
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದ ಸುತ್ತಮುತ್ತ ಸುಮಾರು ಒಂದೂವರೆ ಸಾವಿರ ಎಕರೆಯ ಭೂಸ್ವಾಧೀನದ ಆದೇಶವನ್ನು ರದ್ದುಪಡಿಸುವ ಸ್ವಾಗತಾರ್ಹ ತೀರ್ಮಾನವನ್ನು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಎಷ್ಟೇ ಎಡರುತೊಡರು ಬಂದರೂ ಕಳೆದ 3+ ವರ್ಷಗಳಿಂದ ನಿರಂತರವಾಗಿ ಧರಣಿ/ಪ್ರತಿಭಟನೆ ಮಾಡಿದ ಅಲ್ಲಿಯ ರೈತರ ಹೋರಾಟ ಮನೋಭಾವ ಮತ್ತು ಬದ್ಧತೆ ಪ್ರಶಂಸನೀಯ. ಹಲವು ಸಂಘಟನೆಗಳು ಮತ್ತು ವ್ಯಕ್ತಿಗಳೂ ಈ ಹೋರಾಟಕ್ಕೆ ಪ್ರಾಮಾಣಿಕ ಬೆಂಬಲ ನೀಡಿದ್ದರು ಮತ್ತು ಇತ್ತೀಚಿನ ಹೋರಾಟಕ್ಕೆ ಹಲವು ಶಕ್ತಿ ಮತ್ತು ಆಯಾಮಗಳು ಕೂಡಿಕೊಂಡು ಸರ್ಕಾರ ಈ ತೀರ್ಮಾನ ಘೋಷಿಸುವಂತೆ ಆಗಿದೆ. ಪ್ರಾಮಾಣಿಕವಾಗಿ ಹೋರಾಟಕ್ಕೆ ಬೆಂಬಲಿಸಿದ ಎಲ್ಲರಿಗೂ ಅಭಿನಂದನೆಗಳು. (ಈ ಹೋರಾಟದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಕೆಲವರ ಕುರಿತ ನನ್ನ ಟೀಕೆಗಳನ್ನು ನಾನು ಈ ಹಿಂದೆಯೇ ದಾಖಲಿಸಿದ್ದೇನೆ. ಈಗ ಮತ್ತೊಮ್ಮೆ ಅದರ ಪ್ರಸ್ತಾಪ ಬೇಡ ಎಂದು ಅಲ್ಲಿಗೆ ಬಿಡುತ್ತಿದ್ದೇನೆ.)
ಆದರೆ ನಾನು ಇಲ್ಲಿ ಮುಖ್ಯವಾಗಿ ಹೇಳಬಯಸಿದ್ದು ಇದಲ್ಲ. ಭೂಸ್ವಾಧೀನದ ಅಂತಿಮ ಪ್ರಕ್ರಿಯೆಗಳು ಮುಗಿದಿದ್ದರೂ ಸರ್ಕಾರ ಮನಸ್ಸು ಮಾಡಿದರೆ ಎಲ್ಲಾ ಕಾನೂನು ತೊಡಕುಗಳನ್ನು ಮೀರಿ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು ಎಂದು ಇವತ್ತಿನ ಘೋಷಣೆಯಿಂದ ಗೊತ್ತಾಗಿದೆ. ರಾಜಕೀಯ ಇಚ್ಛಾಶಕ್ತಿ ಇದ್ದರೆ ತನ್ನದೇ ನಿರ್ಧಾರಗಳನ್ನು ರದ್ದು ಪಡಿಸಲು ಸರ್ಕಾರಕ್ಕೆ ಅಡೆತಡೆಗಳು ಇಲ್ಲವೇ ಇಲ್ಲ ಅಥವ ಬಹಳ ಕಡಿಮೆ. ಅದೇ ರೀತಿ, ತಾನೇ ರದ್ದು ಪಡಿಸಿದ ಆದೇಶಗಳನ್ನು ಕಾನೂನಿನ ಇನ್ಯಾವುದೋ ತೊಡಕು ಬಳಸಿ ಅದು ಆಗದೇ ಇರುವ ಹಾಗೆ ನೋಡಿಕೊಳ್ಳುವುದೂ ಸರ್ಕಾರಕ್ಕೆ ಸಾಧ್ಯ. ಇಲ್ಲಿ ಜನರ ಮುಂದೆ ಮೆಚ್ಚುಗೆ ಪಡೆಯಲು ಒಂದು ತೀರ್ಮಾನ, ಮತ್ತೆ ನ್ಯಾಯಾಲಯ ಅಥವ ಮತ್ಯಾವುದೋ ತಾಂತ್ರಿಕ ಕಾರಣಗಳನ್ನು ಒಡ್ಡಿ ಮತ್ತೆ ಜನರಿಂದ ಅನುಕಂಪ ಗಿಟ್ಟಿಸಿಕೊಂಡು ಪಟ್ಟಭದ್ರರ ಹಿತಾಸಕ್ತಿ ರಕ್ಷಿಸುವ ಪ್ರಚ್ಛನ್ನ ಹುನ್ನಾರ. ಇದು ಭ್ರಷ್ಟರ ಪುಸ್ತಕದಲ್ಲಿ ದಂಡಿಯಾಗಿ ಸಿಗುವ ಹಳೇ ಟ್ರಿಕ್.

ತಾವಾಗಿಯೇ ಜಮೀನು ನೀಡಬಯಸುವ ರೈತರಿಂದ ಸದರಿ ಯೋಜನೆಗೆ ಭೂಮಿ ಖರೀದಿಸುವ ತೀರ್ಮಾನವನ್ನು ಇಂದಿನ ಸಭೆಯಲ್ಲಿ ಪ್ರಕಟಿಸಿರುವುದರಲ್ಲಿಯೇ ಮುಂದಿನ ಕೆಲವು ಆಗುಹೋಗುಗಳನ್ನು ಊಹಿಸಬಹುದು. ಈ ಪ್ರದೇಶದಲ್ಲಿ ಸದರಿ ಪ್ರಸ್ತಾವಿತ ಯೋಜನೆಯನ್ನೇ ಕೈಬಿಟ್ಟಿದ್ದಿದ್ದರೆ ಸರ್ಕಾರದ ಚಿತ್ತಶುದ್ಧಿಯನ್ನು ಪ್ರಶಂಸಿಸಬಹುದಿತ್ತು. ಈಗಾಗಲೇ ಪೇಮೆಂಟ್ ಪಡೆದಿರುವವರು ಅಷ್ಟು ಸುಲಭವಾಗಿ ಹಿಂದೆ ಸರಿಯುವುದಿಲ್ಲ. ಇಬ್ಬರು ಸಚಿವರು ಹಠಕ್ಕೆ ಬಿದ್ದಿರುವುದನ್ನು ಗಮನಿಸಿದರೆ ಸಾಕು ಇದು ಇಲ್ಲಿಗೇ ನಿಲ್ಲುವುದಿಲ್ಲ ಎಂದು ಸುಲಭವಾಗಿ ಭಾವಿಸಬಹುದು. ಅಂತಹ ಸಂದರ್ಭದಲ್ಲಿ #ಕಾಂಬುಜೀ(ಕಾಂಗ್ರೆಸ್ ಬುದ್ಧಿಜೀವಿ)ಗಳ ಮತ್ತು #ಕಾಂಪಹೋ(ಕಾಂಗ್ರೆಸ್ ಪರ ಹೋರಾಟಗಾರ)ರ ನಿಲುವು ಏನಿರುತ್ತದೆ ಎನ್ನುವುದನ್ನು ಆಗ ವಿಶ್ಲೇಷಿಸೋಣ.

ಮುಂದೆ ಏನಾಗುತ್ತದೋ ಗೊತ್ತಿಲ್ಲ. ಒಳ್ಳೆಯದಾಗಲಿ ಎಂದು ಆಶಿಸೋಣ.
ಮತ್ತೊಮ್ಮೆ, ಸದ್ಯದ ಸಂದರ್ಭದಲ್ಲಿ ಇಷ್ಟು ಮಾತ್ರದ ಗೆಲುವನ್ನು ಸಾಧಿಸಿದ ಮತ್ತು ಸಾಧಿಸಲು ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು.







