ಅತ್ಯಾಚಾರಕ್ಕೆ ಸಂಬಂಧಿಸಿದೆ ಎನ್ನಲಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣ ಹೊಸ ತಿರುವು ಪಡೆಯುತ್ತಿದ್ದು, ಎಸ್ಐಟಿ ತನಿಖೆ ನ್ಯಾಯಯುತವಾಗಿಲ್ಲ ಎಂದು ಸಂತ್ರಸ್ತೆ ಹೈಕೋರ್ಟ್ ಮೆಟ್ಟಿಲ್ಲೇರಿದ್ದಾಳೆ.
ಸಿ.ಡಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹೊರಡಿಸಿರುವ ಆದೇಶ ರದ್ದು ಮಾಡುವಂತೆ ಸಂತ್ರಸ್ಥೆ ಕೋರ್ಟ್ ಮೊರೆ ಹೋಗಿದ್ದು, ಅರ್ಜಿ ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕ ಸದಸ್ಯಪೀಠ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ, ನಗರ ಪೊಲೀಸ್ ಆಯುಕ್ತರಿಗೆ ಹಾಗು ಎಸ್ಐಟಿ ತಂಡಕ್ಕೆ ನೋಟೀಸ್ ನೀಡಿದೆ.
ಎಸ್ಐಟಿ ರಚನೆ ಮಾಡುವಂತೆ ನಗರ ಪೊಲೀಸ್ ಆಯುಕ್ತರಿಗೆ ಗೃಹ ಸಚಿವರು 2021ರ ಮಾ.10ರಂದು ಬರೆದ ಪತ್ರ ಹಾಗು ಎಸ್ಐಟಿ ಈವರೆಗೂ ನಡೆಸಿದ ಸಂಪೂರ್ಣ ತನಿಖೆಯನ್ನು ರದ್ದುಗೊಳಿಸಿ ಬೇಕು. ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಹೊಸ ತನಿಖಾ ತಂಡ ರಚಿಸವ ಮೂಲಕ ಹೊಸದಾಗಿ ತನಿಖೆ ನಡೆಸಬೇಕೆಂದು ಕೋರಲಾಗಿದೆ.

ಪ್ರಕರಣದಿಂದ ರಮೇಶ್ ಜಾರಕಿಹೊಳಿಯನ್ನು ರಕ್ಷಣೆ ಮಾಡುವ ಸಲುವಾಗಿ ಈಗ ರಚಿಸಿರುವ ಎಸ್ಐಟಿ ತಂಡ ಸೂಕ್ತ ತನಿಖೆ ನಡೆಸುತ್ತಿಲ್ಲ, ಅತ್ಯಾಚಾರದ ಪ್ರಕರಣದಲ್ಲಿ ರಕ್ತದ ಮಾದರಿ, ಗಂಟಲು ದ್ರವ, ಉಗುರು, ಕೂದಲು, ವೀರ್ಯ, ಪಡೆದು ಡಿಎನ್ಎ ಪರೀಕ್ಷೆ ನಡೆಸಬೇಕು. ಆದರೆ ಸಚಿವರನ್ನು ವೈದ್ಯಕೀಯ ಪರೀಕ್ಷೆಗೆ ಕರೆದು ರಕ್ತದೊತ್ತಡ, ಮಧುಮೇಹ ಪರೀಕ್ಷೆ ನಡೆಸಲಾಗಿದೆ. ನಿಯಮದಂತೆ ವೈದ್ಯಕೀಯ ಪರೀಕ್ಷೆ ನಡೆದಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಮೂಲ: NIE





