ಕೊಪ್ಪಳ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯ ಹುದ್ದೆ ಮೇಲೆ ಕೆಲವರ ವಕ್ರದೃಷ್ಟಿ ನೆಟ್ಟಿದೆ. ಸಂಸದರ ಹೆಸರು ಹೇಳಿಕೊಂಡು ಈ ಟೀಚರ್ಗೆ ಭಾರೀ ಟಾರ್ಚರ್ ನೀಡಲಾಗುತ್ತಿದೆ. ಹೀಗೆಂದು ಖುದ್ದು ಆರೋಪ ಮಾಡಿರುವ ಅಂಗನವಾಡಿ ಕಾರ್ಯಕರ್ತೆ ಸಾಯುವ ಮಾತುಗಳನ್ನು ಆಡುತ್ತಿದ್ದಾರೆ
ಒಂದಲ್ಲ, ಎರಡಲ್ಲ ಬರೋಬ್ಬರಿ 20 ವರ್ಷಗಳಿಂದ ಇವರು ಅಂಗನವಾಡಿಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಆದರೀಗ, ದಿಢೀರ್ ಅಂಗನವಾಡಿ ಕಾರ್ಯಕರ್ತೆಯ ಹುದ್ದೆ ಮೇಲೆ ಕೆಲವರ ವಕ್ರದೃಷ್ಟಿ ನೆಟ್ಟಿದೆ. ಸಂಸದರ ಹೆಸರು ಹೇಳಿಕೊಂಡು ಈ ಟೀಚರ್ಗೆ ಭಾರೀ ಟಾರ್ಚರ್ ನೀಡಲಾಗುತ್ತಿದೆ. ಹೀಗೆಂದು ಖುದ್ದು ಆರೋಪ ಮಾಡಿರುವ ಅಂಗನವಾಡಿ ಕಾರ್ಯಕರ್ತೆ ಸಾಯುವ ಮಾತುಗಳನ್ನು ಆಡುತ್ತಿದ್ದಾರೆ.
ಹೌದು, ಕೊಪ್ಪಳ ತಾಲೂಕಿನ ಬಂಡಿಹರ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸಾಪುರದಲ್ಲಿ ಭಾಗ್ಯಮ್ಮ ಎಂಬುವರು 20 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಷ್ಟು ವರ್ಷ ಆರಾಮಾಗಿದ್ದ ಇವರಿಗೆ ಕಳೆದ 10 ತಿಂಗಳುಗಳಿಂದ ಗ್ರಾಮ ಪಂಚಾಯಿತಿ ಸದಸ್ಯ ದಸ್ತಗಿರಿ ಎಂಬುವರು ಇಲ್ಲಸಲ್ಲದ ಆರೋಪ ಮಾಡಿ ಕಿರುಕುಳ ನೀಡುತ್ತಿದ್ದಾರಂತೆ. ಈ ಬಗ್ಗೆ ಖುದ್ದು ಭಾಗ್ಯಮ್ಮ ಅವರೇ ಆರೋಪ ಮಾಡಿದ್ದಾರೆ.
ಗ್ರಾಮ ಪಂಚಾಯಿತಿ ಸದಸ್ಯನಿಂದ ಬೇಸತ್ತ ಭಾಗ್ಯಮ್ಮ 2 ತಿಂಗಳ ಹಿಂದೆ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದಸ್ತಗಿರಿ ವಿರುದ್ಧ ದೂರು ನೀಡಿದ್ದರು. ಇದಕ್ಕೆ ಸಿಟ್ಟಿಗೆದ್ದ ದಸ್ತಗಿರಿ, ಭಾಗ್ಯಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಕೊಪ್ಪಳ ಸಂಸದ ಕರಡಿ ಸಂಗಣ್ಣಗೆ ದೂರು ನೀಡಿದ್ದಾರೆ. ಇದರಿಂದ ಮತ್ತಷ್ಟು ಮನನೊಂದ ಭಾಗ್ಯಮ್ಮ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಣ್ಣೀರು ಹಾಕುತ್ತಿದ್ದಾರೆ.
ಈ ಸಂಬಂಧ ಮಾತಾಡಿದ ಭಾಗ್ಯಮ್ಮ, ಕೊಪ್ಪಳ ತಾಲೂಕಿನ ಸಿಡಿಪಿಓ ರೋಹಿಣಿ ಬಳಿ ಸಮಸ್ಯೆ ಹೇಳಿಕೊಂಡರೂ ಏನು ಪ್ರಯೋಜನವಿಲ್ಲ. ಮೊದಲು ಸಂಸದರನ್ನು ಭೇಟಿ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಿ. ನಾನೇನು ಮಾಡುವುದಕ್ಕೆ ಆಗಲ್ಲ ಎಂದು ಹೇಳಿದರು.
ಮೇಲಧಿಕಾರಿಯೂ ಸ್ಪಂದಿಸದೇ ಇರೋದರಿಂದ ಭಾಗ್ಯಮ್ಮ ಅವರಿಗೆ ದಿಕ್ಕೇ ತೋಚದಂತಾಗಿದೆ. ಈ ಎಲ್ಲಾ ಘಟನೆ ಕೇಂದ್ರಬಿಂದುವಾದ ದಸ್ತಗಿರಿ ಮಾತ್ರ ಹೇಳೋದೇ ಬೇರೆ. ದೂರದ ಊರಿನಿಂದ ಭಾಗ್ಯಮ್ಮ ಲೇಟ್ ಆಗಿ ಬರುತ್ತಾರೆ. ಹೀಗಾಗಿ ನಮ್ಮ ಊರಿನವರಿಗೆ ಅಂಗನವಾಡಿ ಕಾರ್ಯಕರ್ತೆ ಪೋಸ್ಟ್ ನೀಡಬೇಕು ಎಂದು ಪತ್ರ ಬರೆದಿರುವುದಾಗಿ ಹೇಳಿದರು.
ಇನ್ನು, ಏನೇ ಆಗಲೀ ಗ್ರಾಮಸ್ಥರ ಜೊತೆ ಸೇರಿ ಅಧಿಕಾರಿಗಳು ಈ ಸಮಸ್ಯೆಯನ್ನು ಸರಿಪಡಿಸಬೇಕಿತ್ತು. ಆದರೆ, ಸಂಸದ ಕರಡಿ ಸಂಗಣ್ಣರ ಬೆಂಬಲ ಗ್ರಾಮ ಪಂಚಾಯಿತಿ ಸದಸ್ಯ ದಸ್ತಗಿರಿಗೆ ಇರೋದರಿಂದ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ತಿಳಿದು ಬಂದಿದೆ.