ಕೊನೆಗೂ ಬಿಜೆಪಿ ಸೇಡು ತೀರಿಸಿಕೊಂಡಿದೆ. 2019ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಬಿಜೆಪಿ-ಶಿವಸೇನೆ ಸರ್ಕಾರ ರಚನೆ ಆಗಬೇಕಿತ್ತು. ಆದರೆ ಮುಖ್ಯಮಂತ್ರಿ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಡಲು ಶಿವಸೇನೆ, ಶಿವಸೇನೆಗೆ ಬಿಟ್ಟುಕೊಡಲು ಬಿಜೆಪಿ ಒಪ್ಪದ ಹಿನ್ನೆಲೆಯಲ್ಲಿ 25 ವರ್ಷಗಳ ಶಿವಸೇನೆ-ಬಿಜೆಪಿ ಮೈತ್ರಿ ಮುರಿದುಬಿದ್ದಿತ್ತು. ಯಾರೂ ಲೆಕ್ಕಾಚಾರ ಹಾಕದ ರೀತಿಯಲ್ಲಿ ಕಾಂಗ್ರೆಸ್, ಎನ್ ಸಿಪಿ ಮತ್ತು ಶಿವಸೇನೆ ಮೈತ್ರಿಯ ಮಹಾ ವಿಕಾಸ ಆಘಾಡಿ (MVA) ಸರ್ಕಾರ ರಚನೆಯಾಯಿತು. ಅಂದಿನಿಂದಲೂ ಮಹಾ ವಿಕಾಸ ಆಘಾಡಿ ಸರ್ಕಾರ ಕೆಡವಿ ತನ್ನ ಸರ್ಕಾರ ರಚಿಸಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿ ಸುಮಾರು ಎರಡೂವರೆ ವರ್ಷಗಳ ಬಳಿಕ ಯಶಸ್ವಿಯಾಗುತ್ತಿದೆ.
2019ರ ಚುನಾವಣೆಯಲ್ಲಿ ಶಿವಸೇನೆ ಮತ್ತು ಬಿಜೆಪಿ ಜಂಟಿಯಾಗಿ ಸ್ಪರ್ಧಿಸಿದ್ದವು. ಬಿಜೆಪಿ 106 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಶಿವಸೇನೆಯು ಕೇವಲ 56 ಸ್ಥಾನ ಪಡೆದಿತ್ತು. 288 ಸಂಖ್ಯಾಬಲದ ವಿಧಾನಸಭೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಆರಾಮವಾಗಿ ಸರ್ಕಾರ ರಚಿಸಬಹುದಿತ್ತು. ಆದರೆ ಶರದ್ ಪವಾರ್ ಅವರ ಎನ್ಸಿಪಿ ಮತ್ತು ಕಾಂಗ್ರೆಸ್ನೊಂದಿಗೆ ಸರ್ಕಾರ ರಚಿಸಲು ಶಿವಸೇನೆ ನಿರ್ಧರಿಸುವವರೆಗೆ ಸುಮಾರು ಒಂದು ತಿಂಗಳ ಕಾಲ ರಾಜಕೀಯ ನಾಟಕ ನಡೆಯಿತು. ತಮ್ಮ ತಂದೆ ಬಾಳಾ ಸಾಹೇಬ್ ಠಾಕ್ರೆ ಎಂದೂ ಒಪ್ಪದೇ ಇದ್ದ ಶರದ್ ಪವಾರ್ ಅವರನ್ನು ‘ರಾಜಕೀಯ ಗಾಡ್ ಫಾದರ್’ ಎಂದು ಒಪ್ಪಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾದರು.
ಆಗ ಬಿಜೆಪಿ ಎಷ್ಟು ಹತಾಶವಾಗಿತ್ತು ಎಂಬುದಕ್ಕೆ ದೇವೇಂದ್ರ ಫಡ್ನವೀಸ್ ಮಧ್ಯರಾತ್ರಿ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇ ಸಾಕ್ಷಿ. ಅದೂ ಬದ್ದ ವೈರಿ ಎನ್ ಸಿಪಿಯ ನಾಯಕ ಅಜಿತ್ ಪವಾರ್ ಜೊತೆ ಸೇರಿ.. ಆದರೆ ಅಜಿತ್ ಪವಾರ್ ಅವರನ್ನು ತಮ್ಮತ್ತ ಸೆಳೆಯುವಲ್ಲಿ ಶರದ್ ಪವಾರ್ ಯಶಸ್ವಿಯಾದರು. ದೇವೇಂದ್ರ ಫಡ್ನವೀಸ್ ಅವರು 48 ಗಂಟೆಗಳ ಒಳಗೆ ರಾಜೀನಾಮೆ ನೀಡಬೇಕಾಯಿತು. ಆಗ ಶರದ್ ಪವಾರ್ ಅವರನ್ನು ಮಾಸ್ಟರ್ ಸ್ಟ್ರಾಟಜಿಸ್ಟ್ ಎಂದು ವ್ಯಾಖ್ಯಾನಿಸಲಾಗಿತ್ತು.
ಕೈಗೆ ಬಂದ ಅಧಿಕಾರ ಎಂಬ ತುತ್ತನ್ನು ಬಾಯಿಗೆ ಸಾಗಿಸುವುದರೊಳಗೆ ಕಳೆದುಕೊಂಡಿದ್ದು ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ದೇವೇಂದ್ರ ಫಡ್ನವೀಸ್ ಮರೆಯಲಾರದ ನೋವಾಗಿತ್ತು. ಒಂದು ಕಾಲದ ಅತ್ಯಂತ ವಿಶ್ವಾಸಾರ್ಹ ಮಿತ್ರ ಪಕ್ಷದಿಂದ ದ್ರೋಹವಾಯಿತು ಎಂದೆಣಿಸಿದರು. ಬಿಜೆಪಿ ಮತ್ತು ಶಿವಸೇನೆ ಸ್ವಾಭಾವಿಕ ಮಿತ್ರಪಕ್ಷಗಳಾಗಿದ್ದವು. ಎರಡೂ ಹಿಂದುತ್ವದ ರಾಜಕಾರಣದಲ್ಲಿ ನಂಬಿಕೆ ಇಟ್ಟಿರುವವು. ಕರ ಸೇವಕರಿಂದ ಬಾಬರಿ ಮಸೀದಿ ಕೆಡವಿದಾಗ ಬಾಳಾ ಸಾಹೇಬ್ ಠಾಕ್ರೆ ಇದು ಶಿವಸೈನಿಕರ ಕೆಲಸ ಎಂದು ಹೆಮ್ಮೆಯಿಂದ ಹೇಳಿದ್ದರು. ಅಂತಹ ಮೈತ್ರಿ ಮುರಿದುಬಿದ್ದಿತ್ತು.
ಮೋದಿ ಮತ್ತು ಅಮಿತ್ ಶಾ ನೇತೃತ್ವದ ಬಿಜೆಪಿಯು ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್ಕೆ ಅಡ್ವಾಣಿಯವರಿಗಿಂತ ಭಿನ್ನವಾಗಿದೆ. ಬಿಜೆಪಿ ಆದಷ್ಟು ಬೇಗ ಶಿವಸೇನೆಯನ್ನು ತ್ಯಜಿಸಿ ಸ್ವಂತ ಸರ್ಕಾರ ರಚಿಸುತ್ತದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಶ್ರಮದಿಂದ ಬಿಜೆಪಿ ಬೆಳೆಯುತ್ತಿದೆ ಎಂದೆಣಿಸಿದ ಉದ್ಧವ್ ಠಾಕ್ರೆ ಸೈದ್ಧಾಂತಿಕವಾಗಿ ಇನ್ನೊಂದು ತುದಿಯಲ್ಲಿರುವ ಕಾಂಗ್ರೆಸ್ ಮತ್ತು ಎನ್ಸಿಪಿಯಿಂದ ಬೆಂಬಲ ಪಡೆಯಲು ನಿರ್ಧರಿಸಿದ್ದರು.
ಗಣೇಶ್ ನಾಯ್ಕ್, ಛಗನ್ ಭುಜಬಲ್, ನಾರಾಯಣ ರಾಣೆ ಮತ್ತು ರಾಜ್ ಠಾಕ್ರೆಯಂತಹ ನಾಯಕರು ಹಿಂದೆಯೇ ಶಿವಸೇನೆ ತೊರೆದಿದ್ದರು. ಪಕ್ಷದ ಬಂಡಾಯವನ್ನು ಲಾಭ ಮಾಡಿಕೊಳ್ಳಲು ಏಕನಾಥ್ ಶಿಂಧೆ ಬಿಟ್ಟರೆ ಉಳಿದವರಿಗೆ ಸಾಧ್ಯವಾಗುತ್ತಿರಲಿಲ್ಲ. ಏಕನಾಥ್ ಶಿಂಧೆಗೆ ಸುಮಾರು 40 ಶಾಸಕರ ಬೆಂಬಲ ಇದೆ. ಇದು ಠಾಕ್ರೆ ಕುಟುಂಬಕ್ಕೆ ಮತ್ತು ಪಕ್ಷದೊಳಗಿನ ಅವರ ಅಜೇಯತೆಗೆ ಹೊಡೆತವಾಗಿದೆ.
2019ರಲ್ಲಿ ಪ್ರಸ್ತುತ ಮೈತ್ರಿ ರಚನೆ ಮಾಡಿದ ಶ್ರೇಯವನ್ನು ಶರದ್ ಪವಾರ್ಗೆ ನೀಡಲಾಯಿತು. ಅವರು ಇರುವವರೆಗೂ ಮೈತ್ರಿ ಉಳಿಯುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಈಗ ಅವರು ಈ ಬಿಕ್ಕಟ್ಟು ಶಿವಸೇನೆಯ ಆಂತರಿಕ ವಿಚಾರ ಎಂದು ಹೇಳಿದ್ದಾರೆ. ಬಿಕ್ಕಟ್ಟಿನಿಂದ ಶರದ್ ಪವಾರ್ ಕೈತೊಳೆದುಕೊಂಡಿದ್ದಾರೆಯೇ? ಅಥವಾ ಅವರು ಬಿಕ್ಕಟ್ಟನ್ನು ಪರಿಹರಿಸಲು ಅಸಮರ್ಥರಾಗಿದ್ದಾರೆಯೇ? ಎಂಬ ಪ್ರಶ್ನೆ ಮೂಡುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸುಲಭವಾಗಿ ಬಲಿಯಾಗುತ್ತಾರೆ ಎಂದು ಪರಿಗಣಿಸಲಾಗಿತ್ತು. ಆದರೆ ಅವರು ಇಲ್ಲಿಯವರೆಗೆ ಒಟ್ಟಾಗಿದ್ದಾರೆ. ಒಟ್ಟಿನಲ್ಲಿ ಮೂರು ವಿಷಯಗಳು ಈ ಬಿಕ್ಕಟ್ಟಿಗೆ ಕಾರಣವಾಗಿವೆ ಎನ್ನಬಹುದು.
1 ಉದ್ಧವ್ ಠಾಕ್ರೆ ಅವರ ಕೆಲಸದ ಶೈಲಿಯು ಅತಿದೊಡ್ಡ ನೂನ್ಯತೆಯಾಗಿತ್ತು. ಮಂತ್ರಿಗಳ ನಿರ್ವಹಣೆ ಸರಿ ಇರಲಿಲ್ಲ. ಅಧಿಕಾರಿಗಳ ಮಾತು ಕೇಳುತ್ತಿದ್ದರು. ಇದು ತಮ್ಮದೇ ಪಕ್ಷದ ಸರ್ಕಾರವಲ್ಲ, ಸಮ್ಮಿಶ್ರ ಸರ್ಕಾರ ಎಂಬುದನ್ನು ಮರೆತಿದ್ದರು. ಇದರ ಪರಿಣಾಮವಾಗಿಯೇ ಈಗ ಶರದ್ ಪವಾರ್ ಸುಮ್ಮನಾಗಿದ್ದಾರೆ ಎಂದು ಹೇಳಲಾಗುತ್ತಿದೆ.
2 ಮೋದಿ ಸರ್ಕಾರದ ವಿರುದ್ಧ ಶಿವಸೇನೆಯ ಮುಖಾಮುಖಿ ಧೋರಣೆ. ಉದ್ಧವ್ ಠಾಕ್ರೆ ತಾತ್ತ್ವಿಕವಾಗಿ ಪ್ರಧಾನಿಯೊಂದಿಗೆ ಕೆಲಸದ ಸಂಬಂಧವನ್ನು ಬೆಳೆಸಿಕೊಳ್ಳಬೇಕಿತ್ತು. ಇದು ಸಾಧ್ಯವಾಗದ ಕಾರಣಕ್ಕೆ ಕೇಂದ್ರ ಸರ್ಕಾರ ಮಹಾರಾಷ್ಟ್ರದ ಮಂತ್ರಿಗಳ ವಿರುದ್ಧ ಕ್ರಿಮಿನಲ್ ತನಿಖೆ ಕೈಗೆತ್ತಿಕೊಂಡಿದೆ. ಇದು ಪಕ್ಷಾಂತರಗಳನ್ನು ಉತ್ತೇಜಿಸುವ ಉದ್ದೇಶದಿಂದ ಬೆದರಿಕೆಯ ತಂತ್ರವಾಗಿದೆ. ಇಬ್ಬರು ಮಂತ್ರಿಗಳಾದ ಅನಿಲ್ ದೇಶಮುಖ್ ಮತ್ತು ನವಾಬ್ ಮಲಿಕ್ ಜೈಲಿನಲ್ಲಿದ್ದಾರೆ. ಈ ವಾರ ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೆ ಒಳಪಟ್ಟಿರುವ ಮೂರನೇ ಅನಿಲ್ ಪರಬ್ ಅವರನ್ನು ಬಂಧಿಸುವ ಸಾಧ್ಯತೆಯಿದೆ.
3 ಅಧಿಕಾರಶಾಹಿಯನ್ನು ಪಳಗಿಸುವಲ್ಲಿ ಠಾಕ್ರೆ ಸರ್ಕಾರ ವಿಫಲವಾಗಿರುವುದು ಸಹ ತನ್ನ ದುಷ್ಪರಿಣಾಮವನ್ನು ಸಾಬೀತುಪಡಿಸಿದೆ. ಅಧಿಕಾರಶಾಹಿಯು ಎಷ್ಟು ದುರ್ಬಲವಾಗಿದೆಯೆಂದರೆ ಫೈಲುಗಳು ಮುಖ್ಯಮಂತ್ರಿಗಳ ಕಛೇರಿಯನ್ನು ತಲುಪುವುದಕ್ಕಿಂತಲೂ ವೇಗವಾಗಿ ದೇವೇಂದ್ರ ಫಡ್ನವೀಸ್ ಅವರ ಟೇಬಲ್ಗೆ ಹೋಗುತ್ತವೆ. ಮುಂಬೈನಲ್ಲಿ ಹಿರಿಯ ಪೊಲೀಸರ ವಿರುದ್ಧದ ತನಿಖೆಗಳು ನಂಬಿಕೆಯ ಕೊರತೆಯನ್ನು ಸೃಷ್ಟಿಸಿದೆ.
ಪಕ್ಕದ ಕರ್ನಾಟಕದಲ್ಲಿ ವಿರೋಧ ಪಕ್ಷಗಳ ಸರ್ಕಾರಗಳು ಮತ್ತು ಸಂಸದರ ಅವಸಾನದಿಂದ ಮಹಾರಾಷ್ಟ್ರ ಸರ್ಕಾರ ಪಾಠ ಕಲಿಯಬೇಕಿತ್ತು. ಹೆಚ್ಚು ಜಾಗರೂಕರಾಗಿರಬೇಕಿತ್ತು. ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರವು ಪ್ರತಿಯೊಂದು ಸಂಸ್ಥೆ ಮತ್ತು ಅವಕಾಶವನ್ನು ಬಳಸಿಕೊಳ್ಳುತ್ತದೆ ಎಂದು ತಿಳಿದಿದ್ದರೂ ನಾಯಕರು ಸಮನ್ವಯ ಸಾಧಿಸದ ಪರಿಣಾಮ ಮಹಾ ವಿಕಾಸ ಆಘಾಡಿ ಸರ್ಕಾರ ಪತನವಾಗುತ್ತಿದೆ.