ಕರ್ನಾಟಕ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಬೇಸಿಗೆ ಕಳೆದು ಮುಂಗಾರು ಮಳೆ ಆರಂಭದಲ್ಲಿ ಸಾಕಷ್ಟು ಅವಘಡಗಳು ಸಂಭವಿಸುತ್ತಿದ್ದವು. ಮಳೆ ಗಾಳಿಯಿಂದ ಮರದ ರೆಂಬೆ ಕೊಂಬೆಗಳು ಬೀಳುವುದರಿಂದ ವಿದ್ಯುತ್ ಅವಘಡಗಳ ಸಂಖ್ಯೆ ದುಪ್ಪಟ್ಟಾಗುತ್ತಿದ್ದವು. ಅದರಲ್ಲೂ ನವೆಂಬರ್ 19ರಂದು ಬೆಂಗಳೂರಿನ ಕಾಡುಗೋಡಿಯ ಹೋಪ್ ಫಾರ್ಮ್ ಬಳಿ ದುರಂತ ಸಂಭವಿಸಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ತಮಿಳುನಾಡಿನಿಂದ ಬಂದು ಬಸ್ ಇಳಿದು ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ತಾಯಿ, ಮಗು ಸ್ಥಳದಲ್ಲೇ ಕರೆಂಟ್ ಶಾಕ್ನಿಂದ ಸಾವನ್ನಪ್ಪಿದ್ದರು. ಇದೀಗ ಎಕ್ಸ್ಫರ್ಟ್ ಕಮಿಟಿ ಕೊಟ್ಟ ವರದಿಯ ಪ್ರಕಾರ ಇಂಧನ ಇಲಾಖೆ ಅಮೂಲಾಗ್ರ ಬದಲಾವಣೆ ಮಾಡಲು ನಿರ್ಧಾರ ಮಾಡಿತ್ತು. ಸಮಿತಿ ಕೊಟ್ಟ ಎಲ್ಲಾ ಶಿಫಾರಸುಗಳನ್ನು ಜಾರಿ ಮಾಡುವುದಕ್ಕೆ ಆದೇಶವನ್ನೂ ಹೊರಡಿಸಿತ್ತು. ಇದೀಗ ಕಾರ್ಯರೂಪಕ್ಕೆ ಬಂದಿದೆ.
![](https://pratidhvani.com/wp-content/uploads/2024/01/IMG-20240102-WA0010-1024x768.webp)
ಹೊಸ ವರ್ಷದ ಆರಂಭದಲ್ಲೇ ಅಖಾಡಕ್ಕೆ ಎಂಟ್ರಿ ಕೊಟ್ಟಿರುವ ಇಂಧನ ಇಲಾಖೆ ತನ್ನೆಲ್ಲಾ ಸಮಸ್ಯೆಗಳಿಗೆ ಇತಿಶ್ರೀ ಹಾಡಲು ಮುಂದಾಗಿದೆ. ದುರಂತ ಸಂಭವಿಸಿದ ಹೋಪ್ ಫಾರ್ಮ್ ಬಳಿ ಎಲ್ಲಾ ಹೈ ಟೆನ್ಷನ್ ವೈಯರ್ಗಳನ್ನು ಅಂಡರ್ಗ್ರೌಂಡ್ ವ್ಯವಸ್ಥೆಗೆ ಬದಲಾಯಿಸುವ ಕಾರ್ಯ ನಡೆಯುತ್ತಿದೆ. ಅದರಲ್ಲೂ ಪೂರ್ವ ವಲಯ ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು ವರದಿ ಕೊಟ್ಟ ಕೇವಲ ಮೂರ್ನಾಲ್ಕು ದಿನದಲ್ಲಿ ಸರ್ಕಾರದ ಆದೇಶವಾಗಿದ್ದು, ತಕ್ಷಣ ಕೆಲಸ ಆರಂಭ ಮಾಡಲಾಗಿದೆ. ಬೆಂಗಳೂರಿನ ಕಾಡುಗೋಡಿ ದುರಂತದ ರೀತಿಯಲ್ಲಿ ಮುಂದೆ ಯಾವುದೇ ದುರ್ಘಟನೆ ಸಂಭವಿಸಬಾರದು ಅನ್ನೋ ಕಳಕಳಿಯನ್ನು ಇಟ್ಟುಕೊಂಡು ಇಂಧನ ಸಚಿವ ಕೆ.ಜೆ ಜಾರ್ಜ್ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ಕೊಟ್ಟಿದ್ದು, ಅಧಿಕಾರಿಗಳೂ ಕೂಡ ತಕ್ಷಣ ಕಾರ್ಯೋನ್ಮುಖರಾಗಿದ್ದಾರೆ.
![](https://pratidhvani.com/wp-content/uploads/2024/01/IMG-20240102-WA0008-1024x576.webp)
ಎಕ್ಸ್ಫರ್ಟ್ ಕಮಿಟಿ ಕೊಟ್ಟಿದ್ದ ಪ್ರಮುಖ 19 ಶಿಫಾರಸುಗಳಲ್ಲಿ ಅತ್ಯಂತ ಅವಶ್ಯಕವಾಗಿ ಮಾಡಬೇಕಿದ್ದ ಕೆಲಸಗಳನ್ನು ಮೊದಲಿಗೆ ಇಂಧನ ಇಲಾಖೆ (KEB) ಕೈಗೆತ್ತಿಕೊಂಡಿದೆ. ಹಳೆಯದಾದ ಶಿಥಿಲಗೊಂಡಿರುವ ವಿದ್ಯುತ್ ಮಾರ್ಗಗಳನ್ನು ಗುರ್ತಿಸಿ UG Cable ಗೆ ಬದಲಾಯಿಸುವಂತೆ ಸಲಹೆ ನೀಡಲಾಗಿತ್ತು. ಇದೀಗ ಮೊದಲಿಗೆ ವಿದ್ಯುತ್ ಮಾರ್ಗಗಳ ಪರಿಶೀಲನೆ ಮಾಡುತ್ತಿರುವ ಬೆಸ್ಕಾಂ ಸಿಬ್ಬಂದಿಗಳು, ಅವಶ್ಯಕತೆ ಇರುವ ಕಡೆಗಳಲ್ಲಿ ಎಲೆಕ್ಟ್ರಿಕ್ ವೈರ್ಗಳನ್ನು ಭೂಗತ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವಿದ್ಯುತ್ ವೈರ್ ತುಂಡಾಗಿ ಬಿದ್ದಿದ್ದರಿಂದ ಅನಾಹುತ ಸಂಭವಿಸಿದೆ ಅನ್ನೋ ಆರೋಪದಿಂದ ಮುಕ್ತವಾಗಲು ಇಂದನ ಸಚಿವ ಕೆ.ಜೆ ಜಾರ್ಜ್ ಮೇಲುಸ್ತುವಾರಿ ವಹಿಸಿಕೊಂಡು ಕೆಲಸ ಮಾಡಿಸುತ್ತಿದ್ದಾರೆ. ಹೀಗಾಗಿ ಮುಂದಿನ ಮುಂಗಾರು ಆರಂಭ ಆಗುವ ಮೊದಲು ವಿದ್ಯುತ್ ಸಮಸ್ಯಗಳಿಗೆ ಮುಕ್ತಿ ಸಿಗುವ ಸಾಧ್ಯತೆಯಿದೆ.
ಟ್ರಾನ್ಸ್ಫಾರ್ಮರ್ಗಳು ಕೂಡ ಕೆಲವು ಕಡೆ ರಸ್ತೆಯಲ್ಲಿದ್ದು, ಒಂದು ವೇಳೆ ಟ್ರಾನ್ಸ್ಫಾರ್ಮರ್ಗಳು ಸ್ಫೋಟ ಸಂಭವಿಸಿದರೆ ಅದರಿಂದಲೂ ಪ್ರಾಣ ಹಾನಿಯಾಗುವ ಸಾಧ್ಯತೆಗಳಿವೆ. ಈ ಹಿಂದೆ ಜ್ಞಾನಭಾರತಿ ಬಳಿ ಅಪ್ಪ ಮಗಳ ಮೇಲೆ ಟ್ರಾನ್ಸ್ಫಾರ್ಮರ್ ಆಯಿಲ್ ಸಿಡಿದು ಅಗ್ನಿ ಅವಘಡ ಸಂಭವಿಸಿತ್ತು. ಈಗಾಗಲೇ ಹಲವಾರು ರಸ್ತೆಗಳಲ್ಲಿ ಇದ್ದಂತಹ ಟ್ರಾನ್ಸ್ಫಾರ್ಮರ್ಗಳನ್ನು ಭೂಮಿಯ ಒಳಗೆ ಇಡುವ ಕೆಲಸ ಮಾಡಲಾಗಿದೆ. ಈ ಬಗ್ಗೆಯೂ ತಜ್ಞರ ಸಮಿತಿ ಇಂಧನ ಇಲಾಖೆಗೆ ಶಿಫಾರಸು ಮಾಡಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಟ್ರಾನ್ಸ್ಫಾರ್ಮರ್ಗಳನ್ನು ಭೂಗತ ಮಾಡುವ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕಿದೆ. KPTCL ಅಧಿಕಾರಿಗಳು ಅಪಘಾತ ನಡೆದ ಬಳಿಕ ಎಚ್ಚೆತ್ತುಕೊಳ್ಳುತ್ತಾರೆ ಅನ್ನೋ ಆರೋಪ ಇದ್ದರೂ ಸಮಸ್ಯೆ ಬಗೆಹರಿಸುವ ಬಗ್ಗೆ ಒಳ್ಳೆಯ ಕೆಲಸಕ್ಕೆ ಕೈಹಾಕಿದ್ದಾರೆ ಎಂದು ಹೇಳಬಹುದು. ಮುಂದಿನ ದಿನಗಳಲ್ಲಿ ವಿದ್ಯುತ್ ಅವಘಡಗಳು ಕಡಿಮೆ ಆದರೆ ಅದರ ಶ್ರೇಯ ಇಂಧನ ಸಚಿವ ಕೆ.ಜೆ ಜಾರ್ಜ್ ಅವರಿಗೆ ಸಲ್ಲುವುದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ. ಹೆಚ್ಚು ಮಾತನಾಡದೆ ಮೌನವಾಗಿದ್ದರೂ ಉತ್ತಮ ಕೆಲಸ ಕಾರ್ಯಗಳು ನಡೆಯುತ್ತಿವೆ ಅನ್ನೋದು ಸಂತಸದ ವಿಚಾರ.
ಕೃಷ್ಣಮಣಿ