ಬಿಡದಿ ಟೌನ್ಶಿಪ್ ಯೋಜನೆ ಕುರಿತ ಹೋರಾಟವು ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಯಾವುದೇ ವ್ಯಕ್ತಿಯ ವಿರುದ್ಧವಲ್ಲ, ರೈತರ ಭೂಮಿ ಉಳಿಸುವ ಉದ್ದೇಶದಿಂದ ನಡೆಯುತ್ತಿರುವ ಹೋರಾಟ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಮಂಡ್ಯದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಹೋರಾಟಕ್ಕೆ ವೈಯಕ್ತಿಕ ಹಾಗೂ ಜಾತಿ ಬಣ್ಣ ಬಳಿಯುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

“ನಾನು ರೈತರ ಪರವಾಗಿ ಧ್ವನಿ ಎತ್ತಿದ್ದೇನೆ. ಕೆಲವರು ಇದನ್ನು ವೈಯಕ್ತಿಕ ಹೋರಾಟ ಎಂದು ಬಿಂಬಿಸುತ್ತಿದ್ದಾರೆ. ರೈತರ ಫಲವತ್ತಾದ ಭೂಮಿಯನ್ನು ರಿಯಲ್ ಎಸ್ಟೇಟ್ ದಂಧೆಕೋರರ ಕೈಗೆ ಒಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಅದನ್ನು ತಡೆಯಲು ನಾನು ರೈತರ ಜೊತೆ ನಿಂತಿದ್ದೇನೆ” ಎಂದು ಹೇಳಿದರು.ಬಿಡದಿ ಪ್ರದೇಶದ ಭೂಮಿಯನ್ನು ಉಳಿಸಿದವನು ತಾನೇ ಎಂದು ಹೇಳಿದ ಕುಮಾರಸ್ವಾಮಿ, “ಕೆಲ ಕಾಂಗ್ರೆಸ್ ಶಾಸಕರೇ ನನ್ನ ನಿರ್ಧಾರದಿಂದ ರೈತರ ಭೂಮಿ ಉಳಿಯಿತು ಎಂದು ಒಪ್ಪಿಕೊಂಡಿದ್ದಾರೆ. ಆಗ ನಾವು ಟೌನ್ಶಿಪ್ ಯೋಜನೆ ರೂಪಿಸಿದ್ದರೂ, ರೈತರು ವಿರೋಧಿಸಿದ ಕಾರಣ ಯೋಜನೆಯನ್ನು ಕೈಬಿಟ್ಟೆವು. ಅದರಿಂದಲೇ ಇಂದು ಆ ಭೂಮಿ ರೈತರ ಬಳಿ ಉಳಿದಿದೆ” ಎಂದು ಹೇಳಿದರು.
2006-07ರಲ್ಲಿ ಇದೇ ವಿಷಯದ ಕುರಿತು ವಿಧಾನಸಭೆಯಲ್ಲಿ ಮೂರು ದಿನಗಳ ಕಾಲ ಸುದೀರ್ಘ ಚರ್ಚೆ ನಡೆದಿತ್ತು. ಆ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು. ಎಲ್ಲ ದಾಖಲೆಗಳು ಲಭ್ಯವಿರುವಾಗ ಈಗ ಸುಳ್ಳು ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.
“ಡಿನೋಟಿಫಿಕೇಶನ್ ಮಾಡಿ ಜೈಲಿಗೆ ಹೋಗಬೇಕಾಗಿಲ್ಲ. ರೈತರ ಹಿತಕ್ಕಾಗಿ ಇಡೀ ಯೋಜನೆಯನ್ನೇ ಕೈಬಿಡಿ. ಆಗ ರಾಜ್ಯದ ಜನ ನಿಮ್ಮನ್ನು ಮೆಚ್ಚಿಕೊಳ್ಳುತ್ತಾರೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ ಸಲಹೆ ನೀಡಿದರು.ಕೆಲ ಜನಪ್ರತಿನಿಧಿಗಳು ರೈತರಿಗೆ ಚೆಕ್ ವಿತರಿಸುವ ಕಾರ್ಯಕ್ರಮ ನಡೆಸುತ್ತಿರುವುದನ್ನು ಟೀಕಿಸಿದ ಕುಮಾರಸ್ವಾಮಿ, “ಬಡ ರೈತರ ಕಷ್ಟಗಳ ಜೊತೆ ಚೆಲ್ಲಾಟ ಆಡಬೇಡಿ. ಇದು ಸಹಾಯವಲ್ಲ, ಪ್ರದರ್ಶನ. ಸಾಲ ಮಾಡಿ ಹಣ ಹಂಚುವುದು ರಾಜ್ಯದ ಆರ್ಥಿಕ ಸ್ಥಿತಿಗೆ ಹೊರೆ” ಎಂದು ಕಿಡಿಕಾರಿದರು.

ಕೈಗಾರಿಕೆಗಳು ಮತ್ತು ಟೌನ್ಶಿಪ್ ಅಭಿವೃದ್ಧಿಗೆ ತಮ್ಮ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, “ರಾಜ್ಯದಲ್ಲಿ ಸಾಕಷ್ಟು ಒಣಭೂಮಿ ಇದೆ. ಅಲ್ಲಿ ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡಿ. ಆದರೆ ನೀರಾವರಿ ಸೌಲಭ್ಯವಿರುವ ಫಲವತ್ತಾದ ಕೃಷಿ ಭೂಮಿಯನ್ನು ಏಕೆ ಗುರಿಯಾಗಿಸುತ್ತೀರಿ?” ಎಂದು ಪ್ರಶ್ನಿಸಿದರು.






