ರಾಜಕೀಯ ಕ್ಷೇತ್ರವನ್ನು ಅಪರಾಧಿಕರಣದಿಂದ ದೂರ ಉಳಿಸುವ ನಿಟ್ಟಿನಲ್ಲಿ ಸುಪ್ರಿಂ ಕೋರ್ಟ್ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಯಾವುದೇ ಪಕ್ಷವು ತನ್ನ ಅಭ್ಯರ್ಥಿಗಳನ್ನು ಘೋಷಿಸಿದ 48 ಗಂಟೆಗಳ ಒಳಗೆ ಅಭ್ಯರ್ಥಿಗಳ ಅಪರಾಧಿ ಹಿನ್ನೆಲೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಸುಪ್ರಿಂ ಹೇಳಿದೆ.
ರಾಜ್ಯ ಸರ್ಕಾರಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಪ್ಪಿಸಲು, ಶಾಸಕರು ಅಥವಾ ಸಂಸದರ ಮೇಲಿರುವ ಪ್ರಕರಣಗಳನ್ನು ಹೈಕೋರ್ಟ್ ಒಪ್ಪಿಗೆಯಿಲ್ಲದೇ ವಜಾಗೊಳಿಸುವಂತಿಲ್ಲ, ಎಂದು ಹೇಳಿದೆ.
ಇದಕ್ಕೂ ಮೊದಲು ಕಳೆದ ವರ್ಷದ ಫೆಬ್ರವರಿಯಲ್ಲಿ ಇಂತಹುದೇ ನಿರ್ಧಾರವನ್ನು ಸುಪ್ರಿಂ ಪ್ರಕಟಿಸಿತ್ತು. ಕಳೆದ ವರ್ಷದ ಬಿಹಾರ ಚುನಾವಣೆಗೆ ಸಂಬಂಧಿಸಿ ಈ ನಿರ್ಧಾರವನ್ನು ಪ್ರಕಟಿಸಲಾಗಿತ್ತು. ಆ ಸಂದರ್ಭದಲ್ಲಿ ಸುಪ್ರಿಂ ಕೋರ್ಟ್ ಎರಡು ಆಐ್ಕೆಗಳನ್ನು ಅಭ್ಯರ್ಥಿಗಳಿಗೆ ನೀಡಿತ್ತು. ಒಂದು, ಅಭ್ಯರ್ಥಿಯ ಹೆಸರು ಘೊಷಿಸಿದ 48 ಗಂಟೆಗಳ ಒಳಗಾಗಿ ಅವರ ಮೇಲಿನ ಪ್ರಕರಣಗಳನ್ನು ಬಹಿರಂಗಗೊಳಿಸಬೇಕು. ಎರಡನೇಯದು, ಮೊದಲ ನಾಮಪತ್ರ ಸಲ್ಲಿಸುವ ದಿನಾಂಕದ ಕನಿಷ್ಟ ಎರಡು ವಾರಗಳ ಹಿಂದೆ ಅಭ್ಯರ್ಥಿಗಳ ಮೇಲಿನ ಪ್ರಕರಣಗಳನ್ನು ಬಹಿರಂಗಗೊಳಿಸಬೇಕು ಎಂದು ಸುಪ್ರಿಂ ಹೇಳಿದ್ದು. ಈಗ ಇದರಲ್ಲಿ ಎರಡನೇಯ ಆಯ್ಕೆಯನ್ನು ತೆಗೆದು, ಒಂದನೇ ಆಯ್ಕೆಯನ್ನು ಮಾತ್ರ ಉಳಿಸಲಾಗಿದೆ.

ಈ ರೀತಿ ಅಭ್ಯರ್ಥಿಗಳ ಮೇಲಿನ ಅಪರಾಧ ಪ್ರಕರಣಗಳನ್ನು ಬಹಿರಂಗಪಡಿಸದ ಪಕ್ಷಗಳ ಅಧಿಕೃತ ಚಿಹ್ನೆಯನ್ನು ನಿಷೇಧಿಸುವ ಕುರಿತ ಅರ್ಜಿಯ ವಿಚಾರಣೆ ನಡೆಸುವಾಗ ಸುಪ್ರಿಂ ಈ ಆದೇಶ ನಿಡಿದೆ. ಸುಪ್ರಿಂ ಕೋರ್ಟ್’ನ ಫೆಬ್ರುವರಿ 2020ರ ಆದೇಶವನ್ನು ಉಲ್ಲಂಘಿಸುವ ರಾಜಕೀಯ ಪಕ್ಷಗಳ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕೆಂದು ಈ ಅರ್ಜಿಯಲ್ಲಿ ಕೋರಲಾಗಿದೆ.
ಆದೇಶದಲ್ಲಿ ಸ್ಪಷ್ಟವಾಗಿ ಅಭ್ಯರ್ಥಿಗಳ ಅಪರಾಧ ಹಿನ್ನೆಯನ್ನು ಬಹಿರಂಗಗೊಳಿಸಲು ಆದೇಶ ನಿಡಲಾಗಿತ್ತು. ಪಕ್ಷದ ಅಧಿಕೃತ ಅಂತರ್ಜಾಲ ತಾಣದಲ್ಲಿ ಈ ಮಾಹಿತಿಯನ್ನು ದಾಖಲಿಸಿ, ಅವರನ್ನು ಆಯ್ಕೆ ಮಾಡಲು ಕಾರಣವೇನು ಎಂಬುದನ್ನು ಸ್ಪಷ್ಟಪಡಿಸುವಂತೆಯೂ ಕೋರ್ಟ್ ಹೇಳಿತ್ತು. ಚುನಾವಣಾ ಆಯೋಗವು, ಈ ಮಾಹಿತಿಯನ್ನು ದಿನ ಪತ್ರಿಕೆಗಳಲ್ಲಿ ಪ್ರಕಟಿಸುವಂತೆ ಆದೇಶ ನೀಡಿತ್ತು.
ಈಗ ವಿಚಾರಣೆ ನಡೆಯುತ್ತಿರುವ ಅರ್ಜಿಗೆ ಸಂಬಂಧಿಸಿ ಸಿಪಿಐಎಂ ಹಾಗೂ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎನ್ ಸಿ ಪಿ) ಸುಪ್ರಿಂ ಕೋರ್ಟ್’ಗೆ ಬೇಷರತ್ತ್ ಕ್ಷಮೆಯಾಚಿಸಿದೆ. ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸುಪ್ರಿಂ ಕೋರ್ಟ್ ಆದೇಶ ಪಾಲಿಸದ ಕಾರಣಕ್ಕಾಗಿ ನಾವು ಕ್ಷಮೆ ಯಾಚಿಸುತ್ತೇವೆಂದು ಹೇಳಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವೂ ಸುಪ್ರಿಂ ಕೋರ್ಟ್’ಗೆ ಮಾಹಿತಿ ನೀಡಿದ್ದು, ನ್ಯಾಯಾಲಯದ ಆದೇಶವನ್ನು ಪಾಲಿಸದ ಪಕ್ಷಗಳ ಅಧಿಕೃತ ಚಿಹ್ನೆಯನ್ನು ಅಮಾನತುಗಳಿಸುತ್ತೇವೆ ಎಂದು ಹೇಳಿದೆ.





