ಪಶ್ಚಿಮ ಬಂಗಾಳದ ಮೂರನೇ ಹಂತದ ಚುನಾವಣೆಗೆ ಮುನ್ನ, ಏಪ್ರಿಲ್ 3 ರಂದು ಹೂಗ್ಲಿ ಜಿಲ್ಲೆಯ ತಾರಕೇಶ್ವರದಲ್ಲಿ ಟಿಎಂಸಿ ಅಭ್ಯರ್ಥಿಗಳ ಪ್ರಚಾರ ನಡೆಸುತ್ತಿರುವಾಗ “ಕೋಮು ಆಧಾರದ ಮೇಲೆ ಮತಯಾಚನೆ ಮಾಡಿರುವ ಕುರಿತಂತೆ ಚುನಾವಣಾ ಆಯೋಗವು ಬುಧವಾರ ಸಂಜೆ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ನೋಟಿಸ್ ನೀಡಿದೆ.

ನೋಟಿಸ್ ಸ್ವೀಕರಿಸಿದ 48 ಗಂಟೆಗಳ ಒಳಗೆ ಮಮತಾ ಬ್ಯಾನರ್ಜಿ ತನ್ನ ಹೇಳಿಕೆಗಳನ್ನು ವಿವರಿಸಲು ಆಯೋಗವು ನಿರ್ದೇಶಿಸಿದೆ. ತಮ್ಮ ಹೇಳಿಕೆ ನೀಡಲು ವಿಫಲವಾದಲ್ಲಿ, ಯಾವುದೇ ಮುನ್ಸೂಚನೆ ಇಲ್ಲದೆ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗವು ಮಮತಾ ಅವರಿಗೆ ಎಚ್ಚರಿಕೆ ನೀಡಿದೆ.
ಮಮತಾ ಅವರ ಭಾಷಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ನೇತೃತ್ವದ ಬಿಜೆಪಿ ನಿಯೋಗವು ಚುನಾವಣಾ ಆಯೋಗಕ್ಕೆ ನೀಡಿದ ದೂರಿನ ಆಧಾರದ ಮೇಲೆ ಬ್ಯಾನರ್ಜಿ ಅವರಿಗೆ ನೋಟಿಸ್ ನೀಡಲಾಗಿದೆ.

ನಾನು ನನ್ನ ಅಲ್ಪಸಂಖ್ಯಾತ ಸಹೋದರ ಸಹೋದರಿಯರಿಗೆ ಕೈಮುಗಿದು ವಿನಂತಿಸುತ್ತಿದ್ದೇನೆ … ಬಿಜೆಪಿಯಿಂದ ಹಣವನ್ನು ತೆಗೆದುಕೊಂಡ ದೆವ್ವದ ಮಾತನ್ನು ಕೇಳಿ ಅಲ್ಪಸಂಖ್ಯಾತ ಮತಗಳನ್ನು ವಿಭಜಿಸಬೇಡಿ. ಅವರು ಅನೇಕ ಕೋಮು ಹೇಳಿಕೆಗಳನ್ನು ಪ್ರಸರಿಸುತ್ತಿದ್ದಾರೆ. ಆ ಮೂಲಕ ಮುಸ್ಲಿಂ ಮತ್ತು ಹಿಂದೂಗಳ ನಡುವೆ ಘರ್ಷಣೆಯನ್ನು ಪ್ರಾರಂಭಿಸುತ್ತಾರೆ. ಸಿಪಿಎಂ ಮತ್ತು ಬಿಜೆಪಿಯ ಒಡನಾಡಿಗಳು ಅಲ್ಪಸಂಖ್ಯಾತ ಮತಗಳನ್ನು ವಿಭಜಿಸಲು ಬಿಜೆಪಿ ನೀಡಿದ ಹಣದಿಂದ ಸುತ್ತುತ್ತಿದ್ದಾರೆ ” ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದರು.
ಭಾಷಣದ ಈ ಭಾಗವನ್ನು ಉಲ್ಲೇಖಿಸಿರುವ ಚುನಾವಣಾ ಆಯೋಗವು, ಕೋಮು ಆಧಾರದ ಮೇಲೆ ಹೇಗೆ ಮತಯಾಚನೆ ಮಾಡಿದ್ದೀರೆಂದು ಮಮತಾ ಅವರನ್ನು ಪ್ರಶ್ನಿಸಿದೆ.
ಇದಕ್ಕೂ ಮೊದಲೇ, ಚುನಾವಣಾ ಆಯೋಗವು, ಕೇಂದ್ರ ಸರ್ಕಾರದ ಅಣತಿಯಂತೆ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದ ಮಮತಾ ಬ್ಯಾನರ್ಜಿ, ಚುನಾವಣಾ ಆಯೋಗದ ಪಾರದರ್ಶಕತೆಯ ಕುರಿತಂತೆ ಈ ಹಿಂದೆ ಹಲವು ಬಾರಿ ಅನುಮಾನ ವ್ಯಕ್ತಪಡಿಸಿದ್ದರು.
ನಂದಿಗ್ರಾಮದಲ್ಲಿ ತನಗೆ ಹಲ್ಲೆ ಮಾಡಿದ್ದಾರೆಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದರೆ, ಚುನಾವಣಾ ಆಯೋಗವು ಜನಸಂದಣಿ ಹೆಚ್ಚಿದ ಕಾರಣ ಉಂಟಾದ ಘರ್ಷಣೆಯಿಂದ ಮಮತಾ ಕಾಲಿಗೆ ಗಾಯವಾಗಿದೆ ಎಂದು ಬ್ಯಾನರ್ಜಿಯ ಹೇಳಿಕೆಗೆ ವ್ಯತಿರಿಕ್ತ ಹೇಳಿಕೆ ನೀಡಿತ್ತು.
ಚುನಾವಣಾ ಆಯೋಗ ನೋಟೀಸ್ ನೀಡಿದ ಕೆಲವೇ ಕ್ಷಣದಲ್ಲಿ ಪ್ರತಿಕ್ರಿಯಿಸಿದ ತೃಣಮೂಲ ಸಂಸದ ಮಾಹುವಾ ಮೊಯಿತ್ರಾ, “ಬಿಜೆಪಿಯ ದೂರುಗಳ ಬಗ್ಗೆ ಮಮತಾ ಅವರಿಗೆ ಚುನಾವಣಾ ಆಯೋಗದಿಂದ ನೋಟಿಸ್ ಜಾರಿಗೊಳಿಸಿದ್ದಾರೆ. ಟಿಎಂಸಿ ದೂರುಗಳ ಬಗ್ಗೆ ಯಾಕೆ ಏನು ಕ್ರಮಗಳಿಲ್ಲ ಎಂದು ಪ್ರಶ್ನಿಸಿದ್ದಾರೆ. ಕನಿಷ್ಠ ಪಕ್ಷ ನಿಷ್ಪಕ್ಷಪಾತ ಮಾಡುವಂತೆ ನಾಟಕವನ್ನಾದರೂ ಮಾಡಿ ಎಂದು ಅವರು ಆಯೋಗವನ್ನು ಲೇವಡಿ ಮಾಡಿದ್ದಾರೆ.






