ಬೆಂಗಳೂರು:
ಕನ್ನಡದ ಹಿರಿಯ ನಟ ಡಾ. ರಾಜ್ ಕುಮಾರ್ ಅವರ ಜಯಂತಿಯನ್ನು ರಾಜ್ಯಾದ್ಯಂತ ಭಕ್ತಿಭಾವದಿಂದ ಆಚರಿಸಲಾಗುತ್ತಿದೆ. ಸಾವಿರಾರು ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಗೌರವ ಸೂಚಿಸಿದರು.ಅಣ್ಣಾವ್ರ ನೆನಪಿನಲ್ಲಿ ಅಭಿಮಾನಿಗಳು ಅನ್ನದಾನ, ರಕ್ತದಾನ ಹಾಗೂ ನೇತ್ರದಾನ ಶಿಬಿರಗಳನ್ನು ಆಯೋಜಿಸಿದ್ದು, ಗೀತ-ಗಾಯನ ಕಾರ್ಯಕ್ರಮಗಳ ಮೂಲಕವೂ ಸ್ಮರಣೆ ನಡೆಯುತ್ತಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಅವರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕೊಡುಗೆಗಳನ್ನು ಸ್ಮರಿಸಲಾಗುತ್ತಿದೆ.

ಇದರ ಮಧ್ಯೆ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ ಅಹಿಂಸಾ ಅವರು ಸಮಾಧಿ ಸ್ಥಳದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ರಾಜ್ಕುಮಾರ್ ಅವರನ್ನು ಮಹಾನ್ ಕಲಾವಿದರೆಂದು ಗೌರವಿಸುತ್ತೇವೆ ಎಂದರೂ, ಬೆಂಗಳೂರು ನಗರದ ಮಧ್ಯಭಾಗದಲ್ಲಿ ಸಮಾಧಿ ಕಾಂಪ್ಲೆಕ್ಸ್ಗೆ ಭೂಮಿ ನೀಡಿದ ಸರ್ಕಾರದ ನಿರ್ಧಾರ ಸರಿಯೇ ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ.ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅನೇಕರು ಚೇತನ್ ಹೇಳಿಕೆಯನ್ನು ಖಂಡಿಸಿದ್ದಾರೆ. ಕೆಲವರು ರಾಜ್ಕುಮಾರ್ ಅವರ ಕನ್ನಡ ಭಾಷೆ ಮತ್ತು ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆಯನ್ನು ಉಲ್ಲೇಖಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ಕೆಲವರು ಇತರೆ ರಾಷ್ಟ್ರೀಯ ನಾಯಕರ ಸಮಾಧಿ ಸ್ಥಳಗಳ ಉದಾಹರಣೆಗಳನ್ನು ನೀಡಿದ್ದಾರೆ.

ರಾಜ್ಕುಮಾರ್ ಅವರ ಸಮಾಧಿ ಕಠೀಂರವ ಸ್ಟೇಡಿಯಂ ನಲ್ಲಿ ಇದ್ದು, ಇದೇ ಸ್ಥಳದಲ್ಲಿ ನಟ ಅಂಬರೀಶ್ ಹಾಗೂ ಪುನೀತ ರಾಜಕುಮಾರ ಅವರ ಸಮಾಧಿಗಳೂ ಇವೆ. ಈ ಪ್ರದೇಶವನ್ನು ಯಾವುದೇ ವಾಣಿಜ್ಯ ಉದ್ದೇಶಕ್ಕೆ ಬಳಸಲಾಗಿಲ್ಲ ಎಂಬುದು ಅಭಿಮಾನಿಗಳ ವಾದವಾಗಿದೆ. ಜಯಂತಿ ಸಂಭ್ರಮದ ನಡುವೆ ಉದ್ಭವಿಸಿರುವ ಈ ವಿವಾದ ಮುಂದಿನ ದಿನಗಳಲ್ಲಿ ಯಾವ ದಿಕ್ಕು ಪಡೆದುಕೊಳ್ಳಲಿದೆ ಎಂಬುದು ಕಾದು ನೋಡಬೇಕಿದೆ.






