ರಾಜ್ಯ ರಾಜಕಾರಣದಲ್ಲಿ ಬಿಟ್ ಕಾಯಿನ್ ದಂಧೆ ಬಿರುಗಾಳಿಯನ್ನೇ ಎಬ್ಬಿಸಿದೆ. ನಾಯಕರ ಹರಿತ ಹೇಳಿಕೆಗಳೊಂದಿಗೆ ‘ಬಿಟ್’ ವಾಕ್ಸಮರ ತಾರಕಕ್ಕೇರಿದೆ. ಎಷ್ಟೇ ತಡಕಾಡಿದರೂ ಕೈ ನಾಯಕರ ಕೈಗೆ ‘ಬಿಟ್’ ಡಾಕ್ಯುಮೆಂಟ್ಸ್ ಸಿಕ್ತಿಲ್ಲ. ಒಂದು ವೇಳೆ ದಾಖಲೆಗಳು ಕೈಗೆಟುಕಿದರೆ ‘ಬಿಟ್’ ಎಂಬ ಅಸ್ತ್ರವೇ ಕಾಂಗ್ರೆಸ್ ಪಾಳಯಕ್ಕೆ ಬ್ರಹ್ಮಾಸ್ತ್ರವಾಗಲಿದೆ.
ಬಿಟ್ ಕಾಯಿನ್ ದಂಧೆಯ ಬಿರುಗಾಳಿ ರಾಜ್ಯ ರಾಜಕಾರಣದಲ್ಲಿ ಸುನಾಮಿಯಂತೆ ಸಂಚಲನ ಸೃಷ್ಟಿಸಿದೆ. ದಂಧೆಯ ಹಿಂದಿನ ಕೈಗಳ ವಿಚಾರ ದಿನಕಳೆದಂತೆ ಕುತೂಹಲದ ಗೂಡಾಗ್ತಿದೆ. ಬಿಟ್ ಕಾಯಿನ್ ಯಾರ ಜೇಬು ತುಂಬಿದೆ ಅನ್ನೋದ್ರ ಬಗ್ಗೆ ಮಿಂಚಿನ ಚರ್ಚೆ ನಡೀತಿದೆ.
ಸದ್ಯ ರಾಜ್ಯದಲ್ಲಿ ಬಿಟ್ ಕಾಯಿನ್ ಅಸ್ತ್ರ ಹರಿತ ಹೇಳಿಕೆಗಷ್ಟೇ ಸೀಮಿತವಾಗಿದ್ದು, ಮೂರೂ ಪಕ್ಷಗಳ ನಾಯಕರ ನಡುವೆ ಭಾರೀ ವಾಕ್ಸಮರಕ್ಕೆ ನಾಂದಿ ಹಾಡಿದೆ. ಮುಖ್ಯಮಂತ್ರಿ ಗಾದಿ ವರೆಗೆ ಮಾತಿನ ದಾಳಿ ಬಂದು ನಿಂತಿದೆ. ದಾಖಲೆ ಇಲ್ಲದೆ ಮಾತಲ್ಲೇ ಬಡಿದಾಡ್ತಿಕೊಳ್ತಿರುವ ನಾಯಕರಲ್ಲಿ ಯಾರಿಗೆ ಯಾರ ವಿರುದ್ಧದ ದಾಖಲೆ ಸಿಗುತ್ತೋ ಅವರೇ ಹೀರೋ ಅನ್ನುವಂತಾಗಿದೆ ಸದ್ಯದ ಪರಿಸ್ಥಿತಿ. ಇದೇ ಕಾರಣಕ್ಕೆ ಕಾಂಗ್ರೆಸ್ ದಾಖಲೆಗಳಿಗಾಗಿ ಬಾರೀ ತಡಕಾಡ್ತಿದೆ.
ದಾಖಲೆಗಾಗಿ ಕೈ ತಡಕಾಟ!
ಅತ್ಯಂತ ಹರಿತ ಹೇಳಿಕೆಗಳೊಂದಿಗೆ ತಾರಕಕ್ಕೇರಿದ ‘ಬಿಟ್’ ವಾಕ್ಸಮರ. ಬಿಟ್ ಕಾಯಿನ್ ದಂಧೆಯ ಬಗ್ಗೆ ಪ್ರತಿಧ್ವನಿ ವರದಿ ಬಳಿಕ ವಾಗ್ಬಾಣ. ಅಂದಿನಿಂದ ಇಂದಿನವರೆಗೂ ನಡೆದಿರೋದು ನಾಯಕರ ಮಾತಿನ ಕದನ. ಎಷ್ಟೇ ತಡಕಾಡಿದರೂ ಕೈ ನಾಯಕರ ಕೈಗೆ ಸಿಕ್ತಿಲ್ಲ ‘ಬಿಟ್’ ಡಾಕ್ಯುಮೆಂಟ್ಸ್. ದಾಖಲೆಗಳು ಕೈಗೆಟುಕಿದರೆ ‘ಬಿಟ್’ ಎಂಬ ಅಸ್ತ್ರವೇ ಕಾಂಗ್ರೆಸ್ ಗೆ ಬ್ರಹ್ಮಾಸ್ತ್ರವಾಗಲಿದೆ.
ಇನ್ನು ಈ ಬಹುಕೋಟಿ ಧಂದೆಯಲ್ಲಿ ಒಬ್ಬೊಬ್ಬ ನಾಯಕರು ಆಡ್ತಿರೋ ಒಂದೊಂದೂ ಮಾತುಗಳು ಮಿಂಚಿನ ಸಂಚಲನ ಸೃಷ್ಟಿಸ್ತಿವೆ. ಸಿಎಂ ಗಾದಿವರೆಗೂ ಮಾತು ಬಂದು ನಿಂತುಬಿಟ್ಟಿದೆ. ಸಿಎಂ ಪಟ್ಟವನ್ನೇ ಬಿಟ್ ಕಾಯಿನ್ ಬಲಿ ಪಡೆಯಲಿದೆ ಅಂತ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿರುವುದು ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಇತ್ತ ಬೊಮ್ಮಾಯಿ ಈ ಹಗರಣದಲ್ಲಿ ಕಾಂಗ್ರೆಸ್ ನಾಯಕರೇ ಇದ್ದಾರೆ ಎಂದುಬಿಟ್ಟಿದ್ದಾರೆ.
ಇನ್ನು ಹಗರಣದಲ್ಲಿ ಯಾರೇ ಇರಲಿ ಮೊದಲು ಅರೆಸ್ಟ್ ಮಾಡಲಿ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ರೆ, ನಂಗ್ಯಾಕೋ ಬೊಮ್ಮಾಯಿ ಮೇಲೇ ಡೌಟು ಬರ್ತಿದೆ ಸಿದ್ದು ಸಿಎಂರತ್ತ ಬೊಟ್ಟು ಮಾಡಿದ್ದಾರೆ. ಆದ್ರೆ ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಮಾತ್ರ ಹಗರಣದ ಬಗ್ಗೆ ನ್ಯಾಯಾಂಗ ತನಿಖೆ ಆಗಲಿ ಎಂದಿದ್ದಾರೆ.
ಒಟ್ನಲ್ಲಿ ಮಾತಲ್ಲೇ ಬಿಟ್ ಸಮರಕ್ಕೆ ನಿಂತಿರುವ ನಾಯಕರಿಗೆ ದಾಖಲೆಯ ಕೊರತೆ ದೊಡ್ಡ ಹಿನ್ನಡೆಯಾಗಿದೆ. ಅದ್ರಲ್ಲೂ ಕೈ ಪಡೆಯಂತೂ ಡಾಕ್ಯುಮೆಂಟ್ಗಾಗಿ ತಡಕಾಡ್ತಿದೆ. ಒಂದು ವೇಳೆ ದಾಖಲೆ ಸಿಕ್ಕಿದ್ರೆ ಆದ್ರೆ ಅದೇ 2023ರ ಚುನಾವಣೆಗೆ ಬ್ರಹ್ಮಾಸ್ತ್ರವಾಗಲಿದೆ. ಹೀಗಾಗಿ ಸದ್ಯ ಬಿಟ್ ದಂಧೆ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿ ಕುತೂಹಲವನ್ನು ಹೆಚ್ಚಿಸಿದೆ.