ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದೆ.. ಈ ರಣಕಣದಲ್ಲಿ ಕೇಸರಿ ಪಡೆ ಅಬ್ಬರದ ಪ್ರಚಾರ ನಡೆಸುತ್ತಿದೆ.. ಇವೆಲ್ಲದರ ಮಧ್ಯೆ ರಮೇಶ್ ಜಾರಕಿಹೊಳಿ ಸಿಎಂ ಬೊಮ್ಮಾಯಿಯನ್ನು ಭೇಟಿ ಮಾಡುವ ಮೂಲಕ ಪರೋಕ್ಷವಾಗಿ ಮಿನಿ ಕದನಕ್ಕೆ ಎಂಟ್ರಿ ಆಗುವ ಮುನ್ಸೂಚನೆ ನೀಡಿದ್ದಾರೆ.
ಹಾನಗಲ್, ಸಿಂದಗಿ ಉಪಚುನಾವಣೆಗೆ ಮೂರು ಪಕ್ಷಗಳು ಮತದಾರರನ್ನು ಸೆಳೆಯಲು ರಾಜಕೀಯವಾಗಿ ರಣತಂತ್ರ ರೂಪಿಸಿವೆ. ಎರಡು ಕ್ಷೇತ್ರಗಳಲ್ಲಿ ಉಪ ಕದನದಲಿ ತ್ರಿಪಕ್ಷ ಕಲಿಗಳು ತಮ್ಮ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ಮಾಡ್ತಿದ್ದಾರೆ. ರಣಕಣದಲ್ಲಿ ಏಟು, ಎದುರೇಟಿನ ಮೂಲಕ ಟಾಕ್ವಾರ್ಗೆ ನಾಂದಿ ಹಾಡಿದ್ದಾರೆ.
ಈ ಉಪ ಕದನ ಕಾವೇರುತ್ತಿರುವ ಸಮಯದಲ್ಲಿ ಗೋಕಾಕ್ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಮಂಗಳವಾರ ಬೆಂಗಳೂರಲ್ಲಿ ಸಿಎಂ ಬೊಮ್ಮಾಯಿಯನ್ನು ಭೇಟಿ ಮಾಡಿದ್ದಾರೆ.. ರಣಕಣ ರಂಗೇರುತ್ತಿರುವ ನಡುವೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಎಂ ಬೊಮ್ಮಾಯಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ. ಈ ಭೇಟಿಯಲ್ಲಿ ಮಹತ್ವದ ರಾಜಕೀಯ ಮಾತುಕತೆ ನಡೆದಿದ್ದು, ಜಾರಕಿಹೊಳಿಗೆ ಸಿಎಂ ಕೆಲವೊಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

‘ತೆರೆಮರೆಯ ಪ್ರಚಾರದಲ್ಲಿ ಜಾರಕಿಹೊಳಿ’
ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪ-ಚುನಾವಣೆ ಹಿನ್ನೆಲೆ, ರಮೇಶ್ ಜಾರಕಿಹೊಳಿ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದಾರೆ. ಈ ಎರಡು ಕ್ಷೇತ್ರಗಳಲ್ಲಿ ರಮೇಶ್ ಜಾರಕಿಹೊಳಿ ತೆರೆಮರೆಯ ಪ್ರಚಾರ ಮಾಡ್ತಿದ್ದು, ತಮ್ಮ ಸಮಾಜದ ಮತಗಳನ್ನು ಕ್ರೋಡೀಕರಿಸಲು ಜಾರಕಿಹೊಳಿ ಮುಂದಾಗಿದ್ದಾರೆ. 20 ನಿಮಿಷಗಳ ಕಾಲ ಸಿಎಂ ಬೊಮ್ಮಾಯಿ ಜೊತೆ ರಮೇಶ್ ಜಾರಕಿಹೊಳಿ ಮಾತುಕತೆ ನಡೆಸಿದ್ದಾರೆ.
ಇನ್ನು, ಈ ಮಹತ್ವದ ಭೇಟಿಯಲ್ಲಿ ಶಾಸಕ ಜಾರಕಿಹೊಳಿಗೆ ಸಿಎಂ ಬೊಮ್ಮಾಯಿ ಈ ಸೂಚನೆ ನೀಡಿದ್ದಾರೆ. ಹಾನಗಲ್, ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ನೀವು ಪ್ರಚಾರ ಮಾಡಬೇಕು, ಜೊತೆಗೆ ನೀವು ಬಹಿರಂಗ ಪ್ರಚಾರಕ್ಕೆ ಬಂದರೆ, ನಿಮಗೂ ಮುಜುಗರ ಆಗಲಿದೆ. ಈ ನಿಟ್ಟಿನಲ್ಲಿ ನೀವು ತೆರೆಮರೆಯಲ್ಲಿ ಇದ್ದುಕೊಂಡು ಪ್ರಚಾರ ನಡೆಸಿ ಎಂದು ಸಿಎಂ ಸೂಚನೆ ನೀಡಿದ್ದಾರೆ. ಸಿಎಂ ಸೂಚನೆ ಬೆನ್ನಲ್ಲೇ ಇಂದು ಮತ್ತು ನಾಳೆ ಜಾರಕಿಹೊಳಿ ಹುಬ್ಬಳ್ಳಿಯಲ್ಲಿದ್ದುಕೊಂಡು, ಹಾನಗಲ್ ಪ್ರಚಾರಕ್ಕೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ರಾಜ್ಯದ ಎರಡು ಉಪ ಚುನಾವಣಾ ಕಣದಲ್ಲಿ ಮೂರು ಪಕ್ಷಗಳು ಅಬ್ಬರದ ಪ್ರಚಾರ ಮಾಡ್ತಿವೆ… ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ತಮ್ಮದೇ ಆದ ತಂತ್ರ ಪ್ರತಿತಂತ್ರ ರೂಪಿಸಿವೆ.. ಇವೆಲ್ಲದರ ಮಧ್ಯೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತೆರೆಮರೆಯ ಪ್ರಚಾರಕ್ಕೆ ಧುಮುಕಲಿದ್ದು, ಈ ಮೂಲಕ ಚುನಾವಣಾ ಕಣ ಮತ್ತಷ್ಟು ರಂಗೇರುವ ಸಾಧ್ಯತೆ ಇದೆ.