ಸಕ್ರಿಯ ರಾಜಕಾರಣದಲ್ಲಿರುವ ರಾಜಕಾರಣಿಗಳಲ್ಲಿ ಸಾರ್ವಜನಿಕ ವೇದಿಕೆಗಳಲ್ಲಿ ಪದೇ ಪದೇ ಭಾವುಕರಾಗುವವರಲ್ಲಿ ಹೆಚ್ ಡಿ ಕೆ ಹಾಗೂ ಬಿಎಸ್ವೈ ಮುಂಚೂಣಿಯಲ್ಲಿರುವವರು. ಇದೀಗ, ಹೆಚ್ ಡಿ ಕುಮಾರಸ್ವಾಮಿ ಮತ್ತೆ ಸಾರ್ವಜನಿಕ ಸಭೆಯಲ್ಲಿ ಭಾವುಕರಾಗಿದ್ದಾರೆ.
ತುಮಕೂರಿನಲ್ಲಿ ದೇವೇಗೌಡರನ್ನು ಸೋಲಿಸಿರುವುದು ಹಾಗೂ ತನ್ನ ವಿರುದ್ಧ ಝಮೀರ್ ಮೊದಲಾದವರು ನಡೆಸುತ್ತಿರುವ ತೀಕ್ಷ್ಣ ಟೀಕೆಗಳ ಕುರಿತಂತೆ ಹೆಚ್ಡಿಕೆ ಅವರು ಪ್ರತಿಕ್ರಿಯಿಸಿದ್ದಾರೆ.
ತುಮಕೂರಲ್ಲಿ ದೇವೇಗೌಡರು ಸೋಲಲು ಶ್ರೀನಿವಾಸ್ ಕಾರಣ. ರಾಜಕೀಯವಾಗಿ ಹೆಚ್ ಡಿ ದೇವೇಗೌಡರನ್ನು ಮುಗಿಸಲು ಯಾರು ಯಾರ ಜತೆ ಸೇರಿದ್ದರು. ಮಧ್ಯರಾತ್ರಿ ಚಿತಾವಣೆ ಮಾಡಿದ್ದು ಕಾರ್ಯಕರ್ತರಿಗೆ ಗೊತ್ತಿದೆ ಎಂದು S.R. ಶ್ರೀನಿವಾಸ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಜೆಡಿಎಸ್ ಇಂದ ಹೊರ ಹೋಗುವ ತೀರ್ಮಾನ ಮಾಡಿದ್ದು ಶ್ರೀನಿವಾಸ್ ಅವರೇ, ಆದರೂ ನಮ್ಮಿಂದ ತಪ್ಪಾಗಿದೆ ಎಂದು ತೋರಿಸಲು ಶತಪ್ರಯತ್ನ ಮಾಡುತ್ತಿದ್ದಾರೆ. ಅವರ ಬಗ್ಗೆ ನಾನು ಎಂದು ಮಾತನಾಡಿಲ್ಲ. ನನ್ನಿಂದ ಅವರಿಗೆ ಯಾವುದೇ ತೊಂದರೆಯಿಲ್ಲ. ನಾನೇನೂ ಅವರಿಗೆ ಪಕ್ಷ ಬಿಟ್ಟು ಹೋಗಿ ಎಂದು ಹೇಳಿಲ್ಲ. ಅವರೇ ಪಕ್ಷ ಬಿಟ್ಟು ಹೋಗುವ ತೀರ್ಮಾನ ಮಾಡಿದ್ದಾರೆ. ಅವರು ನಮ್ಮ ಪಕ್ಷದಲ್ಲೇ ಇರುತ್ತೇನೆ ಅಂದರೆ ಸಂತೋಷ ಎಂದು ಶ್ರೀನಿವಾಸ್ ಬಗ್ಗೆ H.D. ಕುಮಾರಸ್ವಾಮಿ ಹೇಳಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಸೂಟ್ಕೇಸ್ ತೆಗೆದುಕೊಂಡು ಚುನಾವಣೆ ಮಾಡುತ್ತಿದ್ದಾರೆ ಎಂಬ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಆರೋಪಕ್ಕೆ ತಿರುಗೇಟು ನೀಡುವ ವೇಳೆ ಭಾವುಕರಾದ ಹೆಚ್.ಡಿ.ಕುಮಾರಸ್ವಾಮಿ ʼಕುಮಾರಸ್ವಾಮಿಯನ್ನು ನಾವೇ ಸಾಕಿದ್ದು, ನಾವೇ ಬೆಳೆಸಿದ್ದು ಅಂತಾರೆ ಅವರು. 2013-14ರಿಂದ ನನ್ನ ಬಗ್ಗೆ ಅಪಪ್ರಚಾರ ಆರಂಭವಾಯಿತು. ಈ ಪಕ್ಷ ಕಟ್ಟಲು ನಾನು ಕಷ್ಟಪಟ್ಟಿದ್ದೇನೆ ಎಂದು ಕಣ್ಣೀರು ಹಾಕುತ್ತಾ ಹೆಚ್ಡಿ ಕುಮಾರಸ್ವಾಮಿ ಭಾವುಕರಾಗಿದ್ದಾರೆ.
ನಮ್ಮ ಕುಟುಂಬವು ಎಂದೂ ಹಣ ಇಟ್ಕೊಂಡು ರಾಜಕಾರಣ ಮಾಡಿಲ್ಲ. ಹಣಕಾಸಿನ ವಿಚಾರದಲ್ಲಿ ಪಂಚಾಯಿತಿ ನಡೆಯಿತು. ಆ ದೇವರು ಇದ್ದರೆ ನೋಡಿಕೊಳ್ತಾನೆ ಎಂದು ಹೆಚ್ಡಿಕೆ ಗದ್ಗದಿತರಾದರು.
ಕುಮಾರಸ್ವಾಮಿ ಇಮೇಜ್ ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ. ನಮ್ಮ ಜೊತೆ ಇದ್ರೆ ಅವರಿಗೆ ಉಪಯೋಗ ಆಗಲ್ಲ ಅಂದಿದ್ದಾರೆ. ಗೊಂದಲಗಳನ್ನ ಸೃಷ್ಟಿ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ನಮ್ಮಿಂದ ಯಾವುದೇ ರೀತಿಯ ಗೊಂದಲಗಳು ಆಗಿಲ್ಲ. ರಾಜಕಾರಣ ಮಾಡುವುದಾದರೆ ನೇರವಾಗಿ ಮಾಡಬೇಕು. ಹಿಂದೊಂದು ಮುಂದೊಂದು ಮಾತನಾಡುವುದು ಬೇಡ. ಯಾರಿಗೂ ನೋವು ತರಿಸಿಲ್ಲ, ಪ್ರೀತಿಯಿಂದ ನೋಡಿದ್ದೇನೆ ಎಂದು ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದಲ್ಲಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಹಿಂದೆಯೂ ಕುಮಾರಸ್ವಾಮಿ ಅವರು ಸಾರ್ವಜನಿಕವಾಗಿ ಕಣ್ಣೀರು ಸುರಿಸಿದ್ದರು. ಮೈತ್ರಿ ಸರ್ಕಾರ ಉರುಳಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾದು ಹಾಗೂ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋತಿರುವುದು ಅವರ ಕಣ್ಣೀರಿಗೆ ಕಾರಣವಾಗಿತ್ತು.