ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧೋಪಚಾರಕ್ಕೆ ಬಳಸುವ ಹತ್ತಿ, ಬ್ಯಾಂಡೇಜ್ ಬಟ್ಟೆ ಸೇರಿದಂತೆ ತೀರಾ ಮೂಲಭೂತ ಸಾಮಗ್ರಿ ಮತ್ತು ಔಷಧಗಳ ಭಾರೀ ಕೊರತೆ ಉಂಟಾಗಿದ್ದು, ವೈದ್ಯರು ಪ್ರತಿಯೊಂದಕ್ಕೂ ರೋಗಿಗಳಿಗೆ ಹೊರಗಿನ ಔಷಧಿ ಅಂಗಡಿಗಳಿಗೆ ಚೀಟಿ ಬರೆದುಕೊಡುವ ಅನಿವಾರ್ಯತೆ ನಿರ್ಮಾಣವಾಗಿದೆ ಎಂಬ ವಿಷಯ ಚರ್ಚೆಗೆ ಗ್ರಾಸವಾಗಿದೆ.
ಅದರಲ್ಲೂ ಕೇಂದ್ರದಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ರಾಜ್ಯಕ್ಕೆ ಬರಬೇಕಿದ್ದ ನಿಗದಿತ ಅನುದಾನ ಕಳೆದ ನಾಲ್ಕು ತಿಂಗಳುಗಳಿಂದ ಬಂದಿಲ್ಲ ಮತ್ತು ರಾಷ್ಟ್ರೀಯ ಉಚಿತ ಔಷಧಿ ಸೇವೆ(NFDS) ಅನುದಾನ ಕೂಡ ಕಳೆದ ಆರು ತಿಂಗಳಿಂದ ಬಿಡುಗಡೆಯಾಗಿಲ್ಲ ಎಂದು ಸ್ವತಃ ವಿವಿಧ ಜಿಲ್ಲಾ ಆರೋಗ್ಯಾಧಿಕಾರಿಗಳೇ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದು ‘ದ ಹಿಂದೂ’ ವರದಿ ಮಾಡಿದೆ.
ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಿಗೆ ಸ್ಥಳೀಯವಾಗಿ ಔಷಧಿ ಖರೀದಿಗಾಗಿ ನೀಡಲಾಗುವ ಈ NFDS ಅನುದಾನವನ್ನು ಮೇಲಿಂದ ಮೇಲೆ ಮನವಿ ಮಾಡಿದರೂ ಆರು ತಿಂಗಳಿಂದ ಬಿಡುಗಡೆ ಮಾಡಿಲ್ಲ. ಜೊತೆಗೆ ಈ ಮೊದಲು ಜಿಲ್ಲಾ ಆಸ್ಪತ್ರೆಗಳಿಗೆ ಮಾಸಿಕ ತಲಾ 25 ಲಕ್ಷ ಮತ್ತು ತಾಲೂಕು ಆಸ್ಪತ್ರೆಗಳಿಗೆ ತಲಾ 10 ಲಕ್ಷ ರೂ. ಇದ್ದ ಅನುದಾನ ಮೊತ್ತವನ್ನು ಕೂಡ ಕಡಿತ ಮಾಡಲಾಗಿದೆ. ಸದ್ಯ ಜಿಲ್ಲಾ ಆಸ್ಪತ್ರೆಗಳಿಗೆ 10 ಲಕ್ಷ ರೂ. ಹಾಗೂ ತಾಲೂಕು ಆಸ್ಪತ್ರೆಗಳಿಗೆ ಕೇವಲ 5 ಲಕ್ಷ ರೂ. ನಿಗದಿ ಮಾಡಲಾಗಿದೆ. ಆದರೆ, ಆ ಅಲ್ಪಮೊತ್ತ ಕೂಡ ಆರು ತಿಂಗಳಿಂದ ಬಿಡುಗಡೆಯಾಗಿಲ್ಲ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ.
ಒಂದು ಕಡೆ ಕೇಂದ್ರದಿಂದ ಬರಬೇಕಾದ ಅನುದಾನ ನಿಂತುಹೋಗಿರುವುದು, ಮತ್ತೊಂದು ಕಡೆ ಆಸ್ಪತ್ರೆಗಳಿಗೆ ಸ್ಥಳೀಯವಾಗಿ ಔಷಧಿ ಖರೀದಿಗೆ ನೀಡುತ್ತಿದ್ದ NFDS ಅನುದಾನ ಕಡಿತದ ಜೊತೆಗೆ ಬಿಡಿಗಡೆಯೂ ಆಗದೆ ಇರುವುದರ ಜೊತೆಗೆ ಆಸ್ಪತ್ರೆಗಳಿಗೆ ಔಷಧಿ ಖರೀದಿಗಾಗಿ ಟೆಂಟರ್ ಕರೆಯಬೇಕಿದ್ದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (KSMSCL) ಎರಡು ವರ್ಷಗಳಿಂದ ಟೆಂಡರ್ ಕರೆದಿಲ್ಲ. ಹಾಗಾಗಿ ಸದ್ಯ ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯ ನೆಗಡಿ, ಜ್ವರ, ಮೈಕೈನೋವಿನ ಮಾತ್ರೆಗಳಿಂದ ಹಿಡಿದು, ಬ್ಯಾಂಡೇಜ್ ಬಟ್ಟೆ, ಸಿರಿಂಜ್, ಹತ್ತಿ, ಗ್ಲೋವ್ ಗಳವರೆಗೆ ಅತ್ಯವಶ್ಯ ಔಷಧಿ ಮತ್ತು ವೈದ್ಯಕೀಯ ಸಾಮಗ್ರಿಗಳು ಕೂಡ ಬಹುತೇಕ ಆರು ತಿಂಗಳುಗಳಿಂದ ಕೊರತೆಯಾಗಿವೆ.
ಹಾಗಾಗಿ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಅನಿವಾರ್ಯವಾಗಿ ಒಂದೋ ರೋಗಿಗಳನ್ನು ಖಾಸಗಿ ಕ್ಲಿನಿಕ್ ಗಳಿಗೆ ಸಾಗಹಾಕುವ ಅಥವಾ ಔಷಧಿಮಾತ್ರೆ, ವೈದ್ಯಕೀಯ ಸಾಮಗ್ರಿಗಳನ್ನು ಹೊರಗಡೆ ತೆಗೆದುಕೊಳ್ಳುವಂತೆ ಚೀಟಿ ಬರೆದುಕೊಡುವ ಅನಿವಾರ್ಯತೆ ಎದುರಾಗಿದೆ. ಇದರಿಂದಾಗಿ ಬಹಳಷ್ಟು ಕಡೆ ವೈದ್ಯರು ಬಲಿಪಶುವಾಗಬೇಕಾದ ಸ್ಥಿತಿ ಇದೆ. ಒಂದು ಜ್ವರದ ಮಾತ್ರೆಯನ್ನೂ ಕೊಡಲಾಗದ ಮೇಲೆ ಸರ್ಕಾರಿ ಆಸ್ಪತ್ರೆಗಳು, ಅಲ್ಲಿನ ಸಿಬ್ಬಂದಿ ಯಾಕೆ ಬೇಕು ಎಂಬ ಜನರ ಆಕ್ರೋಶದ ಬಿಸಿ ನೇರವಾಗಿ ವೈದ್ಯಕೀಯ ಸಿಬ್ಬಂದಿಗೆ ತಟ್ಟುತ್ತಿದೆ ಎಂಬುದು ವಾಸ್ತವ.
ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಜನಸಮೂಹದ ಆರೋಗ್ಯ ರಕ್ಷಣೆಯ ಆಸರೆಯಾಗಿರುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಂಥ ಹೀನಾಯ ನಿರ್ಲಕ್ಷ್ಯ ಧೋರಣೆ ಹೊಂದಿವೆ ಎಂಬುದಕ್ಕೆ ಇದಕ್ಕಿಂತ ಮತ್ತೊಂದು ನಿದರ್ಶನ ಬೇಕಿಲ್ಲ. ಅದರಲ್ಲೂ ಅತ್ತ ಬಡ ಜನರ ಆರೋಗ್ಯ ಸೇವೆಗೆಂದೇ ಪ್ರಧಾನಮಂತ್ರಿಗಳು ತಮ್ಮದೇ ಖಾಸಗಿ ನಿಧಿ ಪಿಎಂ ಕೇರ್ಸ್ ಸ್ಥಾಪಿಸಿ ಸಾವಿರಾರು ಕೋಟಿ ನಿಧಿ ಸಂಗ್ರಹಿಸುತ್ತಿರುವ ಹೊತ್ತಿಗೇ, ಇತ್ತ ಕರ್ನಾಟಕದ ಸರ್ಕಾರಿ ಆಸ್ಪತ್ರೆಗೆ ಹೋಗುವ ಕಡುಬಡವರು ಹತ್ತಿ, ಬ್ಯಾಂಡೇಜ್ ಬಟ್ಟೆಯನ್ನೂ ಖರೀದಿಸಬೇಕಾದ ವಿಪರ್ಯಾಸಕರ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಂತ.