ಗಾಜಿಯಾಬಾದ್ ಪೊಲೀಸರು ನೀಡಿದ ಸಮನ್ಸ್ ಅನ್ನು ಪ್ರಶ್ನಿಸಿ ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಹಾಕಿದ್ದ ಅರ್ಜಿಯನ್ನು ಆಲಿಸಿದ ಕರ್ನಾಟಕ ಹೈಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿದೆ.
ಮುಸ್ಲಿಂ ವೃದ್ಧರೊಬ್ಬರ ಮೇಲೆ ಹಲ್ಲೆ ಮಾಡುವ ವೈರಲ್ ವಿಡಿಯೋ ಟ್ವಿಟರ್ನಲ್ಲಿ ಪ್ರಸಾರವಾಗಿರುವ ಕುರಿತ ತನಿಖೆಗೆ ಸಂಬಂಧಿಸಿದಂತೆ ಗಾಜಿಯಾಬಾದ್ ಪೊಲೀಸರು ಸಮನ್ಸ್ ನೀಡಿದ್ದರು. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಮನೀಷ್ ಇದನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ಗೆ ಮೊರೆ ಹೋಗಿದ್ದರು.
ಪ್ರಕರಣದ ತನಿಖೆಗೆ ಸಹಾಯ ಮಾಡಲು ಗಾಜಿಯಾಬಾದ್ ಪೊಲೀಸರು ಮೊದಲ ಸಾಕ್ಷಿಯಾಗಿ ಸಮನ್ಸ್ ನೋಟಿಸ್ ನೀಡಿದ್ದರು ಎಂದು ಮಹೇಶ್ವರಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ” CrPC ಯ ಸೆಕ್ಷನ್ 41 ಎ (ಪೊಲೀಸ್ ಅಧಿಕಾರಿಯ ಮುಂದೆ ಹಾಜರಾಗಲು ನೋಟಿಸ್) ಅಡಿಯಲ್ಲಿ ಅವರು ನನಗೆ ನೋಟಿಸ್ ನೀಡುವ ಎರಡು ದಿನಗಳ ಮೊದಲು, ಅವರು ಸೆಕ್ಷನ್ 160 CrPC ಅಡಿಯಲ್ಲಿ ನೋಟಿಸ್ ನೀಡಿದ್ದರು, ನನ್ನನ್ನು ಸಾಕ್ಷಿಯಾಗಿ ಕರೆದರು” ಎಂದು ಮನೀಷ್ ಮಹೇಶ್ವರಿ ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಮಧ್ಯಂತರ ಆದೇಶ ನೀಡಿದ ಕರ್ನಾಟಕ ಹೈಕೋರ್ಟ್, ʼಈ ವಿಷಯವನ್ನು ಪರಿಗಣಿಸುವ ಅಗತ್ಯವಿದೆ ಎಂದು ಹೇಳಿದೆ. ಮುಂದಿನ ವಿಚಾರಣೆಯವರೆಗೆ ಅಂದರೆ ಜೂನ್ 29 ರವರೆಗೆ ಮನೀಶ್ ಮಹೇಶ್ವರಿ ವಿರುದ್ಧ ಯಾವುದೇ ಬಲವಂತದ ಕ್ರಮವನ್ನು ಕೈಗೊಳ್ಳಬಾರದು ಎಂದು ಗಾಜಿಯಾಬಾದ್ ಪೊಲೀಸರಿಗೆ ನ್ಯಾಯಾಲಯ ಹೇಳಿದೆ. ಈ ನಡುವೆ, ಗಾಜಿಯಾಬಾದ್ ಪೊಲೀಸರು ಮಹೇಶ್ವರಿಯನ್ನು ವಿಚಾರಣೆ ನಡೆಸಲು ಬಯಸಿದರೆ, ಅವರು ಅದನ್ನು ಆನ್ಲೈನ್ ಮೂಲಕ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ. ವಿಡಿಯೋ ಕರೆ ಮೂಲಕ ವಿಚಾರಣೆಗೆ ಸಹಕರಿಸಲು ಸಿದ್ಧ ಎಂದು ಮಹೇಶ್ವರಿ ಈ ಹಿಂದೆ ಗಾಜಿಯಾಬಾದ್ ಪೊಲೀಸರಿಗೆ ತಿಳಿಸಿದ್ದರು.





