ಜೆಡಿಎಸ್ ಹಮ್ಮಿಕೊಂಡಿರುವ ‘ನಮ್ಮ ಭೂಮಿ, ನಮ್ಮ ಹಕ್ಕು’ ಪಾದಯಾತ್ರೆಯ ವೇಳೆ ಬಿಡದಿಯಲ್ಲಿ ಮಾತನಾಡಿದ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ, ಬಿಡದಿ ಟೌನ್ಶಿಪ್ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಇದೇ ವೇಳೆ ತಮ್ಮ ಕುಟುಂಬದ ಆಸ್ತಿ ಹಾಗೂ ರೈತರಿಗಾಗಿ ರೂಪಿಸಿಕೊಂಡಿದ್ದ ಯೋಜನೆಗಳ ಕುರಿತು ಮುಕ್ತವಾಗಿ ಮಾತನಾಡಿದರು.ಕುಮಾರಸ್ವಾಮಿ ಕುಟುಂಬದ ಭೂಮಿ ಕುರಿತು ಕೇಳಿಬಂದ ಆರೋಪಗಳಿಗೆ ಪ್ರತಿಕ್ರಿಯಿಸಿದ ನಿಖಿಲ್, “ನನ್ನ ತಾಯಿ ಅನಿತಾ ಕುಮಾರಸ್ವಾಮಿ ಅವರ ಹೆಸರಿನಲ್ಲಿ 27 ಎಕರೆ ಮತ್ತು ನನ್ನ ಹೆಸರಿನಲ್ಲಿ 5 ಎಕರೆ ಜಮೀನಿದೆ. ಇದು ಸತ್ಯ. ಆದರೆ ನಮ್ಮ ಬಳಿ ಜಮೀನು ಇದೆ ಎಂಬ ಕಾರಣಕ್ಕೆ ಟೌನ್ಶಿಪ್ ಯೋಜನೆಯನ್ನು ವಿರೋಧಿಸುತ್ತಿಲ್ಲ. ಇದು ಸಂಪೂರ್ಣ ಕೃಷಿ ಭೂಮಿಯಾಗಿದ್ದು, ನಾವು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಲ್ಲ” ಎಂದು ಸ್ಪಷ್ಟಪಡಿಸಿದರು.

ಬಿಡದಿಯ ರೈತರ ಹಿತದೃಷ್ಟಿಯಿಂದ ಸರ್ಕಾರ ಟೌನ್ಶಿಪ್ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದ ಅವರು, ಕೋವಿಡ್ ಅವಧಿಯಲ್ಲಿ ರೈತರಿಗೆ ನೆರವಾಗುವ ಉದ್ದೇಶದಿಂದ ತಮ್ಮ ಜಮೀನಿನಲ್ಲಿ ಡೈರಿ ಸ್ಥಾಪಿಸುವ ಯೋಜನೆ ರೂಪಿಸಲಾಗಿತ್ತು ಎಂದು ತಿಳಿಸಿದರು.”ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ರೈತರಿಗೆ ಉದ್ಯೋಗ ಹಾಗೂ ಆದಾಯದ ಮೂಲ ಸೃಷ್ಟಿಸುವ ನಿಟ್ಟಿನಲ್ಲಿ ಡೈರಿ ಆರಂಭಿಸುವ ನಿರ್ಧಾರ ಮಾಡಿದ್ದೆವು. ಆದರೆ ಆ ಸಮಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ಮೇಲಿದ್ದ ರಾಜಕೀಯ ಒತ್ತಡಗಳಿಂದಾಗಿ ಆ ಯೋಜನೆ ಪೂರ್ಣಗೊಳ್ಳಲಿಲ್ಲ” ಎಂದು ಹೇಳಿದರು.

ಡೈರಿ ಯೋಜನೆಗಾಗಿ ಅಗತ್ಯ ಯಂತ್ರೋಪಕರಣಗಳನ್ನು ಈಗಾಗಲೇ ಖರೀದಿಸಿ ಇಟ್ಟಿದ್ದೇವೆ ಎಂದು ಹೇಳಿದ ನಿಖಿಲ್, “ನಮ್ಮ ಪ್ರಾಮಾಣಿಕತೆ ಬಗ್ಗೆ ಅನುಮಾನವಿದ್ದರೆ ಯಾರಾದರೂ ಬಂದು ಪರಿಶೀಲಿಸಬಹುದು” ಎಂದು ಸವಾಲು ಹಾಕಿದರು.ಬಿಡದಿ ಟೌನ್ಶಿಪ್ ಯೋಜನೆಯ ಒಟ್ಟು ವೆಚ್ಚ ಸುಮಾರು ₹18 ಸಾವಿರ ಕೋಟಿ ಎಂದು ಹೇಳಲಾಗುತ್ತಿದ್ದು, ರೈತರ ಜಮೀನು ಪಡೆದು ₹33 ಸಾವಿರ ಕೋಟಿ ಲಾಭ ಗಳಿಸುವ ಉದ್ದೇಶ ಇದರ ಹಿಂದೆ ಇದೆ ಎಂಬ ಆರೋಪವನ್ನೂ ಅವರು ಮಾಡಿದರು. “ಈ ಯೋಜನೆಯಿಂದ ನಿಜವಾಗಿ ಯಾರಿಗೆ ಲಾಭವಾಗಲಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು” ಎಂದು ಪ್ರಶ್ನಿಸಿದರು.
ಕೃಷಿ ಭೂಮಿಯನ್ನು ನಾಶಪಡಿಸಿ ಟೌನ್ಶಿಪ್ ನಿರ್ಮಿಸುವುದರಿಂದ ಸ್ಥಳೀಯ ರೈತರಿಗೆ ಅನ್ಯಾಯವಾಗಲಿದೆ. ಯಾವುದೇ ಕಾರಣಕ್ಕೂ ಇದನ್ನು ಒಪ್ಪುವುದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಯಲ್ಲಿ ಸ್ಪಷ್ಟ ಸಂದೇಶ ನೀಡಿದರು.






