Loka Saba ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡೆಯುತ್ತಿದೆ. ಈ ನಡುವೆ ಹಾಲಿ ಸಂಸದರು ಸಹ ಟಿಕೆಟ್ ಪಡೆಯುವ ನಿರೀಕ್ಷೆಯೊಂದಿಗೆ ಚುನಾವಣೆಗೆ ಸದ್ದಿಲ್ಲದೆ ತಯಾರಿ ನಡೆಸುತ್ತಲಿದ್ದಾರೆ. ಆದರೆ ಎಲ್ಲರ ಗಮನ ಸೆಳೆದಿರುವ ಹಳೆ ಮೈಸೂರು ಭಾಗದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿರುವ Mandya ಲೋಕಸಭಾ ಕ್ಷೇತ್ರದಲ್ಲಿ ಯಾರೆಲ್ಲ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎಂಬ ಕುತೂಹಲ ಮೂಡಿದೆ.
ಹಾಲಿ ಸಂಸದೆ Sumalatha ಅವರೇ 2024ರ ಲೋಕಸಭೆಯಲ್ಲೂ ಸ್ಪರ್ಧೆ ಮಾಡುವ ಲೆಕ್ಕಾಚಾರದಲ್ಲಿದ್ದರೂ, BJP ಹಾಗೂ JDS ನಡುವಿನ ಮೈತ್ರಿಯಿಂದಾಗಿ ಇದೀಗ ಮಂಡ್ಯ ಲೋಕಸಭಾ ಟಿಕೆಟ್ ಸುಮಲತಾ ಅವರಿಗೆ ಬಹುತೇಕ ಡೌಟ್ ಎನ್ನಲಾಗುತ್ತಿದೆ. ಹೀಗಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಯಾರು? ಎಂಬ ಕುತೂಹಲ ಕ್ಷೇತ್ರದ ಮತದಾರರು ಮಾತ್ರವಲ್ಲದೇ ಜೆಡಿಎಸ್ ಹಾಗೂ ಬಿಜೆಪಿ ಮಖಂಡರು ಹಾಗೂ ಕಾರ್ಯಕರ್ತರಲ್ಲೂ ಮನೆ ಮಾಡಿದೆ.
![](https://pratidhvani.com/wp-content/uploads/2024/01/jds_090923_1-jpg.webp)
ಈ ನಡುವೆ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಹಾಲಿ ಸಂಸದೆ ಸುಮಲತಾ ಅವರಿಗೆ 2024ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಲಿದೆ ಎಂಬ ಕುರಿತು ಮಂಡ್ಯ ಜೆಡಿಎಸ್ನಲ್ಲಿ ಬಿಸಿಬಿಸಿ ಚರ್ಚೆ ಶುರುವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ನಡೆಸಿದ ಸರ್ವೆ ವರದಿಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಂತರೆ ಮಂಡ್ಯದಲ್ಲಿ ಗೆಲುವು ಫಿಕ್ಸ್ ಎಂದು ರಿಪೋರ್ಟ್ ಬಂದಿದೆ. ಇದರಿಂದಾಗಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ದಳಪತಿಗಳು ಪಕ್ಷ ಸಂಘಟನೆಯ ಕೆಲಸ ಆರಂಭಿಸಿದ್ದಾರೆ. ಮಂಡ್ಯದಿಂದ ಸ್ಪರ್ಧೆ ಮಾಡುವಂತೆ ಕುಮಾರಸ್ವಾಮಿ ಅವರಿಗೆ ಬಿಜೆಪಿ ಹೈಕಮಾಂಡ್ ಕೂಡ ಒತ್ತಡ ಹೇರುತ್ತಿದೆ ಎನ್ನಲಾಗಿದ್ದರೆ, ಮತ್ತೊಂದಡೆ ಮಂಡ್ಯ ಬಿಜೆಪಿ ಮುಖಂಡರು ಮತ್ತು ಹಳೆ ಮೈಸೂರು ಭಾಗದ ಜೆಡಿಎಸ್ ಮಾಜಿ ಹಾಲಿ ಶಾಸಕರು ಮುಖಂಡರಿಂದಲೂ ಒತ್ತಡ ಎದುರಾಗಿದೆ.
![](https://pratidhvani.com/wp-content/uploads/2024/02/tnm_import_sites_default_files_HD-Kumaraswamy_750_85-1024x683.webp)
ಕುಮಾರಸ್ವಾಮಿ ಸ್ವರ್ಧೆಯಿಂದ ಮಂಡ್ಯದಲ್ಲಿ ಜೆಡಿಎಸ್ ಮತ್ತಷ್ಟು ಬಲ ಬರುತ್ತದೆ. ಮಂಡ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಸ್ಪರ್ಧೆ ಮಾಡಿದರೆ ಗೆಲುವಿನ ಹಾದಿ ಸುಲಭ ಎಂಬುದು ಸ್ಥಳೀಯ ಮುಖಂಡರು, ಕಾರ್ಯಕರ್ತರು ಅನಿಸಿಕೆಯಾಗಿದೆ. ಆದರೆ 2023ರ ವಿಧಾನಸಭೆಯಲ್ಲಿ ಜೆಡಿಎಸ್ ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ಹಿನ್ನಡೆ ಕಂಡಿದ್ದು, ಕಾರ್ಯಕರ್ತರು ಮತ್ತು ಮುಖಂಡರ ಉತ್ಸಾಹವನ್ನು ಕಡಿಮೆ ಮಾಡಿತ್ತು. ಆದರೆ ಇದೀಗ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಬರುತ್ತದೆ. ಜೊತೆಗೆ ಕುಮಾರಸ್ವಾಮಿ ಸ್ಪರ್ಧೆ ಮಾಡಿದರೆ ಬಿಜೆಪಿ ಕಾರ್ಯಕರ್ತರು ಕೂಡ ಸಂಪೂರ್ಣ ಸಾಥ್ ನೀಡಲಿದ್ದು, ಮಂಡ್ಯಕ್ಕೆ ನೀವೆ ಸೂಕ್ತ ಅಭ್ಯರ್ಥಿ ಎಂದು ಕೆಲ ಮಾಜಿ ಶಾಸಕರಲೂ ಸಹ ಮಾಜಿ ಸಿಎಂ ಅವರಿಗೆ ಒತ್ತಡ ಹೇರುತ್ತಿದ್ದಾರೆ. ಅಲ್ಲದೆ ನಿರಂತರವಾಗಿ ಕುಮಾರಸ್ವಾಮಿ ಭೇಟಿ ಮಾಡುತ್ತಿರುವ ಮಂಡ್ಯ ಬಿಜೆಪಿ ಮುಖಂಡರು, ಮಂಡ್ಯದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಚರ್ಚೆ ನಡೆಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದಾಗಿ ಹಾಲಿ ಸಂಸದೆ ಸುಮಲತೆ ಅವರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಹೆಚ್ಚಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
#SumalathaAmbreesh #MandyaMP #HDK #HDKumaraswamy #BJPJDS #MPelection