ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಇದೀಗ ಪೋಸ್ಟರ್ ವಾರ್ ಆರಂಭಗೊಂಡಿದ್ದು, ಮಾಧ್ಯಮಗಳ ಮುಂದೆ, ಸದನದಲ್ಲಿ ನಡೆಯುತ್ತಿದ್ದ ರಾಜಕೀಯ ಸಮರ ಇದೀಗ ಬೀದಿಗೆ ಬಂದಿದೆ.
ಹೌದು, ರಾಜ್ಯದಲ್ಲಿ ಭಾರೀ ಸದ್ದುಮಾಡಿರುವ ೪೦ ಪರ್ಸೆಂಟ್ ಕಮಿಷನ್ ಸರಕಾರ, ಪಿಎಸ್ ಐ ನೇಮಕಾತಿಯಲ್ಲಿ ಭ್ರಷ್ಟಾಚಾರ ಮುಂತಾದ ಪ್ರಕರಣಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಗುರಿಯಾಗಿಸಿ ಪೇ-ಸಿಎಂ ಎಂದು ಪೇಟಿಯಂ ಮಾದರಿಯಲ್ಲಿ ಪೋಸ್ಟರ್ ಗಳನ್ನು ರಸ್ತೆ ಬದಿಗಳಲ್ಲಿ ಪ್ರಕಟಿಸಿದೆ.
ಕಾಂಗ್ರೆಸ್ ಪೇ-ಸಿಎಂ ಪೋಸ್ಟರ್ ಪ್ರಕಟಿಸಿದ ಬೆನ್ನಲ್ಲೇ ಬಿಜೆಪಿ ಕೂಡ ಕಾಂಗ್ರೆಸ್ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಗುರಿಯಾಗಿಸಿ ಭಷ್ಟ ಜೋಡಿ, ರೀಡೂ ಸಿದ್ದರಾಮಯ್ಯ ಮತ್ತು ಇಡಿ ಡಿಕೆಶಿ ಎಂದು ಪೋಸ್ಟರ್ ಗಳನ್ನು ಪ್ರಕಟಿಸಿ ತಿರುಗೇಟು ನೀಡಿದೆ.
ಪೇಟಿಯಂ ಸ್ಕ್ಯಾನಿಂಗ್ ಫೋಟೊಗಳಲ್ಲಿ ಸಿಎಂ ಬೊಮ್ಮಾಯಿ ಹಾಗೂ ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ ಹಾಗೂ ಡಿಕೆಶಿ ಫೋಟೊಗಳು ರಾರಾಜಿಸುತ್ತಿವೆ.
ಸ್ಕ್ಯಾನ್ ಕೋಡ್ ಮೇಲೆ ಸಿದ್ದರಾಮಯ್ಯ, ಡಿಕೆಶಿ ಚಿತ್ರ ಹಾಕಿ, ರಾಜ್ಯ ಲೂಟಿ ಮಾಡಿದ ಈ ಭ್ರಷ್ಟ(Corruption) ಜೋಡಿಯನ್ನು ರಾಜ್ಯದಿಂದ ಕಿತ್ತೆಸೆಯಲು ಇದನ್ನು ಸ್ಕ್ಯಾನ್ ಮಾಡಿ ಅಂತ ಟಾಂಗ್ ನೀಡಿದೆ.
ಸಮಾಜವಾದಿ ಮುಖವಾಡ ಧರಿಸಿ ರಾಜ್ಯವನ್ನು ಲೂಟಿ ಮಾಡಿರುವ ಕಾಂಗ್ರೆಸ್ ಗಂಜಿ ಗಿರಾಕಿಗಳಿಂದ ದೂರವಿರಿ ಎಂದು ಅಭಿಯಾನ ಮಾಡಲು ಸಿದ್ಧತೆ ನಡೆಸಿದೆ. ಹಿರಿಯ ನಾಯಕರ ಗಮನಕ್ಕೆ ತಂದು ಅಭಿಯಾನ ನಡೆಸಲು ಮುಂದಾಗಿದೆ.
ಬೇಡಾಗಿದ್ದಾರೆ ಹೆಸರಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೋಟೋ ಪ್ರಕಟಿಸಿದೆ ನಿಮ್ಮ ಹತ್ತಿರ ಇವರನ್ನ ಸುಳಿದಾಡಲು ಬಿಡಬೇಡಿ. ರಿಡೂ ಸಿದ್ದರಾಮಯ್ಯ, ಇಡಿ ಡಿಕೆಶಿ ಅಂತ ಕಾಲೆಳೆದು ಪೋಸ್ಟರ್ ರಚಿಸಿದೆ.
ಕಾಂಗ್ರೆಸ್ ಪೋಸ್ಟರ್ಗೆ ಪ್ರತಿಯಾಗಿ ಬಿಜೆಪಿ ಕೌಂಟರ್ ಕೊಟ್ಟರೂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಫೋಟೋ ಇರುವ ಸ್ಕ್ಯಾನ್ ರೀಡ್ ಆಗುತ್ತಿಲ್ಲ.