ಅಮರನಾಥ ಯಾತ್ರೆ ಕೈಗೊಂಡಿದ್ದ ಯಾತ್ರಾರ್ಥಿಯೊಬ್ಬರು ಹಿಂತಿರುಗುತ್ತಿದ್ದಾಗ ಶುಕ್ರವಾರ ತಡರಾತ್ರಿ ಕಾಲು ಜಾರಿ 300 ಅಡಿ ಆಳಕ್ಕೆ ಬಿದ್ದಿದ್ದಾರೆ. ಪರಿಣಾಮ ಅವರು ಅಲ್ಲೇ ಮೃತಪಟ್ಟಿದ್ದಾರೆ.
50 ವರ್ಷದ ಯಾತ್ರಾರ್ಥಿ ವಿಜಯ್ ಕುಮಾರ್ ಶಾ ಎಂಬುವವರು ಅಮರನಾಥನ ದರ್ಶನ ಪಡೆದು ಹಿಂತಿರುಗುತ್ತಿದ್ದಾಗ ಆಳದ ಕಂದಕಕ್ಕೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕಾಳಿಮಾತೆಯ ಬಳಿ ಘಟನೆ ಸಂಭವಿಸಿದೆ ಎಂದು ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ.
ಮೃತ ವಿಜಯ್ ಕುಮಾರ್ ಶಾ ಅವರು ಬಿಹಾರದ ರೋಹ್ಲಾಸ್ ಜಿಲ್ಲೆಯ ತುಂಬಾ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.
“ವಿಜಯ್ ಕುಮಾರ್ ಅಮರನಾಥ ಯಾತ್ರೆ ಕೈಗೊಂಡಿದ್ದರು. ಅಮರನಾಥನ ದರ್ಶನ ಪಡೆದು ಮಮತಾ ಕುಮಾರಿ ಜೊತೆಗೂಡಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಕಾಳಿಮಾತೆ ಗುಹೆಯ ಬಳಿ ಜಾರಿ 300 ಅಡಿ ಆಳಕ್ಕೆ ಬಿದ್ದಿದ್ದರು. ಕೂಡಲೇ ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸಿ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಆದರೆ, ವಿಜಯ್ ಕುಮಾರ್ ಕೊನೆಯುಸಿರೆಳೆದಿದ್ದಾರೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್ ತಂತ್ರಗಾರಿಕೆಗೆ ಬಿಜೆಪಿ ಜೆಡಿಎಸ್ ಕಂಗಾಲು.. ಸಭೆ ಮೇಲೆ ಸಭೆ..
ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿದ್ದ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಮಳೆ ಕಡಿಮೆಯಾದ ಕಾರಣ ಶುಕ್ರವಾರದಿಂದ (ಆ.18ರಿಂದ) ಯಾತ್ರೆಯನ್ನು ಮತ್ತೆ ಆರಂಭಿಸಲಾಯಿತು.
ಜುಲೈ 1ರಿಂದ ಅಮರನಾಥ ಯಾತ್ರೆ ಆರಂಭವಾದಾಗಿನಿಂದ ಇಲ್ಲಿಯವರೆಗೆ 3 ಲಕ್ಷಕ್ಕೂ ಹೆಚ್ಚು ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದಾರೆ.