ಒಬ್ಬ ಶಾಸಕ ಪುಂಡಪೋಕರಿಗಳು ನೇತೃತ್ವ ವಹಿಸಿದರೆ, ಅದೂ ಅಲ್ಲಿ ಧರ್ಮಸೂಕ್ಷ್ಮ ವಿಷಯಗಳಿದ್ದರೆ ಉದ್ವಿಗ್ನತೆ ಅಥವಾ ದೊಂಬಿ ಗ್ಯಾರಂಟಿ. ಗುರುವಾರ ಸಾಯಂಕಾಲ ಗಂಗಾವತಿಯಲ್ಲಿ ನಡೆದಿದ್ದು ಇದೇ.
ಇಲ್ಲಿನ ಗಲಾಟೆಕೋರ ಹಿಂದುತ್ವವಾದಿ ಸಂಘಟನೆಗಳ ಸದಸ್ಯರಿಗೆ(ಇಲ್ಲಿ ಪಕ್ಕದ ಕಿಷ್ಕಿಂದೆ ಬೆಟ್ಟದಲ್ಲಿ ಮಂಗಗಳ ಹಾವಳಿ ಜಾಸ್ತಿ. ಅದಕ್ಕೆ ಇವರನ್ನು ವಾನರಪಡೆ ಎನ್ನುತ್ತಾರೆ) ಏಕಾಏಕಿ ಮೃತ ಸೇನಾ ನಾಯಕ ಬಿಪಿನ್ ರಾವತ್ ಅವರ ಬಗ್ಗೆ ಗೌರವ ಉಕ್ಕಿ ಬಂದಿದೆ. ಅವರು ಗಂಗಾವತಿಯ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿಯವರನ್ನು ಭೇಟಿಯಾಗಿ, ಇಸ್ಲಾಂಪುರ ವೃತ್ತಕ್ಕೆ ಬಿಪಿನ್ ರಾವತ್ ವೃತ್ತ ಎಂದು ನಾಮಕರಣ ಮಾಡೋಣ ಅಣ್ಣಾ ಎಂದರು. ಈ ಅಣ್ಣ ಮಹಾಶಯರು ʼಹಾಗೆಲ್ಲ ನಾವೇ ವೃತ್ತಕ್ಕೆ ಹೆಸರಿಡಲು ಬರಲ್ರೋ. ನಗರಸಭೆಯ ಸಾಮಾನ್ಯಸಭೆಯಲ್ಲಿ ಅದಕ್ಕೆ ಮಂಜೂರಾತಿ ಸಿಗಬೇಕುʼ ಎಂದು ಹೇಳಿ ಬಂದವರನ್ನು ಮನೆಗೆ ಕಳಿಸಬೇಕಿತ್ತು.
ಆದರೆ ಶಾಸಕ ಮುನವಳ್ಳಿ ಆ ಉನ್ಮತ್ತ ಗುಂಪಿನ ನಾಯಕತ್ವ ವಹಸಿ, ʼಬರ್ರೋ ಬರ್ರ್ರೋ, ಹೆಸರು ಇಟ್ಟು ಬಿಡೋಣʼ ಎಂದು ಇನ್ನಷ್ಟು ಉನ್ಮಾದ ತುಂಬಿದರು. ಎಂದಿನಂತೆ ಭಾರತ್ ಮಾತಾ ಕಿ ಜೈ ಎಂದು ಅರುಚಿದ ಉನ್ಮಾದಿತ ಗುಂಪು ಶಾಸಕರ ನೇತೃತ್ವದಲ್ಲಿ ಇಸ್ಲಾಂಪುರ ವೃತ್ತ ತಲುಪಿತು.
ಇಸ್ಲಾಂಪುರ ಮುಸ್ಲಿಮ ಕುಟುಂಬಗಳೇ ಜಾಸ್ತಿ ಇರುವ ಪ್ರದೇಶ. ಹಾಗಾಗಿ ಈ ವೃತ್ತವನ್ನೇ ಆಯ್ಕೆ ಮಾಡಿಕೊಂಡಿದ್ದರು. ಗಂಗಾವತಿ ಪಕ್ಕದ ಕಿಷ್ಕಿಂದೆ ಬೆಟ್ಟದಲ್ಲಿ ಹನುಮಮಾಲಾಧಾರಿಗಳ ಅರ್ಭಟ ನಡೆಯುತ್ತಿರುವ ಈ ಸಂದರ್ಭದಲ್ಲೇ ಈ ಕಾನೂನುಬಾಹಿರ ಕೆಲಸಕ್ಕೆ ಶಾಸಕ ಮುನವಳ್ಳಿ ಮುಂದಾಗಿದ್ದರ ಹಿಂದೆ ರಾಜಕೀಯ ಲಾಭದ ಉದ್ದೇಶವಿದೆ.
ಬಿಪಿನ್ ರಾವತ್ ವೃತ್ತ ಎಂದು ಬರೆದ ಫ್ಲೆಕ್ಸ್ ಅನ್ನು ವೃತ್ತದಲ್ಲಿ ಕಟ್ಟಿ, ರಾವತ್ ಅವರ ಫೋಟೊ ಇಟ್ಟು ಕೇಕೆ ಹಾಕಿದರು. ಸ್ಥಳೀಯ ನಿವಾಸಿಗಳು ಇದಕ್ಕೆ ಆಕ್ಷೇಪಿಸಿ, ʼಬೇರೆ ಕಡೆ ರಾವತ್ ಅವರ ಪ್ರತಿಮೆ ನಿಲ್ಲಿಸಿ, ಅಲ್ಲಿ ರಾವತ್ ವೃತ್ತ ಎಂದು ಹೆಸರಿಡಬಹುದುʼ ಎಂದು ಅರ್ಹ ಸಲಹೆ ನೀಡಿದರು. ಆದರೆ, ಶಾಸಕರ ಬೆಂಬಲವಿದ್ದ ಉನ್ಮತ್ತ ಗುಂಪು ಜಗಳಕ್ಕೆ ಮುಂದಾದಾಗ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಅಷ್ಟೊತ್ತಿಗೆ ಕತ್ತಲಾಗುತ್ತ ಬಂದಿತ್ತು. ಸೂಕ್ಷ್ಮ ಅರಿತ ಪೊಲೀಸರು ಗುಂಪನ್ನು ಚದುರಿಸಿ 144 ಸೆಕ್ಷನ್ ಜಾರಿ ಮಾಡಿದರು.
ಧಾರವಾಡಕ್ಕೆ ಕೆಲಸದ ನಿಮಿತ್ತ ಹೋಗಿದ್ದ ನಗರಸಭೆ ಆಯುಕ್ತರು ರಾತ್ರಿ ಗಂಗಾವತಿ ತಲುಪಿದ ನಂತರ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡರು. ಮಧ್ಯರಾತ್ರಿ ಪೊಲೀಸರ ನೆರವಿನಿಂದ ಕಾರ್ಯಾಚರಣೆಗಿಳಿದ ಆಯುಕ್ತರು ಜಾಣತನ ಉಪಯೋಗಿಸಿದರು. ಬಿಪಿನ್ ರಾವತ್ ಹೆಸರಿದ್ದ ಬ್ಯಾನರ್ ತೆಗೆಯದ ಅವರು, ಅಂತ್ಯದಲ್ಲಿದ್ದ ವೃತ್ತ ಎಂಬ ಪದವನ್ನು ಮುಚ್ಚಿ ಹಾಕಿಬಿಟ್ಟರು. ಅಲ್ಲಿಗೆ ಇಸ್ಲಾಂಪುರ ವೃತ್ತಕ್ಕೂ ಧಕ್ಕೆ ಆಗಲಿಲ್ಲ, ಬಿಪಿನ್ ರಾವತ್ ಫೋಟೊ, ಹೆಸರಿಗೂ ಅವಮಾನವಾಗಲಿಲ್ಲ.
ಸದ್ಯ ಗಂಗಾವತಿ ಶಾಂತವಾಗಿದೆ. ಗಂಗಾವತಿಯಲ್ಲಿ ಮುಸ್ಲಿಂ ಸಂಖ್ಯೆ ಗಣನೀಯ ಪ್ರಮಾಣದಲ್ಲಿಸ್ದು ಪ್ರತಿ ಸಲ ಚುನಾವಣೆ ಬರುವ ವರ್ಷ ಇಂತಹ ಕಿತಾಪತಿ ನಡೆಯುತ್ತಲೇ ಇರುತ್ತವೆ. ಇಲ್ಲಿ ಕಾಂಗ್ರಸ್ನಿಂದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸ್ಪರ್ಧೆ ಮಾಡುವುದರಿಂದ ಮತಗಳ ಧ್ರುವೀಕರಣ ಮಾಡಲು ಇಂತಹ ಕುಚೇಷ್ಟೆಗಳು ನಡೆಯುತ್ತವೆ.
2015ರಲ್ಲಿಯೇ ನಗರಸಭೆ ಇಸ್ಲಾಂಪುರ ವೃತ್ತ ಎಂದು ನಾಮಕರಣ ಮಾಡಿ ಠರಾವು ಹೊರಡಿಸಿದೆ. ಈ ಎಲ್ಲದರ ಅರಿವಿದ್ದೂ ಶಾಸಕ ಪರಣ್ಣ ಮುನವಳ್ಳಿ ಕಾನೂನುಬಾಹಿರವಾಗಿ ಒಂದು ವೃತ್ತದ ಹೆಸರು ಬದಲಿಸಲು ಯತ್ನಿಸಿದ್ದು ಬಿಪಿನ್ ರಾವತ್ ಅವರಿಗೂ ಮಾಡಿದ ಅವಮಾನ.
ವಾನರ ಸೇನೆಯ ಮಾತು ಕೇಳಿ ಶಾಸಕ ತಲೆ ತಗ್ಗಿಸುವಂತಾಗಿದೆ. ಆಯುಕ್ತರ ಸೂಕ್ಷ್ಮ ಮತ್ತು ಜಾಣ ನಡೆ ಆಗಬಹುದಾಗಿದ್ದ ಗಲಾಟೆಯನ್ನು ತಪ್ಪಿಸಿದೆ.