂಗೌಡ ಅವರನ್ನು ಸೋಲಿಸ್ತೇನೆ, ಅಥವಾ ಒಂದು ವೇಳೆ ಪ್ರೀತಂಗೌಡ 50 ಸಾವಿರಕ್ಕಿಂತ ಕಡಿಮೆ ಮತಗಳಲ್ಲಿ ಗೆದ್ದರೆ ಮರುಚುನಾವಣೆ ಹೋಗ್ತೇನೆ ಎಂದಿದ್ದಾರೆ. ಆ ಸವಾಲನ್ನು ನಾನು ಸ್ವೀಕಾರ ಮಾಡಿದ್ದೇನೆ. ನಾನೇ ಸ್ಪರ್ಧೆ ಮಾಡ್ತೇನೆ ಎಂದು ಪಟ್ಟು ಹಿಡಿದಿದ್ದಾರೆ.
ಕೃಷ್ಣ ಮಣಿ