ಅಂತರಾಷ್ಟ್ರೀಯ ಮಾನವ ಹಕ್ಕು ಹೋರಾಟಗಾರರಿಂದ ಹಿಡಿದು ದೇಶದ ಸಾಮಾಜಿಕ ಹೋರಾಟಗಾರರು, ಚಿಂತಕರು ಭಾರತದಲ್ಲಿ ಹೆಚ್ಚುತ್ತಿರುವ ಜನಾಂಗೀಯ ಧ್ವೇಷ ಮತ್ತು ನರಮೇಧದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಹಿಂದುತ್ವ ರಾಜಕಾರಣಕ್ಕೆ ಮುಸ್ಲಿಂ ಜನಾಂಗೀಯ ಧ್ವೇಷ ಇಂಧನವಾಗಿದೆ. ಹರಿದ್ವಾರದಲ್ಲಿ ಹಿಂದು ಸ್ವಾಮೀಜಿಗಳು ಮುಸ್ಲಿಮರ ಜನಾಂಗೀಯ ನಿರ್ಮೂಲನೆಗೆ ಕರೆ ನೀಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವಂತೆ ಮಾಡಿದ್ದರು. ಅದರ ಪ್ರಮುಖ ಆರೋಪಿಗಳಲ್ಲೊಬ್ಬನಾದ ಯತಿ ನರಸಿಂಗಾನಂದ ಇದೀಗ ಮತ್ತೆ ಧ್ವೇಷ ಭಾಷಣ ಮಾಡಿ ಸುದ್ದಿಯಲ್ಲಿದ್ದಾರೆ.
ದೆಹಲಿಯ ಬುರಾರಿ ಬುರಾರಿ ಮೈದಾನದಲ್ಲಿ ಆಯೋಜಿಲಾದ ಹಿಂದೂ ಮಹಾಪಂಚಾಯತ್ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ಆಯುಧಗಳನ್ನೆತ್ತಿಕೊಳ್ಳುವಂತೆ ಯತಿ ನರಸಿಂಹಾನಂದ ಪ್ರಚೋದನೆಯ ಕರೆ ನೀಡಿದ್ದಾರೆ.
ಈ ಹಿಂದೆ ಹರಿದ್ವಾರದಲ್ಲಿ ನಡೆದಿದ್ದ ಇಂತಹದ್ದೇ ಕಾರ್ಯಕ್ರಮದಲ್ಲಿ ಮುಸ್ಲಿಮರ ನರಮೇಧಕ್ಕೆ ಕರೆ ನೀಡಿದ್ದ ಯತಿ ನರಸಿಂಹಾನಂದ ಈ ಕಾರ್ಯಕ್ರಮದಲ್ಲೂ ಮುಸ್ಲಿಂ ಜನಾಂಗೀಯ ವಿರೋಧಿ ಭಾಷಣ ಮಾಡಿದ್ದಾರೆ.
ಒಂದು ವೇಳೆ ಭಾರತದಲ್ಲಿ ಮುಸ್ಲಿಂ ಪ್ರಧಾನಮಂತ್ರಿ ಬಂದರೆ 40% ಹಿಂದೂಗಳನ್ನು ಕೊಲ್ಲಲಾಗುತ್ತದೆ. ಇದು ಹಿಂದೂಗಳ ಭವಿಷ್ಯ, ಇದನ್ನು ನೀವು ಬದಲಿಸಬೇಕಿದ್ದರೆ ಪುರುಷರಾಗಿ.. ಯಾರು ಕೈಯಲ್ಲಿ ಆಯುಧ ಹೊಂದುವವನೋ ಅವರೇ ಪುರುಷರುʼ ಎಂದು ಮುಸ್ಲಿಮರ ವಿರುದ್ಧ ಆಯುಧ ಎತ್ತಲು ನರಸಿಂಹಾನಂದ ಪ್ರಚೋದಿಸಿದ್ದಾರೆ. ಸದ್ಯ, ಈ ಭಾಷಣದ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಇನ್ನು ಈ ಕಾರ್ಯಕ್ರಮಕ್ಕೆ ದಿಲ್ಲಿ ಪೊಲೀಸರು ಅನುಮತಿ ನೀಡಿರಲಿಲ್ಲ ಎಂದು ವರದಿ ಆಗಿದೆ. ಅದಾಗ್ಯೂ, ಈ ಕಾರ್ಯಕ್ರಮ ನಡೆಸಲು ಜನವರಿ 4 ರಿಂದಲೇ ತಯಾರಿ ನಡೆದಿದೆ ಎನ್ನಲಾಗಿದೆ. ಈ ಹಿಂದೆ ಜಂತರ್ ಮಂತರ್ ನಲ್ಲಿ ಮುಸ್ಲಿಂ ನರಮೇಧಕ್ಕೆ ಕರೆ ನೀಡಲಾಗಿದ್ದ ಕಾರ್ಯಕ್ರಮವನ್ನು ಆಯೋಜಿಸಿದ್ದ ಸಂಘಟನೆಯೇ ʼಹಿಂದೂ ಮಹಾಪಂಚಾಯತ್ʼ ಅನ್ನು ಆಯೋಜಿಸಿದೆ.
ವರದಿಗಾರಿಕೆಗೆ ತೆರಳಿದ್ದ ಪತ್ರಕರ್ತರ ಮೇಲೆ ಹಿಂದುತ್ವದ ಗೂಂಡಾಗಿರಿ
ಇನ್ನು, ಕಾರ್ಯಕ್ರಮವನ್ನು ವರದಿ ಮಾಡಲು ತೆರಳಿದ್ದ ಮೂವರು ಮುಸ್ಲಿಂ ಪತ್ರಕರ್ತರ ಮೇಲೆ ಅಪರಿಚಿತ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಮೀರ್ ಫೈಸಲ್, ಎಮ್ ಡಿ ಮೆಹರಬಾನ್ ಹಾಗೂ ಅರ್ಬಾಬ್ ಅಲಿ ದಾಳಿಗೊಳಗಾದ ಪತ್ರಕರ್ತರು ಎಂದು ಪ್ರಾಥಮಿಕ ವರದಿಗಳು ಹೇಳಿವೆ. ಅದಾಗ್ಯೂ ಇನ್ನೂ ಕೆಲವು ಪತ್ರಕರ್ತರ ಮೇಲೂ ಹಿಂದೂ ಕಾರ್ಯಕರ್ತರ ಗುಂಪು ಹಲ್ಲೆ ಮಾಡಿದೆ ಎಂದು ವರದಿಗಳು ಹೇಳಿವೆ. ತಮ್ಮ ಮೇಲಾದ ಹಲ್ಲೆ ವಿರುದ್ಧ ಪತ್ರಕರ್ತರಾದ ಶಿವಂಗಿ ಸಕ್ಸೇನಾ ಮತ್ತು ರೌನಕ್ ಭಟ್ ಮುಖರ್ಜಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾರ್ಯಕ್ರಮವನ್ನು ವರದಿ ಮಾಡಲು ತೆರಳಿದ್ದ ಇವರ ಮೇಲೆ ಅಪರಿಚಿತ ದುಷ್ಕರ್ಮಿಗಳು ದಾಳಿ ಮಾಡಿದ್ದು, ಚಿತ್ರೀಕರಣ ಮಾಡಿದ ವಿಡಿಯೋಗಳನ್ನು ಬಲವಂತವಾಗಿ ಡಿಲಿಟ್ ಮಾಡಿಸಿದ್ದಾರೆ ಎಂದು ವರದಿಯಾಗಿದೆ.
ಹಿಂದುತ್ವದ ಗುಂಪು ದಾಳಿ ಮಾಡಿದ ಮೇಲೆ ದಿಲ್ಲಿ ಪೊಲೀಸರು ನಾಲ್ವರು ಮುಸ್ಲಿಂ ಪತ್ರಕರ್ತರು ಸೇರಿದಂತೆ ಐವರು ಪತ್ರಕರ್ತರನ್ನು ಅಲ್ಲಿಂದ ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. ಇನ್ನೆರಡು ಪತ್ರಕರ್ತರಾದ ಶಾಹಿದ್ ತಾಂತ್ರೆ ಹಾಗೂ ಮೇಘಾನಂದ್ ಬೋಸ್ ಅವರನ್ನು ಮುಖರ್ಜೀ ನಗರ ಠಾಣೆಗೆ ಕರೆದೊಯ್ಯಲಾಗಿದೆ.