
ಜಮ್ಮುಕಾಶ್ಮೀರ ಪ್ರವಾಸಿಗರನ್ನೇ ನೆಚ್ಚಿಕೊಂಡು ಬದುಕು ಕಟ್ಟಿಕೊಂಡಿರುವ ರಾಜ್ಯ. ಆರ್ಟಿಕಲ್ 370 ರದ್ದು ಮಾಡಿದ ಬಳಿಕ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿತ್ತು. ಆ ಬಳಿಕ ಕಳೆದ ವರ್ಷ ಅಷ್ಟೇ ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆದು ಓಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರ ಜಾರಿಗೆ ಬಂದಿದೆ. ಈ ನಡುವೆ ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ರಕ್ತದೋಕುಳಿಯೇ ಹರಿದು ಹೋಗಿದೆ. ಪ್ರವಾಸಿಗರ ಸ್ವರ್ಗದಲ್ಲಿ 28ಕ್ಕೂ ಹೆಚ್ಚು ಪ್ರವಾಸಿಗರು ಜೀವ ಬಿಟ್ಟಿದ್ದಾರೆ. ರಕ್ತ ಪಿಪಾಸುಗಳ ಕ್ರೌರ್ಯಕ್ಕೆ ಅಮಾಯಕ ಜೀವಗಳು ಗುಂಡೇಟಿನಿಂದ ಒದ್ದಾಡಿ ಒದ್ದಾಡಿ ಪ್ರಾಣ ಬಿಡುವಂತಾಗಿದೆ.

ರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ 4-6 ಉಗ್ರರು ಕೇವಲ 10 ರಿಂದ 15 ನಿಮಿಷದಲ್ಲಿ ಈ ದುಷ್ಕೃತ್ಯ ಮೆರೆದಿದ್ದಾರೆ. ಮುಸ್ಲಿಮೇತರರನ್ನು ಮಾತ್ರ ಗುರಿಯಾಗಿಸಿ ದಾಳಿ ಮಾಡಿರುವ ಉಗ್ರರು, ಸೇನಾ ಸಮವಸ್ತ್ರದಲ್ಲೇ ಬಂದಿದ್ದರು ಎನ್ನುವುದು ವಿಶೇಷ. ಎಲ್ಲರೂ ಹೊರಗಿನ ಉಗ್ರರಾಗಿದ್ದು, ಉಗ್ರರ ಜೊತೆಯಲ್ಲಿ ಓರ್ವ ಸ್ಥಳೀಯ ವ್ಯಕ್ತಿ ಇದ್ದ ಎನ್ನಲಾಗಿದೆ. ಉಗ್ರರ ಮಹಾ ವಿದ್ವಂಸಕ ಕೃತ್ಯದಿಂದ ಇಡೀ ದೇಶವೇ ಬೆಚ್ಚಿ ಬಿದ್ದಿದೆ. 26/11 ರ ಘಟನೆಯಲ್ಲಿ ಮಹಾರಾಷ್ಟ್ರದ ಮುಂಬೈನಲ್ಲಿ ಉಗ್ರರ ದಾಳಿ ಆಗಿದ್ದು ಬಿಟ್ಟರೆ ನಾಗರಿಕರ ಮೇಲೆ ಆಗಿರುವ ಅತಿ ದೊಡ್ಡ ದಾಳಿ ಇದಾಗಿದೆ.

ನಿನ್ನೆ ಮಧ್ಯಾಹ್ನ 2.47ಕ್ಕೆ ಛೋಟಾ ಸ್ವಿಟ್ಜರ್ಲ್ಯಾಂಡ್ ಎಂದೇ ಹೆಸರಾಗಿರೋ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ಜನ ಸಂಭ್ರಮದಲ್ಲಿ ಇದ್ರು. ಪ್ರವಾಸಿಗರು ತಮ್ಮ ತಮ್ಮ ಮಕ್ಕಳ ಜೊತೆ ಕಾಲ ಕಳೆಯುತ್ತಿದ್ರು. ಮಂಜಿನ ಜೊತೆಗೆ ಸಂತೋಷದಲ್ಲಿ ಸಮಯದಲ್ಲಿ ಎಕೆ 47 ಬಂದೂಕು ಹಿಡಿದು ಎಂಟ್ರಿಕೊಟ್ಟಿದ್ದ ಉಗ್ರರ ತಂಡ, ಹಿಂದೂಗಳನ್ನು ಗುರಿಯಾಗಿಸಿ ದಾಳಿ ಮಾಡಿದೆ. ಕರ್ನಾಟಕದ ಇಬ್ಬರು ಸೇರಿದಂತೆ ಒಟ್ಟು 28 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗ್ತಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಸಂಭವ ಇದೆ.

2019ರ ಆಗಸ್ಟ್ 5ರಂದು ಆರ್ಟಿಕಲ್ 370 ಅನ್ನು ಕೇಂದ್ರ ಸರ್ಕಾರ ತೆಗೆದು ಹಾಕಿತ್ತು. ವಿಶೇಷ ಸ್ಥಾನಮಾನ ಕಳೆದುಕೊಂಡ ಜಮ್ಮು ಕಾಶ್ಮೀರ ಭಾರತದ ಇತರೆ ರಾಜ್ಯಗಳಲ್ಲಿ ಒಂದಾಗುವ ಲಕ್ಷಗಳು ಗೋಚರಿಸಿದ್ದವು. ಇತ್ತೀಚಿಗಷ್ಟೆ ಕಾಶ್ಮೀರಿ ವ್ಯಾಪಾರಸ್ಥರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತ, ವ್ಯಾಪಾರ ವಹಿವಾಟು ಆರಂಭ ಮಾಡಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಮಿಲಿಟರಿ ಸಮವಸ್ತ್ರದಲ್ಲಿ ಬಂದ ಉಗ್ರರ ತಂಡ ಹಿಂದೂಗಳನ್ನ ಗುರಿಯಾಗಿಸಿ ಗುಂಡಿನ ದಾಳಿ ಮಾಡಿ ಹತ್ಯಾಕಾಂಡ ನಡೆಸಿದೆ.

ಬಂದುಕು ಹಿಡಿದು ಬಂದಿದ್ದ ಉಗ್ರರು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿದ್ದಾರೆ. ದಾಳಿಗೂ ಮುನ್ನ ನೀವು ಎಲ್ಲಿಯವರು..? ಇಲ್ಲಿಗ್ಯಾಕೆ ಬಂದಿದ್ದೀರಿ..? ನಿಮಗೆ ‘ಕಲ್ಮ’ ಹೇಳಲು ಬರುತ್ತಾ..? ನಿಮ್ಮ ಹೆಸರೇನು..? ಅಂತ ಕೇಳಿದ್ದಾರೆ. ‘ಕಲ್ಮ’ ಹೇಳಲು ಬಾರದವರು ಹಾಗೂ ಹಿಂದೂಗಳು ಅನ್ನೋದು ಗೊತ್ತಾದ ಕೂಡಲೇ ಗುಂಡು ಹೊಡೆದು ಹತ್ಯೆ ಮಾಡಿದ್ದಾರೆ. ಕೇವಲ ಪುರುಷರನ್ನು ಮಾತ್ರವೇ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಮಹಿಳೆಯರು, ಮಕ್ಕಳನ್ನು ಉಗ್ರರು ಹತ್ಯೆ ಮಾಡಿಲ್ಲ ಎನ್ನುವುದು ವಿಶೇಷ. ಈ ದಾಳಿಯ ಹೊಣೆಯನ್ನು ಲಷ್ಕರ್ ಎ ತೊಯ್ಬಾ ಸಂಘಟನೆ ಹೊತ್ತುಕೊಂಡಿದೆ