ಕೋಲಾರ: 2023ರ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು ಕೋಲಾರ ಜಿಲ್ಲೆಯಲ್ಲಿ ಚುನಾವಣಾ ಅಖಾಡ ರಂಗೇರಿದೆ. ಯುಗಾದಿ ಹಬ್ಬದ ನೆಪದಲ್ಲಿ ಮತದಾರರಿಗೆ ಹಂಚಲು ಅನುಮತಿ ಪಡೆಯದೆ ಅಗತ್ಯಕ್ಕಿಂತ ಹೆಚ್ಚಾಗಿ ಅಕ್ರಮವಾಗಿ ಶೇಖರಿಸಿದ್ದ ಹಬ್ಬದ ಸಾಮಗ್ರಿಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ಮಾಡಿದ್ದಾರೆ.

ಕೋಲಾರ ತಾಲೂಕಿನ ಬ್ಯಾಲಹಳ್ಳಿ ಗ್ರಾಮದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರಿಗೆ ಸೇರಿದ ಕುರಿ ಶೆಡ್ ಗಳಲ್ಲಿ ಸಂಗ್ರಹಿಸಲಾಗಿದ್ದ ಹಬ್ಬದ ಪದಾರ್ಥಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಸುಮಾರು ಟನ್ ಗಟ್ಟಲೆ ಅಕ್ಕಿ, ಬೇಳೆ, ಬೆಲ್ಲ, ಅಡುಗೆ ಎಣ್ಣೆ ಹಾಗೂ ಮೈದಾ ಸೇರಿದಂತೆ ಆಹಾರ ಪದಾರ್ಥಗಳನ್ನು ಇಡಲಾಗಿತ್ತು. ಯುಗಾದಿ ನೆಪದಲ್ಲಿ ಮತದಾರರನ್ನು ಸೆಳೆಯಲು ಸುಮಾರು 50 ಸಾವಿರ ಜನರಿಗೆ ಹಂಚಲು ಹಬ್ಬದ ಸಾಮಗ್ರಿಗಳನ್ನು ಶೇಖರಿಸಿಡಲಾಗಿತ್ತು ಎನ್ನಲಾಗಿದೆ.

ಫುಡ್ ಕಿಟ್ ಗಳ ಮೇಲೆ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಭಾವಚಿತ್ರ:
ಇನ್ನು ಯುಗಾದಿ ಹಬ್ಬದ ಸಾಮಗ್ರಿಗಳ ಮೇಲೆ ಕೆಜಿಎಫ್ ಕ್ಷೇತ್ರದ ಶಾಸಕಿ ರೂಪಕಲಾ ಶಶಿಧರ್ ಅವರ ಭಾವಚಿತ್ರವಿದ್ದು, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ಹಂಚಲು ಆಹಾರ ಪದಾರ್ಥಗಳನ್ನು ಸಂಗ್ರಹಿಸಿಡಲಾಗಿದೆ. ಚುನಾವಣೆ ಸಮೀಪವಿರುವ ಕಾರಣ ಮತದಾರರನ್ನು ಓಲೈಸಲು ಹಬ್ಬದ ಸಾಮಗ್ರಿಗಳನ್ನು ಮತದಾರರಿಗೆ ನೀಡಲು ಮುಂದಾಗಿದ್ದಾರೆ. ಟನ್ ಗಟ್ಟಲೆ ಅಕ್ಕಿ, ಬೇಳೆ, ಬೆಲ್ಲ ಸಂಗ್ರಹಿಸಲಾಗಿದ್ದು, ಯುಗಾದಿ ಹಬ್ಬಕ್ಕೆ ಉಡುಗೊರೆಯಾಗಿ ಸುಮಾರು 50 ಸಾವಿರ ಜನರಿಗೆ ಕೆಜಿಎಫ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೂಪಾ ಶಶಿಧರ್ ಮತದಾರರನ್ನು ಓಲೈಸಲು ಪುಡ್ ಕಿಟ್ ನೀಡಲು ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಲಾಗಿದೆ.

ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್:
ಖಚಿತ ಮಾಹಿತಿ ಮೇರೆಗೆ ರಾತ್ರೋ ರಾತ್ರಿ ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿ, ಆಹಾರ ಪದಾರ್ಥಗಳನ್ನು ಅಧಿಕಾರಿಗಳು ಮುಟ್ಟುಗೊಲು ಹಾಕಿಕೊಂಡಿದ್ದಾರೆ. ಇನ್ನು ಟನ್ ಗಟ್ಟಲೆ ಇರುವ ಆಹಾರ ಸಾಮಾಗ್ರಿಗಳನ್ನು ಯಾರೂ ತೆಗೆಯದಂತೆ ಸ್ಥಳದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ.






