ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿರುವ ನಟಿ ಸಾಯಿ ಪಲ್ಲವಿ ಧರ್ಮದ ಹೆಸರಲ್ಲಿ ಹಿಂಸಿಸಬಾರದು ಎಂದು ಹೇಳಿದ್ದಾರೆ. ಅವರ ಮಾತಿಗೆ ಕನ್ನಡದ ನಟಿ ಹಾಗೂ ಕಾಂಗ್ರೆಸ್ ನಾಯಕಿ ರಮ್ಯಾ ಕೂಡ ಧ್ವನಿಗೂಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಸಾಯಿಪಲ್ಲವಿ ಇತ್ತೀಚೆಗೆ ಬಂದ ಕಾಶ್ಮೀರಿ ಫೈಲ್ಸ್ ಸಿನಿಮಾದಲ್ಲಿ ಆ ಸಮಯದಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಕೊಲ್ಲಲಾಯಿತು ಎಂಬುದನ್ನು ತೋರಿಸಲಾಗಿದೆ. ನೀವು ಈ ವಿಷಯವನ್ನು ಧಾರ್ಮಿಕ ಸಂಘರ್ಷ ಎಂದು ಪರಿಗಣಿಸುತ್ತಿದ್ದರೆ, ಇತ್ತೀಚೆಗೆ ಗೋವು ಸಾಗಿಸುತ್ತಿದ್ದ ಮುಸ್ಲಿಂ ಚಾಲಕನನ್ನು ಥಳಿಸಿ ‘ಜೈ ಶ್ರೀ ರಾಮ್’ ಎಂದು ಹೇಳುವಂತೆ ಒತ್ತಾಯಿಸಿದ ಘಟನೆ ನಡೆದಿದೆ. ಹಾಗಾದರೆ ಈ ಎರಡು ಘಟನೆಗಳ ನಡುವಿನ ವ್ಯತ್ಯಾಸ ಎಲ್ಲಿದೆ’ ಎಂದು ಹೇಳಿದ್ದಾರೆ.

ನಾನು ನ್ಯೂಟ್ರಲ್ ಕುಟುಂಬದಲ್ಲಿ ಜನಿಸಿದವಳು. ಮಾನವತಾವಾದವನ್ನ ಕಲಿತಿದ್ದೇನೆ. ಯಾರು ದಮನಿತರೋ ಅವರನ್ನ ರಕ್ಷಿಸಬೇಕೆಂದು ಕಲಿತಿದ್ದೇನೆ. ನಾನು ಬಲ ಪಂಕ್ತಿ ಎಡ ಪಂಕ್ತಿ ಬಗ್ಗೆ ಕೇಳಿದ್ದೇನೆ. ಆದರೆ ಯಾರದು ಸರಿ, ಯಾರದು ತಪ್ಪು ಅಂತ ನನಗೆ ಇನ್ನೂ ಸರಿಯಾಗಿ ಗೊತ್ತಿಲ್ಲ. ಕಾಶ್ಮೀರಿ ಫೈಲ್ಸ್ ನೋಡಿದಾಗ ಅದರಲ್ಲಿ ಕಾಶ್ಮೀರಿ ಪಂಡಿತರನ್ನು ಅಮಾನುಶವಾಗಿ ಸಾಯಿಸಲಾಯಿತು ಎಂದಿದೆ. ಆದರೆ ಇತ್ತೀಚೆಗೆ ಒಂದು ಘಟನೆ ನೋಡಿದಾಗ ಓರ್ವ ಮುಸ್ಲಿಂ ಡ್ರೈವರ್ ಹಸುಗಳನ್ನ ಸಾಗಿಸುತ್ತಿದ್ದಾಗ ಆತನ ಮೇಲೆ ಗುಂಪೊಂದು ಎಗರಿಬಿದ್ದು ಹೊಡೆದು ಬಡಿದು ಜೈ ಶ್ರೀರಾಮ್ ಎಂದು ಹೇಳಿಸಲಾಯಿತು. ಈ ಎರಡು ಘಟನೆ ನೋಡಿದಾಗ ಯಾವ ನಿರ್ಧಾರಕ್ಕೆ ಬರಲಾಗುತ್ತದೆ ಹೇಳಿ? ಎಂದು ಹೇಳುವ ಮೂಲಕ ಭಾರೀ ವಿವಾದ ಸೃಷ್ಟಿಸಿಕೊಂಡಿದ್ದಾರೆ ದಕ್ಷಿಣದ ಖ್ಯಾತ ನಟಿ ಸಾಯಿ ಪಲ್ಲವಿ.
ಸದಾ ತುಳಿತಕ್ಕೊಳಗಾದವರನ್ನ ರಕ್ಷಿಸಬೇಕು. ಸತ್ಯ ಯಾವುದರ ಕಡೆ ಇದೆ ? ಬಲದ ಕಡೆಯಾ ಎಡದ ಕಡೆಗಾ ? ನಾನು ಈ ವಿಚಾರದಲ್ಲಿ ತುಂಬಾ ನ್ಯೂಟ್ರಲ್ ಎಂದೂ ವೀಡಿಯೋದಲ್ಲಿ ಹೇಳಿದ್ದಾರೆ. ಸಾಯಿ ಪಲ್ಲವಿ ಅವರ ಈ ವಿಚಾರವನ್ನು ನಟಿ, ಮಾಜಿ ಸಂಸದೆ ರಮ್ಯಾ ಬೆಂಬಲಿಸಿದ್ದಾರೆ. ಸಾಯಿ ಪಲ್ಲವಿಗೆ ಸತ್ಯವನ್ನ ಮಾತನಾಡುವ ಶಕ್ತಿ ಇದೆ ಎಂದು ಬರೆದು, ಚಪ್ಪಾಳೆ ಚಿನ್ಹೆ ಮೂಲಕ ಬೆಂಬಲಕ್ಕೆ ನಿಂತಿದ್ದಾರೆ.






