ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಗೊಂದಲದ ನಡುವೆಯೇ ಪದೇ ಪದೇ ದೆಹಲಿ ಭೇಟಿ ಬಗ್ಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್(a DCM DK Shivakumar), ʼನಾನು ದೆಹಲಿಗೆ ಹೋಗುವುದು ಬರುವುದು ಇದ್ದೇ ಇರುತ್ತದೆ. ನಾನು ಹೋಗದೆ ಮತ್ಯಾರು ಹೋಗುತ್ತಾರೆ? ಅವರು ಯಾವಾಗ ಕರೆಯುತ್ತಾರೋ ಆಗೆಲ್ಲಾ ಹೋಗುತ್ತೇವೆʼ ಎಂದು ಹೇಳಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಸ್ಸಾಂಗೆ ತೆರಳಿದ್ದಾಗ ಪ್ರಿಯಾಂಕ ಗಾಂಧಿ ಅವರ ಜೊತೆ ರಾಜ್ಯ ರಾಜಕೀಯದ ಚರ್ಚೆ ಬಗ್ಗೆ ಸ್ಪಷ್ಟನೆ ನೀಡಿದ್ದು, ʼನಾನು ರಾಜ್ಯ ರಾಜಕೀಯದ ಬಗ್ಗೆ ಹಂಗೆಲ್ಲ, ಎಲ್ಲೆಂದರಲ್ಲಿ ಚರ್ಚೆ ಮಾಡುವುದಿಲ್ಲ. ಅದು ಸಾರ್ವಜನಿಕವಾಗಿ ಚರ್ಚಿಸುವ ವಿಚಾರವೂ ಅಲ್ಲʼ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಅವರು ಅಮೆರಿಕ ವಿಧಿಸಿರುವ ತೆರಿಗೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟೀಕೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ʼರಾಹುಲ್ ಗಾಂಧಿ ಅವರು ದೇಶದ ಹಿತಕ್ಕಾಗಿ ಏನು ಬೇಕೋ ಅದನ್ನು ಮಾಡುತ್ತಾರೆ, ಮಾತಾಡುತ್ತಾರೆ. ಅಮೆರಿಕದ ಜೊತೆಗಿನ ತೆರಿಗೆ ಒಪ್ಪಂದದಿಂದ ದೇಶದ ಪ್ರತಿ ರೈತನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ರಾಹುಲ್ ಗಾಂಧಿ ಅವರು ಲೋಕಸಭೆ ವಿರೋಧ ಪಕ್ಷದ ನಾಯಕರಾಗಿ ಚರ್ಚೆ ಮಾಡುತ್ತಾರೆʼ ಎಂದರು.

ಮನರೇಗಾ ಬಚಾವ್ ಸಮಾವೇಶದ ಬಗ್ಗೆ ಮಾತನಾಡಿದ ಅವರು, ʼಇಂದು ನಾನು ಹಾಗೂ ಸಿಎಂ ಇಬ್ಬರೂ ಕಾರವಾರಕ್ಕೆ ಹೋಗಿ ವೈದ್ಯಕೀಯ ವಿವಿ ಉದ್ಘಾಟನೆ ಮಾಡುತ್ತಿದ್ದೇವೆ. ನಾಳೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಎರಡೂ ಸೇರಿಸಿ ಮನರೇಗಾ ಉಳಿಸಿ ಸಮಾವೇಶ ಹಮ್ಮಿಕೊಂಡಿದ್ದೇವೆ. ದೆಹಲಿಯಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಆಗಮಿಸುತ್ತಿದ್ದು, ಸಮಾವೇಶಕ್ಕೆ ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು ಆಗಮಿಸಬೇಕು. ಮನರೇಗಾ ರಕ್ಷಣೆಗೆ ಆಗ್ರಹಿಸಿ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಮಾಡಲಾಗಿದೆ. ಬಾಕಿ ಇರುವ ಕ್ಷೇತ್ರಗಳಲ್ಲೂ ಮಾಡಲಾಗುವುದುʼ ಎಂದು ತಿಳಿಸಿದರು.







