ತುಮಕೂರು (Tumkur): ಲೋಕಸಭಾ ಚುನಾವಣೆ (MP Election) ಸಮೀಪಿಸುತ್ತಿದ್ದಂತೆ ತುಮಕೂರು (Tumkur) ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಭರ್ಜರಿ ಪೈಪೋಟಿ ಶುರುವಾಗಿದೆ.
ಮಾಜಿ ಸಂಸದ ಮುದ್ದಹನುಮೇಗೌಡ (Muddahanumegowda) ಅವರು ಕಾಂಗ್ರೆಸ್ (Congress) ಸೇರಿದ ಬೆನ್ನಲ್ಲೇ ಬಿಜೆಪಿ (BJP) ಪಾಳಯದಲ್ಲಿ ಟಿಕೆಟ್ ಗಾಗಿ ಪೈಪೋಟಿ ಜೋರಾಗಿದೆ. ಟಿಕೆಟ್ ರೇಸ್ ನಲ್ಲಿ ಮಾಜಿ ಸಚಿವರಾದ ವಿ. ಸೋಮಣ್ಣ (V Somanna), ಜೆ.ಸಿ. ಮಾಧುಸ್ವಾಮಿ (J.C.MadhuSwamy) ಇದ್ದಾರೆ. ಯಾರಿಗೆ ಟಿಕೆಟ್ ಸಿಗಲಿದೆ ಎಂದು ಕಾದು ನೋಡಬೇಕಿದೆ.
![](https://pratidhvani.com/wp-content/uploads/2024/02/others_55-jpg.webp)
ಇತ್ತ ಮಾಜಿ ಸಂಸದ ಮುದ್ದಹನುಮೇಗೌಡರ ಮೇಲೆ ಪ್ರೀತಿ ಹೊಂದಿದ್ದ ಬಿ.ಸುರೇಶ್ ಗೌಡ ಮುದ್ದಹನುಮೇಗೌಡರೇ ಎನ್ನುತ್ತಿದ್ದರು. ಆದರೆ ಇದೀಗ ಅವರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಹಾಲಿ ಸಂಸದ ಜಿ.ಎಸ್.ಬಸವರಾಜು (G.S.Basavaraju) ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆಸಿದ್ದರಿಂದ ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಬಿಜೆಪಿ ಟಿಕೆಟ್ ಪಡೆದೇ ತಿರುತ್ತೇನೆ ಎಂದು ಪಣ ತೊಟ್ಟಿದ್ದಾರೆ. ಹಾಲಿ ಸಂಸದ ಜಿ.ಎಸ್.ಬಸವರಾಜು ಮಾತ್ರ ಸೋಮಣ್ಣ ಅವರನ್ನು ತುಮಕೂರಿನಿಂದ ಕಣಕ್ಕಿಳಿಸಬೇಕು ಎನ್ನುತ್ತಿದ್ದಾರೆ.
ಬಿಜೆಪಿ ಜಿಲ್ಲಾ ಖಜಾಂಚಿ, ಸಿದ್ಧಗಂಗಾ ಆಸ್ಪತ್ರೆಯ ಡಾ. ಪರಮೇಶ್ (Dr.Parmesh) ಅವರು ತಮಗೇ ಟಿಕೆಟ್ ಖಚಿತವೆಂದು ಹೇಳಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ ಶಂಕರ್ ತಾವೂ ಅಕಾಂಕ್ಷಿ ಎಂದು ಹೇಳಿದ್ದು, ಬಿಜೆಪಿಯಲ್ಲಿ ಬಣಗಳಾಗಿವೆ.
ಬಿಜೆಪಿ ಟಿಕೆಟ್ ಬೇಡಿಕೆ ಮುಂದಿಟ್ಟಿರುವ ಸೋಮಣ್ಣ ಅವರಿಗೆ ಸ್ವಪಕ್ಷೀಯರು, ಸ್ವಜಾತಿಯವರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೂ, ಮಾಜಿ ಸಚಿವ ವಿ.ಸೋಮಣ್ಣ ಟಿಕೆಟ್ ಖಾತ್ರಿಗೆ ಅವಿರತ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಹಾಲಿ ಸಂಸದ ಜಿ.ಎಸ್.ಬಸವರಾಜು ಜೊತೆಯಾಗಿದ್ದಾರೆ.
ತುಮಕೂರಿನಲ್ಲಿ ಬಿಜೆಪಿ ಟಿಕೆಟ್ ಬಯಸಿರುವ ಮಾಜಿ ಸಚಿವ ವಿ.ಸೋಮಣ್ಣ ದೆಹಲಿಯಲ್ಲಿ ನಿಂತು ರಾಜ್ಯಸಭೆ ಟಿಕೆಟ್ ಬೇಕೆಂಬ ಇಂಗಿತವನ್ನು ವ್ಯಕ್ತಪಡಿಸಿದ್ದರು. ರಾಜ್ಯಸಭೆ, ಇಲ್ಲವೇ ಲೋಕಸಭೆ ಎಂಬ ದಾಳ ಉರುಳಿಸಿದ್ದರು. ಅದರೆ, ರಾಜ್ಯಸಭೆಗೆ ಹೋಗಬೇಕೆಂಬ ಬಯಕೆ ಫಲಕಾರಿಯಾಗಿಲ್ಲ. ಇದೀಗ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ (H.D.Devegowda), ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (H.D.Kumarswamy) ಅವರನ್ನು ಭೇಟಿಯಾಗಿ ವಿ.ಸೋಮಣ್ಣ ಬಿಜೆಪಿ ಪಾಳೆಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
ಸೋಮಣ್ಣ ಹೊರಗಿನವರು ಎಂಬ ದಾಳ ಉರುಳಿಸಿ ಸೋಮಣ್ಣರನ್ನು ತುಮಕೂರಿಗೆ ಬಾರದಂತೆ ಕಟ್ಟಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ರಿಯೆಲ್ ಎಸ್ಟೆಟ್ ಉದ್ಯಮಿ, ಬಿಜೆಪಿ ರಾಜ್ಯ ಓಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಚಿದನಾಂದ್, ಬಹಿರಂಗವಾಗಿಯೇ ಸೋಮಣ್ಣ ಬಗ್ಗೆ ಅಸಮಧಾನ ಹೊರ ಹಾಕಿದ್ದಾರೆ. ಹಾಗೆ ಸಿದ್ಧಗಂಗಾ ಆಸ್ಪತ್ರೆಯ ಡಾ.ಪರಮೇಶ್, ಎಸ್.ಡಿ ದಿಲೀಪ್ ಕುಮಾರ್ , ಮಾಧುಸ್ವಾಮಿ ಕೂಡ ಸೋಮಣ್ಣಗೆ ವಿರುದ್ಧವಿದ್ದಾರೆ. ವಲಸಿಗರಿಗೆ ಟಿಕೆಟ್ ನೀಡಬಾರದು ಎಂಬ ವಾದಕ್ಕೆ, ಸೋಮಣ್ಣ ಪಕ್ಷನಿಷ್ಠೆ, ತ್ಯಾಗವೆಂಬ ಪ್ರತಿವಾದ ಮುಂದಿಟ್ಟಿದ್ದಾರೆ.
ಮಾಜಿ ಸಚಿವ ಬಿ.ಸಿ.ನಾಗೇಶ್, ಎಸ್.ಡಿ. ದಿಲೀಪ್ ಕುಮಾರ್, ರಿಯಲ್ ಎಸ್ಟೆಟ್ ಉದ್ಯಮಿ ಚಿದಾನಂದ್, ವಿನಯ್ ಬಿದರೆ, ಹೆಚ್.ಎನ್.ಚಂದ್ರಶೇಖರ್, ಅಂಬಿಕಾ ಹುಲಿನಾಯ್ಕರ್, ದೊಡ್ಡಮನೆ ಗೋಪಾಲಗೌಡ ಕೂಡ ಟಿಕೆಟ್ ಗಾಗಿ ತಮ್ಮ ಹೆಸರು ನೋಂದಾಯಿಸಿದ್ದಾರೆ.
ತುಮಕೂರಿನಲ್ಲಿ ವಿಧಾನಸಭೆಯಲ್ಲಿ ಮಣಿದವರು, ಬಿಜೆಪಿಯ ಜಿಲ್ಲಾ ಹುದ್ದೆಗಳಿರುವವರಲ್ಲಿ ಹಲವರು ಟಿಕೆಟ್ಗೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಸದ್ಯ, ಬಿಜೆಪಿ-ಜೆಡಿಎಸ್ ಮೈತ್ರಿ ಇರುವುದರಿಂದ ತುಮಕೂರು ಯಾವ ಪಕ್ಷದ ಪಾಲಿಗೆ ಹೋಗಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೂ, ಬಿಜೆಪಿಗೆ ಕ್ಷೇತ್ರ ಸಿಕ್ಕರೆ, ಮೈತ್ರಿ ಇರುವುದರಿಂದ ಗೆಲುವು ಸುಲಭವಾಗಲಿದೆ ಎಂಬ ಲೆಕ್ಕಾಚಾರದಲ್ಲಿ ಹಲವಾರು ಟಿಕೆಟ್ ಆಕಾಂಕ್ಷಿಗಳಿದ್ದಾರೆ.
#karnataka #tumkur #mpelection #bjp #bjpticket