2021ರ ಸಾಲಿನಲ್ಲಿ ಜಗತ್ತಿನಾದ್ಯಂತ ಒಟ್ಟು 488 ಪತ್ರಕರ್ತರನ್ನು ಜೈಲು ಶಿಕ್ಷೆಗೆ ಗುರಪಡಿಸಲಾಗಿದೆ ಮತ್ತು 46 ಪತ್ರಕರ್ತರನ್ನು ಅವರ ವೃತ್ತಿಯ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂದು ಪ್ಯಾರಿಸ್ ಮೂಲದ ಆರ್ಎಸ್ಫ್ ಎಂಬ ಸರ್ಕಾರಿಯೇತರ ಸಂಸ್ಥೆಯೊಂದರ ಅಧ್ಯಯನ ತಿಳಿಸಿದೆ.
ಆರ್ಎಸ್ಎಫ್ ಕಳೆದ 25 ವರ್ಷಗಳಿಂದ ಈ ಅಧ್ಯಯನ ಮಾಡಿಕೊಂಡು ಬರುತ್ತಿದ್ದು, ಪ್ರತಿ ವರ್ಷದ ಅಂತ್ಯದಲ್ಲಿ ವೃತ್ತಿಯ ಕಾರಣಕ್ಕೆ ಜೈಲು ಪಾಲಾದ ಹಾಗೂ ಹತ್ಯೆಗೆ ಒಳಗಾದ ಪತ್ರಕರ್ತರ ಸಂಖ್ಯೆಯನ್ನು ಬಿಡುಗಡೆ ಮಾಡುತ್ತಿದೆ. ಅಂದಹಾಗೆ RSF ಎಂದರೆ Reporters Without Borders ಎಂದರ್ಥ.
ವೃತ್ತಿಯ ಕಾರಣಕ್ಕೆ 46 ಪತ್ರಕರ್ತರ ದಾರುಣ ಹತ್ಯೆ
ಆರ್ಎಸ್ಎಫ್ ಹೇಳಿಕೆ ಪ್ರಕಾರ ತನ್ನ 25 ವರ್ಷದ ಅಧ್ಯಯನದಲ್ಲಿ ಇದೇ ಮೊದಲ ಬಾರಿಗೆ ಒಂದು ಪ್ರಸಕ್ತ ಸಾಲಿನಲ್ಲಿ ಅತಿ ಕಡಿಮೆ ಎಂದರೆ 46 ಪತ್ರಕರ್ತರನ್ನು ಹತ್ಯೆಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಆದರೆ 2021ನೇ ಸಾಲಿನಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಎಂದರೆ 488 ಪತ್ರಕರ್ತರನ್ನು ತಮ್ಮ ವೃತ್ತಿಯ ಕಾರಣಕ್ಕೆ ಬಂಧಿಸಲಾಗಿದೆ ಎಂದು ಹೇಳಿದೆ. ಆದರೆ ಮ್ಯಾನ್ಮರ್, ಬೆಲರಸ್, ಹಾಂಕ್ ಕಾಂಗ್ ನಂಥಾ ದೇಶಗಳಲ್ಲಿ ಪತ್ರಕರ್ತ ಹತ್ಯೆ ಅವರ ಮೇಲಾಗುತ್ತಿರುವ ದೌರ್ಜನ್ಯಗಳ ಸಂಖ್ಯೆ ಶೇಕಡಾವಾರು 20ರಷ್ಟು ಹೆಚ್ಚಾಗಿದೆ. ಬಂಧನಕ್ಕೊಳಗಾಗಿರುವ 488 ಪತ್ರಕರ್ತರ ಪೈಕಿ 60 ಮಹಿಳಾ ಪತ್ರಕರ್ತರೂ ಇದ್ದಾರೆ. ಇದು 2020ಕ್ಕೆ ಹೋಲಿಸಿಕೊಂಡಿರೆ ಹೆಚ್ಚು ಎಂದು ತಮ್ಮ ಆಧ್ಯಯನ ವರದಿಯಲ್ಲಿ ತಿಳಿಸಿದೆ.
ಚೀನಾದಲ್ಲಿ ಅತಿ ಹೆಚ್ಚು ಪತ್ರಕರ್ತರ ಬಂಧನ
ಇನ್ನು ಆರ್ಎಸ್ಎಫ್ ಅಧ್ಯಯನ ವರದಿಯ ಪ್ರಕಾರ ಚೀನಾದಲ್ಲಿ ಅತಿ ಹೆಚ್ಚು ಪತ್ರಕರ್ತರನ್ನು ತಮ್ಮ ವೃತ್ತಿಯ ಕಾರಣಕ್ಕೆ ಬಂಧನದಲ್ಲಿ ಇಡಲಾಗಿದೆ. 488 ಮಂದಿಯ ಪೈಕಿ 127 ಮಂದಿಯನ್ನು ಚೀನಾ ಸರ್ಕಾರ ʻಸ್ವಾತಂತ್ರ್ಯʼದ ಬಗ್ಗೆ ಮಾತನಾಡಿದ್ದಕ್ಕೆ, ಸುದ್ದಿ ಮಾಡಿದಕ್ಕೆ ಸೆರೆಮನೆ ಸೇರುವಂತೆ ಮಾಡಿದೆ ಎಂದು ಆರ್ಎಸ್ಎಫ್ ವರದಿ ಹೇಳಿದೆ.

ನಂತರದ ಸ್ಥಾನದಲ್ಲಿ ಮ್ಯಾನ್ಮರ್ ಇದೆ. ಮ್ಯಾನ್ಮರ್ನಲ್ಲಿ 53 ಮಂದಿ, ಉಳಿದಂತೆ ವಿಯೆಟ್ನಾಂನಲ್ಲಿ 43 ಮಂದಿ, ಬೆಲರಸ್ನಲ್ಲಿ 32 ಮಂದಿ ಹಾಗೂ ಸೌದಿ ಆರೇಬಿಯಾದಲ್ಲಿ 31 ಮಂದಿಯನ್ನು ತಮ್ಮ ವೃತ್ತಿಯ ಕಾರಣಕ್ಕೆ ಬಂಧಿಸಲಾಗಿದೆ. 2016ರಕ್ಕೆ ಹೋಲಿಸಿಕೊಂಡರೆ ಸಿರಿಯಾ, ಇರಾಖ್, ಯೆಮನ್ ದೇಶಗಳಲ್ಲಿ ಅತಿ ಹೆಚ್ಚು ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
2021ರಲ್ಲಿ ಭಾರತದಲ್ಲಿ 4 ಪತ್ರಕರ್ತರ ಹತ್ಯೆ
ಇನ್ನು 2021ರಲ್ಲಿ ಹತ್ಯೆ ಮಾಡಲಾಗಿರುವ 46 ಪತ್ರಕರ್ತರನ್ನು ಹಿಂಸಾತ್ಮಕವಾಗಿ ಹತ್ಯೆ ಮಾಡಲಾಗಿದೆ. ಜನರ ಹಕ್ಕು, ಪ್ರಭುತ್ವದ ಮೌಲ್ಯಗಳು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ಮಾತನಾಡಿದ ಹಿನ್ನೆಲೆ ರಾಜಕೀಯ ಶಕ್ತಿಗಳಿಂದ 46 ಪತ್ರಕರ್ತರನ್ನು ಕೊಲೆ ಮಾಡಲಾಗಿದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. ಮೆಕ್ಸಿಕೋ, ಅಫ್ಘಾನಿಸ್ತಾನದಲ್ಲಿ ಸಮವಾಗಿ ಏಳು ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ. ಉಳಿದಂತೆ ಯೆಮನ್ ಹಾಗೂ ಭಾರತದಲ್ಲಿ ಸಮವಾಗಿ ನಾಲ್ಕು ಪತ್ರಕರ್ತರ ಹತ್ಯೆ ಅವರ ರಾಜಕೀಯ ನಿಲುವಿನ ಕಾರಣಕ್ಕೆ ನಡೆಸಲಾಗಿದೆ.
ಹತ್ಯೆಯಾದ 46 ಪತ್ರಕರ್ತರ ಪೈಕಿ ಮೂರು ಪತ್ರಕರ್ತರ ಸಾವಿನ ಹಿಂದಿನ ರಹಸ್ಯ ಇನ್ನೂ ನಿಗೂಢವಾಗಿಯೇ ಉಳಿದಿದೆ. ಮೆಕ್ಸಿಕೋ, ಶ್ರೀಲಂಕ ಹಾಗೂ ಸಿರಿಯಾದಲ್ಲಿ ಸಾವನ್ನಪ್ಪಿದ್ದ ಸಮವಾಗಿ ಮೂವರು ಪತ್ರಕರ್ತರ ಸಾವಿಗೆ ಏನು ಕಾರಣ ಎಂಬುವುದು ಇನ್ನೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ ಎಂದು ಆರ್ಎಸ್ಎಫ್ ತನ್ನ ಅಧ್ಯಯನ ವರದಿಯಲ್ಲಿ ಹೇಳಿದೆ.






