ಸಾಮಾಜಿಕ ಹೋರಾಟಗಾರ ಹಾಗೂ ನಟ ಚೇತನ್ ಅಹಿಂಸಾ ರಾಜ್ಯ ರಾಜಕಾರಣದಲ್ಲಿ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿದ್ದಾರೆ. ದಲಿತ, ಬಹುಜನ ಹಾಗೂ ಪ್ರಗತಿಪರ ಸಂಘಟನೆಗಳನ್ನು ಒಗ್ಗೂಡಿಸಿ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿರುವ ಅವರು, 2027ರ ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಪಕ್ಷಕ್ಕೆ ಅಧಿಕೃತ ಚಾಲನೆ ನೀಡುವುದಾಗಿ ತಿಳಿಸಿದ್ದಾರೆ.ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಚೇತನ್, ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಘಟನೆ ನಿರ್ಮಿಸುವ ಗುರಿಯೊಂದಿಗೆ ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಆರಂಭಿಸಿರುವುದಾಗಿ ಹೇಳಿದರು.
“ವಿವಿಧ ಸಮಾಜಪರ ಸಂಘಟನೆಗಳು, ದಲಿತ ಮತ್ತು ಬಹುಜನ ಪರ ಹೋರಾಟಗಾರರನ್ನು ಒಟ್ಟುಗೂಡಿಸಿ ಹೊಸ ರಾಜಕೀಯ ಶಕ್ತಿಯನ್ನು ಕಟ್ಟುತ್ತಿದ್ದೇವೆ. ಜನರಿಗೆ ಪರ್ಯಾಯ ರಾಜಕೀಯ ನೀಡುವ ಉದ್ದೇಶ ನಮ್ಮದು” ಎಂದು ಅವರು ಹೇಳಿದರು.

2027ರ ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ 25 ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಬೃಹತ್ ಸಮಾವೇಶ ಆಯೋಜಿಸಲಾಗುವುದು. ಇದೇ ವೇದಿಕೆಯಲ್ಲಿ ಪಕ್ಷದ ಹೆಸರು, ಧ್ವಜ, ಚಿಹ್ನೆ, ಪ್ರಣಾಳಿಕೆ ಹಾಗೂ ರಾಜ್ಯ ಸಮಿತಿಯನ್ನು ಅಧಿಕೃತವಾಗಿ ಅನಾವರಣಗೊಳಿಸಲಾಗುವುದು ಎಂದು ಚೇತನ್ ಮಾಹಿತಿ ನೀಡಿದರು.“ನಮ್ಮ ಪಕ್ಷದ ಹೆಸರಿನಲ್ಲಿ ಭಾರತೀಯ ಸಂವಿಧಾನದ ಆಶಯಗಳನ್ನು ಪ್ರತಿಬಿಂಬಿಸುವ ಪದಗಳು ಇರಲಿವೆ. ಪಕ್ಷದ ನೋಂದಣಿ ಪ್ರಕ್ರಿಯೆಯೂ ಈಗಾಗಲೇ ನಡೆಯುತ್ತಿದೆ” ಎಂದು ತಿಳಿಸಿದರು.
ತಮ್ಮ ಪಕ್ಷದ ಪ್ರಮುಖ ಆಶಯಗಳನ್ನು ವಿವರಿಸಿದ ಚೇತನ್, ಲಿಂಗ ಸಮಾನತೆ, ಜಾತಿ ಸಮಾನತೆ, ಆರ್ಥಿಕ ನ್ಯಾಯ, ಧರ್ಮನಿರಪೇಕ್ಷತೆ, ಭದ್ರತೆ, ಪರಿಸರ ಸಂರಕ್ಷಣೆ, ಭ್ರಷ್ಟಾಚಾರ ವಿರೋಧ, ಮಾಧ್ಯಮ ಸ್ವಾತಂತ್ರ್ಯ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಸೇರಿದಂತೆ ಹತ್ತು ಪ್ರಮುಖ ಗುರಿಗಳನ್ನು ಮುಂದಿಟ್ಟಿದ್ದಾರೆ.
ಇದರ ಜೊತೆಗೆ ಪೊಲೀಸ್ ಹಾಗೂ ಜೈಲು ವ್ಯವಸ್ಥೆಯಲ್ಲಿ ಸುಧಾರಣೆ, ತಂತ್ರಜ್ಞಾನದ ಪರಿಣಾಮಕಾರಿ ಬಳಕೆಗೂ ಆದ್ಯತೆ ನೀಡುವುದಾಗಿ ಹೇಳಿದರು.

ತಮ್ಮ ರಾಜಕೀಯ ಹೋರಾಟದ ಬಗ್ಗೆ ಮಾತನಾಡಿದ ಚೇತನ್, “ಮನುವಾದಿ ಚಿಂತನೆ ಮತ್ತು ಕಾಂಗ್ರೆಸ್ ರಾಜಕಾರಣದ ವಿರುದ್ಧ ನಾವು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ದೇಶದಲ್ಲಿರುವ ಅನೇಕ ಪಕ್ಷಗಳು ಸಾಮಾನ್ಯ ಜನರ ಆಶಯಗಳನ್ನು ಈಡೇರಿಸಲು ವಿಫಲವಾಗಿವೆ. ಸಮ ಸಮಾಜ ನಿರ್ಮಾಣಕ್ಕಾಗಿ ಪ್ರಬಲ ಪರ್ಯಾಯ ಧ್ವನಿಯನ್ನು ಕಟ್ಟುವ ಉದ್ದೇಶ ನಮ್ಮದು” ಎಂದು ಹೇಳಿದರು.
ಚೇತನ್ ಅವರ ಹೊಸ ರಾಜಕೀಯ ಪಕ್ಷದ ಘೋಷಣೆ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ದಲಿತ, ಬಹುಜನ ಮತ್ತು ಪ್ರಗತಿಪರ ಸಂಘಟನೆಗಳು ಅವರೊಂದಿಗೆ ಯಾವ ಮಟ್ಟಿಗೆ ಕೈಜೋಡಿಸುತ್ತವೆ ಎಂಬುದು ಕುತೂಹಲ ಮೂಡಿಸಿದೆ.






