ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು ಇಲ್ಲಿನ ಮೂರೂ ಪಕ್ಷಗಳು ತಮ್ಮ ತಮ್ಮ ಮಟ್ಟದಲ್ಲಿ ಒಂದು ಹಂತದ ರಾಜಕೀಯ ತಂತ್ರಗಾರಿಕೆಯನ್ನು ಚುರುಕುಗೊಳಿಸಿವೆ.
ಸದ್ಯಕ್ಕೆ ಚುನಾವಣೆ ಪೂರ್ವ ತಯಾರಿಯಲ್ಲಿ ಬಿಜೆಪಿಯೂ ಇದೆ. ಇದಕ್ಕೆ ಕಾರಣ ರಾಜ್ಯ ನಾಯಕರ ಮೇಲೆ ಕೇಂದ್ರ ನಾಯಕರ ಒತ್ತಡ. ಈಗಾಗಲೇ ಕೇಂದ್ರ ಹೈಕಮಾಂಡ್ ಇಲ್ಲಿನ ನಾಯಕರಿಗೆ 150 ಪ್ಲಸ್ ಟಾರ್ಗೆಟ್ ನೀಡಿದ್ದಾರೆ. ಈತನ್ಮಧ್ಯೆ ಕಳೆದ ಕೆಲವು ವಾರಗಳಿಂದ ಕರಾವಳಿ ಭಾಗದಲ್ಲಿ ನಡೆದ ಕೆಲವೊಂದು ಅನಪೇಕ್ಷಿತ ಘಟನೆಗಳು ರಾಜ್ಯ ಮತ್ತು ಕೇಂದ್ರ ನಾಯಕರ ನಿದ್ದೆಗೆಡಿಸಿದೆ.
ಇಲ್ಲಿನ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಮತ್ತು ನಂತರ ಸ್ಪೋಟಗೊಂಡ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಆಕ್ರೋಶ ಮತ್ತಿದು ರಾಜ್ಯಮಟ್ಟಕ್ಕೆ ಹಬ್ಬಿದ ರೀತಿ.. ಇದೆಲ್ಲವೂ ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಬಳಿಕ ಮುಖ್ಯಮಂತ್ರಿಯಾದಿಯಾಗಿ ಆಡಳಿತ ಪಕ್ಷದ ಘಟಾನುಘಟಿ ಸಚಿವರೇ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದರೂ ಇಲ್ಲಿ ಎದ್ದಿರುವ ಒಳಕುದಿ ಇನ್ನೂ ತಣಿದಂತೆ ಕಾಣುತ್ತಿಲ್ಲ. ಇನ್ನೊಂದೆಡೆ ಮಸೂದ್ ಮತ್ತು ಫಾಝಿಲ್ ಹತ್ಯೆ ಪ್ರಕರಣಗಳೂ ಸಹ ಬಿಜೆಪಿಗೆ ಇನ್ನಷ್ಟು ಹೊಡೆತ ನೀಡಿರುವುದು ಸುಳ್ಳಲ್ಲ.
ಈ ಎಲ್ಲಾ ವಿಚಾರಗಳ ಹಿನ್ನಲೆಯಲ್ಲಿ ಬಿಜೆಪಿಯ ಮಾಸ್ಟರ್ ಮೈಂಡ್, ಕೇಂದ್ರ ಗೃಹಸಚಿವ ಅಮಿತ್ ಶಾ ಇಂದು ರಾತ್ರಿ ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಮತ್ತು ಗುರುವಾರ ಪೂರ್ತಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೊಟೇಲಿನಲ್ಲೇ ‘ಸಂಕಲ್ಪ್ ಸೆ ಸಿದ್ದಿ’ ಹೆಸರಿನಲ್ಲಿ ಪಕ್ಷದ ನಾಯಕರ ಸಭೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ಶಾ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಪ್ರವೀಣ್ ಹತ್ಯೆ ಕಡೆಗಣನೆ?
ರಾಜ್ಯದಲ್ಲಿ ಸರಣಿ ರಾಜಕೀಯ ಕೊಲೆಗಳು ನಡೆಯುತ್ತಿದ್ದರೂ ಕೇಂದ್ರ ಗೃಹ ಮಂತ್ರಿ ಈ ಕುರಿತಾಗಿ ಚಕಾರವೆತ್ತಿಲ್ಲ. ಅದಕ್ಕು ಮಿಗಿಲಾಗಿ, ಅಮಿತ್ ಶಾ ಕೊಲೆಯಾದ ಬಿಜೆಪಿ ಕಾರ್ಯಕರ್ತನ ಮನೆಗೆ ಭೇಟಿ ನೀಡುತ್ತಾರೆ ಎಂಬ ಪುಕಾರು ಬಃಲ ಬಲವಾಗಿ ಹಬ್ಬಿತ್ತು. ಆದರೆ, ಕೇಂದ್ರ ಗೃಹ ಇಲಾಖೆ ಹೊರಡಿಸಿರುವ ಅಧಿಕೃತ ಪ್ರಕಟಣೆಯ ಪ್ರಕಾರ ಅಮಿತ್ ಶಾ ಪ್ರವೀಣ್ ಮನೆಗೆ ಭೇಟಿ ನೀಡುವುದಿಲ್ಲ. ಬದಲಾಗಿ, ಬೆಂಗಳೂರಿನಲ್ಲಿ ನಡೆಯಲಿರುವ ಸಂಕಲ್ಪ್ ಸೆ ಸಿದ್ದಿ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಲ್ಲಿಂದಲೇ ನೇರವಾಗಿ ದೆಹಲಿಗೆ ವಾಪಾಸ್ಸಾಗಲಿದ್ದಾರೆ.
ಈ ಸುದ್ದಿ ಬಿಜೆಪಿ ನಾಯಕರಿಗೂ ತಳಮಳ ಉಂಟುಮಾಡಿದೆ. ಒಂದು ವೇಳೆ ಶಾ ನೆಟ್ಟಾರಿಗೆ ಬಂದರೆ ಪಕ್ಷವು ತನ್ನ ತಳಮಟ್ಟದ ಕಾರ್ಯಕರ್ತರೊಂದಿಗೆ ಅವರ ಕಷ್ಟ ಕಾಲದಲ್ಲೂ ನಿಲ್ಲಲಿದೆ ಎಂಬ ಮೆಸೇಜ್ ಹೋಗುತ್ತದೆ ಎಂಬ ನಿರಿಕ್ಷೆ ಬಿಜೆಪಿ ಪಾಳಯದಲ್ಲಿದ್ದರೆ, ಒಂದುವೇಳೆ ಶಾ ಬರದಿದ್ದರೆ, ಬೆಂಗಳೂರಿನವರೆಗೆ ಬಂದು ಬೆಳ್ಳಾರೆವರೆಗೆ ನಿಮ್ಮ ನಾಯಕರು ಬರಲಿಲ್ಲ ಎಂಬ ಮಾತು ಪ್ರತಿಪಕ್ಷಗಳಿಂದ ಮತ್ತು ಸ್ವತಃ ತನ್ನ ಕಾರ್ಯಕರ್ತರಿಂದ ಎದುರಾಗಬಹುದು ಎಂಬ ಭೀತಿಯೂ ಕಮಲ ಪಾಳಯದಲ್ಲಿದೆ.
ಸಿದ್ದರಾಮೋತ್ಸವಕ್ಕೆ ಬೆದರಿದರೇ ಬಿಜೆಪಿಯ ಚಾಣಕ್ಯ?
ಮೂಲಗಳ ಪ್ರಕಾರ ಮುಂದಿನ ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್ ಈಗಾಗಲೇ ರಾಜ್ಯವ್ಯಾಪಿ ಸಮೀಕ್ಷೆ ನಡೆಸಿದ್ದು ಅದರಿಂದ ಲಭಿಸಿರುವ ಫಲಿತಾಂಶಗಳು ಉನ್ನತ ಕಮಲ ನಾಯಕರ ನಿದ್ದೆಗೆಡಿಸಿದೆ. ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ 75 ವರ್ಷ ಭರ್ತಿಯಾದ ಹಿನ್ನಲೆಯಲ್ಲಿ ಕಾಂಗ್ರೆಸ್ ಇಂದು ದಾವಣಗೆರೆಯಲ್ಲಿ ‘ಸಿದ್ದರಾಮೋತ್ಸವ’ ನಡೆಸಿದ್ದು ಇದಕ್ಕೆ ಸಿಕ್ಕಿರುವ ಪ್ರತಿಕ್ರಿಯೆಯೂ ಸಹ ಬಿಜೆಪಿ ಪಕ್ಷದಲ್ಲಿ ಸಣ್ಣ ತಳಮಳವನ್ನುಂಟು ಮಾಡಿದೆ.
ಸಿದ್ದರಾಮೋತ್ಸವಕ್ಕೆ ಕೌಂಟರ್ ಕೊಡಲು ಯೋಜಿಸಿದ್ದ ‘ಜನೋತ್ಸವ’ ರದ್ದಾಗಿದ್ದು ಬಿಜೆಪಿಗೆ ದೊಡ್ಡ ಹೊಡೆತ!
ಹೌದು, ಸಿದ್ದರಾಮೋತ್ಸವ ಹೆಸರಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ತನ್ನ ಬಲಪ್ರದರ್ಶನಕ್ಕೆ ಸರ್ವ ಸಿದ್ಧತೆಯನ್ನು ಮಾಡಿಕೊಂಡಿದ್ದ ಸಂದರ್ಭದಲ್ಲೇ ಇದಕ್ಕೆ ಕೌಂಟರ್ ಕೊಡುವ ಉದ್ದೇಶದಿಂದ ಬಿಜೆಪಿ, ಯಡಿಯೂರಪ್ಪನವರ ನೇತೃತ್ವದಲ್ಲಿ ರಾಜ್ಯದಲ್ಲಿ ಮೂರು ವರ್ಷಗಳ ಅಧಿಕಾರವನ್ನು ಪೂರ್ಣಗೊಳಿಸಿದ ಮತ್ತು ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನಲೆಯಲ್ಲಿ ‘ಜನೋತ್ಸವ’ ಹೆಸರಿನಲ್ಲಿ ಬೃಹತ್ ಸಮಾವೇಶವನ್ನು ನಡೆಸಲುದ್ದೇಶಿಸಿತ್ತು ಮತ್ತು ಕೇಂದ್ರ ನಾಯಕರ ಉಪಸ್ಥಿತಿಯಲ್ಲಿ ರಾಜ್ಯ ಸರ್ಕಾರದ ಸಾಧನೆಯ ತುತ್ತೂರಿ ಊದುವುದು ಇದರ ಉದ್ದೇಶವಾಗಿತ್ತು.
ಆದರೆ ಸಡನ್ ಆಗಿ ಬಂದೆರಗಿದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಬಿಸಿಗಾಳಿ ರಾಜ್ಯ ಬಿಜೆಪಿ ನಾಯಕರ ಜಂಘಾಬಲವನ್ನೇ ಉಡುಗಿಸಿತ್ತು ಮತ್ತು ಕಾರ್ಯಕರ್ತರ ಸಿಟ್ಟಿನ ಮುಂದೆ ಜನೋತ್ಸವ ಧೂಳೀಪಟವಾಗಲಿದೆ ಎಂದು ಅರಿತ ಕೇಂದ್ರ ನಾಯಕರು ದಿಢೀರ್ ಆಗಿ ಈ ಸಮಾವೇಶವನ್ನು ರದ್ದುಗೊಳಿಸುವಂತೆ ರಾಜ್ಯ ನಾಯಕರಿಗೆ ಆದೇಶ ನೀಡಿದ್ದರು.