ಸಾರಿಗೆ ನಿಗಮಗಳು ಖಜಾನೆಯಲ್ಲಿ ದುಡ್ಡಿಲ್ಲ ಅಂತ ಬೊಬ್ಬೆ ಹೊಡೆಯುತ್ತಿವೆ. ಆದರೆ ಅಧಿಕಾರಿಗಳು ಮಾತ್ರ ಬಿಟ್ಟಿ ಶೋಕಿ ಮಾಡಲು ಹೊರಟ್ಟಿದ್ದಾರೆ. ಹೌದು ಯಾರು ಹೇಳೋರಿಲ್ಲ- ಕೇಳೋರಿಲ್ಲ ಅಂತ ಇವರ್ದು ಆಡಿದ್ದೇ ಆಟ ನಡೆದಿದ್ದೇ ದಾರಿ ಆಗಿದೆ. ಆರ್ಥಿಕ ಸಂಕಷ್ಟದ ಸಂದಿಗ್ದ ಕಾಲದಲ್ಲೂ ದಿಢೀರ್ ಅಂತ ಹೊಸ ಕಟ್ಟಡ ಚಿಂತೆ ಶುರುಮಾಡಿದ್ದಾರೆ. KSRTC ಕೇಂದ್ರ ಕಚೇರಿ ಕಟ್ಟಡ ಕೆಡವಿ ಹೊಸ ಸಂಕೀರ್ಣ ನಿರ್ಮಿಸಲು ಮುಂದಾಗಿದ್ದರೆ. ಅಚ್ಚರಿ ಎನಿಸೋದು ಸುಸ್ಥಿಯಲ್ಲಿರುವ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ಕಟ್ಟಲು ಹೊರಟಿರೋದರ ಬಗ್ಗೆ.
ಕೆಎಸ್ಆರ್ಟಿಸಿ ಅಂದರೆ ದೇಶದ ನಂ.1 ಸಾರಿಗೆ ಸಂಸ್ಥೆ. ಇದೇ ಸಂಸ್ಥೆ ಸಾರಿಗೆ ಸಿಬ್ಬಂದಿಯ ಮುಷ್ಕರ, ಕೊರೊನಾ ಸೋಂಕಿನ ಹೊಡೆತದಿಂದಾಗಿ ನಷ್ಟಕ್ಕೆ ಕೂಪಕ್ಕೆ ಸಿಲುಕಿದೆ. ಕಳೆದ ಎರಡು ವರ್ಷಗಳಿಂದ ನೌಕರರಿಗೆ ಸಂಬಳ ನೀಡಕ್ಕೂ ಆಗದೆ ಪರದಾಡ್ತಿದೆ. ಇಂತಹ ಪರಿಸ್ಥಿತಿಯಲ್ಲೂ ಅಧಿಕಾರಿಗಳು ಕೆಎಸ್ಆರ್ಟಿಸಿಯನ್ನ ಮುಳಗುಸುವ ಪ್ಲಾನ್ ಒಂದನ್ನು ಮಾಡಿದ್ದಾರೆ. ಹೌದು, ಕೆಎಸ್ಆರ್ಟಿಸಿ ಕೇಂದ್ರ ಕಚೇರಿ ಕಟ್ಟಿ ಇನ್ನೂ 50 ವರ್ಷ ಆಗಿಲ್ಲ. ಕಟ್ಟಡ ಸುಸ್ಥಿತಿಯಲ್ಲಿದ್ರೂ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಿಸಲು ನಿರ್ಧಾರ ಮಾಡಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ. ಈ ಮೂರು ಅಂತಸ್ತಿನ ಕಟ್ಟಡ ಗಟ್ಟಿಮುಟ್ಟಾಗಿದ್ರೂ ಇದೇ ಕಟ್ಟಡ ಕೆಡವಿ ವಾಣಿಜ್ಯ ಕಟ್ಟಡ ನಿರ್ಮಿಸಲು ಅಧಿಕಾರಿಗಳ ಮುಂದಾಗಿದ್ದಾರೆ. ಇದರಿಂದ ದುಡ್ಡು ನುಂಗುವ ಸಂಚಿದೆ ಎಂದು ಸಾರಿಗೆ ಮುಖಂಡ ಆರೋಪಿಸಿದ್ದಾರೆ.
ಸುಸ್ಥಿತಿಯಲ್ಲಿರುವ ಕಟ್ಟಡ ಕೆಡವಿ ಹೊಸ ಸಂಕೀರ್ಣ ಕಟ್ಟಲು ಪ್ಲಾನ್
ಶಾಂತಿನಗರದ ಕೇಂದ್ರ ಕಚೇರಿ ಆವರಣದಲ್ಲಿ 2 ಎಕರೆ 10 ಗುಂಟೆ ಜಮೀನು ಇದೆ. ಇಷ್ಟು ಜಾಗದಲ್ಲಿ ಬಳಿಸಿಕೊಂಡು ಸುಮಾರು 300 ಕೋಟಿ ವೆಚ್ಚದಲ್ಲಿ ಬಹುಮಹಡಿ ಕಟ್ಟಡ ಸಂಕೀರ್ಣ ವನ್ನ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಇಲ್ಲಿಯವರೆಗೂ ಶಾಂತಿನಗರ ಕೇಂದ್ರ ಕಚೇರಿ ಬಿರುಕು ಇಲ್ಲ. ಮಳೆ ಬಂದರೆ ಸೋರಿಕೆ ಆಗಿಲ್ಲ. ಇಲ್ಲಿ ಎಲ್ಲಾ ಸೌಲಭ್ಯ ಗಳು ಇದ್ದರೂ ಈ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರೋದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಈ ಅವೈಜ್ಞಾನಿಕ ನಿರ್ಧಾರ ಕೈಬಿಡಬೇಕು ಅಂತ ಸಾರಿಗೆ ನೌಕರರ ಮುಖಂಡ ವಿನಯ್ ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ಸಾರಿಗೆ ನಿಗಮಗಳಲ್ಲಿ ನೌಕರರಿಗೆ ಸಂಬಳ ನೀಡೋಕೆ ದುಡ್ಡಿಲ್ಲ. ಬಸ್ ಖರೀದಿಗೂ ದುಡ್ಡು ಇಲ್ಲ. ಆರ್ಥಿಕ ದಿವಾಳಿ ಹಂತದಲ್ಲಿರೋ ನಿಗಮ ಕೋಟಿ ಕೋಟಿ ವೆಚ್ಚದಲ್ಲಿ ಗಟ್ಟಿಮುಟ್ಟಾದ ಕಟ್ಟಡ ಕೆಡವಿ ಹೈಟೆಕ್ ಸಂಕೀರ್ಣ ಮಾಡೋಕೆ ಹೊರಟಿದೆ. ಈ ಯೋಜನೆ ಹಿಂದೆ ಭಾರಿ ಅಕ್ರಮದ ವಾಸನೆ ಬರುತ್ತಿದೆ. ನಿಗಮದ ಸದ್ಯದ ಪರಿಸ್ಥಿತಿಯಲ್ಲಿ ಸುಸ್ಥಿತಿಯಲ್ಲಿರುವ ಕಟ್ಟಡ ಕೆಡವುವ ಅಗತ್ಯವಿದೆಯೇ.? ಹೊಸ ಕಟ್ಟಡ ಹೆಸರಿನಲ್ಲಿ ಕೋಟಿ ಕೋಟಿ ಜನರ ಹಣ ಲೂಟಿ ಮಾಡೋಕೆ ನಿರ್ಧಾರ ಮಾಡಿರೋದು ನಿಜಕ್ಕೂ ವಿಪರ್ಯಾಸವೇ ಸರಿ.