
ಜಾತಿ ಜನಗಣತಿ ವಿಚಾರವಾಗಿ ವ್ಯಾಪಕ ಚರ್ಚೆಗಳು ನಡೆಯುತ್ತಿರುವ ವಿಚಾರವಾಗಿ ಹಾವೇರಿ ತಾಲೂಕು ಗುತ್ತಲ ಪಟ್ಟಣದಲ್ಲಿ ರಂಭಾಪುರಿ ಪೀಠದ ವೀರ ಸೋಮೇಶ್ವರ ಜಗದ್ಗುರುಗಳು ಸರ್ಕಾರದ ನಿರ್ಧಾರಕ್ಕೆ ಗರಂ ಆಗಿದ್ದಾರೆ. ಡಿ.ಕೆ ಶಿವಕುಮಾರ್ ಮುಂದಾಳತ್ವದಲ್ಲಿ ಸಮಾವೇಶ ಕೈಗೊಂಡು ನಿರ್ಧಾರ ಮಾಡ್ತಿದಾರೆ. ಈ ವರದಿ ಜಾರಿ ಆದರೆ ಸರ್ಕಾರ ಪತನವಾಗಲಿದೆ ಅಂತ ಕಾಂಗ್ರೆಸ್ ಧುರೀಣರೇ ಹೇಳಿದ್ದಾರೆ. ಜಾತಿ ಗಣತಿ ಪಾರದರ್ಶಕವಾಗಿ ಆಗಿಲ್ಲ. ವೀರಶೈವ ಲಿಂಗಾಯತ ಸಮಾಜದ ಒಳಜಾತಿಗಳ ವಿಂಗಡನೆ ಮಾಡಿದ್ದಾರೆ ಎಂದಿದ್ದಾರೆ.

ಈಗಾಗಲೇ ವೀರಶೈವ ಲಿಂಗಾಯತ ಮಹಾಸಭಾ ಅದ್ಯಕ್ಷರಾದ ಶಂಕರ್ ಬಿದರಿ ಕೂಡಾ ವೀರಶೈವ ಲಿಂಹಾಯತರ ಹೊಸ ಸಮೀಕ್ಷೆ ಮಾಡಿಸೋದಾಗಿ ಹೇಳಿದ್ದಾರೆ. ದೀನ ದಲಿತರಿಗೆ ಪುರಸ್ಕಾರ ಸಿಗಲಿ ಬೇಡ ಅನ್ನಲ್ಲ. ಆದರೆ ಬಹುಸಂಖ್ಯಾತ ಲಿಂಗಾಯತರು, ಒಕ್ಕಲಿಗ ಸಮಾಜಗಳ ಒಳ ಜಾತಿಗಳ ವಿಂಗಡನೆ ಮಾಡಿ ರಾಜಕೀಯ ಮಾಡೋದು ಸರಿ ಅಲ್ಲ. ಮನೆ ಮನೆಗೆ ಹೋಗಿ ಜಾತಿ ಗಣತಿ ಮಾಡಿಲ್ಲ. ಹೆಚ್ಚು ಮಾತಾಡಿದರೆ ರಾಜಕೀಯ ಮಾತಾಡ್ತಾರೆ ಅಂತ ನಮ್ಮ ಮೇಲೆ ಅಪವಾದ ಬರುತ್ತದೆ. ಸಂವಿಧಾನದ ಪ್ರಕಾರ ಯಾರು ಯಾರಿಗೆ ಎಷ್ಟೆಷ್ಟು ಮೀಸಲಾತಿ ಕೊಡಬೇಕು ಅಂತ ಇದೆ ಹಾಗೆ ಕೊಡಲಿ ಎಂದಿದ್ದಾರೆ.

ಸರ್ಕಾರ ಮೀಸಲಾತಿ ವ್ಯವಸ್ಥೆ ಮೀರಿ ಮೀಸಲಾತಿ ಕೊಡೋಕೆ ಹೊರಟಿರೋದು ರಾಜಕೀಯವೇ ಹೊರತು ಬೇರೆನೂ ಅಲ್ಲ. ಕಾಂಗ್ರೆಸ್ ಮುಸಲ್ಮಾನ ಸಮಾಜವನ್ನು ಎತ್ತಿಕಟ್ಟುವಂತ ಕೆಲಸ ಮಾಡೋದಾಗಲಿ, ಬಿಜೆಪಿಯವರು ಹಿಂದೂ ಹೆಸರಲ್ಲಿ ಇನ್ನೊಂದು ಹೆಜ್ಜೆ ಇಡೋದು ಸರಿ ಅಲ್ಲ. ಹಿಂದೂ – ಮುಸ್ಲಿಮರು ಸಾಮರಸ್ಯದಿಂದ ಬದುಕಬೇಕು ಅನ್ನೋದೇ ಪೀಠದ ಉದ್ದೇಶ. ಜಾತಿ ಜುನಗಣತಿ ಬಗ್ಗೆ ಚರ್ಚೆ ನಡೆಯಲಿ. ವೀರಶೈವ ಲಿಂಗಾಯತ ಮಹಾಸಭಾ ಏನು ನಿರ್ಣಯ ತಗೊಳುತ್ತೋ ನೋಡೋಣ. ಹೀಗೆ ಮಾಡಿದವರು ಅನುಭವಿಸಲೇಬೇಕು ಎಂದು ಎಚ್ಚರಿಕೆಯ ಮಾತನಾಡಿದ್ದಾರೆ.
ಪ್ರಬಲವಾದ ಲಿಂಗಾಯತ ಸಮಾಜದ ರಾಜಕೀಯವನ್ನು ಮುಗಿಸುವ ತಂತ್ರ ಅಡಗಿದೆ ಎಂದು ಕೊಪ್ಪಳದಲ್ಲಿ ಕೂಡಲ ಸಂಗಮದ ಪಂಚಮಸಾಲಿ ಸಮಾಜದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಗಂಗಾವತಿಯಲ್ಲಿ ಮಾತನಾಡಿದ ಸ್ವಾಮೀಜಿ, ಈ ವರದಿಯನ್ನು ಎಲ್ಲೆಯೋ ಕುಳಿತು ತಯಾರಿಸಿದ್ದಾರೆ. ಈ ವರದಿ ವೈಜ್ಞಾನಿಕವಾಗಿದ್ದರೆ ಒಪ್ಪಿಕೊಳ್ಳಬಹುದು. ಸಿದ್ದಗಂಗಾ ಮಠದ ಸ್ವಾಮಿಗಳು ಸಹ ನಮ್ಮ ಮಠಕ್ಕೆ ಸಮಿಕ್ಷೆಗೆ ಬಂದಿಲ್ಲ ಎಂದಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾದ ನಿರ್ಣಯಕ್ಕೆ ನನ್ನ ಬೆಂಬಲವಿದೆ ಎಂದಿದ್ದಾರೆ.

ಪಂಚಮಸಾಲಿ ಸಮಾಜವೇ 1.30 ಕೋಟಿ ಜನರು ಇದ್ದೇವೆ. ಆದರೆ 16 ಲಕ್ಷ ಎಂದು ತೋರಿಸುತ್ತಾರೆ. ಸಿದ್ದರಾಮಯ್ಯ ಈ ವರದಿಯನ್ನು ತಿರಸ್ಕರಿಸಿ ಮರು ಸಮಿಕ್ಷೆ ಮಾಡಬೇಕು. ಲಿಂಗಾಯತ ಸಮಾಜ ಶಾಸಕರು ಒಕ್ಕಟ್ಟಿನಿಂದ ಸಭೆ ಮಾಡಲಿ. ಸಹೋದರ ಸಮಾಜದ ಒಕ್ಕಲಿಗರನ್ನು ಸೇರಿಸಿಕೊಂಡು ಸಭೆ ಮಾಡಲಿ. ಈ ವರದಿಯಿಂದ ಸಮಾಜದಲ್ಲಿ ವೈಮನಸ್ಸು ಬೆಳೆಯುತ್ತದೆ. ಇದು ಸಮಿಕ್ಷೆ. ಗಣತಿ ಅಲ್ಲ. ಈ ವರದಿ ತಿರಸ್ಕರಿಸಿ ವೈಜ್ಞಾನಿಕ ವರದಿ ತಯಾರಿಸಲಿ. ಲಿಂಗಾಯತ ಜನಪ್ರತಿನಿಧಿಗಳು ಒಳಪಂಗಡ ಬಿಟ್ಟು ಜಾರಿ ಮಾಡುವ ಪ್ರಸಂಗ ಬಂದರೆ ರಾಜಿನಾಮೆ ನೀಡಲು ಸಿದ್ದವಾಗಿರಿ. ಸಮಾಜಕ್ಕಾಗಿ ನೀವು ಧ್ವನಿ ಎತ್ತದಿದ್ದರೆ ಸಮಾಜ ನಿಮ್ಮನ್ನು ಕ್ಷಮಿಸೋದಿಲ್ಲ ಎಂದಿದ್ದಾರೆ.