ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ದೀಪಕ್ ಮತ್ತು ಇರ್ಷಾದ್ ಎಂಬ ಇಬ್ಬರು ಯುವಕರು ಒಂದು ತಿಂಗಳ ಅವಧಿಯಲ್ಲಿ ನಾಪತ್ತೆಯಾಗಿದ್ದರು. ಜುಲೈ 17 ರಂದು ಕೊಯಿಲಾಂಡಿ ಕರಾವಳಿ ಭಾಗದಲ್ಲಿ ಯುವಕನ ಅರೆ ಕೊಳೆತ ಶವವೊಂದು ಪತ್ತೆಯಾಗಿತ್ತು, ದೀಪಕ್ ಅವರ ಕುಟುಂಬವು ಅದನ್ನು ದೀಪಕ್ ದೇಹವೆಂದು ಗುರುತಿಸಿ ಹಿಂದೂ ಸಂಪ್ರದಾಯಗಳ ಪ್ರಕಾರ ಅಂತ್ಯಕ್ರಿಯೆ ನಡೆಸಿತು. ಆದರೆ, ಮೂರು ವಾರಗಳ ನಂತರ ಡಿಎನ್ಎ ಪರೀಕ್ಷೆಯಲ್ಲಿ ಮೃತದೇಹ ಇರ್ಷಾದ್ನದೇ ಹೊರತು ದೀಪಕ್ನದ್ದಲ್ಲ ಎಂದು ತಿಳಿದುಬಂದಿದೆ.
ಕೋಝಿಕ್ಕೋಡ್ನ ಪಂಥಿಕ್ಕರ ಮೂಲದ ದೀಪಕ್, ಗಲ್ಫ್ನಲ್ಲಿ ಕೆಲಸ ಮಾಡುತ್ತಿದ್ದು, ಜೂನ್ 7 ರಂದು ನಾಪತ್ತೆಯಾಗಿದ್ದರು. ಅವರು ಈ ಹಿಂದೆಯೂ ಮನೆಯಿಂದ ನಾಪತ್ತೆಯಾಗಿರುವುದರಿಂದ, ಅವರ ಕುಟುಂಬವು ಒಂದು ತಿಂಗಳ ನಂತರ ನಾಪತ್ತೆ ದೂರು ದಾಖಲಿಸಿತ್ತು. ಕೊಯಿಲಾಂಡಿ ತೀರದಲ್ಲಿ ಶವ ಕೊಚ್ಚಿಕೊಂಡು ಬಂದಾಗ ದೀಪಕ್ ಅವರ ಸಂಬಂಧಿಕರು ಅದನ್ನು ಗುರುತಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಪೊಲೀಸರು ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ. ಆದರೆ, ಕೆಲವರು ಶವದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರಿಂದ ಪೊಲೀಸರು ಅಂತ್ಯಸಂಸ್ಕಾರಕ್ಕೂ ಮುನ್ನ ಡಿಎನ್ಎ ಮಾದರಿಗಳನ್ನು ಪಕ್ಕಕ್ಕೆ ಇಟ್ಟಿದ್ದರು. ಈ ಡಿಎನ್ಎ ಮಾದರಿಗಳೇ ಮೃತ ದೇಹವು ಚಿನ್ನದ ಕಳ್ಳಸಾಗಣೆ ಗ್ಯಾಂಗ್ನಿಂದ ಅಪಹರಣಕ್ಕೊಳಗಾಗಿದ್ದ ಯುವಕ ಇರ್ಷಾದ್ನದ್ದು ಎಂದು ದೃಢಪಡಿಸಿದೆ.
ಮೇ ತಿಂಗಳಲ್ಲಿ ದುಬೈನಿಂದ ಕೇರಳಕ್ಕೆ ಆಗಮಿಸಿದ್ದ ಇರ್ಷಾದ್ ಜುಲೈ ಎರಡನೇ ವಾರದಲ್ಲಿ ಅಪಹರಣಕ್ಕೆ ಒಳಗಾಗಿದ್ದರು. ಆತನ ಸುರಕ್ಷತೆಗಾಗಿ ಭಯಗೊಂಡ ಆತನ ಮನೆಯವರು ಜುಲೈ 22 ರಂದು ದೂರು ದಾಖಲಿಸಿದ್ದರು. ಇರ್ಷಾದ್ ಚಿನ್ನದ ಕಳ್ಳಸಾಗಣೆ ಕೊರಿಯರ್ ಆಗಿದ್ದು, ಚಿನ್ನವನ್ನು ಬೇರೆಯವರಿಗೆ ಹಸ್ತಾಂತರಿಸುವುದಕ್ಕಾಗಿ ಅಪಹರಿಸಲಾಗಿದೆ ಎಂದು ಪೊಲೀಸರು ನಂಬಿದ್ದಾರೆ. ಅಪಹರಣಕ್ಕಾಗಿ ಬಂಧಿಸಲ್ಪಟ್ಟ ಇಬ್ಬರು ವ್ಯಕ್ತಿಗಳು – ಜಿನಾದ್ ಮೊಹಮ್ಮದ್ ಕುಟ್ಟಿ ಮತ್ತು ಶಾಹೀಲ್ ಹನೀಫಾ – ಇರ್ಷಾದ್ ಅವರ ಪೋಷಕರಿಗೆ ಕರೆ ಮಾಡಿ ಅವರು ಅವನನ್ನು ಅಪಹರಿಸಿರುವುದಾಗಿ ಘೋಷಿಸಿದ್ದರು; ಅದಕ್ಕೆ ಪುರಾವೆಯಾಗಿ ಆತನ ಚಿತ್ರಗಳನ್ನು ಸಹ ಕಳುಹಿಸಿದ್ದರು.
ಪೊಲೀಸರು ಇರ್ಷಾದ್ಗಾಗಿ ಹುಡುಕಾಟ ನಡೆಸಿದ್ದರಿಂದ ಆತನನ್ನು ರಕ್ಷಿಸಬಹುದೆಂಬ ನಿರೀಕ್ಷೆಯಲ್ಲಿ ಆತನ ಕುಟುಂಬವಿತ್ತು. ಆದರೆ, ಜುಲೈ 15ರಂದು ಇರ್ಷಾದ್ ತಮ್ಮ ವಶದಿಂದ ತಪ್ಪಿಸಿಕೊಂಡು ಪುರಕ್ಕಟ್ಟಿರಿ ನದಿಗೆ ಹಾರಿದ್ದಾನೆ ಎಂದು ಬಂಧಿತರು ಪೊಲೀಸರಿಗೆ ತಿಳಿಸಿದಾಗ ಆತ ಮೃತಪಟ್ಟಿರಬಹುದೆಂಬ ಮೊದಲ ಸುಳಿವು ಸಿಕ್ಕಿತ್ತು, ಆ ವೇಳೆಗಾಗಲೇ ಶಂಕೆ ಬಲವಾಗಿದ್ದು, ಜುಲೈ 17ರಂದು ಇರ್ಷಾದ್ ಶವ ಪತ್ತೆಯಾಗಿದೆ. ಇರ್ಷಾದ್ನ ಪೋಷಕರಿಂದ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಆಗಸ್ಟ್ 5, ಶುಕ್ರವಾರ ಡಿಎನ್ಎ ಫಲಿತಾಂಶ ಬಂದಾಗ, ಇರ್ಷಾದ್ ಕುಟುಂಬದ ಭಯ ನಿಜವಾಗಿದೆ.
ತನ್ನನ್ನು ತಪ್ಪಿಸಿಕೊಳ್ಳಲು ಇರ್ಷಾದ್ ಅಪಹರಣಕಾರರ ವಾಹನದಿಂದ ಜಿಗಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ, ಆತ ಜೀವಂತ ಪರಾರಿಯಾಗಿದ್ದಾರೆಯೇ ಅಥವಾ ಅಪಹರಣಕಾರರು ಅವರ ದೇಹವನ್ನು ಎಸೆಯುವ ಮೊದಲು ಕೊಂದಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇರ್ಷಾದ್ ಸಾವಿಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದ್ದು, ತಂಡದಲ್ಲಿರುವ ಇತರರನ್ನು ಬಂಧಿಸಲು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏತನ್ಮಧ್ಯೆ, ಮೃತದೇಹ ಇರ್ಷಾದ್ ಅವರದೇ ಎಂಬ ಅಂಶವು ದೀಪಕ್ ಕುಟುಂಬಕ್ಕೆ ಭರವಸೆಯ ಹೊಳಪನ್ನು ನೀಡಿದೆ, ಅಲ್ಲದೆ ದೀಪಕ್ ನನ್ನು ಪತ್ತೆ ಮಾಡುವಂತೆ ಪೊಲೀಸರನ್ನು ಕೋರಿದ್ದಾರೆ.