ಹಣದುಬ್ಬರ ತೀವ್ರ ಏರಿಕೆಯ ನಡುವೆಯೂ ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೊದರ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ. ಆದರೆ ಪ್ರಸಕ್ತ ವಿತ್ತೀಯ ವರ್ಷದ ಆರ್ಥಿಕ ಅಭಿವೃದ್ಧಿಯ ಮುನ್ನಂದಾಜನ್ನು ಗಣನೀಯವಾಗಿ ತಗ್ಗಿಸಿದೆ.
ಮೂರು ದಿನಗಳ ಕಾಲ ನಡೆದ ದ್ವೈಮಾಸಿಕ ಹಣಾಕಾಸು ನೀತಿ ಪರಾಮರ್ಶೆಯ ನಂತರ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರವನ್ನು RBI ಗವರ್ನರ್ ಶಕ್ತಿಕಾಂತದಾಸ್ ಪ್ರಕಟಿಸಿದರು. ಪ್ರಸ್ತುತ ರೆಪೊ ದರ ಶೇ.4ರಷ್ಟಿದೆ. ರಿವರ್ಸ್ ರೆಪೊ ದರ ಶೇ.3.35ರಷ್ಟಿದೆ.
RBI ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರವನ್ನು ರೆಪೊದರ ಎಂದೂ, ಬ್ಯಾಂಕುಗಳು ಆರ್ಬಿಐನಲ್ಲಿ ಇಡುವ ಹಣಕ್ಕೆ ನೀಡುವ ಬಡ್ಡಿದರಕ್ಕೆ ರಿವರ್ಸ್ ರೆಪೊ ದರ ಎನ್ನಲಾಗುತ್ತದೆ.
ಪ್ರತಿ ಎರಡು ತಿಂಗಳಿಗೊಮ್ಮೆ RBI ಹಣಕಾಸು ನೀತಿ ಸಮಿತಿಯು ಸಭೆ ಸೇರಿ, ದೇಶದ ಹಣಕಾಸು ಪರಿಸ್ಥಿತಿ ಪರಾಮರ್ಶಿಸಿ ಬಡ್ಡಿದರ ನಿಗದಿ ಮಾಡುತ್ತದೆ.
ಪ್ರಸ್ತುತ ಕೋವಿಡ್ ಸಂಕಷ್ಟದಿಂದ ದೇಶದ ಆರ್ಥಿಕತೆ ಚೇತರಿಕೆಯತ್ತ ಸಾಗುತ್ತಿರುವುದರಿಂದ ಬಡ್ಡಿದರ ಏರಿಕೆ ಮಾಡದಿರಲು ನಿರ್ಧರಿಸಲಾಗಿದೆ. ಆದರೆ, ಈಗ ಭುಗಿಲೆದ್ದಿರುವ ಹಣದುಬ್ಬರವು ನಿಧಾನವಾಗಿ ತಗ್ಗಲಿದೆ ಎಂಬ ನಿರೀಕ್ಷೆಯನ್ನು ಹಣಕಾಸು ಸಮಿತಿ ಹೊಂದಿದೆ. ಹೀಗಾಗಿ ಪ್ರಸ್ತುತ ಆರ್ಬಿಐ ಮಿತಿಯಾದ ಶೇ.6ರ ಗಡಿಯನ್ನು ದಾಟಿದ್ದರೂ, 2022-23ನೇ ವರ್ಷದ ಸರಾಸರಿ ಹಣದುಬ್ಬರವು ಶೇ.5.7ರಷ್ಟಾಗಲಿದೆ ಎಂದು ಅಂದಾಜಿಸಿದೆ.
ಹಣಕಾಸು ನೀತಿ ಸಮಿತಿಯು 2022-23ರ ವಿತ್ತೀಯ ವರ್ಷದ ಜಿಡಿಪಿ ಬೆಳವಣಿಗೆ ದರವನ್ನು ಶೇ 7.2 ಕ್ಕೆ ತಗ್ಗಿಸಿದೆ. ವಿತ್ತೀಯ ವರ್ಷದ 23ರ ಜಿಡಿಪಿ ಬೆಳವಣಿಗೆಯು ಶೇ.7.8ರಷ್ಟಾಗಲಿದೆ ಎಂದು ಈ ಹಿಂದೆ ಅಂದಾಜಿಸಿತ್ತು. ಆದರೆ, ಉಕ್ರೇನ್-ರಷ್ಯಾ ಯುದ್ಧ, ಏರಿದ ಕಚ್ಚಾ ತೈಲ ಬೆಲೆ, ಏರುತ್ತಿರುವ ಹಣದುಬ್ಬರ ಇತ್ಯಾದಿ ಕಾರಣಗಳಿಂದಾಗಿ ಶೇ. 7.2ಕ್ಕೆ ಇಳಿಸಲಾಗಿದೆ.
2022-23ರ ಜಿಡಿಪಿ ಬೆಳವಣಿಗೆಯು ಮೊದಲ ಪ್ತೈಮಾಸಿಕದಲ್ಲಿ (ಏಪ್ರಿಲ್-ಜೂನ್ 2022) ಶೇ.16.2, ದ್ವಿತೀಯ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್ 2022) ಶೇ.6.2 , ತೃತೀಯ ತ್ರೈಮಾಸಿಕದಲ್ಲಿ (ಅಕ್ಟೋಬರ್-ಡಿಸೆಂಬರ್ 2022) ಶೇ.4.1 ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್ 2023) ಶೇ.4 ರಷ್ಟಾಗಬಹುದು ಎಂದು ಮುನ್ನಂದಾಜಿಸಲಾಗಿದೆ. ಈ ಎಲ್ಲಾ ಮುನ್ನಂದಾಜುಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್ಲಿಗೆ 100 ಡಾಲರ್ ಇರುತ್ತದೆಂಬ ಆಧಾರದ ಮೇಲೆ ಮಾಡಲಾಗಿದೆ.
ಫೆಬ್ರವರಿ ಅಂತ್ಯದಿಂದ ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿನ ಅತಿಯಾದ ಏರಿಳಿತದಿಂದ ಕೂಡಿವೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದಾಗಿ ತೀವ್ರವಾದ ಅನಿಶ್ಚಿತತೆಯು ಬೆಳವಣಿಗೆ ಮತ್ತು ಹಣದುಬ್ಬರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿವೆ. ಭವಿಷ್ಯದ ತೈಲ ಮತ್ತು ಸರಕುಗಳ ಬೆಲೆಯ ಅನಿಶ್ಚಿತತೆಯೂ ಭಾರತದ ಆರ್ಥಿಕ ಬೆಳವಣಿಗೆ ನಿಚ್ಛಳ ಪರಿಣಾಮ ಬೀರಲಿದೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಪ್ರಸಕ್ತ ವಿತ್ತೀಯ ವರ್ಷದ ಮೊದಲ ಗಣಕಾಸು ನೀತಿ ಸಮಿತಿ ಸಭೆಯು ಪ್ರಮುಖವಾಗಿ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರದಲ್ಲಿ ರಷ್ಯಾ ಮೇಲೆ ಹೇರಲಾಗಿರುವ ಆರ್ಥಿಕ ನಿರ್ಬಂಧಗಳು, ಅದರಿಂದ ಜಾಗತಿಕ ಆರ್ಥಿಕತೆ ಮೇಲಾಗುವ ವ್ಯತಿರಿಕ್ತ ಪರಿಣಾಮಗಳು, ಈಗಾಗಲೇ ಉದ್ಭವಿಸಿರುವ ಜಾಗತಿಕ ರಾಜಕೀಯ ಉದ್ವಿಘ್ನತೆ, ಜಾಗತಿಕ ಮಾರುಕಟ್ಟೆಯಲ್ಲಿ ತೀವ್ರ ಏರಿಳಿತದಲ್ಲಿರುವ ಇಂಧನ ಬೆಲೆಗಳು, ಇನ್ನಿತರ ಸರಕುಗಳ ಬೆಲೆ ಏರಿಕೆ ಕುರಿತಾಗಿ ವಿಸ್ತೃತವಾಗಿ ಚರ್ಚಿಸಿದೆ. ಈ ಎಲ್ಲಾ ಅಂಶಗಳು ಭಾರತದ ಆರ್ಥಿಕತೆಯ ಬೆಳವಣಿಗೆಯ ಪಥದ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಅಂಶಗಳಾಗಿರುವುದರಿಂದ ಮುನ್ನಂದಾಜನ್ನು ಸೇ.7.8ರಿಂದ ಶೇ.7.2ಕ್ಕೆ ತಗ್ಗಿಸಲಾಗಿದೆ.