ಸರಿ ಸುಮಾರು ಒಂದೂವರೆ ವರ್ಷಗಳ ನಂತರ ದೇಶಾದ್ಯಂತ ಶಾಲೆಗಳ ಅಂಗಳದಲ್ಲಿ ಮಕ್ಕಳ ಚಿಲಿಪಿಲಿ ಕೇಳಿಸಲಾರಂಭಿಸಿದೆ. ಇಷ್ಟೂ ದಿನಗಳ ಕಾಲ ಇದ್ದ ನೀರವ ಮೌನವನ್ನು ಸೀಳಿ ಪುಟ್ಟ ಪುಟ್ಟ ಮಕ್ಕಳು ಶಾಲೆಯ ತರಗತಿ ಕೊಠಡಿ, ಜಗಲಿ, ಮೈದಾನ ಎಂದೆಲ್ಲಾ ಓಡಾಡುವುದನ್ನು ನೋಡುವುದೇ ಒಂದು ಚಂದ. ಕರ್ನಾಟಕವೂ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಮಕ್ಕಳ ಮಧ್ಯಾಹ್ನದ ಬಿಸಿಯೂಟವನ್ನು ಪುನರಾರಂಭಿಸಲಾಗಿದೆ. ಆದರೆ ಸಮೀಕ್ಷೆಯೊಂದು ಆಘಾತಕಾರಿ ಮಾಹಿತಿಯನ್ನು ಹೊರಗೆಡವಿದ್ದು ಮಾಧ್ಯಮಗಳು ಪ್ರಚುರ ಪಡಿಸಿರುವ ವರ್ಷದ ಅಂತ್ಯದ ವೇಳೆಗೆ ಅಪ್ಪಳಿಸಲಿರುವ ಮೂರನೇ ಕೋವಿಡ್ ಅಲೆಗೆ ಹೆದರಿ ಅನೇಕ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ಮುಂದುವರಿಸದಿರಲು ನಿರ್ಧರಿಸಿದ್ದಾರೆ ಎಂದಿದೆ.
ಮಕ್ಕಳ ಸಮಗ್ರ ಬೆಳವಣಿಗೆಗೆ ದೈಹಿಕ ತರಗತಿಗಳು ಅಗತ್ಯವಿದೆ. ಅವರ ಬೆಳವಣಿಗೆಯ ಎಲ್ಲಾ ಮಜಲುಗಳನ್ನು ಸ್ಪರ್ಶಿಸಲು ಸಾಧ್ಯವಿಲ್ಲ ಎಂಬ ಶಿಕ್ಷಣ ತಜ್ಞರ ಒಕ್ಕೂರಲ ಅಭಿಪ್ರಾಯದಂತೆ ಶಾಲೆಗಳನ್ನು ಪುನರರಾಂಭಿಸಲಾಗಿತ್ತು. ಇದಕ್ಕೆ ಪೂರಕವಾಗಿ, ಕಳೆದ ಒಂದೂವರೆ ವರ್ಷಗಳಿಂದ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳಿಗೇ ಹಾಜರಾಗುತ್ತಿದ್ದು ಅವರ ಕಲಿಕಾ ಸಾಮರ್ಥ್ಯ, ಭಾಷಾ ಬೆಳವಣಿಗೆ ಕುಂಠಿತವಾಗಿದೆ ಎಂದೇ ಹಲವು ಸಮೀಕ್ಷೆಗಳೂ ಸಾಬೀತು ಮಾಡಿದ್ದವು. ಅಲ್ಲದೆ ತಮ್ಮ ಸಮವಯಸ್ಕರ ಒಡನಾಟವಿಲ್ಲದೆ ಮಕ್ಕಳ ಮಾನಸಿಕ ಬೆಳವಣಿಗೆಯ ಮೇಲೂ ಇದು ಪ್ರಭಾವ ಬೀರಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಶಾಲೆ ಪುನರಾರಂಭಿಸಲಾಗಿತ್ತು.
ಆದರೆ ಹೆತ್ತವರ ಹೊಸ ನಿರ್ಧಾರ ಶಿಕ್ಷಣ ಇಲಾಖೆಗೆ ಹಿನ್ನಡೆ ತಂದಿದೆ. ಸಂಭವನೀಯ ಮೂರನೇ ಅಲೆಯನ್ನು ತಜ್ಞರು ನಿರಾಕರಿಸಿದ್ದರೂ ಪೋಷಕರು ಅವರ ಮಾತನ್ನು ಒಪ್ಪಲು ಸಿದ್ಧರಿಲ್ಲ. ತಮ್ಮ ಮಕ್ಕಳ ಪ್ರಾಣಕ್ಕಿಂತ ಶಾಲೆ ಮುಖ್ಯವಲ್ಲ ಅನ್ನುವುದು ಹಲವು ಪೋಷಕರ ಅಂಬೋಣ. ಹಾಗಾಗಿ ಮತ್ತೆ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಬಣಗುಟ್ಟುವ ಅಪಾಯ ಎದುರಿಸುತ್ತಿದೆ.
ಕೋವಿಡ್ ಒಂದೇ ಅಲ್ಲದೆ ಇತರ ವೈರಲ್ ಜ್ವರಗಳಾದ ಡೆಂಗ್ಯೂ, ಚಿಕುನ್ಗುನ್ಯಾಗಳಂತಹ ಜ್ವರಗಳ ಬಗ್ಗೆಯೂ ವಿಪರೀತ ಕಾಳಜಿ ವಹಿಸುವ ಹೆತ್ತವರು ಆನ್ಲೈನ್ ಮತ್ತು ಆಫ್ಲೈನ್ ಎರಡೂ ಆಯ್ಕೆಗಳಿರುವಾಗ ಆನ್ಲೈನ್ ಶಿಕ್ಷಣವನ್ನೇ ಆಯ್ದುಕೊಳ್ಳುತ್ತಿದ್ದಾರೆ. ಆದರೆ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಸರ್ಕಾರಿ ಶಾಲೆಯ ಮಕ್ಕಳ ಪೋಷಕರು ದೈಹಿಕ ತರಗತಿಗಳಿಗೇ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಿದ್ದಾರೆ ಎನ್ನುವುದೊಂದೇ ಸದ್ಯದ ಮಟ್ಟಿಗೆ ಆಶಾದಾಯಕ ಬೆಳವಣಿಗೆ.
ಶಿಕ್ಷಣ ತುರ್ತುಸ್ಥಿತಿಯ ಬಗ್ಗೆ , ದೈಹಿಕ ತರಗತಿಗಳಿಗೆ ಹಿಂದಿರುಗುವ ಪ್ರಾಮುಖ್ಯತೆಯ ಬಗ್ಗೆ ದೇಶಾದ್ಯಂತದ ಶಿಕ್ಷಣ ತಜ್ಞರು ಮತ್ತು ಆರೋಗ್ಯ ತಜ್ಞರ ಗುಂಪು ನಿಯಮಿತವಾಗಿ ಮಾತನಾಡುತ್ತಿದೆ. ಸಾಂಕ್ರಾಮಿಕ ರೋಗದಿಂದಾಗಿ ಶಾಲೆಗಳನ್ನು ಮುಚ್ಚಿದಾಗ 18 ತಿಂಗಳುಗಳಲ್ಲಿ ಉಂಟಾದ ಅಂತರವನ್ನು ಮತ್ತು ಅವುಗಳನ್ನು ಪರಿಹರಿಸಲು ಏನು ಮಾಡಬೇಕೆಂದು ಅವರು ಸದಾ ಎಚ್ಚರಿಸುತ್ತಲೇ ಇದ್ದಾರೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಪೋಷಕರಿಗೆ ಅಗತ್ಯ ಮಾಹಿತಿ ನೀಡುವ, ಶಾಲೆಗಳು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಪೋಷಕರಿಗೆ ಅರಿವು ನೀಡುವ, ಮೂರನೆಯ ಅಲೆಯ ಸಾಧ್ಯತೆಗಳ ಬಗ್ಗೆ, ಮಕ್ಕಳಲ್ಲಿನ ನಿರೋಧಕ ಶಕ್ತಿಯ ಬಗ್ಗೆ ಪೋಷಕರಿಗೆ ತಿಳಿಸಿಕೊಡಬೇಕಾದ್ದು ಶಾಲೆಯ ಮ್ಯಾನೇಜ್ಮೆಂಟ್ನ ಕರ್ತವ್ಯ. ಪೋಷಕರ ಮನವೊಲಿಸುವ ಕೆಲಸವನ್ನು ಅವು ಮಾಡಿದರೆ ಈ ಸಮಸ್ಯೆ ಸುಲಭವಾಗಿ ಬಗೆ ಹರಿಯುತ್ತದೆ. ಮತ್ತು ಇವೆಲ್ಲವುಗಳ ಜೊತೆಗೆ ಜನಸಾಮಾನ್ಯರನ್ನು ವೃಥಾ ಆತಂಕಕ್ಕೆ ದೂಡದಂತ ಕಾರ್ಯಕ್ರಮ ಪ್ರಸಾರ ಮಾಡುವಂತಹ ಸಣ್ಣ ಜವಾಬ್ದಾರಿಯನ್ನಾದರೂ ಮಾಧ್ಯಮಗಳು ಅದರಲ್ಲೂ ದೃಶ್ಯ ಮಾಧ್ಯಮಗಳು ವಹಿಸಿಕೊಳ್ಳಬೇಕು.