
ಕೆಎಎಸ್ ಪೂರ್ವಭಾವಿ ಪರೀಕ್ಷೆ ದಿನಾಂಕದಲ್ಲಿ ಯಾವ ಬದಲಾವಣೆಯೂ ಇಲ್ಲ.ಈಗಾಗಲೇ ಅಭ್ಯರ್ಥಿಗಳಿಗೆ ತಯಾರಿಯಾಗಲು ಸಾಕಷ್ಟು ಸಮಯ ನೀಡಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಕೆಎಎಸ್ ಪೂರ್ವಭಾವಿ ಪರೀಕ್ಷೆ ಮುಂದಕ್ಕೆ ಹಾಕಬೇಕು ಎಂದು ಬೆರಳೆಣಿಕೆಯಷ್ಟು ಅಭ್ಯರ್ಥಿಗಳು ಮಾಧ್ಯಮಗಳ ಮುಂದೆ ಬಂದು ಆಗ್ರಹಿಸಿದ್ದರು.ಈ ವಿಚಾರವಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿರುವ ರಾಜ್ಯ ಸರ್ಕಾರ, “ಕೆಲ ಕೆಎಎಸ್ ಆಕ್ಷಾಂಕ್ಷಿಗಳು ಪರೀಕ್ಷೆಯನ್ನು ಮುಂದೂಡುವಂತೆ ಹಿರಿಯ ಅಧಿಕಾರಿಗಳಿಂದ ಒತ್ತಡ ತರುತ್ತಿದ್ದಾರೆ.ಅಲ್ಲದೇ, ಅವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಕೆಪಿಎಸ್ಸಿಯಲ್ಲಿ ಹಗರಣ ನಡೆದಿದೆ ಎಂದು ಸುಳ್ಳು ಆರೋಪ ಮಾಡಲಾಗಿದೆ. ಯಾವುದೇ ಹಗರಣ ನಡೆದಿಲ್ಲ, ಆಗಸ್ಟ್ 27 ರಂದೇ ಪರೀಕ್ಷೆ ನಡೆಯಲಿದೆ” ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ತರಾತುರಿಯಲ್ಲಿ ಪರೀಕ್ಷೆಯನ್ನು ನಡೆಸುತ್ತಿಲ್ಲ. ಅಭ್ಯರ್ಥಿಗಳು ತಯಾರಿಯಾಗಲು ಸಾಕಷ್ಟು ಸಮಯ ನೀಡಲಾಗಿದೆ. ಕೆಪಿಎಸ್ಸಿ ಅಥವಾ ಸರ್ಕಾರವು ಹೆಚ್ಚುವರಿ ಅವಕಾಶ ಮತ್ತು ವಯೋಮಿತಿ ಸಡಿಲಿಕೆಗೊಳಿಸಿದ ನಂತರ 2017-18ರಲ್ಲಿ ಪರೀಕ್ಷೆ ಬರೆದಿದ್ದ 1500 ಅಭ್ಯರ್ಥಿಗಳು ಕೂಡ ಪರೀಕ್ಷೆಗೆ ಅರ್ಜಿಸಲ್ಲಿಸಿದ್ದಾರೆ. ಇವರು ಸೇರಿದಂತೆ ಒಟ್ಟು 2.5 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಸಿದ್ದರಾಗಿದ್ದಾರೆ” ಎಂದು ಸರ್ಕಾರ ತಿಳಿಸಿದೆ.
ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ಮೇ 05 ರಂದು ನಡೆಸುವುದಾಗಿ ಸರ್ಕಾರ ಫೆಬ್ರವರಿ 26 ಸರ್ಕಾರ ಅಧಿಸೂಚನೆ ಹೊರಡಿಸಿತು. ಆದರೆ ಮೇ7 ರಂದು ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇದ್ದರಿಂದ ಕೆಪಿಎಸ್ಸಿ ಪರೀಕ್ಷೆಯನ್ನು ಜುಲೈ 07ಕ್ಕೆ ಮುಂದೂಡಲಾಯಿತು. ಆದರೆ ಜುಲೈ 07 ರಂದು ಯುಪಿಎಸ್ಸಿ ಪರೀಕ್ಷೆ ಇದ್ದಿದ್ದರಿಂದ ಕೆಪಿಎಸ್ಸಿ ಪರೀಕ್ಷೆಯನ್ನು ಮತ್ತೆ ಮುಂದೂಡಿ ಜುಲೈ 21ಕ್ಕೆ ನಿಗದಿ ಮಾಡಲಾಯಿತು. ಆದರೆ, ಈ ಮಧ್ಯೆ 2017-18ರಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳ ಮನವಿ ಮೇರೆಗೆ, ಸರ್ಕಾರ ಅವರಿಗೆ ಮತ್ತೊಂದು ಅವಕಾಶ ನೀಡಲು ಮುಂದಾಯಿತು.
ಈ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅನುಮತಿ ನೀಡಿ, ಜೊತೆಗೆ ವಯೋಮಿತಿ ಸಡಲಿಕೆಗೊಳಿಸಿ ಸರ್ಕಾರ ಜೂನ್ 21 ರಂದು ಅಧಿಸೂಚನೆ ಹೊರಡಿಸಿತು. ಕೆಪಿಎಸ್ಸಿ ಜೂನ್ 26 ರಂದು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿತು. 2017-18 ಬ್ಯಾಚ್ನ ಅಭ್ಯರ್ಥಿಗಳು ಹೊಸದಾಗಿ ಮತ್ತೊಮ್ಮೆ ಅರ್ಜಿಸಲ್ಲಿಸಲು ಜುಲೈ 21ರವರೆಗೆ ಅವಕಾಶ ನೀಡಿತು. ಅದರಂತೆ ಸುಮಾರು 1560 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದರು. ಕೆಎಎಸ್ ಪೂರ್ಭಭಾವಿ ಪರೀಕ್ಷೆಗಳನ್ನು ಆಗಸ್ಟ್ 25ಕ್ಕೆ ಮುಂದೂಡಲಾಯಿತು. ಆದರೆ, ಆಗಸ್ಟ್ 25 ರಂದು IBPS ಪರೀಕ್ಷೆ ಇದ್ದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಆಗಸ್ಟ್ 27ಕ್ಕೆ ಮುಂದೂಡಲಾಗಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.
2.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನಡೆಸಲು ಸಾಕಷ್ಟು ತಯಾರಿ ನಡೆಯುತ್ತದೆ. ಪತ್ರಿಕೆಗಳ ಮುದ್ರಣಕ್ಕೆ ಸುಮಾರು 4-5 ಕೋಟಿ ಖರ್ಚಾಗುತ್ತದೆ. ಎರಡು ತಿಂಗಳು ಮುಂದೂಡಿ ಎಂದರೆ ಮುದ್ರಿತ ಪತ್ರಿಕೆಗಳನ್ನು ನಾಶಪಡಿಸಿ ಹೊಸ ಪತ್ರಿಕೆಗಳನ್ನು ಮುದ್ರಿಸಬೇಕು. ಪ್ರಶ್ನೆ ಪೇಪರ್ ಸೋರಿಕೆಯಾಗುವ ಅಪಾಯವಿದೆ ಎಂದು ಸರ್ಕಾರ ಹೇಳಿಕೊಂಡಿದೆ.