ನವಂಬರ್ ಮಾಸದ ಆರಂಭದಲ್ಲೇ ಆಘಾತಕರ ಸುದ್ದಿಯೊಂದು ವರದಿಯಾಗಿತ್ತು. ಸರಿಸುಮಾರ್ 5.46 ದಶಲಕ್ಷ ಜನರು ತಮ್ಮ ಉದ್ಯೋಗ ಕಳೆದುಕೊಂಡಿರುವುದಾಗಿ ಸಿಎಂಐಇ ಸಂಸ್ಥೆ ಮಾಹಿತಿ ನೀಡಿತ್ತು. 2016-17ರಲ್ಲಿ ಭಾರತದ ಯುವ ಜನತೆಯ ನಿರುದ್ಯೋಗ ಪ್ರಮಾಣ ಶೇ 15.66ರಷ್ಟಿದ್ದುದು 2021ರಲ್ಲಿ ಶೇ 28.26ರಷ್ಟಾಗಿರುವುದು ಚಿಂತೆಗೀಡುಮಾಡುವ ವಿಚಾರ. ಆಗಸ್ಟ್ 2021ರ ವೇಳೆಗೆ ಉದ್ಯೋಗಾರ್ಹ ಯುವ ಜನತೆಯ ಶೇ 33ರಷ್ಟು ನಿರುದ್ಯೋಗಿಗಳಾಗಿದ್ದರು. ಪ್ರತಿ ವರ್ಷ 2 ಕೋಟಿ ಜನರು ಪ್ರತಿವರ್ಷ ಭಾರತದ ಮಾರುಕಟ್ಟೆ ಪ್ರವೇಶಿಸುತ್ತಾರೆ. ಆದರೆ ಇವರಿಗೆ ಉದ್ಯೋಗಾವಕಾಶಗಳೇ ದುರ್ಲಭವಾಗಿವೆ. ಈ ಬೆಳವಣಿಗೆಗಳೆಲ್ಲವೂ ಸಂಭವಿಸುತ್ತಿರುವುದು, ಇಂತಹ ಪರಿಸ್ಥಿತಿಯಲ್ಲಿ ಸ್ವಾಭಾವಿಕವಾಗಿ ಬೆಂಬಲವಾಗಿ ನಿಲ್ಲುವ ಅನೌಪಚಾರಿಕ ಕ್ಷೇತ್ರವು, ನೋಟು ಅಮಾನ್ಯೀಕರಣ, ಜಿಎಸ್ಟಿ ಮತ್ತು ಲಾಕ್ ಡೌನ್ ಪರಿಣಾಮದಿಂದ ಔಪಚಾರಿಕತೆಯೆಡೆಗೆ ಚಲಿಸುತ್ತಿರುವ ಸಂದರ್ಭದಲ್ಲಿ.
ಬಾಂಗ್ಲಾದೇಶದಲ್ಲಿರುವಂತೆ ಒಂದು ಸ್ಪರ್ಧಾತ್ಮಕ ಗಾರ್ಮೆಂಟ್ ಕೈಗಾರಿಕೆಯನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತ ಈ ಅವಕಾಶವನ್ನು ಬಳಸಿಕೊಂಡು ಲಕ್ಷಾಂತರ ಉದ್ಯೋಗವನ್ನು ಸೃಷ್ಟಿಸಬಹುದಾಗಿತ್ತು. ಅನೌಪಚಾರಿಕ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ನೀಡುವ ಮೂಲಕ ಇದನ್ನು ಸಾಧಿಸಲು ಸಾಧ್ಯವಿತ್ತು. ಇದರೊಡನೆಯೇ ಎಂಎಸ್ಎಂಇ ವಲಯಕ್ಕೆ ಹೆಚ್ಚಿನ ದಕ್ಷತೆ ತರಲು ಉತ್ತೇಜಿಸುವುದು ಹಾಗೂ ಯೂರೋಪ್, ಕೆನಡಾ, ಅಮೆರಿಕ ದೇಶಗಳೊಡನೆ ವ್ಯಾಪಾರ ವಹಿವಾಟುಗಳನ್ನು ಮುಂದುವರೆಸುವುದು ಸರ್ಕಾರದ ಆದ್ಯತೆಯಾಗಬೇಕಿತ್ತು. ಅಮೆರಿಕ ಇಂತಹ ಮಾರುಕಟ್ಟೆಗೆ ಮುಕ್ತ ಪ್ರವೇಶ ಒದಗಿಸಿದೆ.
ಇದಕ್ಕೆ ವ್ಯತಿರಿಕ್ತವಾಗಿ ಭಾರತದಲ್ಲಿ ಜವಳಿ ರಫ್ತು ವ್ಯಾಪಾರ 2015 ರಿಂದ 2019ರ ಅವಧಿಯಲ್ಲಿ ಜಡಗಟ್ಟಿ ಯಥಾಸ್ಥಿತಿಯಲ್ಲಿತ್ತು. ಭಾರತದಲ್ಲಿ ಒಂದು ಅಂಗಿಯನ್ನು ಹೊಲಿಯಲು ತಗಲುವ ವೆಚ್ಚ 0.50 ಡಾಲರ್ ಆದರೆ ಬಾಂಗ್ಲಾದೇಶದಲ್ಲಿ ಇದು 0.22 ಡಾಲರ್ ಆಗುತ್ತದೆ. ಇದಕ್ಕೆ ಕಾರಣ ಅನುತ್ಪಾದಕೀಯ ಶ್ರಮಶಕ್ತಿ ಮತ್ತು ದುರ್ಬಲ ಮೂಲ ಸೌಕರ್ಯಗಳು. ಇಲ್ಲಿ ಆಡಳಿತ ನೀತಿಯ ನಿಷ್ಕ್ರಿಯತೆ ಢಾಳಾಗಿ ಕಾಣುತ್ತದೆ. ವಿಶ್ವಬ್ಯಾಂಕಿನ 2017ರ ಒಂದು ಅಂದಾಜಿನ ಪ್ರಕಾರ ಅದರ ಹಿಂದಿನ ದಶಕದಲ್ಲಿ 12 ದಶಲಕ್ಷ ಉದ್ಯೋಗಗಳು ಚೀನಾದಿಂದ ಬಾಂಗ್ಲಾದೇಶಕ್ಕೆ ರವಾನೆಯಾಗಿತ್ತು. ಇದರಲ್ಲಿ ಬಹುಪ್ರಮಾಣ ಭಾರತದ ಜವಳಿ ಉದ್ಯಮದ ವಾತಾವರಣವನ್ನು ಪುನಶ್ಚೇತನಗೊಳಿಸಬಹುದಿತ್ತು.
ಏತನ್ಮಧ್ಯೆ, ಉದ್ಯೋಗ ಇರುವ ಭಾರತೀಯರಿಗೆ ನಿತ್ಯ ಓಡಾಡುವುದೇ ದುಸ್ತರವಾಗಿದೆ. ಏರುತ್ತಿರುವ ತೆರಿಗೆಗಳ ನಡುವೆಯೇ ನವಂಬರ್ನಲ್ಲಿ ಬಹುತೇಕ ನಗರಗಳಲ್ಲಿ ಪೆಟ್ರೋಲ್ ದರ ಲೀಟರ್ ಗೆ ನೂರು ರೂ ದಾಟಿತ್ತು. 2030ರ ವೇಳೆಗೆ ಒಟ್ಟು ಕಾರುಗಳ ಮಾರಾಟದಲ್ಲಿ ಭಾರತ ವಿದ್ಯುತ್ ಚಾಲಿತ ಕಾರುಗಳ ಶೇ 8ರಷ್ಟು ಹೆಚ್ಚಳವನ್ನು ಕಾಣುವ ಸಾಧ್ಯತೆ ಇದೆ. ದುಬಾರಿ ವಿದ್ಯುತ್ ಚಾಲಿತ ವಾಹನಗಳ ಹೆಚ್ಚಿನ ಉತ್ಪಾದನೆಗೆ ಉತ್ತೇಜನ ನೀಡುವ ನೀತಿ ಇಲ್ಲದಿರುವುದು ಇಲ್ಲಿ ಸ್ಪಷ್ಟವಾಗುತ್ತದೆ. ಭಾರತ ಈ ಅವಕಾಶವನ್ನು ಕಳೆದುಕೊಂಡಿದೆ. ಇಂತಹ ರಚನಾತ್ಮಕ ವಿಷಯಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ( ವಿದೇಶಿ ತೈಲದ ಮೇಲೆ ಅವಲಂಬನೆ) ಚೀನಾದಂತಹ ದೇಶಗಳು ಕಳೆದ ಒಂದು ದಶಕದಿಂದಲೂ ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆಯ ಮೇಲೆ ಹೆಚ್ಚಿನ ಗಮನನೀಡಿವೆ. ಅಲ್ಲಿ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ, ಚಾರ್ಜಿಂಗ್ ಸ್ಟೇಷನ್ಗಳನ್ನು ಶೀಘ್ರಗತಿಯಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಆರಂಭಿಸಲು ಪ್ರೋತ್ಸಾಹಿಸಲಾಗುತ್ತಿದೆ. 2030ರ ವೇಳೆಗೆ ಚೀನಾದಲ್ಲಿ ಶೇ 40ರಷ್ಟು ಕಾರುಗಳು ವಿದ್ಯುತ್ ಚಾಲಿತ ಆಗಿರುತ್ತವೆ.
ಚಿಲ್ಲರೆ ಹಣದುಬ್ಬರದ ತೀವ್ರ ಹೆಚ್ಚಳದಿಂದ ಭಾರತದಲ್ಲಿ ಕೌಟುಂಬಿಕ ಸರಾಸರಿ ಆಯವ್ಯಯವೂ ಹೆಚ್ಚಾಗಿದೆ. ಅಡುಗೆ ಅನಿಲ ದರ 2021ರ ಜನವರಿಯಿಂದ ಅಕ್ಟೋಬರ್ ಅವಧಿಯಲ್ಲಿ ಶೇ 40ರಷ್ಟು ಹೆಚ್ಚಾಗಿದೆ. 30 ಕೋಟಿ ಅಡುಗೆ ಅನಿಲ ಗ್ರಾಹಕರನ್ನು ಹೊಂದಿರುವ ಭಾರತದಲ್ಲಿ ಇದು ವ್ಯಕ್ತಿಗತವಾಗಿ ಹಣಕಾಸು ಕೊರತೆ ಉಂಟುಮಾಡುತ್ತದೆ. ಇದಕ್ಕೆ ಕೆಲವು ಆಡಳಿತ ನೀತಿಗಳ ಲೋಪಗಳೂ ಕಾರಣವಾಗಿವೆ. ಸರ್ಕಾರವು ಅಡುಗೆ ಅನಿಲ ಸ್ಟೌವ್ಗಳ ಬಳಕೆಯನ್ನು ಹೆಚ್ಚಿಸಲು ಉತ್ತೇಜನ ನೀಡಿದೆ. ಇದರ ಬದಲು ವಿದ್ಯುತ್ ಅಡುಗೆ ಸ್ಟೌವ್ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಲ್ಲಿ ಆಮದು ಬೇಡಿಕೆಯ ಪ್ರಮಾಣವೂ ಕಡಿಮೆಯಾಗುತ್ತಿತ್ತು ಮತ್ತು ಸಾಧಾರಣ ಗ್ರಾಹಕರಿಗೆ ಬೆಲೆ ಏರಿಕೆಯ ಹೊರೆಯೂ ಹೆಚ್ಚಾಗುತ್ತಿರಲಿಲ್ಲ. ಏತನ್ಮಧ್ಯೆ, ಅಡುಗೆ ಎಣ್ಣೆಯ ಬೆಲೆಗಳು ತೀವ್ರ ಹೆಚ್ಚಳ ಕಂಡಿವೆ. ಪ್ಯಾಕ್ ಆಗಿರುವ ಸಾಸಿವೆ ಎಣ್ಣೆ ಮತ್ತು ವನಸ್ಪತಿಯ ದರಗಳು ದೆಹಲಿಯಲ್ಲಿ ಜೂನ್ 2020ರಿಂದ ಜೂನ್ 21ರ ಅವಧಿಯಲ್ಲಿ ಶೇ 30ರಷ್ಟು ಹೆಚ್ಚಾಗಿದೆ. ಸೂರ್ಯಕಾಂತಿ ಎಣ್ಣೆ ಬೆಲೆ ಶೇ 40ರಷ್ಟು ಹೆಚ್ಚಾಗಿದೆ.
ಇದಕ್ಕೆ ಮೂಲ ಕಾರಣ ತಾಳೆ ಎಣ್ಣೆಯ ಆಮದಿನ ಮೇಲೆ ಹೆಚ್ಚು ಅವಲಂಬಿಸಿರುವುದು. ಜೈವಿಕ ತೈಲ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಿರುವುದೂ ಒಂದು ಕಾರಣ ಇರಬಹುದು. ಸಾಮಾನ್ಯ ಸಂದರ್ಭಗಳಲ್ಲಿ ಆಡಳಿತ ನೀತಿ ನಿರೂಪಕರು ತೈಲ ಬೀಜಗಳ ಸರಾಸರಿ ಇಳುವರಿಯನ್ನು ಹೆಚ್ಚಿಸಲು ಕ್ರಮ ಕೈಗೊಂಡು, ಆಮದು ಸುಂಕವನ್ನು ಕಡಿಮೆ ಮಾಡುತ್ತಿದ್ದರು. ಖಾದ್ಯ ತೈಲದ ಬೇಡಿಕೆಯನ್ನು ಸ್ಥಳೀಯವಾಗಿಯೇ ಉತ್ಪಾದಿಸಲಾಗುವ ತೈಲಗಳತ್ತ, ಉದಾಹರಣೆಗೆ ಸಾಸಿವೆ ಮತ್ತು ಸೂರ್ಯಕಾಂತಿ ಎಣ್ಣೆ, ಹೊರಳಿಸಲು ಪ್ರಚಾರ ಕೈಗೊಂಡಿದ್ದಲ್ಲಿ ಅಂತಾರಾಷ್ಟ್ರೀಯ ಬೆಲೆಗಳೊಡನೆ ಇರುವ ಸಂಪರ್ಕವನ್ನು ಕಡಿತಗೊಳಿಸಬಹುದಿತ್ತು. ಈಗ ನಾವು ತಾಳೆ ಎಣ್ಣೆ ಪ್ಲಾಂಟೇಷನ್ಗಳನ್ನು ಹೆಚ್ಚಿಸುವ ಸಲುವಾಗಿ ಈಶಾನ್ಯ ರಾಜ್ಯಗಳಲ್ಲಿ ಅರಣ್ಯಪ್ರದೇಶಗಳನ್ನು ತೆರವುಗೊಳಿಸುತ್ತಿದ್ದೇವೆ. ಇಷ್ಟೇ ಅಲ್ಲದೆ, ಸಾಧಾರಣ ತರಕಾರಿ ಬೆಲೆಗಳೂ ಮುಗಿಲುಮುಟ್ಟಿವೆ. ನಿತ್ಯ ಬಳಕೆಯ ಪದಾರ್ಥಗಳು ಮತ್ತು ಗ್ರಾಹಕ ವಸ್ತುಗಳ ಬೆಲೆಗಳು ಸಹ ಕಳೆದ ಹಲವು ವರ್ಷಗಳಲ್ಲಿ ಕೈಗೆಟುಕದಂತಾಗಿವೆ. ಒಟ್ಟಾರೆ ಹೇಳುವುದಾದರೆ ಈ ಎಲ್ಲ ಬೆಳವಣಿಗೆಗಳಿಂದ ಭಾರತೀಯರು ಬಡತನದ ಕೂಪಕ್ಕೆ ತಳ್ಳಲ್ಪಡುತ್ತಿದ್ದಾರೆ. ಭಾರತದ ರೈತನ ಸರಾಸರಿ ನಿವ್ವಳ ಆಸ್ತಿ 2013-19ರ ಅವಧಿಯಲ್ಲಿ ಶೇ 33.8ರಷ್ಟು ಕುಸಿದಿದೆ. ಒಬ್ಬ ವ್ಯಾಪಾರಿಯ ಸರಾಸರಿ ನಿವ್ವಳ ಆಸ್ತಿ ಶೇ 30.5ರಷ್ಟು ಕುಸಿದಿದೆ.
ಈ ಕೊರತೆಯನ್ನು ಸರಿದೂಗಿಸಲು ಭಾರತದ ಪ್ರಜೆಗಳು ವ್ಯಕ್ತಿಗತವಾಗಿ ಸಾಲಕ್ಕೆ ಮೊರೆ ಹೋಗುತ್ತಿದ್ದಾರೆ. 2012 ರಿಂದ 2018ರ ಅವಧಿಯಲ್ಲಿ, ಕೋವಿದ್ 19 ಅಪ್ಪಳಿಸುವ ಮುನ್ನ, ಸಾಲದ ಹೊರೆ ಹೊತ್ತ ಭಾರತದ ಕುಟುಂಬಗಳ ಪ್ರಮಾಣ ತೀವ್ರ ಹೆಚ್ಚಳ ಕಂಡಿತ್ತು. 2018ರಲ್ಲಿ ಸಾಲದ ಹೊರೆ ಇರುವ ಗ್ರಾಮೀಣ ಕುಟುಂಬಗಳು ಶೇ 35ರಷ್ಟು, ನಗರ ಕುಟುಂಬಗಳು ಶೇ 22.4ರಷ್ಟಾಗಿತ್ತು. ಭಾರತದ ಗ್ರಾಮೀಣ ಕುಟುಂಬಗಳ ಸರಾಸರಿ ಸಾಲದ ಮೊತ್ತ 59,728 ರೂ ಆಗಿತ್ತು. ನಗರ ಪ್ರದೇಶಗಳಲ್ಲಿ ಸಾಲದ ಹೊರೆ ಇದರ ಎರಡರಷ್ಟಾಗಿತ್ತು. ಹೊಸದಾಗಿ ಸಾಲಕ್ಕೆ ಅರ್ಜಿ ಸಲ್ಲಿಸುವ ಕಡುಬಡವರಿಗೆ ಪೂರೈಸಲಾಗದ ಷರತ್ತುಗಳನ್ನು ಎದುರಿಸಬೇಕಾಯಿತು. ಏಪ್ರಿಲ್-ಜೂನ್ 2019ರ ವೇಳೆಗೆ ಹೊಸ ಸಾಲಗಾರರ ಪೈಕಿ ಶೇ 44.8ರಷ್ಟು ಹೆಚ್ಚಿನ ಸಾಲಭಯ ಎದುರಿಸುವ ಗುಂಪಿಗೆ ಸೇರಿದವರಾಗಿದ್ದರು. ಇಂತಹ ಜನರಿಗೆ ಸಾಲದ ಮೇಲೆ ಶೇ 25 ರಿಂದ 40ರವರೆಗೆ ಬಡ್ಡಿ ವಿಧಿಸಲಾಗುತ್ತಿದ್ದು, ಸಾಲ ಮರುಪಾವತಿಗಾಗಿ ಏಜೆಂಟರು ಇವರ ಬೆನ್ನಟ್ಟಿ ಹೋಗುತ್ತಿದ್ದಾರೆ. ಇದರ ಪರಿಣಾಮವಾಗಿಯೇ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಬಳಿ ಇರುವ ಚಿನ್ನವನ್ನು ಅಡವಿಟ್ಟು ಸಾಲ ಪಡೆಯುತ್ತಿದ್ದಾರೆ. 2020ರ ಆಗಸ್ಟ್ನಿಂದ ಜುಲೈ 2021ರ ಅವಧಿಯಲ್ಲಿ ಚಿನ್ನದ ಸಾಲಗಳ ಪ್ರಮಾಣ ಶೇ 77.4ರಷ್ಟು ಹೆಚ್ಚಾಗಿದೆ.
ಈ ವಿಷವರ್ತುಲದಲ್ಲಿ ಸಿಲುಕಿದ ದೇಶ ಇಂದು ಸಾಮೂಹಿಕ ಬಡತನವನ್ನು ಎದುರಿಸುತ್ತಿದೆ. 2020ರಲ್ಲಿ 59 ದಶಲಕ್ಷದಷ್ಟಿದ್ದ ಬಡವರ (ದಿನಕ್ಕೆ ಎರಡು ಡಾಲರ್ಗಿಂತಲೂ ಕಡಿಮೆ ಇರುವವರು) ಸಂಖ್ಯೆ 2021ರಲ್ಲಿ 134 ದಶಲಕ್ಷದಷ್ಟಾಗಿದೆ. ಮಧ್ಯಮ ವರ್ಗಗಳ ಸಂಖ್ಯೆ ಕಡಿಮೆಯಾಗುತ್ತಿದೆ. 2020ರಲ್ಲಿ 99 ದಶಲಕ್ಷದಷ್ಟಿದ್ದ ಮಧ್ಯಮ ವರ್ಗಗಳ ಸಂಖ್ಯೆ 2021ರಲ್ಲಿ 66 ದಶಲಕ್ಷಕ್ಕೆ ಕುಸಿದಿದೆ (ಪಿಇಡಬ್ಲ್ಯು ಸಂಶೋಧನೆ). ಈ ಎಲ್ಲ ಬೆಳವಣಿಗೆಗಳೂ ತೀವ್ರವಾದ ಅಸಮಾನತೆಯ ವಾತಾವರಣದಲ್ಲೇ ಕಂಡುಬಂದಿದ್ದು 2017ರ ವೇಳೆಗೆ ಭಾರತದ ಶೇ 1ರಷ್ಟು ಮೇಲ್ವರ್ಗದ ಜನರು ಶೇ 79ರಷ್ಟು ರಾಷ್ಟ್ರೀಯ ಸಂಪತ್ತಿನ ಒಡೆಯರಾಗಿದ್ದಾರೆ. ಬಹುಶಃ ಭರವಸೆಯನ್ನೇ ಕಳೆದುಕೊಳ್ಳುವಂತಾಗಿದೆ. ಮುಂದಿನ ಹಾದಿಯಲ್ಲಿ ಭಾರತಕ್ಕೆ ಹೊಸ ಪಯಣವನ್ನು ಸಿದ್ಧಪಡಿಸಬೇಕಿದೆ. ಈ ಪಯಣದಲ್ಲಿ ಆಡಳಿತ ನೀತಿ ನಿರೂಪಕರು ಸರಬರಾಜು ಕೇಂದ್ರಿತ ಕ್ರಮಗಳನ್ನು ಕೈಬಿಟ್ಟು ( ಉದಾಹರಣೆಗೆ ಕಾರ್ಪೋರೇಟ್ ಉದ್ಯಮಿಗಳಿಗೆ ತೆರಿಗೆ ರಿಯಾಯಿತಿ, ರಾಷ್ಟ್ರದ ಸಂಪತ್ತಿನ ನಗದೀಕರಣ, ಎಂಎಸ್ಎಂಇ ಗಳಿಗೆ ಹೊರೆ ಹೊರಿಸುವುದು ಇತ್ಯಾದಿ) ಬೇಡಿಕೆಯನ್ನು ಹೆಚ್ಚಿಸುವ ಕ್ರಮಗಳನ್ನು ಕೈಗೊಳ್ಳುವ ಮೂಲಕ ಶ್ರೀಸಾಮಾನ್ಯನಿಗೆ ನೆರವಾಗಬೇಕಿದೆ.
ಕಳೆದ ಒಂದು ದಶಕದಲ್ಲಿ ನಮ್ಮ ಆಡಳಿತ ನೀತಿ ನಿರೂಪಕರು ಭಾರತದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು, ಉದ್ಯೋಗಾವಕಾಶಗಳನ್ನು ಕಲ್ಪಿಸಲು ಮತ್ತು ರೈತರ ಆದಾಯವನ್ನು ಹೆಚ್ಚಿಸಲು ನೂರಾರು ನಿಷ್ಪ್ರಯೋಜಕ ನೀತಿಗಳನ್ನು ಜಾರಿಗೊಳಿಸಿದ್ದಾರೆ. ಏತನ್ಮಧ್ಯೆ, ಬಾಂಗ್ಲಾದೇಶ ಉಡುಪುಗಳನ್ನು ತಯಾರಿಸುವುದರಲ್ಲಿ ತೊಡಗಿದೆ. ಈಗ ಬಾಂಗ್ಲಾದೇಶ ನಮಗಿಂತಲೂ ಉತ್ತಮ ಸ್ಥಿತಿಯಲ್ಲಿದೆ. ಭಾರತವನ್ನು ಈ ಸ್ಥಿತಿಗೆ ತಂದು ನಿಲ್ಲಿಸಿರುವ ಆಡಳಿತ ನೀತಿಯ ನಿಷ್ಪ್ರಯೋಜಕತೆಯ ಬಗ್ಗೆ ಮತ್ತು ಸರ್ಕಾರದ ಅಸಡ್ಡೆ ಹಾಗೂ ಪ್ರಮಾದಗಳ ಒಂದು ಸರಳ ಉದಾಹರಣೆಯನ್ನು ನೀಡಬಹುದು. ನೋಟು ಅಮಾನ್ಯೀಕರಣದಿಂದ ಪಲ್ಲಟಗೊಂಡ, ಸಂಕೀರ್ಣವಾದ ಜಿಎಸ್ಟಿ ಪದ್ಧತಿಯಿಂದ ಪ್ರಕ್ಷುಬ್ಧಗೊಂಡ ಎಂಎಸ್ಎಂಇ ವಲಯ ಕಳೆದ ಐದು ವರ್ಷಗಳಿಂದ ದುರ್ಗಮ ಹಾದಿಯಲ್ಲಿ ಕ್ರಮಿಸುತ್ತಿದೆ. ಏತನ್ಮಧ್ಯೆ, ಅರ್ಥವ್ಯವಸ್ಥೆ ನಿಧಾನಗತಿಯಲ್ಲಿ ಸಾಗುತ್ತಿದ್ದು ಬೇಡಿಕೆಗಳನ್ನು ಹೆಚ್ಚಿಸುವ ಯಾವುದೇ ನೀತಿಗಳು ಕಾಣುತ್ತಿಲ್ಲ. ಇದರಿಂದ ಉದ್ಯಮಗಳ ಆದಾಯ ಕಡಿಮೆಯಾಗುತ್ತಿದ್ದು ಸತತವಾಗಿ ಕುಸಿಯುತ್ತಿವೆ. ತತ್ಪರಿಣಾಮ ಅಲ್ಪಸಂಖ್ಯಾಸ್ವಾಮ್ಯತೆಯತ್ತ ಸಾಗುತ್ತಿದೆ. ಕೆಲವೇ ಉತ್ಪಾದಕರು ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ. ಇಲ್ಲಿ ಎಂಎಸ್ಎಂಇಗಳಿಗೆ ಅವಕಾಶವೇ ಇಲ್ಲವಾಗಿದ್ದು, ಸರ್ಕಾರಗಳು ಸರಬರಾಜು ಮಾರುಕಟ್ಟೆಯ ಮೇಲೆ ಕಾರ್ಪೋರೇಟ್ ಉದ್ಯಮಿಗಳ ಹಿಡಿತ ಬಿಗಿಯಾಗುತ್ತಿರುವುದನ್ನೇ ಸಂಭ್ರಮಿಸುತ್ತಿವೆ.
ಕೆಲವು ನಿರ್ದಿಷ್ಟ ವಲಯಗಳಲ್ಲಿ, ಒಟ್ಟು ಆದಾಯದಲ್ಲಿನ ಮೊದಲ ಐದು ಉದ್ಯಮಗಳ ಪಾಲು ಇಂತಿದೆ. ಗ್ರಾಹಕ ವಸ್ತುಗಳು ಶೇ 64, ಸಿಮೆಂಟ್ ಶೇ 65, ಮೂಲ ಸೌಕರ್ಯಗಳು ಶೇ 73, ವಿದ್ಯುಚ್ಚಕ್ತಿ ಶೇ 81, ವಿದ್ಯುತ್ ಉಪಕರಣಗಳು ಶೇ 75. ಇವೆಲ್ಲದರ ನಡುವೆ ಭಾರತದ ಆಡಳಿತ ನೀತಿ ನಿರೂಪಕರು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎಂಎಸ್ಎಂಇ ವಲಯಕ್ಕೆ ಹೆಚ್ಚಿನ ಹಣಕಾಸು ನೆರವು ನೀಡುವ ಮೂಲಕ ತೆರಿಗೆ ಪದ್ಧತಿಯನ್ನು ಮತ್ತಷ್ಟು ಸರಳೀಕರಿಸಬಹುದಿತ್ತು. ಸರಿಪಡಿಸಲು ಇನ್ನೂ ಸಮಯ ಇದೆ.
(ಲೇಖಕರು ಬಿಜೆಪಿ ಸಂಸದರು ಮತ್ತು ಗ್ರಾಮೀಣ ಪ್ರಣಾಳಿಕೆಯ ರಚಯಿತರು).
ಫಿರೋಜ್ ವರುಣ್ ಗಾಂಧಿ- Policymakers must break India’s cycle of poverty
ಇಂಡಿಯನ್ ಎಕ್ಸ್ಪ್ರೆಸ್ 30-11-2021
ಅನುವಾದ : ನಾ ದಿವಾಕರ