ಪ್ರಧಾನಿ ನರೇಂದ್ರ ಮೋದಿ ಅದೇ ತಂತ್ರವನ್ನು ಮತ್ತೆ ಬಳಸುತ್ತಿದ್ದಾರೆ. ಅವರು ವಿವಾದವನ್ನು ಸೃಷ್ಟಿಸುವ ಕಲೆಯ ನಿಪುಣರಾಗಿದ್ದಾರೆ.
ಅವರ ಗುರಿ ಸರಳವಾದದ್ದು. ಆಗಾಗ ಹಿಂದುತ್ವವೆಂಬ ಭಾವೋದ್ವೇಗಕ್ಕೆ ಗಾಳಿ ನೀಡುವುದರ ಮೂಲಕ ಜನರನ್ನು ವಿಚಲಿತಗೊಳಿಸಿ ಬೆಲೆಯೇರಿಕೆ, ನಿರುದ್ಯೋಗ ಅಥವಾ ದೇಶದ ವಿದೇಶಾಂಗ ನೀತಿಗಳ ಕುರಿತಾದ ಇರುಸುಮುರುಸಿನ ಪ್ರಶ್ನೆಗಳನ್ನು ತಪ್ಪಿಸಿಕೊಳ್ಳುವುದು.
ಕೇಂದ್ರ ಮತ್ತು ರಾಜ್ಯಗಳ ಸಂಬಂಧ ಮತ್ತು ಪೆಗಾಸಸ್ ನಂತಹ ಗೂಢಾಚಾರಿ ಸಾಫ್ಟ್ವೇರ್ ನ ಬಳಕೆಯ ಸಂದರ್ಭದಲ್ಲಿ ನಾಗರೀಕರ ಗೋಪ್ಯತೆಯ ಹಕ್ಕು – ಹೀಗೆ ಹಲವಾರು ಬೃಹತ್ ಕಳಕಳಿಗಳು ತೆರೆಮರೆಗೆ ಸರಿಯುತ್ತವೆ.
ಆಗಸ್ಟ್ 14 ರ ದಿನಾಂಕವನ್ನು ವಿಭಜನೆಯ ಕ್ರೌರ್ಯ ಸ್ಮರಣಾ ದಿನ ಎಂಬ ಘೋಷಣೆ ಮೋದಿಯವರ ಹೊಸ ತೋರ್ಪಡಿಕೆಯಾಗಿದೆ. ಆಗಸ್ಟ್ 14 ಪಾಕಿಸ್ತಾನದ ಸ್ವಾತಂತ್ರ ದಿನ ಎಂಬುದನ್ನು ಮರೆಯದಿರಿ. ಒಂದೇ ದಿನವನ್ನು ಒಂದು ದೇಶ ಆಚರಿಸುವುದು ಮತ್ತು ಅದರ ನೆರೆಹೊರೆಯ ದೇಶ ಶೋಕಿಸುವುದು ಅಪೇಕ್ಷಣೀಯವಲ್ಲ.
ಒಂದು ಸಂಕುಚಿತ ರಾಜತಾಂತ್ರಿಕ ದೃಷ್ಟಿಕೋನದ ಈ ನಡೆ, ಭಾರತ ಪಾಕಿಸ್ತಾನಕ್ಕೊಂದು ಅಭಿನಂದನಾ ಸಂದೇಶವ್ನೂ ಕಳಿಸದಂತೆ ನೋಡಿಕೊಳ್ಳುತ್ತದೆ. ಇಂದು ಪಾಕಿಸ್ತಾನ ಭಾರತದ ಪ್ರಮುಖ ಶತ್ರುವಾಗಿರಬಹುದು. ಆದರೆ, ಅಂತರಾಷ್ಟ್ರೀಯ ಸಂಬಂಧಗಳಲ್ಲಿ ಸಾಮಾನ್ಯವಾಗಿ ನಡೆಯುವಂತೆ, ಒಂದಲ್ಲಾ ಒಂದು ದಿನ ಪಾಕಿಸ್ತಾನ ಭಾರತದ ಮಿತ್ರವೂ ಆಗಬಹುದು.
ದೆಹಲಿಯ ಐತಿಹಾಸಿಕ ಕೆಂಪುಕೋಟೆಯಿಂದ ತಮ್ಮ ಸ್ವತಂತ್ರ ದಿನಾಚರಣೆಯ ಭಾಷಣವನ್ನು ನೀಡುತ್ತಾ ಮೋದಿ ಹೀಗೆಂದು ಘೋಷಿಸಿದರು:
“ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಸ್ವಾತಂತ್ರವನ್ನು ಆಚರಿಸುವ ಸಂದರ್ಭದಲ್ಲಿ ನಮ್ಮ ಹೃದಯಗಳನ್ನು ಇಂದಿಗೂ ನಾಟುವ ದೇಶವಿಭಜನೆಯ ನೋವನ್ನು ಮರೆಯುವಹಾಗಿಲ್ಲ. ಇದು ಕಳೆದ ಶತಮಾನದ ಅತೀ ದೊಡ್ಡ ದುರಂತಗಳಲ್ಲಿ ಒಂದಾಗಿದೆ. ಸ್ವಾತಂತ್ರ ದಕ್ಕಿದ ನಂತರ ಇವರನ್ನು ಶೀಘ್ರವಾಗಿ ಮರೆಯಲಾಯಿತು. ನೆನ್ನೆಯಷ್ಟೇ ಭಾರತ ಅವರ ನೆನಪಿನಲ್ಲಿ ಒಂದು ಭಾವನಾತ್ಮಕ ನಿರ್ಧಾರವನ್ನು ತೆಗೆದುಕೊಂಡಿದೆ. ದೇಶವಿಭಜನೆಗೆ ಬಲಿಯಾದವರನ್ನು ನೆನೆಯುವ ಸಲುವಾಗಿ ಆಗಸ್ಟ್ 14 ರ ದಿನಾಂಕವನ್ನು ಇನ್ನುಮುಂದೆ ವಿಭಜನೆಯ ಕ್ರೌರ್ಯ ಸ್ಮರಣಾ ದಿನವೆಂದು ನೆನೆಯಲಾಗುತ್ತದೆ.
ಅಮಾನವೀಯ ಪರಿಸ್ಥಿತಿಗಳನ್ನು ಎದುರಿಸಿದವರು, ಚಿತ್ರಹಿಂಸೆಗಳಿಂದ ಬಳಲಿದವರು – ಅವರಿಗೆ ಸರಿಯಾದ ಅಂತ್ಯಸಂಸ್ಕಾರವೂ ದೊರಕಲಿಲ್ಲ. ಅವರೆಲ್ಲರೂ ಸದಾ ಕಾಲ ಬದುಕಲೇ ಬೇಕು ಮತ್ತು ನಮ್ಮ ಸ್ಮರಣೆಯಲ್ಲಿ ಉಳಿಯಲೇ ಬೇಕು. ದೇಶದ 75ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ವಿಭಜನೆಯ ಕ್ರೌರ್ಯ ಸ್ಮರಣಾ ದಿನವನ್ನು ಆಚರಿಸುವ ನಿರ್ಧಾರವನ್ನು ತೆಗೆದುಕೊಳ್ಳುವುದರ ಮೂಲಕ ಬಲಿಯಾದವರಿಗೆ ಅರ್ಪಣೆಗಳನ್ನು ಪ್ರತೀ ಭಾರತೀಯ ಸಲ್ಲಿಸುತ್ತಾನೆ. “
ಸರಕಾರದ ಸಬ್ಕಾ ಸಾತ್ ಸಬ್ಕಾ ವಿಕಾಸ್ ನ ಆಶ್ವಾಸನೆ, ಹೈ-ಪ್ರೊಫೈಲ್ ಯೋಜನೆಗಳು, ಹೀಗೆ ಸಕರಾತ್ಮಕ ಅಂಶಗಳನ್ನೇ ಒಳಗೊಂಡಿದ್ದ ಪ್ರಧಾನ ಮಂತ್ರಿಗಳ 80 ನಿಮಿಷದ ಭಾಷಣದಲ್ಲಿ ಇಂತಹ ವಿಭಜನಾಕಾರಿ ಅಂಶ ಸೇರಿದ್ದು ಕೊಂಚ ಚಕಿತಗೊಳಿಸುವಂತದ್ದೇ. ಹೇಗಿದ್ದರೂ, 25 ವರ್ಷಗಳ ಅಮೃತ ಕಾಲದ ಹೊಸಲಿನಲ್ಲಿ ಭಾರತ ನಿಂತಿದೆ ಎಂದು ಬಡಾಯಿ ಕೊಚ್ಚಿಕೊಂಡರು.
ವಿಭಜಿತ ಸಹಾನುಭೂತಿ
ದೇಶವಿಭಜನೆಗೆ ಬಲಿಯಾದವರನ್ನು ಮತ್ತು ಅವರ ಕುಟುಂಬಗಳಿಗೆ ಪ್ರತಿ ಭಾರತೀಯನಿಂದ ಸಹಾನುಭೂತಿ ಮತ್ತು ಬೆಂಬಲ ಅವಶ್ಯಕ ಎಂಬುದರ ಬಗ್ಗೆ ಎರಡು ಮಾತಿಲ್ಲ. ಆದರೆ ಸಮಸ್ಯೆಯೇನೆಂದರೆ, ಮೋದಿ ಇಲ್ಲಿ ಸ್ಪಷ್ಟವಾಗಿ ಕೇವಲ ಹಿಂದೂ ಹಾಗೂ ಸಿಖ್ಖರ ಕುಟುಂಬಗಳಿಗೆ ಅನುಕಂಪವನ್ನು ಕೋರುತ್ತಿದ್ದರು – ಮುಸಲ್ಮಾನರು ದೇಶವಿಭಜನೆಯಿಂದ ನೋವು ಅನುಭವಿಸಲೇ ಇಲ್ಲವೆಂಬಂತೆ.
ನಿಮಗಿನ್ನೂ ಮನವರಿಕೆಯಾಗಿಲ್ಲವೆಂದರೆ, ಅವರ ಹೇಳಿಕೆಗಳನ್ನು ಮತ್ತೊಮ್ಮೆ ಓದಿ ನೋಡಿ:
“ಅಮಾನವೀಯ ಪರಿಸ್ಥಿತಿಗಳನ್ನು ಎದುರಿಸಿದವರು, ಚಿತ್ರಹಿಂಸೆಗಳಿಂದ ಬಳಲಿದವರು – ಅವರಿಗೆ ಸರಿಯಾದ ಅಂತ್ಯಸಂಸ್ಕಾರವೂ ದೊರಕಲಿಲ್ಲ.”
ಈಗ ಅವರ 2017ರ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಪ್ರಚಾರದ ಭಾಷಣಗಳನ್ನು ಗಮನಿಸೋಣ. ಆ ಭಾಷಣಗಳಲ್ಲಿ ಸಮಾಜವಾದಿ ಪಕ್ಷದ ನೇತೃತ್ವದ ಸರಕಾರ ಹಿಂದೂ ಸ್ಮಶಾನಗಳನ್ನು ಅಲಕ್ಷ್ಯೆಗೆ ಒಳಗಾಗಿಸಿ ಮುಸಲ್ಮಾನರ ಕಬ್ರಿಸ್ತಾನಗಳೆಡೆಗೆ ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ್ದರು.
ಮೋದಿ ಭಾರತದ ಮುಸಲ್ಮಾನರ ವಿರುದ್ಧ ಹೇಳಿಕೆಗಳನ್ನು ನೀಡಿ ಹಿಂದೂ ವೋಟ್ಗಳನ್ನು ತಮ್ಮತ್ತ ಸೆಳೆಯುವ ಪ್ರಯತ್ನವನ್ನು ನಡೆಸಿರುವುದು ಇದೇ ಮೊದಲೇನಲ್ಲ. ಹಾಗಾಗಿ, ಮೋದಿಯವರ ನೂತನ ಘೋಷಣೆ ಸಂಶಯಾಸ್ಪದವಾಗಿದೆ.
ಮೋದಿಯ ಹೇಳಿಕೆಯನ್ನು ಅವರ ಪಕ್ಷದ ಇತರರು ಪ್ರತಿಧ್ವನಿಸಲು ಆರಂಭಿಸಿರು. ಬಿಜೆಪಿಯ ವಿದೇಶಿ ವ್ಯವಹಾರಗಳ ವಿಭಾಗದ ಹೊಣೆ ಹೊತ್ತಿರುವ ವಿಜಯ್ ಚೌತೈವಾಲೆ ಅದಕ್ಕೆ ಸೋಗು ಹಾಕಿದರು:
“ಈ ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ: ಜಂಟಿ ಕುಟುಂಬವೊಂದರಲ್ಲಿ ಒಂದು ಮಗು ಜನ್ಮ ಪಡೆದಿದೆ ಮತ್ತು ಅದೇ ದಿನ ಕುಟುಂಬದ ಅತೀ ಗೌರವಾನ್ವಿತ ಮತ್ತು ಹಿರಿಯ ಸದಸ್ಯರನ್ನು ಬರ್ಬರವಾಗಿ ಹತ್ಯೆಗೆಯ್ಯಲಾಗಿದೆ. ಎಲ್ಲರೂ ಆ ಮಗುವಿನ ಜನ್ಮವನ್ನು ಆನಂದಿಸಿದ ಮಾತ್ರಕ್ಕೆ ಹಿರಿಯರ ಹತ್ಯೆಯನ್ನು ಮರೆಯಬೇಕು, ಸಾಂತ್ವಾನ ನೀಡಬಾರದು, ದುಃಖಿಸಬಾರದು ಎಂದು ಯಾರಾದರೂ ವಾದಿಸಬಲ್ಲರೇ?”
‘ಅತೀ ಗೌರವಾನ್ವಿತ ಮತ್ತು ಹಿರಿಯ ಸದಸ್ಯ’ – ಅವರ ಈ ಪದಪ್ರಯೋಗವನ್ನು ಗಮನಿಸಿ. ಇಲ್ಲಿ ಅವರು ಹಿಂದೂ ಪದಕ್ಕೆ ಪರ್ಯಾಯವಾಗಿ ಅದನ್ನು ಬಳಸಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಜೊತೆಗೆ ಇಲ್ಲಿ ಯಾರು ದುಃಖಿಸುವುದನ್ನು ಅಥವಾ ಸಾಂತ್ವಾನ ನೀಡುವುದನ್ನು ತಡೆಯುತ್ತಿದ್ದಾರೆ? ಹಿಂದೂಗಳು, ಮುಸಲ್ಮಾನರು ಮತ್ತು ಸಿಖ್ಖರಿಗೆ ದೇಶವಿಭಜನೆ ಎಷ್ಟು ದೊಡ್ಡ ದುರಂತ ಎಂಬುದರ ಬಗ್ಗೆ ಅನೇಕ ಸಂಪುಟಗಳ ಸಂಶೋಧನೆಯನ್ನು ಪ್ರಕಟಿಸಲಾಗಿದೆ.
ಹೋಲಿಸಬಲ್ಲ ಬಳಲಿಕೆ
ನನ್ನ ಅರಿವಿನ ಮಟ್ಟಿಗೆ, ಸಾಮುದಾಯಿಕವಾಗಿ ಗಾಯಾಳುಗಳ ಸಂಖ್ಯೆ ಇಲ್ಲದಿದ್ದರೂ ಈ ಸಂಖ್ಯೆ ಒಟ್ಟಾರೆಯಾಗಿ ಹಲವಾರು ಲಕ್ಷಗಳಲ್ಲಿದೆ. ನಿರ್ದಿಷ್ಟವಾದ ಸ್ಥಳ ಮತ್ತು ಪರಿಸ್ಥಿತಿಗಳ ಅನುಸಾರವಾಗಿ ಎಲ್ಲಾ ಸಮುದಾಯಗಳ ದೈಹಿಕ ಹಾಗು ಮಾನಸಿಕ ಬಳಲಿಕೆಯನ್ನು ಹೋಲಿಸಬಹುದಾಗಿದೆ.
ಇತ್ತೀಚೆಗಷ್ಟೇ, ಭಾರತದ ಪ್ರಖ್ಯಾತ ಸಂದರ್ಶನಕಾರ ಮತ್ತು ವಿವರಕರಾದಂತಹ ಕರಣ್ ತಾಪರ್ ಅವರು ಏಷಿಯನ್ ಏಜ್ ಪತ್ರಿಕೆಯ ಅರ್ಧಮಾಸಿಕ ಅಂಕಣದಲ್ಲಿ 1947ರ ಜಮ್ಮುವಿನ ಮುಸಲ್ಮಾನವಿರೋಧಿ ಗಲಭೆಗಳ ಕುರಿತು ಪ್ರಕಟಿಸಿದ ನಂತರ ಪತ್ರಿಕೆಯ ವ್ಯವಸ್ಥಾಪಕರಿಗೆ ಇರುಸುಮುರುಸಾಗಿ ಅವರ ಮುಂದಿನ ಅಂಕಣವನ್ನು ತಡೆಹಿಡಿಯಲಾಗಿದೆ. ಬಹುಶಃ ಅದೇ ಅವರ ಅಂಕಣದ ಕೊನೆಯೇನೋ.
1947ರ ಅಕ್ಟೋಬರ್ ಮತ್ತು ನವೆಂಬರ್ ಮಾಸಗಳಲ್ಲಿ ಜಮ್ಮುವಿನ ಮುಸಲ್ಮಾನರ ಮೇಲೆ ಹಲ್ಲೆಗಳನ್ನು ನಡೆಸಿದ್ದರ ಬಗ್ಗೆ ಬರೆದಿದ್ದೇ ತಾಪರ್ ಅವರ ‘ಅಪರಾಧ’ವಾಗಿದೆ. ಅಂದು ಅಂಕಣವನ್ನು ಪ್ರಕಟಿಸಿದೇ ಇರುವುದರಿಂದ ಅನೇಕ ಮುಸಲ್ಮಾನರನ್ನು ಜಮ್ಮುವಿನಲ್ಲಿ ಕೊಲ್ಲಲಾಯಿತು ಎಂಬ ಸತ್ಯಾಂಶವನ್ನು ಅಲ್ಲಗಳೆಯಲಾಗುವುದಿಲ್ಲ ಎಂಬುದು ಸಂಪಾದಕರಿಗೂ ತಿಳಿದಿರುತ್ತದೆ.
ಅಂದಿನ ಪೂರ್ವ ಬಂಗಾಳದ ನೋಖಲಿಯಲ್ಲಿ ನಡೆದ ಹಿಂದೂವಿರೋಧಿ ಹತ್ಯಾಕಾಂಡಕ್ಕೆ ಬಿಹಾರದ ತಾರಾಪುರದಲ್ಲಿ ಮತ್ತು ಉತ್ತರ ಪ್ರದೇಶದ ಗರ್ಹ್ ಮುಕ್ತೇಶ್ವರದಲ್ಲಿ ಮುಸಲ್ಮಾನರನ್ನು ಕೊಲ್ಲುವುದರ ಮೂಲಕ ಸೇಡು ತೀರಿಸಿಕೊಳ್ಳಲಾಯಿತು ಎಂಬುದರ ಬಗ್ಗೆ ನಾವು ಓದಿಲ್ಲವೇ?
ರಾಜಕೀಯ ಪಿಂಗ್ ಪಾಂಗ್
ಸ್ಮರಣಾ ವಿಜ್ಞಾನ ಎಂಬುದು ಒಂದು ಗಂಭೀರ ಶೈಕ್ಷಣಿಕ ಅಧ್ಯಯನ. ಅದು ಕೇವಲ ರಾಜಕೀಯ ಟೇಬಲ್ ಟೆನ್ನಿಸ್ ಆಟವೆಂಬಂತೆ ಆಗಬಾರದು. ಜಾಗದ ಅಭಾವದಿಂದಾಗಿ ಕೇವಲ ಎರಡು ಅಂಶಗಳನ್ನು ಗಮನಿಸೋಣ.
ಒಂದು, ಜವಹರಲಾಲ್ ನೆಹರು ಅವರು ಒಳಗೊಳ್ಳುವಿಕೆಯ ರಾಷ್ಟ್ರ ನಿರ್ಮಾಣ ಮತ್ತು ಅಭಿವೃದ್ಧಿ ಪರಿಕಲ್ಪನೆಗಳ ಬದ್ಧತೆಯಿಂದ ದೇಶವಿಭಜನೆಯ ಸ್ಮರಣೆಯನ್ನು ಹೇಗೆ ವ್ಯವಹರಿಸದರು ಎಂದು. ಎರಡು, ಹೋಲೋಕಾಸ್ಟ್ ಮತ್ತು ಇತರ ಅನುಭವಗಳು ಸೂಚಿಸುವಂತೆ ದುರಂತದೊಂದಿಗಿನ ಹೊಂದಾಣಿಕೆ ಅವಶ್ಯಕವಾಗಿದ್ದು ಅದಕ್ಕೆ ನಿರಂತರ ಮನುಷ್ಯ ಪ್ರಯತ್ನ ಹೇಗೆ ಅಗತ್ಯವಾಗುತ್ತದೆ ಎಂದು.
ನೆಹರು ಅವರನ್ನು ಇತಿಹಾಸದ ಪುಟಗಳಿಂದ ತೆಗೆದುಹಾಕುವುದು ಈಗೀಗ ರಾಜಕೀಯ ಶೋಕಿಯಾಗಿದೆ. ಮುಂದಿನ ಪೀಳಿಗೆ ನೆಹರು ಅವರ ಕುರಿತು ಓದದಂತೆ ನೋಡಿಕೊಂಡರೆ 50 ವರ್ಷಗಳ ಆಚೆಗೆ ಎಲ್ಲಾ ಭಾರತೀಯರು ಸ್ವತಂತ್ರ ಭಾರತದ ಇತಿಹಾಸ ನೆಹರು ಅವರ ಮರಣದ ದಿನವಾದ 27 ಮೇ 1964ರಿಂದ ಆರಂಭವಾಗುತ್ತದೆ ಎಂದು ಒಪ್ಪಿಕೊಳ್ಳುತ್ತಾರೆ ಅನ್ನುವುದು ನೆಹರು ಅವರ ವಿರೋಧಿಗಳ ನಂಬಿಕೆ.
ಇತ್ತೀಚೆಗಷ್ಟೇ ಕೇವಲ ತಾಂತ್ರಿಕ ಸ್ವಾಯತ್ತತೆಯನ್ನು ಹೊಂದಿರುವ ಸರಕಾರೀ ನಿಯಂತ್ರಿತ ಇಂಡಿಯನ್ ಕೌಂಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಸಂಸ್ಥೆಯು ಭಾರತದ 75ನೇ ಸ್ವಾತಂತ್ರೋತ್ಸವದ ಪ್ರಯುಕ್ತವಾಗಿ ಪೋಸ್ಟರ್ ಒಂದನ್ನು ಬಿಡುಗಡೆಗೊಳಿಸಿತು.
ಆ ಪೋಸ್ಟರ್ ಮಹಾತ್ಮಾ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್, ಸರ್ದಾರ್ ವಲ್ಲಭಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್, ರಾಜೇಂದ್ರ ಪ್ರಸಾದ್, ಮದನ್ ಮೋಹನ್ ಮಾಲ್ವಿಯಾ, ಭಗತ್ ಸಿಂಗ್ ಮತ್ತು ವಿನಾಯಕ್ ದಾಮೋದರ್ ಸಾವರ್ಕರ್ (ಹಿಂದುತ್ವಾ ವಿಚಾಋಧಾರೆಯ ಪಿತಾಮಹ) ಅವರ ಭಾವಚಿತ್ರಳನ್ನು ಒಳಗೊಂಡಿದ್ದು ನೆಹರು ಅವರನ್ನು ಹೊರಗಿಡಲಾಗಿದೆ.
ಯಾವುದೇ ಐತಿಹಾಸಿಕ ವ್ಯಕ್ತಿಯೊಡನೆ ಆಗುವಂತೆ, ನೆಹರು ಅವರ ನೀತಿಗಳ ಅನೇಕ ಆಯಾಮಗಳನ್ನು ಒಬ್ಬರು ಟೀಕೆಗೆ ಒಳಪಡಿಸಬಹುದು. ಆದರೆ ಅವರ ನೆನಪನ್ನೇ ಅಳಿಸಲು ಹೊರಟಿರುವ ವಿಷಮ ಪ್ರಯತ್ನ ಸರಿಯಾದ ರಾಜಕಾರಣವೂ ಅಲ್ಲ, ಸರಿಯಾದ ಇತಿಹಾಸವೂ ಅಲ್ಲ.
ಪಶ್ಚಿಮ ಪಂಜಾಬಿನ ಲಕ್ಷಾಂತರ ನಿರಾಶ್ರಿತರ ಪುನರ್ವಸತಿಯನ್ನೊಳಗೊಂಡು ದೇಶವಿಭಜನೆಯ ನೋವನ್ನು ವ್ಯವಹರಿಸುವುದರಲ್ಲಿ ನೆಹರು ಅವರ ಕೊಡುಗೆ ಅಪಾರವಾಗಿದೆ. ಆ ನೋವು ಭಾರತದ ಅಭಿವೃದ್ಧಿಯ ಗುರಿಯನ್ನು ಮತ್ತು ರಾಷ್ಟ್ರನಿರ್ಮಾಣ ಪ್ರಕ್ರಿಯೆಯನ್ನು ವಿಚಲಿತಗೊಳಿಸದಂತೆಯೇ ನೋಡಿಕೊಳ್ಳುವುದು ಎಷ್ಟು ಮುಖ್ಯ ಎಂಬುವುದೂ ಅವರಿಗೆ ತಿಳಿದಿತ್ತು.
17 ವರ್ಷಗಳ ಅವರ ಆಡಳಿತಾವಧಿಯಲ್ಲಿ ಪ್ರಭುತ್ವವು ನಡೆಸುತ್ತಿದ್ದ ಫಿಲ್ಮ್ಸ್ ಡಿವಿಷನ್ ಆಫ್ ಇಂಡಿಯಾ ಸಂಸ್ಥೆಯು ಜನತೆಯನ್ನು ರಾಷ್ಟ್ರೀಯ ಅಭಿವೃದ್ಧಿ ಯೋಜನೆಗಳ ಬಗ್ಗೆ ಶಿಕ್ಷಿತರನ್ನಾಗಿಸಲು ಸುಮಾರು 1700 ಸಾಕ್ಷ್ಯಾಚಿತ್ರಗಳನ್ನು ನಿರ್ಮಿಸಿತ್ತು. ಈ ಎಲ್ಲಾ ಚಿತ್ರಗಳು ಹೊಸ ಸೇತುವೆ, ಡ್ಯಾಮ್, ವಿದ್ಯುತ್ ಕಾರ್ಖಾನೆ, ಇಂಜಿನೀಯರಿಂಗ್ ಕಾಲೇಜುಗಳು ಮತ್ತು ಇತರ ಪ್ರಮುಖ ಸಾರ್ವಜನಿಕ ಸೇವೆಗಳ ಸೃಷ್ಟಿಯ ಕತೆಗಳಿಂದ ತುಂಬಿದ್ದವು.
ದೇಶವಿಭಜನೆಯ ಹಿಂಸೆಗಳ ಉಲ್ಲೇಖವನ್ನು ತಪ್ಪಿಸಲಾಗಿತ್ತು. ಇದರಲ್ಲಿ ಬಾಲಿವುಡ್ ಸಹ ತನ್ನ ಪಾತ್ರವನ್ನು ನಿರ್ವಹಿಸಿತ್ತು (1960ರ ಚೋಡೋ ಕಲ್ ಕೀ ಬಾತೇ ಎಂಬ ಹಾಡನ್ನು ನೆನೆಯಿರಿ). ಆದರೆ ಅದು ಮುಸಲ್ಮಾನರ ಸಂಸ್ಕೃತಿ ಮತ್ತದರ ಅಸ್ತಿತ್ವದ ಬಿಕ್ಕಟಿನ ವಿಷಯನ್ನು ಮುಟ್ಟಿತ್ತು. ಆದರೆ ಫಿಲ್ಮ್ಸ್ ಡಿವಿಷನ್ ಇದನ್ನೂ ತಪ್ಪಿಸುತ್ತಿತ್ತು.
ದುರಂತದೊಂದಿಗಿನ ಹೊಂದಾಣಿಕೆ
ನಮ್ಮ ಎರಡನೇ ಅಂಶವಾದ ದುರಂತದೊಂದಿಗಿನ ಹೊಂದಾಣಿಕೆಯ ಬಗ್ಗೆ ಈಗ ಮಾತಾಡೋಣ. ಈ ವಿಷಯದ ಬಗ್ಗೆ ನೈಪುಣ್ಯತೆ ಹೊಂದಿರುವ ಮಾರ್ತಾ ಮಿನ್ನೋ ಅವರನ್ನು ಉಲ್ಲೇಖಿಸೋಣ. ‘ಬಿಟ್ವೀನ್ ವೆಂಜೆನ್ಸ್ ಅಂಡ್ ಫರ್ಗಿವ್ನೆಸ್’(1998) ಎಂಬ ಅವರ ಪುಸ್ತಕದಲ್ಲಿ ಹೀಗೆ ಬರೆಯುತ್ತಾರೆ:
“ಸೇಡು ಮತ್ತು ಕ್ಷಮೆಯ ನಡುವಿನ ಮಾರ್ಗವನ್ನು ಹುಡುಕುವುದು ಬಹಳ ನೆನೆಸಿಕೊಳ್ಳುವುದು ಮತ್ತು ಬಹಳ ಮರೆಯುವುದರ ನಡುವಿನ ದಾರಿಯಾಗಿದೆ. ಬಹಳ ನನೆಸಿಕೊಳ್ಳುವುದು ಒಂದು ಖಾಯಿಲೆ.”
ಹೀಗೆಯೇ ಅದೇ ಕ್ಷೇತ್ರದ ಮತ್ತೋರ್ವ ಲೇಖಕರು ಹೀಗೆ ಬರೆಯುತ್ತಾರೆ, “ಭೂತಕಾಲದ ಸೆರೆವಾಸಿಗಳಾಗದೇ, ಅದನ್ನು ಬದುಕುಳಿಸಿಕೊಳ್ಳುವುದು ಹೇಗೆ? ಭವಿಶ್ಯತ್ತಿನಲ್ಲಿ ಅದು ಪುನರಾಗಮಿಸಿವುದಿಲ್ಲ ಎಂದು ನಂಬಿ ಅದನ್ನು ಮರೆಯುವುದು ಹೇಗೆ?
ಇದರ ಕುರಿತಾದ ಕೆಲವು ಕಾರ್ಯರೂಪದ ಪ್ರಯತ್ನಗಳನ್ನು ಇಲ್ಲಿ ನೆನೆಯಬೇಕು. ನಾಜಿಯರ ಸೆರೆಶಿಬಿರಗಳಿಂದ ಬಚಾವ್ ಆಗಿದ್ದವರ ಮಗಳಾಗಿರುವ ಮೋನಾ ವೇಸ್ಮಾರ್ಕ್ ಮತ್ತು ನಾಜಿ ಆಧಿಕಾರಿಯ ಮಗಳಾಗಿರುವ ಇಲೋನಾ ಕುಫಾಲ್ ನಾಜಿ ಅಧಿಕಾರಿಗಳ ಮತ್ತು ಹೊಲೋಕಾಸ್ಟಿನಿಂದ ಬಚಾವಾದವರ ಮಕ್ಕಳೊಂದಿಗೆ ಸ್ನೇಹಕೂಟಗಳ ಸರಣಿಯನ್ನು 1992ರಲ್ಲಿ ಏರ್ಪಡಿಸಲು ಆರಂಭಿಸಿದರು. ತಲೆಮಾರುಗಳ ನೆನಪುಗಳು ಮತ್ತು ಕೋಪ, ಅಪರಾಧ ಪ್ರಜ್ಞೆ, ಮುನಿಸುಗಳಂತಹ ಭಾವನೆಗಳನ್ನು ಅನ್ವೇಷಿಸುವುದರ ಮೂಲಕ ಭವಿಷ್ಯತ್ತನ್ನು ನಿರ್ಮಿಸುವುದು ಅವರ ಗುರಿಯಾಗಿತ್ತು.
ನೆಲ್ಸನ್ ಮಂಡೇಲಾ ಅವರ ಟ್ರುತ್ ಆಂಡ್ ರೀಕನ್ಸೀಲಿಯೇಷನ್ ಕಮಿಷನ್ ಸಹ ಇಂತಹ ಕಲ್ಪನೆಯೊಂದರ ಕಾರ್ಯರೂಪವಾಗಿದೆ. 2008ರ ಆಗಸ್ಟ್ 15ರಂದು ನಡೆದ ರಾಜೀವ್ ಗಾಂಧಿಯವರ ಮಗಳಾದ ಪ್ರಿಯಾಂಕಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಕೊಲೆಗೆ ಕಾರಣವಾದ ನಳಿನಿ ಶ್ರೀಧರನ್ ಅವರ ಭೇಟಿ ಕಷ್ಟಕರವಾದ ನೆನಪಿನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮತ್ತೊಂದು ಪ್ರಯತ್ನವಾಗಿದೆ. “ಇದು ನಾನು ಅನುಭವಿಸಿದ ನಷ್ಟ ಮತ್ತು ಹಿಂಸೆಯೊಡನೆ ನೆಮ್ಮದಿಗೆ ಬರುವ ಮಾರ್ಗವಾಗಿದೆ.” ಎಂದು ಪ್ರಿಯಾಂಕಾ ಭೇಟಿಯ ನಂತರ ಹೇಳಿಕೊಂಡರು.
ಪೋಸ್ಟ್-ಸ್ಕ್ರಿಪ್ಟ್
ದೇಶವಿಭಜನೆ ಸೃಷ್ಟಿಸಿದ ಹಿಂದೂ-ಮುಸಲ್ಮಾನ ಗಾಯದ ಹಿನ್ನಲೆಯಲ್ಲಿ ಬಾಲಿವುಡ್ ಆ ಕಾಲದ ನೆಹರುವಾದಿ ಜಾತ್ಯಾತೀತ ಮೌಲ್ಯಗಳಿಗೆ ಬದ್ಧವಾಗಿತ್ತು. 1947ರ ಆಸುಪಾಸಿನಲ್ಲಿ ನಿರ್ಮಿಸಲಾದ ಬಹುತೇಕ ಹಿಂದಿ ಚಲನಚಿತ್ರಗಳಲ್ಲಿ ಹಿಂದು ಮುಸಲ್ಮಾನ ಪಾತ್ರಗಳ ಜುಗಲ್ಬಂದಿ ಕಾಣುತಲಿತ್ತು.
ಹಲವಾರು ಬಾರಿ ಮುಸಲ್ಮಾನ ನಟರು ಹಿಂದೂ ಪಾತ್ರಗಳನ್ನು ನಿರ್ವಹಿಸುತ್ತಿದ್ದದ್ದು ಮತ್ತು ಹಿಂದೂ ನಟರು ಮುಸಲ್ಮಾನ ಪಾತ್ರಗಳನ್ನು ನಿರ್ವಹಿಸುತ್ತಿದ್ದದ್ದು ಸಾಮಾನ್ಯವಾಗಿ ಹೋಗಿತ್ತು. ಇನ್ಸಾಫ್ ಕಾ ಮಂದಿರ್ ಹೇ ಯೇ, ಭಗವಾನ್ ಕಾ ಘರ್ ಹೇ (ನ್ಯಾಯದ ದೇವಾಲಯವು ದೇವರ ಈ ವಾಸಸ್ಥಳವಾಗಿರಬೇಕು) ಎಂಬ ಹಾಡು ಹಿಂದೂ ದೇವಾಲಯದಲ್ಲಿ ನಡೆದಿದ್ದ ಮುಸಲ್ಮಾನರ ಕೆಲಸವಾಗಿತ್ತು.
ಮೆಹಬೂಬ್ ಖಾನ್ ಆ ದೃಶ್ಯವನ್ನು ನಿರ್ದೇಶಿಸಿದ್ದರು, ಹಿಂದೂ ಪಾತ್ರಗಳಲ್ಲಿ ನಟಿಸಿದ್ದ ದಿಲೀಪ್ ಕುಮಾರ್, ಮುಧುಬಾಲ ಮತ್ತು ನಿಮ್ಮಿ, ಎಲ್ಲರೂ ಮುಸಲ್ಮಾನರೇ ಆಗಿದ್ದರು. ಶಕೀಲ್ ಬದಾಯುನಿ ಅವರ ಸಾಹಿತ್ಯಕ್ಕೆ ನೌಶದ್ ಅಲಿ ಸಂಗೀತ ನೀಡಿದ್ದರು. ಈ ಹಾಡನ್ನು ಹಾಡಿದ್ದವರು ಎಂದಿಗೂ ಮರೆಯಲಾಗದಂತಹ ಮೊಹಮ್ಮದ್ ರಫಿ.
‘ಭಾರತದ ಪರಿಕಲ್ಪನೆ’ಯ ವೈರಿಗಳ ಅತ್ಯುನ್ನತ ಪ್ರಯತ್ನಗಳ ನಡುವೆಯೂ ಇಂತಹ ಭಾರತ ಇನ್ನೂ ಉಳಿದಿದೆ. 2021ರ ಪಶ್ಚಿಮ ಬಂಗಾಳದ ಚುನಾವಣಾ ಸಂದರ್ಭದಲ್ಲಿ ಹಿಂದೂ ಮುಸ್ಲಿಂ ಧೃವೀಕರಣದ ಬಗ್ಗೆ ವರದಿ ಮಾಡುತ್ತಿರುವಾಗ ದ ಹಿಂದೂ ಪತ್ರಿಕೆಯ ವರದಿಗಾರರಾದ ಶಿವ್ ಸಹಯ್ ಸಿಂಗ್ ಅವರ ಡೈರಿಯಲ್ಲಿ ಇಂತದ್ದೊಂದ್ದು ಟಿಪ್ಪಣಿಯನ್ನು ಕಾಣುತ್ತದೆ:
“2017ರ ಬಾಶಿರ್ಹಾತ್ ಗಲಭೆಯ ಸಂದರ್ಭದಲ್ಲಿ 65 ವರ್ಷದ ಕಾರ್ತಿಕ್ ಘೋಷ್ ಅವರನ್ನು ಇರಿಯಲಾಗುತ್ತದೆ. ಅವರ ಪುತ್ರ ಪ್ರಭಾಕರ್ ಘೋಷ್ ಅವರು ಅವರ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಮತ್ತೋರ್ವ ಆಹುತಿ, ಫಾಜ್ಲುಮ್ ಇಸ್ಲಾಂ ಅವರನ್ನು ಅದೇ ಆಂಬುಲೆನ್ಸ್ ನಲ್ಲಿ ಕರೆದೊಯ್ಯುತ್ತಾರೆ. ಘೋಷ್ ಅವರು ಮರಣ ಹೊಂದುತ್ತಾರೆ, ಆದರೆ ಇಸ್ಲಾಂ ಬದುಕುಳಿಯುತ್ತಾರೆ.
ಹೀಗೆಯೇ 2018ರ ಅಸಾನೋಲ್ ಗಲಭೆಯ ಸಂದರ್ಭದಲ್ಲಿ ಮೌಲಾನಾ ಇಮಾದುಲ್ಲಾಹ್ ರಷೀದಿ ಅವರು ತಮ್ಮ 16 ವರ್ಷದ ಮಗನನ್ನು ಕಳೆದುಕೊಂಡ ಮೇಲೂ ತಮ್ಮ ಸಮುದಾಯವನ್ನು ಹಿಂಸೆ ಮಾಡುವುದರಿಂದ ನಿಗ್ರಹಿಸಿದ್ದರು. “ನಮ್ಮ ಸಮುದಾಯದ ಸದಸ್ಯರು ಯಾರಾದರೂ ಮತ್ತೊಂದು ಸಮುದಾಯವನ್ನು ಗುರಿಯಾಗಿಸಿದರೆ, ನಾನು ಈ ನಗರವನ್ನು ತೊರೆಯುತ್ತೇನೆ” ಎಂದಿದ್ದರು.
ಮೂಲ: ಪಾರ್ಥಾ ಎಸ್ ಘೋಷ್, ನವದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ಹಿರಿಯ ಸದಸ್ಯ
ಅನುವಾದ: ಸೂರ್ಯ ಸಾಥಿ