ಕಲಬುರಗಿಯ ದಸ್ತಾಪುರದಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟವರ ಮನೆಗೆ ಶಾಸಕ ಬಸವರಾಜ್ ಮತ್ತಿಮಡು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಮೃತರ ಕುಟುಂಬಕ್ಕೆ ವೈಯಕ್ತಿಕವಾಗಿ 2 ಲಕ್ಷ ರೂ. ಪರಿಹಾರಧನ ನೀಡುವ ಭರವಸೆಯನ್ನೂ ನೀಡಿದ್ದಾರೆ. ಹಾಗೂ ಮೃತರ ಅಂತ್ಯಕ್ರಿಯೆಗೆ 10 ಸಾವಿರ ರೂಪಾಯಿ ಮೊತ್ತವನ್ನು ನೀಡಿದ್ದಾರೆ.

ಕಲಬುರ್ಗಿಯಲ್ಲಿ ಕಲುಷಿತ ನೀರನ್ನು ಸೇವಿಸಿ, ವಾಂತಿ ಭೇದಿಯಾಗಿ ನಿನ್ನೆ ಇಬ್ಬರು ಮೃತಪಟ್ಟಿದ್ದರು. ಹಾಗೂ 60ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದರು. ದಸ್ತಾಪುರ ಗ್ರಾಮದ 48 ವರ್ಷದ ಕಮಲಾಬಾಯಿ ಕೊಬ್ರೆ ಹಾಗೂ ನಾಗೂರು ಗ್ರಾಮದ 55 ವರ್ಷದ ಮಹಿಳೆ ದ್ರೌಪದಿ ಮೃತಪಟ್ಟ ಮಹಿಳೆಯರು ಎಂದು ವರದಿಯಾಗಿದೆ.
ಶಾಸಕ ಮೃತರ ನಿವಾಸಕ್ಕೆ ಭೇಟಿ ನೀಡಿದ ಬಳಿಕ, ಗ್ರಾಮದಲ್ಲಿ ಸಂಚರಿಸಿ ಸ್ವಚ್ಛತೆ, ಜಲ ಸಂಪರ್ಕ ಸೇರಿ ವಿವಿಧ ಸಮಸ್ಯೆಯನ್ನು ಪರಿಶೀಲಿಸಿದ್ದಾರೆ. ಇಂತಹ ಸಮಸ್ಯೆಗಳಿಗೆ ಕೂಡಲೇ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ. ಅದೇ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಶುದ್ಧ ನೀರಿನ ವ್ಯವಸ್ಥೆಯನ್ನೂ ಕಲ್ಪಿಸಿದ್ದಾರೆ.
ಮತ್ತೊಂದೆಡೆ ಮೃತರು ಕಾಲರಾ ರೋಗದಿಂದ ಬಳಲುತ್ತಿದ್ದು, ಆ ಕಾರಣದಿಂದ ಮೃತಪಟ್ಟಿದ್ದಾರೆ ಎಂಬ ಶಂಕೆಯೂ ವ್ಯಕ್ತವಾಗಿದೆ. ಗ್ರಾಮಸ್ಥರ ಪ್ರಕಾರ ಕಲುಷಿತ ನೀರು ಸೇವಿಸಿ ಮೃತಪಟ್ಟಿದ್ದಾರೆಂದಾದರೆ, ವೈದ್ಯರು ಕಾಲರಾದಿಂದ ಮೃತಪಟ್ಟಿರುವುದಾಗಿ ಶಂಕಿಸಿದ್ದಾರೆ. ಈ ಬಗ್ಗೆ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ ಖಚಿತತೆಯನ್ನು ದೃಢಪಡಿಸಿಲ್ಲ.

