ಭಾರೀ ಚರ್ಚೆಗೊಳಗಾಗಿದ್ದ ಕೇರಳ ಸರ್ಕಾರ ಕಾಸರಗೋಡು ಜಿಲ್ಲೆಯ ಕೆಲವು ಹಳ್ಳಿಗಳ ಕನ್ನಡದ ಹೆಸರನ್ನು ಬದಲಾಯಿಸಲು ಮುಂದಾದ ಸುದ್ದಿ ಸತ್ಯಕ್ಕೆ ದೂರವಾದದ್ದು, ಕನ್ನಡದ ಹೆಸರು ಬದಲಾವಣೆ ಪ್ರಸ್ತಾಪ ಈಗ ಇಲ್ಲವೆಂದು ಕೇರಳದ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ರಾಜ್ಯದ ಹಲವು ನಾಯಕರು ವಿರೋಧ ವ್ಯಕ್ತಪಡಿಸಿ ಕೇರಳ ಮುಖ್ಯಮಂತ್ರಿಗೆ ಪತ್ರವೂ ಬರೆದಿದ್ದರು.
“ಕೇರಳ ವಿಧಾನ ಸಭೆಯಲ್ಲಿ ಮಂಜೇಶ್ವರದ ಶಾಸಕನೆಂಬ ನೆಲೆಯಲ್ಲಿ ಕೆಲವು ವಿಚಾರಗಳನ್ನು ನಿಮ್ಮ ಮುಂದಿಡುತ್ತೇನೆ. ಕಳೆದ ಕೆಲವು ದಿನಗಳಿಂದ ಕಾಸರಗೋಡು ಜಿಲ್ಲೆಯ ವಿವಿಧ ಪ್ರದೇಶಗಳ ಹೆಸರುಗಳನ್ನು ಬದಲಾಯಿಸಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವರುಗಳು ಈ ವಿಚಾರದಲ್ಲಿ ಟ್ಟೀಟ್ ಮಾಡುವ ಮೂಲಕ ಚರ್ಚೆ ಮಹತ್ವ ಪಡೆದುಕೊಂಡಿದೆ. ಕರ್ನಾಟಕದ ಗಡಿ ಅಭಿವೃದ್ಧಿ ಪ್ರಾಧಿಕಾರವು ಈ ವಿಚಾರದಲ್ಲಿ ಮನವಿಯನ್ನು ನೀಡಿರುವುದು ಈ ಎಲ್ಲಾ ಚರ್ಚೆಗೆ ಕಾರಣವಾಯಿತು.
ಈ ಬಗ್ಗೆ ಕೇರಳ ಮುಖ್ಯ ಮಂತ್ರಿ ಅವರ ಕಛೇರಿಯನ್ನು ಮತ್ತು ಅವರ ಪಿ ಎ ಅವರನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆಯಲಾಯಿತು. ಕಾಸರಗೋಡು ಜಿಲ್ಲಾಧಿಕಾರಿಯವರನ್ನು ಪೋನ್ ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ. ಈ ಎಲ್ಲಾ ಮಾಹಿತಿ ಪ್ರಕಾರ ಸ್ಥಳ ನಾಮ ಬದಲಾವಣೆ ಬಗ್ಗೆ ಹೊರ ಬರುವ ವಿಚಾರಗಳು ವಾಸ್ತವಕ್ಕೆ ವಿರುದ್ಧ. ಇಂತಹ ಯಾವುದೇ ಸುತ್ತೋಲೆ ಕೇರಳ ಸರಕಾರ ಹೊರಡಿಸಲಿಲ್ಲ. ಆದರೆ ರೇಶನ್ ಕಾರ್ಡ್ ನಲ್ಲಿ ಸಾಪ್ಟ್ ವೇರ್ ಕಾರಣದಿಂದ ಕೆಲವು ಹೆಸರುಗಳಲ್ಲಿ ಬದಲಾವಣೆ ಆಗಿರುವುದು ಸತ್ಯ. ಆದರೆ ಇದು ತಾಂತ್ರಿಕ ಕಾರಣದಿಂದ ಉಂಟಾದ ಲೋಪ.ಇದನ್ನು ಸರಿಪಡಿಸಲು ತುರ್ತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ” ಎಂದು ಮಂಜೇಶ್ವರಂ ಶಾಸಕ ಎಕೆ ಎಮ್ ಅಶ್ರಫ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ʼಕಾಸರಗೋಡಿನ ಗ್ರಾಮಗಳ ಕನ್ನಡ ಹೆಸರಿನ ಮಲಯಾಳೀಕರಣ ವಿಚಾರ ಮುನ್ನೆಲೆಗೆ ಬರುವುದರ ಹಿಂದೆ ಯಾವ ತಂತ್ರವಿತ್ತೋ ತಿಳಿಯದು. ಆದರೆ, ‘ಕನ್ನಡ, ಕನ್ನಡಿಗ, ಕರ್ನಾಟಕಕ್ಕೆ ಏನೋ ಅಪಚಾರವಾಗುತ್ತಿದೆ ಎಂದು ಭಾವಿಸಿ ಕೇರಳ ಸಿಎಂ ರಿಗೆ ಪತ್ರ ಬರೆಯಲಾಯಿತು. ಆದರೆ, ಅಂಥ ಪ್ರಸ್ತಾವ ಇಲ್ಲ ಎಂಬ ಕೇರಳದ ಸ್ಪಷ್ಟನೆಯು ಸಮಾಧಾನ ಮೂಡಿಸಿದೆ. ಕಾಸರಗೋಡಿನಲ್ಲಿ ಕನ್ನಡಕ್ಕೆ ಧಕ್ಕೆಯಾದರೆ ಹೋರಾಟ ನಡೆಸುವುದಾಗಿಯೂ, ಅದರ ನೇತೃತ್ವ ತಾವೇ ವಹಿಸುವುದಾಗಿಯೂ ಮಂಜೇಶ್ವರದ ಶಾಸಕ ಅಶ್ರಫ್ ಎ ಕೆ ಎಮ್ ಹೇಳಿದ್ದಾರೆ. ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅಭಿಮಾನ ಮೆರೆದಿದ್ದ ಅಶ್ರಫ್ ಹೇಳಿಕೆಯು ಮತ್ತಷ್ಟು ಸಮಾಧಾನ ತಂದಿದೆ. ಕನ್ನಡಪರವಾದ ನಿಲುವು ಪ್ರಕಟಿಸಿರುವ ಅಶ್ರಫ್ ಅವರನ್ನು ಅಭಿನಂದಿಸುತ್ತೇನೆʼ ಎಂದು ಹೇಳಿದ್ದಾರೆ.
ಸರಣಿ ಟ್ವೀಟ್ ಮಾಡಿದ ಅವರು ʼಭಾಷಾ ಸಾಮರಸ್ಯದ ವಿಚಾರದಲ್ಲಿ ಕರ್ನಾಟಕ–ಕೇರಳ ರಾಜ್ಯಗಳು ಪರಸ್ಪರ ಪೂರಕವಾಗಿ ನಡೆದುಕೊಂಡು ಬಂದಿವೆ. ಆದರೂ ಹೆಸರು ಬದಲಾವಣೆಯ ಚರ್ಚೆ ಮುನ್ನೆಲೆಗೆ ಬಂದಿದ್ದು ಹೇಗೆ, ಇದಕ್ಕೆ ಕಾರಣಗಳೇನು ಎಂಬುದನ್ನು ಪತ್ತೆ ಹಚ್ಚಬೇಕು. ಈ ಪ್ರಯತ್ನವು ಸಾಮರಸ್ಯವನ್ನು ಕೆಡಿಸುವ ಉದ್ದೇಶವನ್ನೇ ಹೊಂದಿದ್ದರೆ ಎರಡೂ ರಾಜ್ಯಗಳು ಜಾಗೃತರಾಗಬೇಕಾದ ಅಗತ್ಯವಿದೆʼ ಎಂದು ಹೇಳಿದ್ದಾರೆ.
ʼಕಾಸರಗೋಡು ಗ್ರಾಮಗಳ ಹೆಸರುಗಳ ಮಲಯಾಳೀಕರಣವನ್ನು ವಿರೋಧಿಸುವ ಮೂಲಕ ಕನ್ನಡಿಗರು ಕನ್ನಡದ ವಿಚಾರದಲ್ಲಿ ಮತ್ತೊಮ್ಮೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಈ ಬಗ್ಗೆ ಅತಿ ಶೀಘ್ರದಲ್ಲೇ ಕೇರಳ ಸರ್ಕಾರದಿಂದ ಸ್ಪಷ್ಟನೆ ಬರುವಂತೆ ಮಾಡಿದ್ದಾರೆ. ಈ ಸಾತ್ವಿಕ ಹೋರಾಟದಲ್ಲಿ ಭಾಗಿಯಾದ ಕನ್ನಡ ಮನಸ್ಸುಗಳನ್ನೂ ನಾನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆʼ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.





