
ಅಧಿಕಾರಸ್ಥ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ ನಗುನಗುತಾ ಹೊಂದಾಣಿಕೆ ಮಾಡಿಕೊಂಡು, ಡೀಲ್ ಕುದುರಿಸಿಕೊಂಡು, ತಮ್ಮ ಕೆಲಸ ಮಾಡಿಸಿಕೊಂಡು ಅನೈತಿಕ ಮಾರ್ಗಗಳಲ್ಲಿ ಆಸ್ತಿ, ಐಶ್ವರ್ಯ, ಅಧಿಕಾರ ಸಂಪಾದಿಸುತ್ತಿರುವ ಭ್ರಷ್ಟ ಮಾಧ್ಯಮದವರು, ಅಪ್ರಾಮಾಣಿಕ ಚಿಂತಕರು, ಹುಸಿ-ಹೋರಾಟಗಾರರ ನಡುವೆ ನ್ಯಾಯಕ್ಕಾಗಿ ಹೋರಾಡುವುದು ಮತ್ತು ನೈತಿಕ ಪ್ರಶ್ನೆಗಳನ್ನು ಎತ್ತಿ ಜನಪ್ರತಿನಿಧಿಗಳ ಮತ್ತು ಸರ್ಕಾರಿ ಅಧಿಕಾರಿಗಳ ಹೊಣೆಗಾರಿಕೆ ಪ್ರಶ್ನಿಸುವುದು ಅಪಾಯಕಾರಿಯಾದದ್ದು. ಜನಪರ ಮತ್ತು ಜವಾಬ್ದಾರಿಯುತ ಆಡಳಿತ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗಾಗಿ KRS ಪಕ್ಷದವರ ಒತ್ತಾಯ ಮತ್ತು ಕೇಳುವ ಪ್ರಶ್ನೆಗಳು ಹಾಗೂ ಪ್ರಶ್ನಿಸುವ ಧಾಟಿ ಈ ಮೇಲೆ ಹೇಳಿದಂತಹ ರಾಜಿ ಮಾಡಿಕೊಂಡು ಹೊಟ್ಟೆ ಹೊರೆದುಕೊಳ್ಳುತ್ತಿರುವ ನಾಜೂಕು ಮಂದಿಗೆ ಅಸಭ್ಯ ಎಂತಲೂ, ಭ್ರಷ್ಟರಿಗೆ ಇವರಿಗೆಷ್ಟು ಕೊಬ್ಬು ಅಂತಲೂ ಅನ್ನಿಸುತ್ತದೆ.
ಬೆಂಗಳೂರಿನ ಲೋಕಾಯುಕ್ತ ಸಂಸ್ಥೆಯ ಬಳಿ ನೆನ್ನೆ ನಡೆದ ಘಟನೆ ಒಂದು ರೀತಿಯಲ್ಲಿ ಮಹತ್ವದ್ದು, ಮತ್ತೊಂದು ರೀತಿಯಲ್ಲಿ ಸಾಮಾನ್ಯದ್ದು. ಭ್ರಷ್ಟಾಚಾರ ಜನರಿಗೆ ಬಾಧಿಸುವ ವಿಷಯವೇ ಅಲ್ಲ ಮತ್ತು ಕೋಮುವಾದವನ್ನು ವಿರೋಧಿಸುವ ಸಂದರ್ಭದಲ್ಲಿ ನಾವು ಭ್ರಷ್ಟ ಕಾಂಗ್ರೆಸ್ಸಿಗರನ್ನು ಬೆಂಬಲಿಸಬೇಕು ಎಂದು ಕಾಂಗ್ರೆಸ್ ಬುದ್ಧಿಜೀವಿಗಳು ಜನರಲ್ಲಿ ಅಪಮೌಲ್ಯ ತುಂಬುತ್ತಾ ಅನೇಕ ಅನುಕೂಲಗಳನ್ನು ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ, ಹಾಲಿ ಸಿದ್ದರಾಮಯ್ಯನವರ ಸರ್ಕಾರದ ಭ್ರಷ್ಟಾಚಾರವನ್ನು ಪ್ರಶ್ನಿಸುವ ಯಾವ ನೈತಿಕತೆಯೂ ಮತ್ತು ಕಾರ್ಯಕ್ರಮವೂ ಬಿಜೆಪಿ ಮತ್ತು ಜೆಡಿಎಸ್’ಗೆ ಇಲ್ಲದ ಸ್ಥಿತಿಯಲ್ಲಿ, ಅವರ ಭ್ರಷ್ಟಾಚಾರವನ್ನು ಇವರು ಮುಚ್ಚಿಹಾಕಿ, ಇವರದನ್ನು ಅವರು ಮುಚ್ಚಿಹಾಕುವ ಒಪ್ಪಂದಗಳು ಬಹಿರಂಗವಾಗಿಯೇ ಕಾಣಿಸುವ ಕಾಲದಲ್ಲಿ, KRS ಪಕ್ಷದ ಸೈನಿಕರು ನೆನ್ನೆ ಲೋಕಾಯುಕ್ತ ಸಂಸ್ಥೆಯ ನೈತಿಕತೆಯನ್ನು ಪ್ರಶ್ನಿಸುವ ಕೆಲಸ ಮಾಡಿದರು. JCB ಪಕ್ಷಗಳ ಯಾವ ರಾಜಕಾರಣಿಯೂ ಕೇಳಲಾಗದ ಪ್ರಶ್ನೆಯನ್ನು ನೆನ್ನೆ ನೇರವಾಗಿ ಲೋಕಾಯುಕ್ತ ಸಂಸ್ಥೆಗೆ ಹೋಗಿ ಕೇಳಿದರು. ಅದರಿಂದ ಖಂಡಿತ ಸಮಾಜದಲ್ಲಿ ಒಂದು ಉತ್ತಮ ಜನಾಭಿಪ್ರಾಯ ರೂಪುಗೊಳ್ಳುತ್ತದೆ ಮತ್ತು ಲೋಕಾಯುಕ್ತ ಸಂಸ್ಥೆಯ ಲೋಕಾಯುಕ್ತ, ಉಪಲೋಕಾಯುಕ್ತ ಸೇರಿದಂತೆ ಅಲ್ಲಿಯ ಅಧಿಕಾರಿಗಳೂ ಒಂದಷ್ಟು ಎಚ್ಚರಗೊಳ್ಳುತ್ತಾರೆ, ನಾಚಿಕೆ ಪಡುತ್ತಾರೆ. ಹಾಗಾಗಿ ಇದು ಮಹತ್ವದ್ದು.

ಇಂದು ರಾಜ್ಯದಲ್ಲಿ ಇದನ್ನು ಮಾಡುವ ನೈತಿಕತೆ ಮತ್ತು ಧೈರ್ಯ ಇರುವ ಏಕೈಕ ಪಕ್ಷ ಎಂದರೆ ಅದು KRS ಪಕ್ಷ.
ಇನ್ನು ಅಲ್ಲಿ ನಡೆದ ಘಟನೆ ಪೊಲೀಸರು ಸಮಾಧಾನದಿಂದ ವರ್ತಿಸಿ ಅಲ್ಲಿಗೆ ಬಂದವರ ಮೇಲೆ ದಬ್ಬಾಳಿಕೆ ಮಾಡದೆ ಮನವಿಪತ್ರ ಕೊಡಿಸಿ ಶಾಂತವಾಗಿ ವಾಪಸು ಕಳುಹಿಸಬೇಕಾಗಿದ್ದಂತಹ ಸಾಮಾನ್ಯ ಘಟನೆ. ಆದರೆ ವಿಧಾನಸೌಧ ಪೊಲೀಸ್ ಠಾಣೆಯ ಪೊಲೀಸರ ದಬ್ಬಾಳಿಕೆ ಖಂಡನೀಯ ಮತ್ತು KRS ಪಕ್ಷದವರ ವಿರುದ್ಧ ಅವರ ಹಗೆತನ ನಾಚಿಕೆಗೇಡಿತನದ್ದು. ಹಿರಿಯರು, ಮಹಿಳೆಯರು ಎನ್ನದೆ ಕೆಲವರನ್ನು ದುರಹಂಕಾರಿ ಪೊಲೀಸರು ಎಳೆದಾಡಿದ್ದಾರೆ. ಎಲ್ಲವೂ ಮುಗಿದು ಬಹುತೇಕರು ಮನೆಗೆ ಹೋದನಂತರ ಅಲ್ಲಿಯೇ ಇನ್ನೊಂದು ಕೆಲಸದ ಮೇಲೆ ಕಾಯುತ್ತಿದ್ದ KRS ಸೈನಿಕರನ್ನು ಕೋಪ ಮತ್ತು ದ್ವೇಷದಿಂದ ಠಾಣೆಗೆ ಎಳೆದುಕೊಂಡು ಹೋಗಿ, ಸುಳ್ಳುಸುಳ್ಳೆ ಆರೋಪ ಹೊರಿಸಿ, ಜೈಲಿಗೆ ಕಳುಹಿಸುವ ಸಿದ್ಧತೆ ಮಾಡಿಕೊಂಡಿದ್ದಾರೆ.
