ನವೆಂಬರ್ 1ರ ರಾಜ್ಯೋತ್ಸವ ಬರುವ ಸಂದರ್ಭದಲ್ಲಿ, ಕರ್ನಾಟಕ ಸರ್ಕಾರವೇ ಕನ್ನಡ ಶಾಲೆಗಳನ್ನು ಹೇಗೆ ನಾಶ ಮಾಡುತ್ತಿದೆ ಎಂಬುದರ ಕುರಿತು ಒಂದು ವಿಶೇಷ ವರದಿಯನ್ನು ‘ಪ್ರತಿಧ್ವನಿ’ ನಿಮ್ಮ ಮುಂದೆ ಸಾದರಪಡಿಸುತ್ತಿದೆ.
ಕಳೆದ ವಾರ, ಹೈದರಾಬಾದ್ ಕರ್ನಾಟಕದ ದಯನೀಯ ಸ್ಥಿತಿಗೆ ಯಾರು ಕಾರಣ ಎಂಬ ಬರಹವನ್ನು ಪ್ರತಿಧ್ವನಿ ಪ್ರಕಟಿಸಿತ್ತು. ಅದರಲ್ಲಿ ಹೈದರಾಬಾದ್ ಕರ್ಬಾಟಕ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ಶಾಲೆ ನಿರ್ಮಾಣ ಮಾಡಬಹುದಲ್ಲವೇ ಎಂದೂ ಪ್ರಶ್ನೆ ಹಾಕಿತ್ತು.
ಆದರೆ ಈ ಮಂಡಳಿ ಕೆಲವು ಕಡೆ ಶಾಲಾ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿದೆ. ಆದರೆ ಶಾಲೆಗಳು ಶುರುವಾಗಿಲ್ಲ. ಇದಕ್ಕೆ ಕಾರಣ ಶಿಕ್ಷಣ ಇಲಾಖೆ ಶಾಲೆಗೆ ಮಂಜೂರಾತಿ ನೀಡಲಾಗದು ಎಂದು ಹೇಳುತ್ತಿದೆ.
ಅಂತಹ ಒಂದು ಕತೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಬುಡ್ತಿನ್ನಿ (ಎಸ್) ಗ್ರಾಮದಲ್ಲಿ ಇಲ್ಲಿವರೆಗೆ 8ನೆ ತರಗತಿವರೆಗೆ ಶಾಲೆಯಿತ್ತು. ನಂತರ ಅದನ್ನು ಉನ್ನತೀಕರಿಸಿ 9,. 10ನೆ ಕ್ಲಾಸಿಗೆ ವಿಸ್ತರಿಸಲಾಗಿತು. ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯು 1 ಕೋಟಿ 40 ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿತು.
ಆದರೆ ಶಾಲೆಗೆ ಇನ್ನೂ ಮಂಜೂರಾತಿ ಸಿಗದ ಕಾರಣ ಬುಡ್ತಿನ್ನಿ ಸೇರಿದಂತೆ ಸುತ್ತಲಿನ 9 ಗ್ರಾಮಗಳ ಮಕ್ಕಳು ಈಗ 9 ನೆ ತರಗತಿ ಸೇರಲಾಗದೇ ಅತಂತ್ರರಾಗಿದ್ದಾರೆ. ಈ ಕುರಿತಾಗಿ ಅಲ್ಲಿ ವ್ಯಾಪಕ ಪ್ರತಿಭಟನೆ ನಡೆದಿವೆ. ಇದ್ದುದರಲ್ಲಿ ಸ್ಥಿತಿವಂತರಾದ ಕೆಲವರು 12 ಕಿಮೀ ದೂರದಲ್ಲಿರುವ ಮಸ್ಕಿ ಪಟ್ಟಣಕ್ಕೆ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದಾರೆ. ಬಸ್ ವ್ಯವಸ್ಥೆ ಕೂಡ ಸರಿಯಾಗಿಲ್ಲ. ಅಸಹಾಯಕರು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಹಲವು ಬಾಲಕರು ಕೆಲಸ ಅರಸಿ ಬೆಂಗಳೂರಿಗೆ ಗುಳೆ ಹೋಗಿದ್ದಾರೆ.
9 ಗ್ರಾಮಗಳ ಮಕ್ಕಳ ಶೈಕ್ಷಣಿಕ ಬದುಕಿಗೆ ಮಾರಕವಾಗಿದ್ದು ರಾಜ್ಯ ಸರ್ಕಾರದ ಶಿಕ್ಷಣ ನೀತಿ! ಕಟ್ಟಡ ಸಿದ್ಧವಾಗುವವರೆಗೂ ಸುಮ್ಮನಿದ್ದ ಶಿಕ್ಷಣ ಇಲಾಖೆ ಈಗ ತಾಂತ್ರಿಕ ನೆಪ ಒಡ್ಡಿ ಶಿಕ್ಷಣವನ್ನು ನಿರಾಕರಿಸುವ ಮೂಲಕ ಸಂವಿಧಾನ ದ್ರೋಹದ ಕೆಲಸದಲ್ಲಿ ನಿರತವಾಗಿದೆ.
ಜನರ ಒತ್ತಡಕ್ಕೆ ಮಣಿದ ಮಸ್ಲಿ ಶಾಸಕ ಬಸನಗೌಡ ತುರವಿಹಾಳ ಇತ್ತೀಚಿನ ಅಧಿವೇಶನದಲ್ಲಿ ಶಿಕ್ಷಣ ಸಚಿವರಿಗೆ ಈ ಪ್ರಶ್ನೆಯನ್ನು ಕಳಿಸಿದ್ದರು. ಇದಕ್ಕೆ ಉತ್ತರಿಸಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ‘ಅಲ್ಲಿ 9, 10 ನೆ ತರಗತಿ ಆರಂಭಿಸಲು ನಿಯಮ ಒಪ್ಪುವುದಿಲ್ಲ’ ಎಂದು ಹೇಳಿದ್ದಾರೆ. ಅವರ ಪ್ರಕಾರ ಕೇಂದ್ರದ ನಿಯಮದಂತೆ 5 ಕಿಮೀ ವ್ಯಾಪ್ತಿಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆ ಇದ್ದರೆ ಹೊಸ ಶಾಲೆ ತೆಗೆಯಲು ಅನುಮತಿ ಇಲ್ಲವಂತೆ! 9 ನೆ ತರಗತಿಗೆ ಕನಿಷ್ಠ 70 ವಿದ್ಯಾರ್ಥಿಗಳಿದ್ದರೆ ಮಾತ್ರ ಮಂಜೂರಾತಿ ನೀಡನಹುದು ಅಂತೆ! (ವಿಧಾನಸಭಾ ಕಲಾಪದ ಪ್ರಶ್ನೋತ್ತರ ಕುರಿತ ದಾಖಲೆ ಇದೆ, ಗಮನಿಸಿ)
ಸಮಸ್ಯೆ ಇರುವುದೇ ಇಲ್ಲಿ. ಸರ್ಕಾರಿ ನಿಯಮವೇ ಅವಾಸ್ತವಿಕ. ಇಲ್ಲಿ 5 ಕಿಮೀ ಎಂದರೆ ಅದು ಏರಿಯಲ್ ಡಿಸ್ಟನ್ಸ್ ಅಂತೆ. ಅಂದರೆ ಮಕ್ಕಳು ವಿಮಾನದಲ್ಲಿ ಶಾಲೆಗೆ ಹೋಗುತ್ತಾರೆಯೇ? ಇದು ಒಂದು ಮೂರ್ಖತನದ ನಿಯಮಾವಳಿ. ಈಗ ಬುಡ್ತಿನ್ನಿ ಶಾಲೆಯಲ್ಲಿ 8ನೆ ತರಗತಿ ಪಾಸಾಗಿ ಬಂದ 30 ಮಕ್ಕಳಿದ್ದರೆ, ಸಮೀಪದ ಇನ್ನೊಂದು ಶಾಲೆಯಲ್ಲಿ 8ನೆ ತರಗತಿ ಪಾಸಾಗಿ 50ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಈ ಮಕ್ಕಳೂ ಬುಡ್ತಿನ್ನಿ ಶಾಲೆಗೆ ಸೇರ ಬಯಸಿದವರು. ಹೀಗಾಗಿ ಸರ್ಕಾರದ ಮಾನದಂಡ 70ರ ಗಡಿಯನ್ನು ದಾಟಿ ಮಕ್ಕಳ ಸಂಖ್ಯೆಯಿದೆ.
ಅಷ್ಟಕ್ಕೂ ಎಷ್ಟೇ ಮಕ್ಕಳಿರಲಿ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ತಾಂತ್ರಿಕ ನೆಪ ಒಡ್ಡಿ ಮಕ್ಕಳನ್ನು ಅತಂತ್ರಗೊಳಿಸುವ ಕೆಲಸಗಳು ನಡೆದೇ ಇವೆ. ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿ ಇದೆಯಾದರೂ, ರಾಜ್ಯ ಸರ್ಕಾರಗಳಿಗೆ ಇದರೆಲ್ಲಿ ಪರಮಾಧಿಕಾರವಿದೆ. ಆದರೆ ಪ್ರಸ್ತುತ ಸರ್ಕಾರದ ಹೊಣೆಗೇಡಿತನದಿಂದಾಗಿ ದುರ್ಬಲ ವರ್ಗಗಳ ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸ್ವತಃ ವಿಪಕ್ಷ ನಾಯಕ ಸಿದ್ದರಾಮಯ್ಯ ಶಿಕ್ಷಣ ಸಚಿವ ನಾಗೇಶ್ ಅವರಿಗೆ 9, 10 ನೆ ತರಗತಿ ಕೂಡಲೇ ಆರಂಭಿಸಲು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಕಲಾಪದಲ್ಲಿ ನಡೆದ ಪ್ರಶ್ನೋತ್ತರ ವಿವರ ಮತ್ತು ಸ್ಥಳೀಯ ಬೇಡಿಕೆಯ ಕುರಿತ ದಾಖಲೆಗಳನ್ನು ‘ಪ್ರತಿಧ್ವನಿ’ ಹಲವು ಶಿಕ್ಷಣ ತಜ್ಞರಿಗೆ ನಕಳಿಸಿ ಅಭಿಪ್ರಾಯ ಕೇಳಿತು.
ಶಿಕ್ಷಣ ತಜ್ಞ ಪ್ರೊ. ನಿರಂಜನಾರಾಧ್ಯ ಅವರಂತೂ ಆಕ್ರೋಶದಿಂದಲೇ, ‘ ಇದು ಶಿಕ್ಷಣದ ನಿರಾಕರಣೆ. ಕೋವಿಡ್ ಅವಧಿಯಲ್ಲೇ ಸಾಕಷ್ಟು ಮಕ್ಕಳು ಶಿಕ್ಷಣದಿಂದ ದೂರವಾದರು. ಆದರೆ ಈಗ ಸರ್ಕಾರವೇ ಕಟ್ಟಿಸಿದ ಶಾಲೆಯಲ್ಲಿ ತರಗತಿಗಳಿಗೆ ಅವಕಾಶ ಇಲ್ಲವೆಂದರೆ ಹೇಗೆ? ಏರಿಯಲ್ ಡಿಸ್ಟ್ನ್ಸ್ ಎಂಬುದೇ ಅವೈಜ್ಞಾನಿಕ. ರಸ್ತೆ ಮಾರ್ಗ ಅದರಲ್ಲೂ ಹಳ್ಳ, ದಿಬ್ಬ ಇರುವ ದಾರಿಯನ್ನು ಸವೆಸಿ ಮಕ್ಕಳು 10 ಕಿಮೀ ನಡೆಯಬೇಕೆ? ಸರ್ಕಾರ ಕೂಡಲೇ ತನ್ನ ನಿರ್ದಾರ ಬದಲಿಸಿ 9, 10 ನೆ ತರಗತಿಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ದಲಿತರು ಮತ್ತು ಹಿಂದುಳಿದ ವರ್ಗಗಳ ಮಕ್ಕಳು ಶಿಕ್ಷಣದಿಂದ ಖಾಯಂ ವಂಚಿತರಾಗುತ್ತಾರೆ. ಅದರೆಲ್ಲೂ ಬಾಲಕಿಯರ ಶೈಕ್ಷಣಿಕ ಜೀವನವೇ ಅಂತ್ಯವಾಗುತ್ತದೆ’ ಎಂದರು.
ಇನ್ನೊಬ್ಬ ಶಿಕ್ಷಣ ತಜ್ಞ ಶ್ರೀಪಾದ ಭಟ್ ಅವರು, ‘ ಅಲ್ಲರೀ, ಪಟ್ಟಣಗಳಲ್ಲಿ 2-3 ಕಿಮೀ ದೂರದಲ್ಲಿ ಒಂದೊಂದು ಶಾಲೆ ಇರುವಾಗ ಗ್ರಾಮಗಳಲ್ಲಿ ಈ ನಿಯಮವೇಕೆ? ರಾಜಕೀಯ ಇಚ್ಛಾಶಕ್ತಿ ಇರದ ಸರ್ಕಾರದ ಬೇಜವಾಬ್ದಾರಿತವಿದು. ಇದೇ ಸರ್ಕಾರದ ಸಂಸ್ಥೆಯೊಂದು 1 ಕೋಟಿ 40 ಲಕ್ಷ ಅನುದಾನದಲ್ಲಿ ಕಟ್ಟಡ ನಿರ್ಮಾಣ ಮಾಡಿದರೂ ಅಲ್ಲಿ ತರಗತಿಗಳಿಗೆ ಅವಕಾಶ ಇಲ್ಲವೆಂದರೆ ಹೇಗೆ? ಆ ಗ್ರಾಮಗಳ ಜನರ ಪ್ರತಿಭಟನೆಯ ಜೊತೆ ನಾವೆಲ್ಲ ಒಂದಾಗಬೇಕುʼ ಎಂದರು.
ಬುಡ್ತಿನ್ನಿ ಶಾಲಾ ಅಭಿವೃದ್ಧಿ ಸಮಿತಿ (ಎಸ್ಡಿಎಂಸಿ ) ಅಧ್ಯಕ್ಷ ನಾಗರಡ್ಡೆಪ್ಪ ದೇವರಮನಿ ‘ಪ್ರತಿಧ್ವನಿ’ ಜೊತೆ ಮಾತನಾಡಿ, ‘ನಮ್ಮ ಗ್ರಾಮಗಳ ಮಕ್ಕಳು ಕೋವಿಡ್ ನಂತರದ ಅವಧಿಯಲ್ಲಿ ಮತ್ತೆ ಶಾಲೆ ಸೇರಲು ಉತ್ಸುಕರಾದ ಸಂದರ್ಭದಲ್ಲಿ ಸರ್ಕಾರ ವಂಚನೆ ಮಾಡುತ್ತಿದೆ. ಹೋರಾಟ ನಡೆಸಿ ಶಾಲಾ ಕಟ್ಟಡಕ್ಕೆ ಹೈ-ಕ ಮಂಡಳಿಯಿಂದ 1 ಕೋಟಿ 40 ಲಕ್ಷ ರೂ ಬಿಡುಗಡೆ ಮಾಡಿಸಿ ಸುಸಜ್ಜುತ ಕಟ್ಟಡ ನಿರ್ಮಿಸಲಾಗಿದೆ. ಈಗ ತರಗತಿಗೆ ಮಂಜೂರಾತಿ ಇಲ್ಲವೆಂದರೆ ಹೇಗೆ?’ ಎಂದು ಕಿಡಿ ಕಾರಿದರು.
ಶಾಲೆಯ ಮುಖ್ಯೋಪಾಧ್ಯಾಯ ದುರ್ಗಣ್ಣವರ್ ಕೂಡ ಪ್ರತಿಧ್ವನಿಗೆ ಪ್ರತಿಕ್ರಿಯೆ ನೀಡಿ, , ‘ತುಂಬ ನೋವಾಗುತ್ತಿದೆ. ನಮ್ಮ ಬಳಿ 8ನೆ ತರಗತಿವರೆಗೆ ಓದಿದ ಮಕ್ಕಳು ಈಗ ಅತಂತ್ರರಾಗುತ್ತಿದ್ದಾರೆ. ಸರ್ಕಾರ ಕೂಡಲೇ ತಪ್ಪನ್ನು ತಿದ್ದಿಕೊಳ್ಳಬೇಕು’ ಎಂದರು.
ಹಲವಾರು ಬಾಲಕರು ಶಿಕ್ಷಣದ ಸಹವಾಸವೇ ಬೇಡ ಎಂದು ಬೆಂಗಳೂರಿಗೆ ದುಡಿಯಲು ಹೋಗಿದ್ದಾರೆ. ಹಾಗೂ ಹೀಗೂ ಕಷ್ಟಪಟ್ಟು ಅದರಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ‘ಪ್ರತಿಧ್ವನಿ’ ಸಂಪರ್ಕಿಸಿತು. ಬೆಣಚಿಮರಡಿ ಗ್ರಾಮದ ಕಿರಣಕುಮಾರ್ ಮತ್ತು ಬುಡ್ತಿನ್ನಿ ಗ್ರಾಮದ ರಾಜೇಸಾಬ್ ‘ಪ್ರತಿಧ್ವನಿ’ ಜೊತೆ ಮಾತನಾಡುತ್ತ ಅಳಲು ಆರಂಭಿಸಿದರು. “ ಸರ್ ಕಲಿಯುವ ಆಶೆ ತುಂಬ ಇದೆ. 12-15 ಕಿಮೀ ದೂರದ ಮಸ್ಕಿಗೆ ಹೋಗಿ ನಮ್ಮಂತಹ ಬಡವರು ಓದುವುದು ಕಷ್ಟ. ಬಸ್ ವ್ಯವಸ್ಥೆಯೂ ಸರಿಯಾಗಿಲ್ಲ. ದಿವೂ 39-40 ರೂ ಖರ್ಚು ಮಾಡಿ ಶಾಲೆಗೆ ಹೋಗುವುದು ಅಸಾಧ್ಯ. ಸಾಕಾಗಿ ಹೋಗಿ ಬೆಂಗಳೂರಿಗೆ ಬಂದು ಕಟ್ಟಡ ಕೆಲಸ ಮಾಡುತ್ತಿದ್ದೇವೆ’ ಎಂದು ದುಃಖಭರಿತರಾಗಿ ಹೇಳಿದಾಗ ಪರಿಸ್ಥಿತಿಯ ಗಾಢತೆ ಮನ ಕಲಕುವಂತಿತ್ತು.
1 ಕೋಟಿ 40 ಲಕ್ಷ ರೂ ವೆಚ್ಚದಲ್ಲಿ ಒಂದು ಕಟ್ಟಡ ನಿರ್ಮಿಸುವ ಸರ್ಕಾರ ಅಲ್ಲಿ ತರಗತಿಗಳಿಗೆ ಮಂಜೂರಾತಿ ನೀಡುವುದಿಲ್ಲ ಎಂದರೆ ಏನರ್ಥ? ಈ ರಾಜ್ಯದ ಸಾವಿರಾರು ಕಿರಣಕುಮಾರ್ ಮತ್ತು ರಾಜೇಸಾಬ್ ರಂತಹ ಬಾಲಕರಿಗೆ ಸರ್ಕಾರ ನೀಡುವ ಉತ್ತರವಾದರೂ ಏನು? ಇಂತಹ ಕಾರಣಕ್ಕೇ ಶೈಕ್ಷಣಿಕ ಬದುಕಿಗೆ ಅಂತ್ಯ ಹಾಡುತ್ತಿರುವ ಅಸಂಖ್ಯ ಬಾಲಕಿಯರ ಮನದಾಳದ ನೋವು ಈ ಸರ್ಕಾರಕ್ಕೆ ಅರ್ಥವಾಗುವುದು ಕಷ್ಟ. ಇದು ಪುಂಡು ಪೋಕರಿಗಳನ್ನು ಸೇರಿಸಿಕೊಂಡು ಯುವನೀತಿ ರೂ[ಪಿಸುವ ಕೆಲಸದಲ್ಲಿ ಮಗ್ನವಾಗಿದೆ.
ಕನ್ನಡ ಪರ ಸಂಘಟನೆಗಳು ಕೂಡಲೇ ಈ ಶಾಲೆ ಆರಂಭಕ್ಕಾಗಿ ಬೀದಿಗೆ ಇಳಿಯಲೇಬೇಕು. ಅಲ್ಲಿ ದಿನವೂ ಹೋರಾಡುತ್ತಿರುವ 9 ಗ್ರಾಮಗಳ ಜನರಿಗೆ ಬೆನ್ನೆಲುಬಾಗಿ ನಿಲ್ಲಬೇಕು. ಇಲ್ಲದಿದ್ದರೆ ನಾವು ಮತ್ತೊಂದು ರಾಜ್ಯೋತ್ಸವವನ್ನು ಕಾಟಾಚಾರಕ್ಕೆ ಆಚರಿಸಲಿದ್ದೇವೆ ಅಷ್ಟೇ. ಕನ್ನಡದ ಬಡ ಮಕ್ಕಳಿಗೆ ಶಿಕ್ಷಣದ ಅವಕಾಶವನ್ನು ನಿರಾಕರಣೆ ಮಾಡುವುದೆಂದರೆ ಅದು ನಮ್ಮ ಸಮಾಜದ ಅಧೋಗತಿಯ ಪ್ರತೀಕವಷ್ಟೇ.