ಶಿಕ್ಷಣ ವಲಯದಿಂದ ಆಚೆಗಿದ್ದ ಧರ್ಮ ಸಂಘರ್ಷ, ಚರ್ಚೆಗಳು ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜುಗಳ ಕ್ಯಾಂಪಸ್ ಒಳಗೆ ಪ್ರವೇಶಿಸಿದೆ. ಹಿಜಾಬ್ ವಿವಾದದ ಬೆನ್ನಲ್ಲೇ ರಾಜ್ಯ ಸರ್ಕಾರ ಸಮವಸ್ತ್ರದ ಪರ ಬ್ಯಾಟಿಂಗ್ ಮಾಡಿತ್ತು ಹೈಕೋರ್ಟ್ ಕೂಡ ರಾಜ್ಯ ಸರ್ಕಾರದ ನಿಲುವನ್ನು ಎತ್ತಿ ಹಿಡಿದಿತ್ತು. ಈಗ ರಾಜ್ಯ ಸರ್ಕಾರ ಪದವಿಪೂರ್ವ ಕಾಲೇಜು ಪ್ರವೇಶಕ್ಕೆ ಸಂಬಂಧಿಸಿದಂತೆ ಪಿಯು ವಿದ್ಯಾರ್ಥಿಗಳಿಗೆ ಕಾಲೇಜು ಅಭಿವೃದ್ಧಿ ಸಮಿತಿ ನಿಗದಿಪಡಿಸಿರುವ ಸಮವಸ್ತ್ರ ಕಡ್ಡಾಯವಾಗಿದೆ.
ಹೌದು, ಕಾಲೇಜು ಅಭಿವೃದ್ಧಿ ಸಮೀತಿಯು ಪಿಯು ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯಕೊಳಿಸಿದ್ದು, ಒಂದು ವೇಳೆ ಸಮವಸ್ತ್ರ ನಿಗದಿಪಡಿಸಿಲ್ಲವಾದರೆ ಸಮಾನತೆ ಮತ್ತು ಐಕ್ಯತೆಯನ್ನು ಕಾಪಾಡಿಕೊಂಡು ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಬಾರದ ಉಡುಪು ಧರಿಸಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದೆ.
ಈ ಮೊದಲು ಪ್ರವೇಶ ಮಾರ್ಗಸೂಚಿಯಲ್ಲಿ ಸಮವಸ್ತ್ರ ಕುರಿತ ಯಾವುದೇ ಅಂಶವನ್ನು ಪ್ರಸ್ತಾಪಿಸುತ್ತಿರಲಿಲ್ಲ. ಆದರೆ ಈ ಬಾರಿ ಪದವಿಪೂರ್ವ ಕಾಲೇಜು ಪ್ರವೇಶಕ್ಕೆ ಸಂಬಂಧಿಸಿದಂತೆ ಮಂಗಳವಾರದಂದು ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಸಮವಸ್ತ್ರ ಕುರಿತು ಉಲ್ಲೇಖಿಸಲಾಗಿದೆ. ಜೊತೆಗೆ ಪ್ರವೇಶಾತಿ ಕುರಿತು ಕೆಲವೊಂದು ನಿಯಮಗಳನ್ನು ಸೂಚಿಸಲಾಗಿದೆ.
ಮೇ 19ರಂದು 10ನೇ ತರಗತಿ ಫಲಿತಾಂಶ ಪ್ರಕಟವಾಗಲಿದ್ದು, ಅದರ ಮರುದಿನದಿಂದಲೇ ಪ್ರಥಮ ಪಿಯುಸಿ ಪ್ರವೇಶ ಪ್ರಕ್ರಿಯೆ ಆರಂಭವಾಗುತ್ತದೆ. ಪ್ರಥಮ ಪಿಯುಸಿಗೆ ದಂಡ ಶುಲ್ಕವಿಲ್ಲದೆ ಜೂನ್ 15 ದಾಖಲಾತಿಯ ಕೊನೆಯ ದಿನಾಂಕವಾಗಿದ್ದು, ದ್ವಿತೀಯ ಪಿಯುಸಿ ಪ್ರವೇಶಾತಿಗೆ ಜೂನ್ 1 ರಿಂದ 15 ರವರೆಗೆ ಕಾಲಾವಕಾಶ ಕಲ್ಪಿಸಲಾಗಿದೆ.